ದೌರ್ಜನ್ಯಗಳು, ಯುದ್ಧಗಳು ಮತ್ತು ರಕ್ತಪಾತದ ನಮ್ಮ ಕಾಲದಲ್ಲಿ, ನಾವು ಆಗಾಗ್ಗೆ ವಿಶ್ವ ಶಾಂತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುತ್ತೇವೆ. ಆದರೆ ಸ್ಪರ್ಧೆ, ದುರಾಸೆ, ಪೈಪೋಟಿ, ದ್ವೇಷ ಮತ್ತು ಹಿಂಸೆಯನ್ನು ಆಧರಿಸಿದ ನಾಗರಿಕತೆಗಳು ಅದನ್ನು ಹೇಗೆ ಕಲ್ಪಿಸಿಕೊಳ್ಳಬಲ್ಲವು? ಈ ರೀತಿಯ ಸಂಸ್ಕೃತಿಯನ್ನು ನಾನು ಬೆಳೆದು ಬಂದ ಸ್ಥಳಗಳಲ್ಲಿ ನಾನು ನೋಡಿಲ್ಲ. ನಾವು ಆದಿವಾಸಿಗಳು ನಾಗರಿಕತೆಯ ಬಗ್ಗೆ ನಮ್ಮದೇ ಆದ ತಿಳುವಳಿಕೆಯನ್ನು ಹೊಂದಿದ್ದೇವೆ. ಸುಶಿಕ್ಷಿತ ಜನರು ರಾತ್ರಿಯಲ್ಲಿ ಸದ್ದಿಲ್ಲದೆ ಈ ಸ್ಥಳವನ್ನು ಕಸ ಹಾಕುವುದನ್ನು ಮತ್ತು ಅವಿದ್ಯಾವಂತ ವ್ಯಕ್ತಿಯು ಬೆಳಿಗ್ಗೆ ಅದನ್ನು ಸ್ವಚ್ಛಗೊಳಿಸುವುದನ್ನು ನಾವು ನಂಬುವುದಿಲ್ಲ. ನಾವು ಅದನ್ನು ನಾಗರಿಕತೆ ಎಂದು ಕರೆಯುವುದಿಲ್ಲ ಮತ್ತು ಅಂತಹ ಒಂದು ನಾಗರಿಕತೆಗೆ ಸೇರಲು ನಿರಾಕರಿಸುತ್ತೇವೆ. ನಾವು ನದಿಯ ದಡದಲ್ಲಿ ಮಲವಿಸರ್ಜನೆ ಮಾಡುವುದಿಲ್ಲ. ನಾವು ಮರಗಳಿಂದ ಅಕಾಲಿಕವಾಗಿ ಹಣ್ಣುಗಳನ್ನು ಕೀಳುವುದಿಲ್ಲ. ಹೋಲಿ ಹತ್ತಿರ ಬಂದಾಗ, ನಾವು ಭೂಮಿಯನ್ನು ಉಳುಮೆ ಮಾಡುವುದನ್ನು ನಿಲ್ಲಿಸುತ್ತೇವೆ. ನಾವು ನಮ್ಮ ಭೂಮಿಯನ್ನು ಶೋಷಿಸುವುದಿಲ್ಲ, ವರ್ಷವಿಡೀ ಭೂಮಿಯಿಂದ ನಿರಂತರ ಉತ್ಪಾದನೆಯನ್ನು ನಿರೀಕ್ಷಿಸುವುದಿಲ್ಲ. ನಾವು ಅದನ್ನು ಉಸಿರಾಡಲು ಬಿಡುತ್ತೇವೆ, ಪುನರುಜ್ಜೀವನಗೊಳ್ಳಲು ಸಮಯವನ್ನು ನೀಡುತ್ತೇವೆ. ನಾವು ಮಾನವ ಜೀವನವನ್ನು ಗೌರವಿಸುವಷ್ಟೇ ಪ್ರಕೃತಿಯನ್ನು ಗೌರವಿಸುವ ಮೂಲಕ ಬದುಕುತ್ತೇವೆ.


Narmada, Gujarat
|WED, AUG 03, 2022
ಕಾಡಿನ ನಾಗರಿಕತೆ
ಆದಿವಾಸಿ ಕವಿಯೊಬ್ಬರು ದೆಹ್ವಾಲಿ ಬಿಲಿ ಭಾಷೆಯಲ್ಲಿ ಬರೆದ ಐದು ಕವಿತೆಗಳ ಸರಣಿಯಲ್ಲಿ ನಾಲ್ಕನೆಯದಾಗಿರುವ ಈ ಕವಿತೆಯಲ್ಲಿ ನಮ್ಮ ನಾಗರಿಕತೆ ಎಂದು ಕರೆಯಲ್ಪಡುವ ಸ್ವಯಂ-ವಿನಾಶಕಾರಿ ಸ್ವಭಾವ ಮತ್ತು ಶಾಂತಿಯ ಟೊಳ್ಳಾದ ತಿಳುವಳಿಕೆಯನ್ನು ಖಂಡಿಸುತ್ತಾರೆ
Poem and Text
Painting
Editor
Translator
ಈ ಕಾರಣದಿಂದಲೇ ನಾವು ಕಾಡಿನಲ್ಲಿ ಉಳಿದುಬಿಟ್ಟೆವು
ಲಕ್ಷಗೃಹದಲ್ಲಿ ನೀವು ನಮ್ಮ ಪೂರ್ವಜರನ್ನು ಜೀವಂತವಾಗಿ ಸುಟ್ಟಿರಿ.
ನೀವು ಅವರ ಹೆಬ್ಬೆರಳುಗಳನ್ನು ಕತ್ತರಿಸಿದಿರಿ.
ಅವರನ್ನು ಅವರ ಸ್ವಂತ ಅಣ್ಣತಮ್ಮಂದಿರ ವಿರುದ್ಧ ನಿಲ್ಲಿಸಿದಿರಿ
ಬಡಿದಾಡಲು ಮತ್ತು ಕೊಲ್ಲಲು.
ನೀವು ಅವರು ತಮ್ಮದೇ ಮನೆಗಳನ್ನು ಸ್ಫೋಟಿಸುವಂತೆ ಮಾಡಿದಿರಿ.
ಇದಕ್ಕೆ ಕಾರಣ ನಿಮ್ಮ ಈ ರಕ್ತಸಿಕ್ತ ನಾಗರಿಕತೆ
ಮತ್ತು ಅದರ ಅನಾಗರಿಕ ಮುಖ
ನಾವು ಕಾಡಿನಿಂದ ನಾಡಿಗೆ ಬರಲಿಲ್ಲ.
ಯಾಕೆಂದರೆ,
ಎಲೆಯೊಂದು ಸರಾಗ ಕಳಚಿ
ಮಣ್ಣಿನೊಡನೆ ಬೆರೆಯುತ್ತದೆ
- ಇದು ಸಾವಿನ ಕುರಿತಾದ ನಮ್ಮ ಕಲ್ಪನೆ.
ನಾವು ಸ್ವರ್ಗದಲ್ಲಿ ದೇವತೆಗಳನ್ನು ಹುಡುಕುವುದಿಲ್ಲ,
ನಾವು ಅವರನ್ನು ಪ್ರಕೃತಿಯಲ್ಲಿ ಕಾಣುತ್ತೇವೆ.
ಸತ್ತವರ ಕುರಿತು ನಮಗೆ ಯಾವುದೇ ಕಲ್ಪನೆಯಿಲ್ಲ
ನಮ್ಮ ಜೀವನದಲ್ಲಿ. ಪ್ರಕೃತಿಯೇ ನಮ್ಮ ಸ್ವರ್ಗ.
ಅದರ ವಿರುದ್ಧ ಹೋಗುವುದು ನರಕ.
ಸ್ವಾತಂತ್ರ್ಯವೇ ನಮ್ಮ ಧರ್ಮ.
ನೀವು ಇದನ್ನು ಬಲೆಯೆಂದು ಕರೆಯುತ್ತೀರಿ, ಈ ಬಂಧನವನ್ನು ನಿಮ್ಮ ಧರ್ಮ ಎಂದು ಕರೆಯುತ್ತೀರಿ.
ಇದುವೇ ನಿಮ್ಮ ಸೋಗಲಾಡಿ ನಾಗರಿಕತೆ ಮತ್ತು ಅದರ ಅನಾಗರಿಕ ಮುಖ, ಸಾಹೇಬರೇ,
ಇದೆಲ್ಲ ತಿಳಿದಿದ್ದರಿಂದಲೇ ನಾವು ಕಾಡಿನಿಂದ ನಾಡಿಗೆ ಬರಲಿಲ್ಲ.
ಸಾಹೇಬರೇ, ನಮ್ಮದು ಭೂಮಿಯ ಸೇನೆ.
ನಮ್ಮ ಜೀವನವು ಕೇವಲ ನಮ್ಮ ಉಳಿವಿಗಾಗಿ ಅಲ್ಲ.
ನೀರು, ಕಾಡುಗಳು, ಭೂಮಿ, ಜನರು, ಪ್ರಾಣಿಗಳು,
ಅವುಗಳಿಂದಾಗಿ ನಾವು ಅಸ್ತಿತ್ವದಲ್ಲಿದ್ದೇವೆ.
ನೀವು ನಮ್ಮ ಪೂರ್ವಜರನ್ನು ಫಿರಂಗಿಗಳ ಬಾಯಿಗೆ ಕಟ್ಟಿದಿರಿ
ನೀವು ಅವರುಗಳನ್ನು ಮರಗಳಿಗೆ ನೇತುಹಾಕಿ ಕೆಳಗೆ ಬೆಂಕಿಯನ್ನು ಹಚ್ಚಿದಿರಿ
ಅವರ ಹತ್ಯಾಕಾಂಡ ನಡೆಸಲು ನೀವು ಅವರ ಸ್ವಂತ ಸೈನ್ಯಗಳನ್ನು ರಚಿಸಿದಿರಿ
ನೀವು ನಮ್ಮ ಸ್ವಾಭಾವಿಕ ಶಕ್ತಿಯನ್ನು ಕೊಂದು
ನಮ್ಮನ್ನು ಕಳ್ಳರು ಎಂದು ಕರೆದಿರಿ,
ದರೋಡೆಕೋರರು, ಹಂದಿಗಳು, ದಂಗೆಕೋರರು ಮತ್ತು ಇನ್ನೂ ಏನೇನೊ ಅಂದಿರಿ.
ನೀವು ಒಂದು ಕಾಗದದ ತುಂಡಿನಿಂದ ನಮ್ಮೆಲ್ಲರನ್ನೂ ಕೊಲ್ಲಬಹುದು
ಇದುವೇ ನಿಮ್ಮ ಸೋಗಲಾಡಿ ನಾಗರಿಕತೆ ಮತ್ತು ಅದರ ಅನಾಗರಿಕ ಮುಖ, ಸಾಹೇಬರೇ,
ಇದೆಲ್ಲ ತಿಳಿದಿದ್ದರಿಂದಲೇ ನಾವು ಕಾಡಿನಿಂದ ನಾಡಿಗೆ ಬರಲಿಲ್ಲ.
ನೀವು ನಿಮ್ಮ ಜೀವಂತ ಜಗತ್ತನ್ನು ಮಾರುಕಟ್ಟೆಯನ್ನಾಗಿ ಪರಿವರ್ತಿಸಿದ್ದೀರಿ.
ವಿದ್ಯಾವಂತರಾದ ನೀವು ನಿಮ್ಮ ಕಣ್ಣುಗಳನ್ನು ಕಳೆದುಕೊಂಡಿದ್ದೀರಿ, ಸಾಹೇಬರೇ...
ನಿಮ್ಮ ಶಿಕ್ಷಣವು ನಿಮ್ಮ ಆತ್ಮವನ್ನು ಮಾರಾಟ ಮಾಡಲು ಹೊರಟಿದೆ.
ಇದು ನಮ್ಮೆಲ್ಲರನ್ನೂ ಮಾರುಕಟ್ಟೆ ಚೌಕದಲ್ಲಿ ನಿಲ್ಲುವಂತೆ ಮಾಡುತ್ತಿದೆ
ಸಂಸ್ಕೃತಿ ಮತ್ತು ನಾಗರಿಕತೆಯ ಹೆಸರಿನಲ್ಲಿ.
ನೀವು ಹಿಂಸೆಯ ರಾಶಿಗಳನ್ನು ರಾಶಿ ಹಾಕಿದ್ದೀರಿ.
ಇದನ್ನೇ ನೀವು ಹೊಸ ಯುಗಕ್ಕೆ ನಾಂದಿ ಹಾಡುವಿರಿ ಎಂದು ಕರೆಯುತ್ತೀರಾ?
ಒಬ್ಬ ಮನುಷ್ಯ ಇನ್ನೊಬ್ಬನನ್ನು ದ್ವೇಷಿಸುವಲ್ಲಿ
ನೀವು ವಿಶ್ವ ಶಾಂತಿಯನ್ನು ತರುತ್ತೀರೆಂದು ಭಾವಿಸುತ್ತೀರಿ
ನಿಮ್ಮ ಬಂದೂಕುಗಳು ಮತ್ತು ಕ್ಷಿಪಣಿಗೆಳ ಬಳಸಿ ತರುವಿರಾ ಶಾಂತಿ?
ಇದುವೇ ನಿಮ್ಮ ಸೋಗಲಾಡಿ ನಾಗರಿಕತೆ ಮತ್ತು ಅದರ ಅನಾಗರಿಕ ಮುಖ, ಸಾಹೇಬರೇ,
ಇದೆಲ್ಲ ತಿಳಿದಿದ್ದರಿಂದಲೇ ನಾವು ಕಾಡಿನಿಂದ ನಾಡಿಗೆ ಬರಲಿಲ್ಲ.
ಅನುವಾದ : ಶಂಕರ. ಎನ್. ಕೆಂಚನೂರು
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/ಕಾಡಿನ-ನಾಗರಿಕತೆ

