1951-52ರ ನಡುವೆ ನಡೆದ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ದಿನದಂದು ಬೆಳಿಗ್ಗೆ ತಾನು ಧರಿಸಿದ್ದ ಗರಿಗರಿಯಾದ ಬಿಳಿ ಕುರ್ತಾವನ್ನು ಖ್ವಾಜಾ ಮೊಯೀನುದ್ದೀನ್ ಈಗಲೂ ನೆನಪಿಸಿಕೊಳ್ಳುತ್ತಾರೆ. ಆಗ ಅವರಿಗೆ 20 ವರ್ಷ. ಅವರ ಅಂದಿನ ಉತ್ಸಾಹ ನಿಯಂತ್ರಣವನ್ನು ಮೀರಿದ್ದಾಗಿತ್ತು. ತಮ್ಮ ಸಣ್ಣ ಪಟ್ಟಣವನ್ನು ದಾಟಿ ಮತದಾನ ಕೇಂದ್ರಕ್ಕೆ ಹೋದ ಅವರು ಅಲ್ಲಿ ಹೊಸದಾಗಿ ಸ್ವತಂತ್ರಗೊಂಡ ಪ್ರಜಾಪ್ರಭುತ್ವದ ಸಂಭ್ರಮದ ಗಾಳಿಯಲ್ಲಿ ಸಂಭ್ರಮಿಸಿದರು.
ಈಗ 72 ವರ್ಷಗಳ ನಂತರ, ಮೊಯೀನ್ ತಮ್ಮ ಬದುಕಿನ ಹತ್ತನೇ ದಶಕದಲ್ಲಿದ್ದಾರೆ. ಮೇ 13, 2024ರಂದು, ಅವರು ಮತ್ತೊಮ್ಮೆ ಗರಿಗರಿಯಾದ ಬಿಳಿ ಕುರ್ತಾ ಧರಿಸಿ ಬೆಳಿಗ್ಗೆ ಮನೆಯಿಂದ ಹೊರಬಂದರು. ಆದರೆ ಈ ಬಾರಿ ಅವರು ಬೆತ್ತದ ಊರುಗೋಲಿನ ಸಹಾಯದಿಂದ ಮತಗಟ್ಟೆಗೆ ನಡೆದರು. ಮತದಾನದ ದಿನದ ಸಂಭ್ರಮ ಅವರ ಯೌವನದಂತೆಯೇ ಕಳೆದುಹೋಗಿತ್ತು.
ಮಹಾರಾಷ್ಟ್ರದ ಬೀಡ್ ನಗರದಲ್ಲಿರುವ ತಮ್ಮ ಮನೆಯಲ್ಲಿ ಪರಿಯೊಂದಿಗೆ ಮಾತನಾಡಿದ ಅವರು, “ತಬ್ ದೇಶ್ ಬಚಾನೇ ಕೇ ಲಿಯೆ ವೋಟ್ ಕಿಯಾ ಥಾ, ಆಜ್ ದೇಶ್ ಬಚಾನೇ ಕೇ ಲಿಯೆ ವೋಟ್ ಕರ್ ರಹೇ ಹೈ [ಅಂದು ದೇಶವನ್ನು ಕಟ್ಟಲೆಂದು ಮತ ಚಲಾಯಿಸಿದ್ದೆ, ಇಂದು ದೇಶವನ್ನು ಉಳಿಸುವ ಸಲುವಾಗಿ ಮತ ಚಲಾಯಿಸುತ್ತಿದ್ದೇನೆ] ಎಂದು ಹೇಳಿದರು.
ಬೀಡ್ ಜಿಲ್ಲೆಯ ಶಿರೂರ್ ಕಸರ್ ತಹಸಿಲ್ 1932ರಲ್ಲಿ ಜನಿಸಿದ ಮೊಯೀನ್ ತಹಸಿಲ್ ಕಚೇರಿಯಲ್ಲಿ ಚೌಕಿದಾರ್ (ಕಾವಲುಗಾರ) ಆಗಿ ಕೆಲಸ ಮಾಡುತ್ತಿದ್ದರು. ಆದರೆ 1948 ರಲ್ಲಿ, ಆಗಿನ ರಾಜಾಡಳಿತದ ಹೈದರಾಬಾದ್ ರಾಜ್ಯವು ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಯಾದಾಗ ನಡೆದ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಅವರು ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಬೀಡ್ ನಗರಕ್ಕೆ ಓಡಿಹೋಗಬೇಕಾಯಿತು.
1947ರ ರಕ್ತಸಿಕ್ತ ವಿಭಜನೆಯ ಒಂದು ವರ್ಷದ ನಂತರ, ಹೈದರಾಬಾದ್, ಕಾಶ್ಮೀರ ಮತ್ತು ತಿರುವಾಂಕೂರು - ಮೂರು ರಾಜಪ್ರಭುತ್ವದ ರಾಜ್ಯಗಳು ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಿದವು. ಹೈದರಾಬಾದಿನ ನಿಜಾಮನು ಭಾರತ ಅಥವಾ ಪಾಕಿಸ್ತಾನದ ಭಾಗವಲ್ಲದ ಸ್ವತಂತ್ರ ರಾಜ್ಯವನ್ನು ಬಯಸಿದನು. ಬೀಡ್ ಮರಾಠಾವಾಡಾದ ಕೃಷಿ ಪ್ರದೇಶವು ಹೈದರಾಬಾದ್ ಸಂಸ್ಥಾನದ ಭಾಗವಾಗಿತ್ತು.
ಭಾರತೀಯ ಸಶಸ್ತ್ರ ಪಡೆಗಳು ಸೆಪ್ಟೆಂಬರ್ 1948ರಲ್ಲಿ ಹೈದರಾಬಾದ್ ಗೆ ತೆರಳಿ ನಾಲ್ಕು ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಶರಣಾಗುವಂತೆ ನಿಜಾಮನನ್ನು ಒತ್ತಾಯಿಸಿದವು. ಆದರೆ ದಶಕಗಳ ನಂತರ ಬಹಿರಂಗಗೊಂಡ ಸರ್ಕಾರದ ಗೌಪ್ಯ ವರದಿಯಾದ ಸುಂದರ್ ಲಾಲ್ ಸಮಿತಿಯ ವರದಿಯ ಪ್ರಕಾರ, ಆಕ್ರಮಣದ ಸಮಯದಲ್ಲಿ ಮತ್ತು ನಂತರ ಕನಿಷ್ಠ 27,000ರಿಂದ 40,000 ಮುಸ್ಲಿಮರು ಪ್ರಾಣ ಕಳೆದುಕೊಂಡರು, ಇದರಿಂದಾಗಿ ಮೊಯೀನ್ ಅವರಂತಹ ಹದಿಹರೆಯದ ಯುವಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಬೇರೆಡೆಗೆ ಓಡಿಹೋಗಬೇಕಾಯಿತು.
“ನಮ್ಮ ಊರಿನ ಬಾವಿ ಹೆಣಗಳಿಂದ ತುಂಬಿಹೋಗಿತ್ತು. ಆ ಸಂದರ್ಭದಲ್ಲಿ ನಾವು ಬೀಡ್ ನಗರಕ್ಕೆ ಓಢೆಇ ಹೋದೆವು. ಅಂದಿನಿಂದ ಬೀಡ್ ನನ್ನ ಮನೆಯಾಗಿದೆ” ಎಂದು ಅವರು ನೆನಪಿಸಿಕೊಳ್ಳುತ್ತಾರೆ.









