ಕೊನೆಯ ಬಾರಿ ಪಾರ್ವತಿಯವರು ಮನರೇಗಾ ಅಡಿಯಲ್ಲಿ ಕೆಲಸ ಮಾಡಿ ಒಂದು ವರ್ಷವಾಗಿದೆ. 2023ರ ಜೂನಿನಲ್ಲಿ ಕೇವಲ ಐದು ದಿನಗಳ ಕಾಲ ಕೆಲಸ ಸಿಕ್ಕಿತ್ತು.
ಪಾರ್ವತಿಯವರು (ಈ ಹೆಸರನ್ನು ಮಾತ್ರ ಬಳಸುತ್ತಾರೆ) ತಮ್ಮ ಗ್ರಾಮ ಗೌರ್ ಮಧುಕರ್ ಶಹಾಪುರದಲ್ಲಿ ರಸ್ತೆ ಸಮತಟ್ಟು ಮಾಡುವ ಕೆಲಸವನ್ನು ಮಾಡಿದ್ದರು. ಮನರೇಗಾ(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ) ಅಡಿಯಲ್ಲಿ ಸರ್ಕಾರ ನೂರು ದಿನಗಳ ಉದ್ಯೋಗ ಖಾತ್ರಿಯ ಭರವಸೆಯನ್ನು ನೀಡುತ್ತದೆ. ಆದರೆ ಜಾತವ್ (ಪರಿಶಿಷ್ಟ ಜಾತಿ) ಸಮುದಾಯಕ್ಕೆ ಸೇರಿರುವ 45 ವರ್ಷ ಪ್ರಾಯದ ಈ ದಿನಗೂಲಿ ಕಾರ್ಮಿಕೆಗೆ ಆ ಉದ್ಯೋಗ ಎಂದಿಗೂ ಸಿಗಲಿಲ್ಲ. "ನಾವು ನಮ್ಮ ಅರ್ಧ ಹೊಟ್ಟೆಯನ್ನು ತುಂಬಿಸಿಕೊಂಡು ಬದುಕುತ್ತಿದ್ದೇವೆ," ಎಂದು ಅವರು ಹೇಳುತ್ತಾರೆ.
2020 ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಈ ದಂಪತಿಗಳು ಹೊಸ ಮನೆಗಾಗಿ ಸಲ್ಲಿಸಿದ ಅರ್ಜಿ ತಿರಸ್ಕಾರಗೊಂಡಿತು. ಮುಂದೆ ಇದಕ್ಕಾಗಿ ಕಾಯದೆ, ಪಾರ್ವತಿ ಮತ್ತು ಅವರ ಪತಿ ಚೋಟೆ ಲಾಲ್ ಅವರು ತಮ್ಮ ಸಂಬಂಧಿಕರಿಂದ 90,000 ರುಪಾಯಿ ಸಾಲ ತೆಗೆದುಕೊಂಡು ಎರಡು ಕೋಣೆಗಳ ಸಣ್ಣ ಮನೆಯನ್ನು ಕಟ್ಟಿಕೊಂಡರು.
"ಯಾರಾದರೂ ಮೋಟು ಕೇಳಿಕೊಂಡು ಮನೆಗೆ ಬಂದರೆ, ಹೊಸ ಮನೆ ಫಲಾನುಭವಿಗಳ ಪಟ್ಟಿಯಿಂದ ನನ್ನ ಹೆಸರು ಹೇಗೆ ಕಾಣೆಯಾಯ್ತು, ಆದರೆ ಮತದಾರರ ಪಟ್ಟಿಯಲ್ಲಿ ಮಾತ್ರ ಹೇಗೆ ನನ್ನ ಹೆಸರಿದೆ ಎಂದು ಕೇಳುತ್ತೇನೆ,” ಎನ್ನುತ್ತಾರೆ ಪಾರ್ವತಿ. ಮನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಪಾರ್ವತಿಯವರ ಪತಿಗೆ ಐದು ವರ್ಷಗಳ ಹಿಂದೆ ಪಾರ್ಶ್ವವಾಯು ಬಂದು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸದ್ಯ ಆಗಾಗ ಅವರು ವಾರಣಾಸಿ ನಗರದ ಕಾರ್ಮಿಕ ಮಂಡಿಗೆ ಹೋಗಿ, ಅಲ್ಲಿ 400-500 ರುಪಾಯಿ ದಿನಗೂಲಿಗೆ ಕೆಲಸ ಮಾಡುತ್ತಾರೆ.
ಮನರೇಗಾ ಗ್ರಾಮೀಣ ಭಾಗದ ಕೌಶಲ್ಯರಹಿತ ಕಾರ್ಮಿಕರಿಗೆ 100 ದಿನಗಳ ಉದ್ಯೋಗವನ್ನು ನೀಡುತ್ತದೆ. ಆದರೆ ವಾರಣಾಸಿ ಜಿಲ್ಲೆಯಲ್ಲಿರುವ ಗ್ರಾಮಗಳ ಸಾಮಾನ್ಯಜನರು, "ಕಳೆದ ಎರಡು ಪ್ರಧಾನಿ" ಯಿಂದ ವರ್ಷಕ್ಕೆ ಕೇವಲ 20-25 ದಿನಗಳ ಕೆಲಸ ಸಿಗುತ್ತಿದೆ ಎಂದು ದೂರುತ್ತಾರೆ. ಇಲ್ಲಿ ಸರಪಂಚ್ನ ಕೊನೆಯ ಎರಡು ಅವಧಿಗಳನ್ನು ಅಥವಾ ಸರಿಸುಮಾರು 10 ವರ್ಷಗಳನ್ನು ಎರಡು ಪ್ರಧಾನಿ ಎಂದು ಉಲ್ಲೇಖಿಸುತ್ತಾರೆ.
ಪಾರ್ವತಿಯವರು ಹಿಂದೆಂದಿಗಿಂತಲೂ ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಸರ್ಕಾರದಿಂದ ಯಾವುದೇ ನೆರವಿಲ್ಲದೆ, ಅವರು ಠಾಕೂರ್ ಸಮುದಾಯದವರ ಹೊಲಗಳಲ್ಲಿ ಕೂಲಿ ಕೆಲಸ ಮಾಡಿ ಮನೆ ನಡೆಸುತ್ತಿದ್ದಾರೆ. ಸುಗ್ಗಿಯ ಮತ್ತು ಬಿತ್ತನೆಯ ಸೀಸನ್ಗಳಲ್ಲಿ ಸುಮಾರು 15 ದಿನಗಳ ಕೆಲಸಕ್ಕೆ ಅವರಿಗೆ 10 ಕಿಲೋಗ್ರಾಂಗಳಷ್ಟು ಆಹಾರ ಧಾನ್ಯ ಸಿಗುತ್ತದೆ.




















