“ಪ್ರತಿ ಆತ್ಮವೂ ಒಂದು ದಿನ ಸಾವಿನ ರುಚಿಯನ್ನು ಸವಿಯುತ್ತದೆ” ಎಂದು ನವದೆಹಲಿಯ ಅತಿದೊಡ್ಡ ಸ್ಮಶಾನಗಳಲ್ಲಿ ಒಂದಾದ ಅಹ್ಲ್ -ಇ- ಇಸ್ಲಾಮ್ -ಜದೀದ್ ಕಬ್ರಿಸ್ಟಾನ್ನಲ್ಲಿನ ಸಮಾಧಿಯೊಂದರ ಮೇಲೆ ಕೆತ್ತಲಾಗಿತ್ತು. ಬದುಕಿನ ಕಹಿ ಸತ್ಯವನ್ನು ಹೇಳುವ ಇಂತಹ ಮಾತುಗಳನ್ನು ಬೇರೆಡೆ ನೀವು ಅಷ್ಟಾಗಿ ಕಾಣಲು ಸಾಧ್ಯವಿಲ್ಲ.
ಈ ಸಾಲು - كُلُّ نَفْسٍ ذَائِقَةُ الْمَوْتِ - ಇದು ಕುರ್ಆನ್ನ ಒಂದು ಅಯಾತ್ ಮತ್ತು ಈ ಸ್ಮಶಾನದ ಕತ್ತಲೆಯಲ್ಲಿ ಅದು ಶಾಂತಿಯ ಸಾಂತ್ವನವನ್ನು ಹೇಳುತ್ತದೆ. ಅಷ್ಟರಲ್ಲಿ ಮತ್ತೊಂದು ಆಂಬ್ಯುಲೆನ್ಸ್ ಬರುತ್ತದೆ ಮತ್ತು ಮೃತಪಟ್ಟವರ ಸಂಬಂಧಿಕರು ನಮಾಜ್-ಎ-ಜನಾಜಾ (ಕೊನೆಯ ಪ್ರಾರ್ಥನೆ) ಸಲ್ಲಿಸುತ್ತಾರೆ. ಕೆಲವೇ ಕ್ಷಣಗಳಲ್ಲಿ ವ್ಯಾನ್ ಖಾಲಿಯಾಗುತ್ತದೆ. ಯಂತ್ರವೊಂದು ಗುಂಡಿಗೆ ಮಣ್ಣು ತುಂಬಿಸುತ್ತದೆ.
ಈ ಸ್ಮಶಾನದ ಒಂದು ಮೂಲೆಯಲ್ಲಿರುವ ಬಹದ್ದೂರ್ ಷಾ ಜಾಫರ್ ಮಾರ್ಗದಲ್ಲಿರುವ ಮಾಧ್ಯಮ ಕಂಪನಿಗಳ ಕಟ್ಟಡಗಳ ಪಕ್ಕದಲ್ಲಿ 62 ವರ್ಷದ ನಿಜಾಮ್ ಅಖ್ತರ್ ಸಮಾಧಿಯ ಕಲ್ಲುಗಳ ಮೇಲೆ ಮೃತಪಟ್ಟವರ ಹೆಸರನ್ನು ಬರೆಯುತ್ತಿದ್ದಾರೆ. ಅದನ್ನುಮೆಹ್ರಾಬ್ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ತನ್ನ ಬೆರಳುಗಳ ನಡುವೆ ಪರ್ಕಜಾವನ್ನು (ಕ್ಯಾಲಿಗ್ರಫಿ ಬರೆಯಲು ಬಳಸುವ ಕುಂಚ) ಸೂಕ್ಷ್ಮವಾಗಿ ಹಿಡಿದುಕೊಂಡು, ಅಕ್ಷರವೊಂದಕ್ಕೆ ನುಕ್ತಾವನ್ನು ಸೇರಿಸುತ್ತಿದ್ದರು - ಉರ್ದು ಭಾಷೆಯ ಕೆಲವು ಅಕ್ಷರಗಳ ಮೇಲಿನ ಚುಕ್ಕೆ ಅವುಗಳ ಉಚ್ಚಾರಣೆಯನ್ನು ಬದಲಾಯಿಸುತ್ತದೆ. ನಿಜಾಮ್ ಬರೆಯುತ್ತಿದ್ದ ಪದ 'ದುರ್ದಾನಾ.' ಕರೋನಾಗೆ ಬಲಿಯಾದ ವ್ಯಕ್ತಿಯ ಹೆಸರಿದು.
ಅಲ್ಲಿ ನಿಜಾಮ್ ಅವರು ಸಮಾಧಿಯ ಕಲ್ಲಿನ ಮೇಲೆ ಕ್ಯಾಲಿಗ್ರಫಿ ಬಳಸಿ ಕುಶಲವಾಗಿ ಹೆಸರನ್ನು ಬರೆಯುತ್ತಿದ್ದರು. ಆ ಬರಹದಲ್ಲಿ ಅದ್ಭುತ ಕಲಾತ್ಮಕತೆಯಿತ್ತು. ನಂತರ ಅವರ ಸಹೋದ್ಯೋಗಿ ಸುತ್ತಿಗೆ ಮತ್ತು ಉಳಿ ಬಳಸಿ ಕಲ್ಲಿನ ಮೇಲೆ ಆ ಅಕ್ಷರಗಳನ್ನು ನಿಖರವಾಗಿ ಕೆತ್ತನೆ ಮಾಡುತ್ತಾರೆ. ಅವರು ಹಾಗೆ ಮಾಡಿದಾಗ ಅದರ ಮೇಲಿನ ಬಣ್ಣ ಹೊರಟು ಹೋಗುತ್ತದೆ.
ನಿಜಾಮ್ ಕತೀಬ್ (ಕೈಬರಹ ಕಲಾವಿದ ಅಥವಾ ಕ್ಯಾಲಿಗ್ರಾಫರ್) ಸಮಾಧಿ ಕಲ್ಲುಗಳ ಮೇಲೆ ಹೆಸರು ಬರೆಯುವ ಈ ಕೆಲಸವನ್ನು ಸುಮಾರು ನಲವತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಮಾಡುತ್ತಾ ಬಂದಿದ್ದಾರೆ. "ಇದುವರೆಗೆ ಹೆಸರು ಬರೆದ ಸಮಾಧಿ ಕಲ್ಲುಗಳ ಸಂಖ್ಯೆ ಎಷ್ಟೆನ್ನುವುದು ನನಗೆ ನೆನಪಿಲ್ಲ" ಎನ್ನುತ್ತಾರೆ ಅವರು. "ಈ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಾನು ಕೋವಿಡ್ನಿಂದ ಮರಣ ಹೊಂದಿದ ಸುಮಾರು 150 ಜನರ ಹೆಸರುಗಳನ್ನು ಬರೆದಿದ್ದೇನೆ ಮತ್ತು ಅಷ್ಟೇ ಸಂಖ್ಯೆಯ ಕೋವಿಡೇತರ ಕಾರಣಗಳಿಂದ ಮರಣಿಸಿದ ಜನರ ಹೆಸರುಗಳನ್ನು ಬರೆದಿದ್ದೇನೆ. ಪ್ರತಿ ದಿನ ನಾನು ಮೂರರಿಂದ ಐದು ಕಲ್ಲುಗಳನ್ನು ಪೂರ್ಣಗೊಳಿಸುತ್ತೇನೆ. ಕಲ್ಲಿನ ಒಂದು ಭಾಗದಲ್ಲಿ ಬರೆಯಲು ಸುಮಾರು ಒಂದು ಗಂಟೆಯಷ್ಟು ಸಮಯ ಹಿಡಿಯುತ್ತದೆ." ಎಂದು ಅವರು ಹೇಳುತ್ತಾರೆ. ಸಾಮಾನ್ಯವಾಗಿ ಕಲ್ಲಿನ ಮೇಲ್ಭಾಗದಲ್ಲಿ ಉರ್ದುವಿನಲ್ಲಿ ಬರೆಯಲಾಗಿದ್ದರೆ ಕೆಳ ಬದಿಯಲ್ಲಿ ಸತ್ತವರ ಹೆಸರನ್ನು ಇಂಗ್ಲೀಷಿನಲ್ಲಿ ಬರೆದಿರಲಾಗುತ್ತದೆ. "ಇದು ಸೆಕೆಂಡುಗಳಲ್ಲಿ ಪುಟ ಭರ್ತಿ ಮಾಡುವಂತಹ ಕೆಲಸವಲ್ಲ" ಎಂದು ಅಣಕಿಸುತ್ತಾ ಹೇಳುತ್ತಾರೆ.













