ಈ ಊರಿನಲ್ಲಿ ನೀವು ದನವಾಗಿ ಹುಟ್ಟಿದ್ದರೆ ನಿಮಗೆ ತಿನ್ನಬಲ್ಲಷ್ಟು ಟೊಮ್ಯಾಟೊ ಉಚಿತವಾಗಿ ಸಿಗುತ್ತದೆ. ಅದು ಈ ಬಾರಿ ಮಾತ್ರ. ಉಳಿದ ಸಮಯದಲ್ಲಿ ನೀವು ಕುರಿಗಳಾಗಿದ್ದರೆ ನಿಮಗೆ ಉಚಿತ ಟೊಮ್ಯಾಟೊ ತಿನ್ನುವಷ್ಟು ಸಿಗುವುದು ಖಚಿತ.
ಅನಂತಪುರ ಟೊಮೆಟೊ ಮಾರುಕಟ್ಟೆ ಅಂಗಳದ ಬಳಿಯ ಈ ಮೈದಾನವು ಈ ಹಣ್ಣು ಅಥವಾ ತರಕಾರಿಯ ಬೆಲೆಗಳು ಕಡಿಮೆಯಾದಾಗ ಅವುಗಳನ್ನು ಎಸೆಯುವ ಮೈದಾನವಾಗಿ ಕಾರ್ಯನಿರ್ವಹಿಸುತ್ತದೆ. (ಟೊಮ್ಯಾಟೊ ಪೌಷ್ಟಿಕತಜ್ಞರು ತರಕಾರಿ ಎಂದು ಪರಿಗಣಿಸುವ ಹಣ್ಣುಗಳಾಗಿವೆ ಎಂದು ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ಹೇಳುತ್ತದೆ). ಹತ್ತಿರದ ಹಳ್ಳಿಗಳಿಂದ ತಮ್ಮ ಉತ್ಪನ್ನಗಳನ್ನು ತಂದ ರೈತರು ಸಾಮಾನ್ಯವಾಗಿ ತಮ್ಮ ಮಾರಾಟವಾಗದ ಟೊಮೆಟೊಗಳನ್ನು ಇಲ್ಲಿ ಎಸೆಯುತ್ತಾರೆ. ಈ ಸ್ಥಳವು ಹೆಚ್ಚಾಗಿ ಆಡುಗಳಿಂದ ಕಿಕ್ಕಿರಿದಿರುತ್ತದೆ. ಆದರೆ, ಮಳೆ ಸಮಯದಲ್ಲಿ ಆಡುಗಳು ಟೊಮೆಟೊ ತಿಂದರೆ ಜ್ವರ ಬರುತ್ತದೆ' ಎನ್ನುತ್ತಾರೆ ಪಿ.ಕದಿರಪ್ಪ. ಅವರು ಇಲ್ಲಿಗೆ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಬುಕ್ಕರಾಯಸಮುದ್ರಂ ಗ್ರಾಮದವರು ಮತ್ತು ಇದು ಕೂಡ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗೆ ಸೇರಿದ ಊರಾಗಿದೆ. ಕದಿರಪ್ಪ ವೃತ್ತಿಯಿಂದ ಕುರಿ ಪಾಲಕ.
ಆಡುಗಳು ದನಗಳಿಗಿಂತಲೂ ಹೆಚ್ಚು ಸೂಕ್ಷ್ಮ ಪ್ರಾಣಿಗಳಾಗಿರುವ ಕಾರಣ, ಅನಂತಪುರದಲ್ಲಿ ಮಳೆಯಾಗುತ್ತಿರುವ ಈ ಹೊತ್ತು ಅವುಗಳಿಗೆ ಟೊಮ್ಯಾಟೊ ತಿನ್ನಿಸಿದರೆ ಜ್ವರ ಕೂಡ ಬರುವ ಸಾಧ್ಯತೆಯಿರುತ್ತದೆ. ಇದೇ ಕಾರಣಕ್ಕಾಗಿ ಆಡುಗಳಿಗೆ ಅವುಗಳ ಮೆಚ್ಚಿನ ಹಣ್ಣನ್ನು ತಿನ್ನಲು ಅವುಗಳ ಮಾಲಿಕ ಬಿಡುವುದಿಲ್ಲ. ಅವು ಅಲ್ಲೇ ಇದ್ದ ಕಳೆ ಗಿಡಗಳನ್ನು ಮತ್ತು ಹುಲ್ಲನ್ನು ತಿಂದು ಸಮಾಧಾನ ಮಾಡಿಕೊಳ್ಳುತ್ತಿದ್ದವು. ಬಹುಶಃ ದನಗಳು ತಮ್ಮ ನೆಚ್ಚಿನ ಹಣ್ಣುಗಳನ್ನು ತಿನ್ನುತ್ತಿರುವುದನ್ನು ನೋಡಿ ಅವುಗಳಿಗೆ ಒಂದಿಷ್ಟು ಹೊಟ್ಟೆಕಿಚ್ಚೂ ಆಗಿರಬಹುದು. ಆಡುಗಳ ಮಾಲಿಕ ತನ್ನ ಆಡುಗಳಿಗೆ ಇಷ್ಟೊಂದು ಹಣ್ಣು ಎಸೆಯುವ ರೈತನಿಗೆ ಪ್ರತಿಯಾಗಿ ಏನನ್ನೂ ನೀಡುವುದಿಲ್ಲ. ಕೆಲವೊಮ್ಮೆ ಹಲವು ದಿನಗಳ ಕಾಲ ರಾಶಿ ರಾಶಿ ಟೊಮ್ಯಾಟೊ ಹೀಗೆ ಎಸೆಯಲಾಗುತ್ತದೆ.
ಅನಂತಪುರ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಸಾಮಾನ್ಯವಾಗಿ ಕಿಲೋಗೆ 20ರಿಂದ 30 ರೂಪಾಯಿಗಳ ನಡುವೆ ಏರಿಳಿತವಾಗುತ್ತಿರುತ್ತದೆ. ಪಟ್ಟಣದ ರಿಲಾಯನ್ಸ್ ಮಾರ್ಟ್ ನಲ್ಲಿ ಅವು ಅಗ್ಗದ ಬೆಲೆಗೆ ಸಿಗುತ್ತವೆ. "ನಾವು ಒಮ್ಮೆ ಅವುಗಳನ್ನು ಕಿಲೋಗೆ ಕೇವಲ ೧೨ ರೂಪಾಯಿಗಳಿಗೆ ಮಾರಾಟ ಮಾಡಿದ್ದೇವೆ" ಎಂದು ಮಾರ್ಟ್ ನ ಸಿಬ್ಬಂದಿಯೊಬ್ಬರು ಹೇಳುತ್ತಾರೆ. "ಅವರು ತಮ್ಮದೇ ಆದ ಪೂರೈಕೆದಾರರನ್ನು ಹೊಂದಿದ್ದಾರೆ, ಆದರೆ ನಾವು ಮಾರುಕಟ್ಟೆ ಅಂಗಳದಲ್ಲಿ ಖರೀದಿಸುತ್ತೇವೆ ಮತ್ತು ಸಾಮಾನ್ಯವಾಗಿ ದಿನದ ಕೊನೆಯಲ್ಲಿ ಕೆಟ್ಟು ಹೋಗಿರುವುದನ್ನು ಎಸೆಯುತ್ತೇವೆ" ಎಂದು ತರಕಾರಿ ಮಾರಾಟಗಾರರೊಬ್ಬರು ಮಾರ್ಟ್ ಬಗ್ಗೆ ಹೇಳುತ್ತಾರೆ



