"ನಾನು ಎಲ್ಲವನ್ನೂ ಸರಿಪಡಿಸುವ ದಾರಿಯೊಂದನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ."
ಸುನೀಲ್ ಕುಮಾರ್ ಓರ್ವ ಥಥೇರಾ (ಲೋಹ ಪಾತ್ರೆಗಳ ತಯಾರಕ). “ಯಾರೂ ಸರಿಪಡಿಸಲು ಸಾಧ್ಯವಾಗದ ವಸ್ತುಗಳನ್ನು ತೆಗೆದುಕೊಂಡು ಜನರು ನಮ್ಮ ಬಳಿಗೆ ಬರುತ್ತಾರೆ. ಮೆಕ್ಯಾನಿಕ್ಗಳೂ ಕೆಲವೊಮ್ಮೆ ತಮ್ಮ ಉಪಕರಣಗಳನ್ನು ನಮ್ಮಲ್ಲಿಗೆ ತರುತ್ತಾರೆ.”
ತಾಮ್ರ, ಕಂಚು ಮತ್ತು ಹಿತ್ತಾಳೆಗಳ ಅಡುಗೆ ಪಾತ್ರೆಗಳನ್ನು ಹಾಗೂ ಗೃಹೋಪಯೋಗಿ ಲೋಹದ ಸಾಮಾನುಗಳನ್ನು ತಯಾರಿಸುವ ಇವರಿಗೆ ಒಂದು ದೀರ್ಘವಾದ ಪರಂಪರೆಯಿದೆ. "ಯಾರಿಗೂ ತಮ್ಮ ಕೈಗಳು ಕೊಳೆಯಾಗುವುದು ಬೇಕಿಲ್ಲ,” ಎಂದು 25 ವರ್ಷಗಳಿಂದ ಥಥೇರಾ ಕುಶಲಕರ್ಮಿಯಾಗಿ ಕೆಲಸ ಮಾಡುತ್ತಿರುವ 40 ವರ್ಷ ಪ್ರಾಯದ ಸುನೀಲ್ ಕುಮಾರ್ ಹೇಳುತ್ತಾರೆ. "ನಾನು ಇಡೀ ದಿನ ಆಸಿಡ್, ಇದ್ದಲು ಮತ್ತು ಬೆಂಕಿಯ ಉರಿಯೊಂದಿಗೆ ಕೆಲಸ ಮಾಡುತ್ತೇನೆ. ಏಕೆಂದರೆ ನನಗೆ ಅದರಲ್ಲಿ ಆಸಕ್ತಿಯಿದೆ,” ಎನ್ನುತ್ತಾರೆ ಅವರು.
ಪಂಜಾಬ್ನಲ್ಲಿ ಥಥೇರಾಗಳು (ತಥಿಯಾರ್ಗಳು ಎಂದೂ ಕರೆಯುತ್ತಾರೆ) ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದವರು. ಅವರ ಸಾಂಪ್ರದಾಯಿಕ ಉದ್ಯೋಗವೇ ಹಸ್ತಚಾಲಿತ ಉಪಕರಣಗಳನ್ನು ಬಳಸಿ ಕಬ್ಬಿಣವಲ್ಲದ ಇತರ ಲೋಹಗಳನ್ನು ಬಾಗಿಲಿನ ಹಿಡಿಕೆಗಳು, ಬೀಗಗಳು ಮೊದಲಾದ ಆಕಾರಗಳಿಗೆ ಅಚ್ಚು ಹಾಕುವುದು. 67 ವರ್ಷ ಪ್ರಾಯದ ಅವರ ತಂದೆ ಕೇವಲ್ ಕ್ರಿಶನ್ರವರ ಜೊತೆಗೆ ಸುನೀಲ್ ಕುಮಾರ್ ದುರಸ್ತಿ ಕೆಲಸಕ್ಕೆ ಬಳಸುವ ಗುಜಿರಿ ಸಾಮಾನುಗಳನ್ನು ಖರೀದಿಸುತ್ತಾರೆ.
ಕಳೆದ ಕೆಲವು ದಶಕಗಳಿಂದ ಸ್ಟೀಲ್ನಂತಹ ಕಬ್ಬಿಣದ ವಸ್ತುಗಳಿಗೆ ಜನಪ್ರಿಯತೆ ಹೆಚ್ಚುತ್ತಿರುವುದರಿಂದ ಕೈಯಿಂದ ಲೋಹದ ವಸ್ತುಗಳನ್ನು ತಯಾರಿಸುವವರ ಬದುಕಿನ ದಿಕ್ಕೇ ಬದಲಾಗಿದೆ. ಇಂದು ಮನೆಗಳಲ್ಲಿ ಬಳಕೆಯಾಗುವ ಹೆಚ್ಚಿನ ಅಡುಗೆ ಸಲಕರಣೆಗಳು ಉಕ್ಕಿನಿಂದ ತಯಾರಿಸಲ್ಪಟ್ಟಿವೆ. ಹಾಗಾಗಿ, ಗಟ್ಟಿಯಾದ ಮತ್ತು ದುಬಾರಿಯಾದ ಹಿತ್ತಾಳೆ ಹಾಗೂ ತಾಮ್ರ ವಸ್ತುಗಳಿಗಿರುವ ಬೇಡಿಕೆ ತೀವ್ರವಾಗಿ ಕುಸಿದಿದೆ.




















