ಮೂವರು ಯುವಕರು ನಿರ್ಮಾಣ ಸ್ಥಳದಲ್ಲಿನ ಕೆಲಸ ಮುಗಿಸಿಕೊಂಡು ತಮ್ಮ ಊರಾದ ಮಾರಿಗೆ ಮರಳುತ್ತಿದ್ದರು. “ಇದು ಸುಮಾರು 15 ವರ್ಷಗಳ ಹಿಂದಿನ ಕತೆ” ಎಂದು ಅಜಯ್ ಪಾಸ್ವಾನ್ ನೆನಪಿಸಿಕೊಳ್ಳುತ್ತಾರೆ. “ನಾವು ಊರಿನ ಪಾಳುಬಿದ್ದ ಮಸೀದಿಯೊಂದರ ಮುಂದೆ ನಡೆದು ಹೋಗುತ್ತಿದ್ದೆವು. ಆಗ ನಮಗೆ ಅದರ ಒಳಗೆ ಏನಿದೆ ಎಂದು ನೋಡುವ ಕುತೂಹಲವಾಯಿತು.”
ನೆಲದ ಮೇಲೆ ಪಾಚಿ ಬೆಳೆದಿತ್ತು. ಕಟ್ಟಡವನ್ನು ಪೂರ್ತಿಯಾಗಿ ಪೊದೆಗಳು ಆವರಿಸಿದ್ದವು.
“ಅಂದರ್ ಗಯೇ ತೋ ಹಮ್ ಲೋಗೋಂ ಕಾ ಮನ್ ಬದಲ್ ಗಯಾ [ಒಳಗೆ ಹೋಗುತ್ತಿದ್ದಂತೆ ನಮ್ಮ ಮನಸ್ಸು ಬದಲಾಯಿತು]” ಎನ್ನುವ 33 ವರ್ಷದ ದಿನಗೂಲಿ ಕಾರ್ಮಿಕ “ಬಹುಶಃ ಅಲ್ಲಾಹನೇ ನಮ್ಮನ್ನು ಒಳಗೆ ಕರೆಸಿಕೊಂಡಿರಬಹುದು” ಎನ್ನುತ್ತಾರೆ.
ಅಜಯ್ ಪಾಸ್ವಾನ್, ಬಖೋರಿ ಬಿಂಡ್ ಮತ್ತು ಗೌತಮ್ ಪ್ರಸಾದ್ ಈ ಮೂವರು ಸೇರಿ ಆ ಮಸೀದಿಯನ್ನು ಸ್ವಚ್ಛಗೊಳಿಸಲು ತೀರ್ಮಾನಿಸಿದರು. “ನಾವು ಅಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಕತ್ತರಿಸಿ ಮಸೀದಿಗೆ ಬಣ್ಣ ಬಳಿದೆವು. ಮಸೀದಿಯ ಮುಂದೆ ಒಂದು ದೊಡ್ಡ ವೇದಿಕೆಯನ್ನೂ ನಿರ್ಮಿಸಿದೆವು” ಎಂದು ಅಜಯ್ ಹೇಳಿದರು. ಅಂದಿನಿಂದ ದಿನಾಲೂ ಸಂಜೆ ಅವರು ಅಲ್ಲಿ ದೀಪವನ್ನೂ ಹಚ್ಚತೊಡಗಿದರು.
ಆ ಮೂವರು ಸೇರಿ ಮಸೀದಿಗೆ ಧ್ವನಿ ವ್ಯವಸ್ಥೆಯನ್ನು ಮಾಡಿಸಿ ಮಸೀದಿಯ ಗುಮ್ಮಟಕ್ಕೆ ಲೌಡ್ ಸ್ಪೀಕರ್ ನೇತು ಹಾಕಿದರು. “ನಾವು ಸೌಂಡ್ ಸಿಸ್ಟಮ್ ಮೂಲಕ ಆಜಾನ್ ಮೊಳಗಿಸಲು ನಿರ್ಧರಿಸಿದೆವು” ಎಂದು ಅಜಯ್ ಹೇಳುತ್ತಾರೆ. ಮತ್ತು ಇದರೊಂದಿಗೆ ಬಿಹಾರದ ನಳಂದ ಜಿಲ್ಲೆಯ ಮಾರಿ ಎಂಬ ಹಳ್ಳಿಯಲ್ಲಿ ಎಲ್ಲಾ ಮುಸ್ಲಿಮರ ಪಾಲಿಗೂ ದಿನಕ್ಕೆ ಐದು ಬಾರಿ ಆಜಾನ್ (ಪ್ರಾರ್ಥನೆಯ ಕರೆ) ಮೊಳಗತೊಡಿಗತು.












