ನಾಮದೇವ್ ತರಾಳೆ ತಮ್ಮ ಜಮೀನಿಗೆ ಬಂದು ಸ್ವಲ್ಪ ಹೊತ್ತು ನಿಲ್ಲುತ್ತಾರೆ. ಹಸಿರು ಬೆಳೆಯನ್ನು ಯಾವುದೋ ಪ್ರಾಣಿ ತುಳಿದು ತಿಂದಂತೆ ಭಾಸವಾಗಿ ಬಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಾರೆ. 2022ರ ಫೆಬ್ರವರಿ ತಿಂಗಳು ಆಗಷ್ಟೇ ಪ್ರಾರಂಭವಾಗಿತ್ತು. ಚಳಿಯಿಂದ ಕೂಡಿದ ಉತ್ತಮ ವಾತಾವರಣವಿತ್ತು. ನೆತ್ತಿಯ ಮೇಲಿದ್ದ ಸೂರ್ಯನೂ ತಣ್ಣಗಿದ್ದನು.
"ಹಾ ಏಕ್ ಪ್ರಕಾರ್ಚಾ ದುಷ್ಕಳಾಚ್ ಆಹೆ [ಇದು ಹೊಸ ರೀತಿಯ ಬರಗಾಲ]" ಎಂದು ಅವರು ಬೇಸರದಿಂದ ಹೇಳುತ್ತಾರೆ.
ಈ ಒಂದು ವಾಕ್ಯದಲ್ಲಿ 48 ವರ್ಷದ ತರಾಳೆಯವರ ಹತಾಶೆ, ಭಯವನ್ನು ಅರ್ಥ ಮಾಡಿಕೊಳ್ಳಬಹುದಿತ್ತು. ಮೂರು ತಿಂಗಳ ಕಾಲ ಬೇಸಾಯ ಮಾಡಿ ಐದು ಎಕರೆಯಲ್ಲಿ ಬೆಳೆದಿರುವ ತೊಗರಿ ಮತ್ತು ಹೆಸರು ಬೆಳೆ ಕೈ ತಪ್ಪಿ ಹೋಗುತ್ತದೆಯೇ ಎಂಬ ಆತಂಕದಲ್ಲಿ ಅವರಿದ್ದಾರೆ. ಅವರು ಕಳೆದ 25 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಮತ್ತು ಈ ವರ್ಷಗಳಲ್ಲಿ ಅವರು ಅನೇಕ ವಿಧದ ಬರಗಳನ್ನು ಅನುಭವಿಸಿದ್ದಾರೆ - ಮಳೆ-ಸಂಬಂಧಿತ ಅಂದರೆ ಒಣ ಅಥವಾ ಆರ್ದ್ರ ಬರಗಳು, ನೀರಿಗೆ ಸಂಬಂಧಿಸಿದ, ಅಂತರ್ಜಲ ಮಟ್ಟವು ವೇಗವಾಗಿ ಕುಸಿದಾಗ ಮತ್ತು ಕೃಷಿಗೆ ಸಂಬಂಧಿಸಿದ, ಮಣ್ಣಿನಲ್ಲಿ ತೇವಾಂಶದ ಕೊರತೆಯಿಂದಾಗಿ ಬೆಳೆಗಳು ವಿಫಲವಾದಾಗ.
ಉತ್ತಮ ಬೆಳೆ ಬರುತ್ತಿದೆ ಎಂದು ಅನಿಸಿದಾಗಲೇ ಈ ಬಿಕ್ಕಟ್ಟು ನಮ್ಮ ಕಣ್ಣ ಮುಂದೆ ಬರುತ್ತದೆ ಎನ್ನುತ್ತಾರೆ ತರಾಳೆ. ಮತ್ತು ಬಿಕ್ಕಟ್ಟು ಕೆಲವೊಮ್ಮೆ ನಾಲ್ಕು ಕಾಲುಗಳ ಮೂಲಕ ನಡೆದು ಬಂದು, ಕೆಲವೊಮ್ಮೆ ಹಾರಿ ಬಂದು ಬೆಳೆಗಳನ್ನು ನಾಶಪಡಿಸುತ್ತದೆ.
"ಹಗಲಿನಲ್ಲಿ ನೀರು ಕೋಳಿಗಳು, ಕೋತಿಗಳು, ಮೊಲಗಳು; ಜಿಂಕೆ, ನೀಲ್ಗಾಯ್, ಸಾಂಬಾರ್, ಹಂದಿ, ರಾತ್ರಿಯಲ್ಲಿ ಹುಲಿಗಳು" ಎಂದು ಅವರು ಬೆದರಿಕೆಗಳನ್ನು ಪಟ್ಟಿ ಮಾಡುತ್ತಾರೆ.
"ಅಮ್ಹಾಲೆ ಪೆರ್ಟಾ ಯೇತೆ ಸಾಹೇಬ್, ಪಣ್ ವಚಾವ್ತಾ ಯೇತ್ ನಹೀ [ನಮಗೆ ಬಿತ್ತನೆ ಮಾಡುವುದು ಹೇಗೆಂದು ತಿಳಿದಿದೆ, ನಮ್ಮ ಬೆಳೆಯನ್ನು ರಕ್ಷಿಸುವುದು ಹೇಗೆನ್ನುವುದು ತಿಳಿದಿಲ್ಲ], ಎಂದು ಅವರು ಸೋತ ಧ್ವನಿಯಲ್ಲಿ ಹೇಳುತ್ತಾರೆ. ಅವರು ಸಾಮಾನ್ಯವಾಗಿ ಹತ್ತಿ ಅಥವಾ ಸೋಯಾಬೀನ್ ಗಳಂತಹ ವಾಣಿಜ್ಯ ಬೆಳೆಗಳನ್ನು ಹೊರತುಪಡಿಸಿ ಹೆಸರು ಕಾಳು, ಮೆಕ್ಕೆಜೋಳ, ಜೋಳ ಮತ್ತು ತೊಗರಿಯನ್ನು ಬೆಳೆಯುತ್ತಾರೆ.




















