ವಿಜಯ್ ಮರೋತ್ತರ್ ಮೊಣಕಾಲು ಮಟ್ಟದ ನೀರಿನಲ್ಲಿ ಮುಳುಗಿದ್ದ ತನ್ನ ಹತ್ತಿ ಹೊಲದತ್ತ ನೋಡುತ್ತಿದ್ದರು. ಈ ಭಾರಿ ಮಳೆ ಬರದೆ ಹೋಗಿದ್ದರೆ ಅವರ ಹೊಲದ ತುಂಬಾ ಹಾಲು ಬಿಳುಪಿನ ಚಂದ್ರನಂತಹ ಹತ್ತಿಯ ಹೂಗಳನ್ನು ನೋಡಬಹುದಿತ್ತು. “ಸುಮಾರು 1.25 ರೂ.ಗಳನ್ನು ಈ ಬೆಳೆಗೆ ಹೂಡಿಕೆ ಮಾಡಿದ್ದೆ. ಈಗ ಅದರಲ್ಲಿ ಬಹುತೇಕ ಕಳೆದುಕೊಂಡಂತಾಗಿದೆ” ಎಂದು 25 ವರ್ಷದ ವಿಜಯ್ ತನ್ನ ಬೆಳೆಗಾದ ಪರಿಸ್ಥಿತಿಯನ್ನು ವಿವರಿಸುತ್ತಾ ಹೇಳಿದರು. ಅದು 2022ರ ಸೆಪ್ಟೆಂಬರ್ ತಿಂಗಳು. ಎಲ್ಲವೂ ಸರಿಯಿದ್ದಿದ್ದರೆ ವಿಜಯ್ ಮೊದಲ ಹಂತದ ಬೆಳೆ ಕೊಯ್ಲು ಆರಂಬಿಸಿರುತ್ತಿದ್ದರು. ದುರಂತವೆಂದರೆ ಈ ಬಾರಿ ಅವರಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದಾದವರು ಕೂಡಾ ಇದ್ದಿರಲಿಲ್ಲ.
ಅವರ ತಂದೆ ಘನಶ್ಯಾಮ್ ಮರೋತ್ತರ್ ಐದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೆ ಎರಡು ವರ್ಷಗಳ ಹಿಂದೆ ಅವರ ಅಮ್ಮ ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದರು. ಇಲ್ಲಿನ ಅನಿಯಮಿತ ಹವಾಮಾನ ಮತ್ತು ಸರಣಿ ಬೆಳೆನಷ್ಟದ ಹಂಗಾಮುಗಳು ಅವರ ಪೋಷಕರನ್ನು ವಿಧರ್ಭದ ಇತರ ರೈತರಂತೆ ಒತ್ತಡಕ್ಕೆ ಸಿಲುಕಿಸಿದ್ದವು. ಮತ್ತು ಅವರಿಗೆ ಸಣ್ಣ ಸಹಾಯವೂ ದೊರಕಿರಲಿಲ್ಲ.
ಆದರೆ ವಿಜಯ್ ಅವರಿಗೆ ತನ್ನ ತಂದೆಯಂತೆ ಸಮಸ್ಯೆಗಳಿಗೆ ಬೆನ್ನು ಮಾಡುವುದು ಸುಲಭವಲ್ಲವೆನ್ನುವುದು ತಿಳಿದಿತ್ತು. ಅವರು ಮುಂದಿನ ಎರಡು ತಿಂಗಳ ಕಾಲ ತಮ್ಮ ಹೊಲದಲ್ಲಿದ್ದ ನೀರನ್ನು ಹೊರಹಾಕುವುದರಲ್ಲಿ ಕಳೆದರು. ದಿನಾಲೂ ಎರಡು ಗಂಟೆಗಳ ಕಾಲ ಕೇವಲ ಒಂದು ಬಕೆಟ್ ಬಳಸಿ ನೀರನ್ನು ಹೊರ ಚೆಲ್ಲುತ್ತಿದ್ದರು. ಅವರ ಜಡ ಹೊಲದಲ್ಲಿ ತಮ್ಮ ಟ್ಟ್ಯಾಕ್ ಪ್ಯಾಂಟುಗಳನ್ನು ಮೊಣಕಾಲಿನ ತನಕ ಮಡಚಿಕೊಂಡು ಉಳುಮೆ ಮಾಡುತ್ತಿದ್ದರು. ಅವರು ಧರಿಸಿದ್ದ ಟೀಶರ್ಟ್ ಬೆವರಿನಿಂದ ಒದ್ದೆಯಾಗಿರುತ್ತಿತ್ತು. ಅವರು ಬೆನ್ನು ಮುರಿಯುವಂತೆ ಬಾಗಿಕೊಂಡು ನೀರು ಹೊರಹಾಕುತ್ತಿದ್ದರು. “ನನ್ನ ಹೊಲ ಇಳಿಜಾರಿನಲ್ಲಿರುವುದರಿಂದಾಗಿ, ಈ ಹೆಚ್ಚುವರಿ ಮಳೆ ನನ್ನನ್ನು ಇನ್ನಷ್ಟು ಸಮಸ್ಯೆಗೀಡುಮಾಡಿದೆ. ಸುತ್ತಮುತ್ತಲಿನ ಹೊಲದ ನೀರೆಲ್ಲ ನನ್ನ ಹೊಲಕ್ಕೆ ನುಗ್ಗುತ್ತದೆ. ಅದನ್ನು ಖಾಲಿ ಮಾಡುವುದು ಕಷ್ಟ” ಎನ್ನುತ್ತಾರೆ ವಿಜಯ್.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು - ಅತಿಯಾದ ಮಳೆ, ದೀರ್ಘಕಾಲದ ಶುಷ್ಕತೆ ಮತ್ತು ಆಲಿಕಲ್ಲು ಮಳೆಯು ಅಪಾರ ಕೃಷಿ ಸಂಕಟವನ್ನು ಉಂಟುಮಾಡಿ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾದರೂ, ಈ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ರೈತರಿಗೆ ಸಾಕಷ್ಟು ಸಹಾಯ ಒದಗಿಸುತ್ತಿಲ್ಲ. (ಓದಿ: ವಿದರ್ಭ: ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಕೃಷಿ ಬಿಕ್ಕಟ್ಟು) ಮಾನಸಿಕ ಆರೋಗ್ಯ ಕಾಯ್ದೆ, 2017ರ ಅಡಿಯಲ್ಲಿ ಲಭ್ಯವಿರುವ ಮಾನಸಿಕ ಒತ್ತಡ ಮತ್ತು ಅಸ್ವಸ್ಥತೆ ಹೊಂದಿರುವ ಜನರಿಗೆ ಸೇವೆಗಳ ಪ್ರವೇಶ ಅಥವಾ ಅದರ ಒದಗಿಸುವಿಕೆಯ ಬಗೆಗಿನ ಯಾವುದೇ ಮಾಹಿತಿಯು ವಿಜಯ್ ಅಥವಾ ಅವರ ತಂದೆ ಘನಶ್ಯಾಮ್ ಅವರಿಗೆ ತಲುಪಿಲ್ಲ. 1996ರ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಲಾಗುವ ಔಟ್ರೀಚ್ ಕಾರ್ಯಕ್ರಮಗಳ ಕುರಿತಾಗಿಯೂ ಅವರಿಗೆ ಮಾಹಿತಿಯಿಲ್ಲ.
ನವೆಂಬರ್ 2014ರಲ್ಲಿ, ಮಹಾರಾಷ್ಟ್ರ ರಾಜ್ಯವು 'ಪ್ರೇರಣಾ ಪ್ರಕಲ್ಪ ರೈತ ಸಮಾಲೋಚನೆ ಆರೋಗ್ಯ ಸೇವಾ ಕಾರ್ಯಕ್ರಮ'ವನ್ನು ಜಾರಿಗೆ ತಂದಿತು. ಈ ಉಪಕ್ರಮವು ಯವತ್ಮಾಲ್ ಮೂಲದ ಎನ್ಜಿಒ - ಇಂದಿರಾಬಾಯಿ ಸೀತಾರಾಮ್ ದೇಶಮುಖ್ ಬಹುದೇಶಿಯ ಸಂಸ್ಥೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಯ ಮೂಲಕ ನಡೆಯುತ್ತಿತ್ತು ಮತ್ತು ಸಾರ್ವಜನಿಕ-ಖಾಸಗಿ (ನಾಗರಿಕ ಸಮಾಜ) ಸಹಭಾಗಿತ್ವದ ಮಾದರಿಯನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿನ ಚಿಕಿತ್ಸೆಯ ಅಂತರವನ್ನು ನಿವಾರಿಸುವ ಗುರಿಯನ್ನು ಇದು ಹೊಂದಿತ್ತು. ಆದರೆ 2022ರಲ್ಲಿ ವಿಜಯ್ ತನ್ನ ತಂದೆಯನ್ನು ಕಳೆದುಕೊಳ್ಳುವ ಹೊತ್ತಿಗೆ, ಸರ್ಕಾರದ ಬಹು ನಿರೀಕ್ಷಿತ ಪ್ರೇರಣಾ ಯೋಜನೆಯೂ ಸ್ಥಗಿತಗೊಂಡಿತ್ತು.









