ಸಿಯದೆಹಿ ಹಳ್ಳಿಯ ಪ್ರವೇಶದ್ವಾರದಲ್ಲಿ ಬಿದಿರಿನಿಂದ ನಿರ್ಮಿಸಲ್ಪಟ್ಟ ತಡೆಗಟ್ಟಿನ ಫಲಕದಲ್ಲಿ, ‘ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ’ ಎಂದು ಬರೆಯಲಾಗಿದೆ. ಛತ್ತೀಸ್ಗಡ್ನ ಧಮ್ತರಿ ಜಿಲ್ಲೆಯ ನಗ್ರಿ ವಲಯದ ಹಳ್ಳಿಗೆ ಈ ವರದಿಗಾರನು ಪ್ರವೇಶಿಸಿದಾಗ, ಅಲ್ಲೇ ಹತ್ತಿರದಲ್ಲಿ ಕುಳಿತಿದ್ದ ಅಲ್ಲಿನ ನಿವಾಸಿಗಳ ಗುಂಪೊಂದು ಮಾತನಾಡುವ ಸಲುವಾಗಿ ತಡೆಗಟ್ಟಿನ ಬಳಿಗೆ ಬಂದಿತಾದರೂ, ಪರಸ್ಪರ ದೂರವನ್ನು ಕಾಯ್ದುಕೊಂಡಿರುವುದು ಕಂಡುಬಂದಿತು.
"ಪಕ್ಕದ ಕಂಕೆರ್ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಭರತ್ ಧ್ರುವ್, ಹಳ್ಳಿಯಲ್ಲಿನ ನಾವೆಲ್ಲರೂ ಮಾರಣಾಂತಿಕ ಕೊರೊನಾ ವೈರಸ್ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಈ ತಡೆಗಟ್ಟನ್ನು ಹಾಕಲು ಸರ್ವಾನುಮತದಿಂದ ನಿಶ್ಚಯಿಸಿದ್ದೇವೆ", ಎಂದು ತಿಳಿಸಿದರು. ಗೊಂಡ್ ಆದಿವಾಸಿಗಳ ಪ್ರಮುಖ ನೆಲೆಯಾದ ಸಿಯದೆಹಿ ಹಳ್ಳಿಯಲ್ಲಿ ಸುಮಾರು 900 ಜನರಿದ್ದು, ಛತ್ತೀಸ್ಗಡ್ ರಾಜಧಾನಿ ರಾಯ್ಪುರ್ನಿಂದ ಸುಮಾರು 80 ಕಿ.ಮೀ. ದೂರದಲ್ಲಿದೆ.
"ನಾವು ‘ಸಾಮಾಜಿಕ ದೂರವನ್ನು’ ಪಾಲಿಸಲು ಬಯಸುತ್ತೇವೆ. ಈ ಲಾಕ್ಡೌನ್ ಸಂದರ್ಭದಲ್ಲಿ ಹೊರಗಿನವರು ನಮ್ಮ ಹಳ್ಳಿಗೆ ಭೇಟಿ ನೀಡುವುದನ್ನಾಗಲಿ, ನಾವು ಹೊರಗೆ ತೆರಳಿ ನಿಯಮವನ್ನು ಉಲ್ಲಂಘಿಸುವುದನ್ನಾಗಲಿ ನಾವು ಬಯಸುವುದಿಲ್ಲ. ಆದ್ದರಿಂದ ಈ ತಡೆಗಟ್ಟನ್ನು ಹಾಕಲಾಗಿದೆ", ಎಂಬುದಾಗಿ ಇದೇ ಜಿಲ್ಲೆಯಲ್ಲಿನ ಕಾರ್ಮಿಕನೂ ಹಾಗೂ ಅಂಚಿನಲ್ಲಿರುವ ರೈತನೂ (marginal farmer) ಆದ ರಾಜೇಶ್ ಕುಮಾರ್ ನೇತಂ ತಿಳಿಸುತ್ತಾರೆ.
"ಯಾವುದೇ ಸಂಪರ್ಕವನ್ನು ತಡೆಗಟ್ಟುವ ಸಲುವಾಗಿ ಇಲ್ಲಿಗೆ ಬರುವ ಎಲ್ಲರನ್ನೂ ನಾವು ತಡೆಯುತ್ತಿದ್ದೇವೆ. ತಮ್ಮ ಸ್ವಂತ ಹಳ್ಳಿಗಳಿಗೆ ವಾಪಸ್ಸು ತೆರಳುವಂತೆ ಅವರನ್ನು ವಿನಂತಿಸುತ್ತಿದ್ದೇವೆ. ನಮ್ಮಲ್ಲಿನ ಕೆಲವು ಯುವಜನರು ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದರಾದರೂ, ಅವರು ಹೋಳಿಗೆ ಮೊದಲೇ ವಾಪಸ್ಸಾಗಿದ್ದಾರೆ. ಆದಾಗ್ಯೂ ಆರೋಗ್ಯ ಇಲಾಖೆಯ ನೌಕರರು ಅವರ ವಿವರಗಳನ್ನು ತೆಗೆದುಕೊಂಡಿದ್ದಾರೆ", ಎಂಬುದಾಗಿ ತೋಟದ ಕಾರ್ಮಿಕರಾದ ಸಜ್ಜಿರಾಂ ಮಂಡವಿ ತಿಳಿಸಿದರು.
ಈಗ ವಾಪಸ್ಸಾಗುವ ಸಿಯದೆಹಿಯ ವಲಸೆಗಾರರನ್ನು ಒಳಗೆ ಬಿಡಲಾಗುತ್ತದೆಯೇ? "ಹೌದು, ಆದರೆ ಸರ್ಕಾರದ ಮಾರ್ಗದರ್ಶನಗಳ ಅನುಸಾರ ಅವರು ಸಂಪರ್ಕ ನಿಷೇಧಿತ ಅವಧಿಯನ್ನು (quarantine period) ಪಾಲಿಸತಕ್ಕದ್ದು", ಎಂದು ಪಂಚಾಯತ್ ನೌಕರರಾದ ಮನೋಜ್ ಮೆಶ್ರಾಂ ತಿಳಿಸಿದರು.






