ಶ್ರೀರಂಗನ್ ಅವರು ಮನೆಗೆ ಮರಳಿದಾಗ ಮೊದಲಿಗೆ, ತಮ್ಮ ಕೈಗಳಿಗೆ ಮೆತ್ತಿಕೊಂಡ ಒಣಗಿದ ಗಟ್ಟಿಯಾದ ಸೊನೆಯನ್ನು ತೆಗೆದು ಸ್ವಚ್ಛಗೊಳಿಸುತ್ತಾರೆ. 55ರ ವಯಸ್ಸಿನ ಇವರು ತಮ್ಮ ಹದಿಹರೆಯದ ವಯಸ್ಸಿನಿಂದಲೂ ರಬ್ಬರ್ ಮರಗಳ ಸೊನೆಯನ್ನು ಸಂಗ್ರಹಿಸುತ್ತಿದ್ದು, ಒಣಗಿದ ನಂತರ ಗಟ್ಟಿಯಾಗಿ, ಕಂದು ಬಣ್ಣಕ್ಕೆ ತಿರುಗುವ ಹಾಲು ಬಿಳುಪಿನ ಸೊನೆಯ ಬಗ್ಗೆ ಹೆಚ್ಚು ಪರಿಚಿತರಾಗಿದ್ದಾರೆ. ಮನೆಗೆ ಮರಳುತ್ತಿದ್ದಂತೆಯೇ, ಕೈಗಳಿಗೆ ಮೆತ್ತಿಕೊಂಡ ರಬ್ಬರ್ನ ಸೊನೆಯನ್ನು ಸ್ವಚ್ಛಗೊಳಿಸುವುದು ಮುಖ್ಯವಾದ ಕೆಲಸ.
ಸುರುಲಕೋಡ್ ಹಳ್ಳಿಯಲ್ಲಿ ಆರು ಗಂಟೆಯ ಹೊತ್ತಿಗೆ, ರಬ್ಬರನ್ನು ಸಂಗ್ರಹಿಸುವ 6-7 ಇಂಚಿನಷ್ಟು ಉದ್ದದ ಕೊಕ್ಕೆಯ ಆಕಾರದ ಕತ್ತಿಯೊಂದಿಗೆ ತಮ್ಮ ರಬ್ಬರ್ ತೋಟಕ್ಕೆ ತೆರಳುವುದರೊಂದಿಗೆ ಇವರ ದಿನವು ಆರಂಭವಾಗುತ್ತದೆ. ಮನೆಯಿಂದ ಹೊರಟು ಐದು ನಿಮಿಷಗಳಲ್ಲಿ ತಲುಪಬಹುದಾದ, ಸರ್ಕಾರದಿಂದ ಇವರ ತಂದೆಗೆ ದೊರೆತ ಐದು ಎಕರೆಯ ತೋಟದಲ್ಲಿ ಇವರು ರಬ್ಬರ್, ಮೆಣಸು ಮತ್ತು ಲವಂಗವನ್ನು ಬೆಳೆಯುತ್ತಾರೆ.
ಇಪ್ಪತ್ತೇಳು ವರ್ಷಗಳ ಕೆಳಗೆ ತಾವು ವಿವಾಹವಾದ ಲೀಲ ಶ್ರೀರಂಗನ್ ಅವರೊಂದಿಗೆ ರಬ್ಬರ್ ಮರಗಳ ಕೆಲಸದಲ್ಲಿ ತೊಡಗುವ ಇವರು ಕನಿಕರನ್ ಆದಿವಾಸಿ ಸಮುದಾಯದವರು.
ಶ್ರೀರಂಗನ್ (ಇವರು ತಮ್ಮ ಮೊದಲ ಹೆಸರನ್ನು ಮಾತ್ರವೇ ಬಳಸುತ್ತಾರೆ), ಹಿಂದಿನ ದಿನದಂದು ಮರಕ್ಕೆ ಕಟ್ಟಿದ ಕಪ್ಪು ಬಟ್ಟಲಿನಲ್ಲಿ ಬಸಿದಿದ್ದ ಒಣಗಿದ ಸೊನೆಯನ್ನು ಸಂಗ್ರಹಿಸುವುದರೊಂದಿಗೆ ಕೆಲಸವನ್ನು ಪ್ರಾರಂಭಿಸುತ್ತಾರೆ. “ಅಂದಿನ ತಾಜಾ ಸೊನೆಯನ್ನು ಸಂಗ್ರಹಿಸಿದ ನಂತರ ಸೊನೆಯ ಅವಶೇಷವು ಬಟ್ಟಲಿಗೆ ಹರಿದು, ಇಡೀ ರಾತ್ರಿ ಒಣಗುತ್ತದೆ. ಇದನ್ನು ಒಟ್ಟುಕರ” ಎನ್ನುತ್ತಾರೆ ಎಂದು ಅವರು ತಿಳಿಸಿದರು.
ಒಣಗಿದ ಸೊನೆಯ ಮಾರಾಟವು ಹೆಚ್ಚುವರಿ ಆದಾಯವಾಗಿದ್ದು, ಒಂದು ಕೆ.ಜಿ.ಗೆ ಇವರಿಗೆ ಅರವತ್ತರಿಂದ ಎಂಭತ್ತು ರೂ.ಗಳು ದೊರೆಯುತ್ತವೆ. ಎರಡು ವಾರಗಳ ಮಟ್ಟಿಗೆ ಸಂಗ್ರಹಿಸಿದ ‘ಒಟ್ಟುಕರ’ವನ್ನು ಇವರು ಮಾರುಕಟ್ಟೆಯಲ್ಲಿ ಮಾರುತ್ತಾರೆ.
ಬಟ್ಟಲುಗಳನ್ನು ಖಾಲಿಮಾಡಿದ ನಂತರ ಇವರು ತಾಜಾ ಸೊನೆಯು ಬಟ್ಟಲಿನಲ್ಲಿ ಹರಿಯುವಂತೆ ಒಂದು ಇಂಚಿನಷ್ಟು ಉದ್ದದ ಮರದ ತೊಗಟೆಯ ಪಟ್ಟಿಯೊಂದನ್ನು ಕತ್ತರಿಸುತ್ತಾರೆ. ಉಳಿದ 299 ಮರಗಳಿಗೂ ಇದೇ ಪ್ರಕ್ರಿಯೆಯನ್ನು ಇವರು ಪುನರಾವರ್ತಿಸುತ್ತಾರೆ.














