ಅಬ್ದುಲ್ ರೆಹಮಾನ್ ಅವರ ಪಾಲಿನ ಜಗತ್ತು ವೃತ್ತಿಯಲ್ಲಿ, ವೈಯಕ್ತಿಕವಾಗಿ ಮತ್ತು ದೈಹಿಕವಾಗಿ ಅಕ್ಷರಶಃ ಕುಗ್ಗಿ ಹೋಗಿದೆ. ನಾಲ್ಕು ಖಂಡಗಳಲ್ಲಿ ಕಾರ್ಮಿಕ ಸಿಬ್ಬಂದಿ ತಂಡಗಳಲ್ಲಿ ಸೇವೆ ಸಲ್ಲಿಸಿದ ವಲಸೆ ಕಾರ್ಮಿಕ, ಇಂದು ಐದು ಕುಟುಂಬ ಸದಸ್ಯರೊಂದಿಗೆ 150 ಚದರ ಅಡಿಯ ಕೋಣೆಗೆ ಸೀಮಿತವಾಗಿದ್ದಾರೆ.
ಈ ಮುಂಬೈ ನಗರದ ಟ್ಯಾಕ್ಸಿ ಚಾಲಕ - ಅವರ ತಂದೆ ಗ್ರಾಮೀಣ ತಮಿಳುನಾಡಿನಿಂದ ಈ ನಗರಕ್ಕೆ ದಶಕಗಳ ಹಿಂದೆ ಬಂದಿದ್ದರು - ಈ ಹಿಂದೆ ಸೌದಿ ಅರೇಬಿಯಾ, ದುಬೈ, ಬ್ರಿಟನ್, ಕೆನಡಾ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಬುಲ್ಡೋಜರುಗಳು ಮತ್ತು ಕಾರುಗಳನ್ನು ಓಡಿಸಿದ್ದಾರೆ. ಇಂದು, ಅವರನ್ನು ಕುರ್ಚಿಯಲ್ಲಿ ಕೂರಿಸಿಕೊಂಡು, ಮಾಹಿಮ್ ಕೊಳೆಗೇರಿ ಕಾಲೋನಿಯ ಕಿರಿದಾದ ಓಣಿಯಲ್ಲಿ ಹೊತ್ತುಕೊಂಡೇ ಸಿಯೋನ್ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯುವ ಟ್ಯಾಕ್ಸಿಯ ಬಳಿಗೆ ಕರೆದೊಯ್ಯಬೇಕಾಗಿದೆ.
ಆಸ್ಪತ್ರೆಗೆ ಹೊರಡುವ ಸಮಯ ಹತ್ತಿರವಾಗುತ್ತಿದ್ದಂತೆ ರೆಹಮಾನ್ ತನ್ನ ಕೋಣೆಯಿಂದ ಕೆಳಗಿಳಿಯುವ ಪ್ರಯತ್ನಕ್ಕೆ ತಯಾರಾಗಲು ಪ್ರಾರಂಭಿಸುತ್ತಾರೆ. ಕೋಣೆಯ ಹೊರಗೆ ಏಣಿ ಮೆಟ್ಟಿಲಿದೆ. ಅವರ ಮಗ ದೇಹದ ಕೆಳಭಾಗವನ್ನು ಹಿಡಿದುಕೊಂಡರೆ, ಅಕ್ಕನ ಮಗ ಅಥವಾ ನರೆಹೊರೆಯವರು ಯಾರಾದರೂ ಬಂದು ಮೇಲ್ಭಾಗವನ್ನು ಹಿಡಿದುಕೊಂಡು ಸಹಾಯ ಮಾಡುತ್ತಾರೆ. ನಂತರ ರೆಹಮಾನ್ ನಿಧಾನವಾಗಿ ಏಣಿ ಮೆಟ್ಟಿಲುಗಳನ್ನು ಇಳಿಯತೊಡಗುತ್ತಾರೆ. ಆ ಕಡಿದಾದ ಒಂಬತ್ತು ಮೆಟ್ಟಿಲುಗಳನ್ನು ಒಂದಾಗಿ ಇಳಿಯುವಾಗಲೂ ಅವರಿಗೆ ಜೀವ ಹೋಗಿ ಜೀವ ಬಂದಂತಾಗುತ್ತದೆ.
ಕೆಳಗಿನ ಇಕ್ಕಟ್ಟಿನ ಓಣಿಯಲ್ಲಿ ಅವರನ್ನು ಎತ್ತಿ ಬಣ್ಣ ಕಿತ್ತುಹೋಗಿರುವ ಪ್ಲಾಸ್ಟಿಕ್ ಚೇರ್ ಒಂದರಲ್ಲಿ ಕೂರಿಸುತ್ತಾರೆ. ಅವರ ಕತ್ತರಿಸಿದ ಕಾಲು ಕುರ್ಚಿಯ ಮೇಲಿರುತ್ತದೆ. ನಂತರ ಅವರ ಮಗ ಮತ್ತು ಇತರ ಇಬ್ಬರು ಸೇರಿ ಅವರನ್ನು ಕಿರಿದಾದ ಉದ್ದನೆಯ ಓಣಿಯ ಮೂಲಕ ಮಾಹಿಮ್ ಬಸ್ ಡಿಪೋ ಬಳಿಯ ರಸ್ತೆಯ ಕಡೆಗೆ ಒಯ್ಯುತ್ತಾರೆ. ಅಲ್ಲಿ, ಅವರು ಜೊತೆಗಿರುವವರ ಸಹಾದೊಡನೆ ಟ್ಯಾಕ್ಸಿಯ ಒಳಗೆ ಸೇರಿಕೊಳ್ಳುತ್ತಾರೆ.
ಇಲ್ಲಿಂದ ಐದು ಕಿಲೋಮೀಟರ್ ದೂರದಲ್ಲಿರುವ ಸಿಯೋನ್ನ ಸರ್ಕಾರಿ ಆಸ್ಪತ್ರೆಗೆ ಹೋಗಲು ವಿಧಿಸಲಾಗುವ ಟ್ಯಾಕ್ಸಿ ಶುಲ್ಕವು ಅವರ ಸಾಮರ್ಥ್ಯಕ್ಕೆ ಮೀರಿದ ಮೊತ್ತವಾಗಿದೆ. ಆದರೂ ಕಳೆದ ವರ್ಷದ ಕೆಲವು ತಿಂಗಳುಗಳ ಕಾಲ ಅವರು ವಾರಕ್ಕೊಮ್ಮೆ ಬ್ಯಾಂಡೇಜ್ ಬದಲಾಯಿಸಿಕೊಳ್ಳಲು ಆಸ್ಪತ್ರೆಗೆ ಹೋಗಬೇಕಿತ್ತು. ಈಗ ಗಾಯ ಸ್ವಲ್ಪ ವಾಸಿಯಾಗಿರುವುದರಿಂದಾಗಿ ಮೊದಲಿನಷ್ಟು ಆಸ್ಪತ್ರೆಗೆ ಹೋಗಬೇಕಿಲ್ಲವಾದರೂ ಆಗಾಗ ಹೋಗಿ ಬರಬೇಕಿರುತ್ತದೆ. ಹಾಗೆ ಪ್ರತಿ ಸಲ ಹೋಗುವಾಗಲೂ ಅವರು ಉತ್ತರ ಮುಂಬೈಯ ಮೋರಿ ರಸ್ತೆಯ ಕಾಲೋನಿಯ ಎರಡು ಮೂರು ಮಹಡಿಗಳ ಕಟ್ಟಡಗಳಿರುವ ಇಕ್ಕಟ್ಟಾದ ಓಣಿಯ ಮೂಲಕ ಕುರ್ಚಿಯ ಮೆರವಣಿಗೆ ಮೂಲಕ ಹೋಗಬೇಕಿರುತ್ತದೆ.














