“ಯೇ ಬತಾನ ಮುಷ್ಕಿಲ್ ಹೋಗಾ ಕಿ ಕೌನ್ ಹಿಂದೂ ಹೈ, ಕೌನ್ ಮುಸಲ್ಮಾನ್ [ಇಲ್ಲಿ ಯಾರು ಹಿಂದೂ ಮತ್ತು ಯಾರು ಮುಸ್ಲಿಂ ಎಂದು ಹೇಳುವುದು ಕಷ್ಟ].”
68 ವರ್ಷದ ಮೊಹಮ್ಮದ್ ಶಬ್ಬೀರ್ ಖುರೇಷಿ ತನ್ನ ಮತ್ತು ತನ್ನ ನೆರೆಮನೆಯ ಅಜಯ್ ಸೈನಿ (52) ಕುರಿತು ಮಾತನಾಡುತ್ತಿದ್ದಾರೆ. ಇಬ್ಬರೂ ಅಯೋಧ್ಯೆಯ ನಿವಾಸಿಗಳಾಗಿದ್ದು, ರಾಮಕೋಟ್ ಪ್ರದೇಶದ ದುರಾಹಿ ಕುವಾನ್ ಎನ್ನುವಲ್ಲಿ ಕಳೆದ 40 ವರ್ಷಗಳಿಂದ ನೆರೆಹೊರೆಯವರಾಗಿ ಬದುಕುತ್ತಿದ್ದಾರೆ.
ಕುಟುಂಬಗಳು ಬಹಳ ನಿಕಟ ಸಂಬಂಧವನ್ನು ಹೊಂದಿದ್ದು, ದೈನಂದಿನ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಾರೆ. ಮತ್ತು ಪರಸ್ಪರ ಅವಲಂಬನೆಯೊಂದಿಗೆ ಬದುಕುತ್ತಿದ್ದಾರೆ. “ಒಮ್ಮೆ ನಾನು ಕೆಲಸದ ಸಲುವಾಗಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ನನ್ನ ಮಗಳಿಗೆ ಹುಷಾರು ತಪ್ಪಿದೆ ಎಂದು ಮನೆಯಿಂದ ಫೋನ್ ಕರೆ ಬಂದಿತ್ತು. ನಾನು ಮನೆಗೆ ಓಡಿ ಹೋಗುವ ಹೊತ್ತಿಗೆ ಖುರೇಷಿಯವರ ಕುಟುಂಬ ನಮ್ಮ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ನನ್ನ ಪತ್ನಿ ತಿಳಿಸಿದಳು. ಅವರು ಔಷಧಿಯನ್ನು ಸಹ ತಂದಿದ್ದರು.”
ಅವರು ಕುಳಿತು ಮಾತನಾಡುತ್ತಿದ್ದ ಹಿತ್ತಲಿನಲ್ಲಿ ಎಮ್ಮೆಗಳು, ಆಡುಗಳು ಮತ್ತು ಆರೇಳು ಕೋಳಿಯ ಹಿಂಡಿನಿಂದ ತುಂಬಿತ್ತು. ಜೊತೆಗೆ ಎರಡೂ ಕುಟುಂಬದ ಮಕ್ಕಳು ಅತ್ತಿತ್ತ ಓಡಾಡುತ್ತಾ ಆಟವಾಡುತ್ತಿದ್ದರು.
ಅದು 2024ರ ಜನವರಿ ತಿಂಗಳು, ಅಯೋಧ್ಯೆಯಲ್ಲಿ ರಾಮ ಮಂದಿರದ ಅದ್ದೂರಿ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಹೊಸದಾಗಿ ಹಾಕಲಾಗಿದ್ದ ಭಾರದ ಕಬ್ಬಿಣದ ಡಬಲ್ ಬ್ಯಾರಿಕೇಡ್ ಬೇಲಿ ಅವರ ಮನೆಗಳು ಮತ್ತು ದೇವಾಲಯದ ಗೋಡೆಗೆ ಗಡಿಯಾಗಿ ನಿಂತಿತ್ತು.
ಸೈನಿ ಮತ್ತವರ ಕುಟುಂಬವು ಎಂಭತ್ತರ ದಶಕದಲ್ಲಿ ಅಯೋಧ್ಯೆಗೆ ಸ್ಥಳಾಂತರಗೊಂಡರು. ಆಗಿನಿಂದಲೂ ಖುರೇಷಿ ಅವರ ನೆರಮನೆಯವರು. ಅಯೋಧ್ಯೆಗೆ ಬಂದ ಹೊಸತರಲ್ಲಿ ಅವರಿಗೆ ಹದಿಹರೆಯ. ಆ ದಿನಗಳಲ್ಲಿ ಬಾಬರಿ ಮಸೀದಿಯಿದ್ದ ಜಾಗದಲ್ಲಿನ ರಾಮನ ಮೂರ್ತಿಯನ್ನು ನೋಡಲು ಬರುವ ಜನರಿಗೆ ಒಂದು ರೂಪಾಯಿಗೆ ಹೂವಿನ ಹಾರಗಳನ್ನು ಮಾರಾಟ ಮಾಡುತ್ತಿದ್ದರು.
ಖುರೇಷಿಗಳು ಮೂಲತಃ ಕಸಾಯಿ ವೃತ್ತಿ ಮಾಡುತ್ತಿದ್ದರು, ಅವರ ಕುಟುಂಬವು ಅಯೋಧ್ಯೆ ಪಟ್ಟಣದ ಹೊರವಲಯದಲ್ಲಿ ಮಾಂಸದ ಅಂಗಡಿಯನ್ನು ಹೊಂದಿತ್ತು. 1992ರ ಸಮಯದಲ್ಲಿ ಅವರ ಮನೆ ಬೆಂಕಿಗೆ ಆಹುತಿಯಾಯಿತು. ಅದರ ನಂತರ ಕುಟುಂಬವು ವೆಲ್ಡಿಂಗ್ ವ್ಯವಹಾರವನ್ನು ಪ್ರಾರಂಭಿಸಿತು.
















