ರಾಮ್ ಅವತಾರ್ ಕುಶ್ವಾಹ ಅಹರ್ವಾನಿಯ ಮಣ್ಣು ರಸ್ತೆಗೆ ಪ್ರವೇಶಿಸುತ್ತಿದ್ದಂತೆ, ತನ್ನ ಮೋಟಾರ್ ಸೈಕಲ್ ಬ್ಯಾಲೆನ್ಸ್ ಮಾಡುವ ಸಲುವಾಗಿ ನಿಧಾನಗೊಳಿಸುತ್ತಾರೆ. ಹಾಗೇ ನಿಧಾನವಾಗಿ ಕಲ್ಲು ಮಣ್ಣಿನಿಂದ ಕೂಡಿದ ದಾರಿಯಲ್ಲಿ ಮುಂದೆ ಬಂದು ಊರಿನ ಮಧ್ಯದಲ್ಲಿ ತನ್ನ 150cc ಬೈಕಿನ ಇಂಜಿನ್ ಆಫ್ ಮಾಡುತ್ತಾರೆ.
ಇದಾಗಿ ಐದೇ ನಿಮಿಷದಲ್ಲಿ ಸಣ್ಣಪುಟ್ಟ ಮಕ್ಕಳು, ಮಾಧ್ಯಮಿಕ ಶಾಲೆಯ ಮಕ್ಕಳು ಹಾಗೂ ಹದಿ ಹರೆಯದ ಮಕ್ಕಳು ಸದ್ದು ಮಾಡುತ್ತಾ ಅವರ ಸುತ್ತ ನೆರೆಯುತ್ತಾರೆ. ಸಹಾರಿಯ ಆದಿವಾಸಿ ಸಮುದಾಯದ ಮಕ್ಕಳ ಗುಂಪು ತಮ್ಮ ಕೈಯಲ್ಲಿ ಪಾವಲಿ ಮತ್ತು 10 ರೂಪಾಯಿಯ ನೋಟುಗಳನ್ನು ಹಿಡಿದು ತಮ್ಮತಮ್ಮಲ್ಲೇ ಮಾತನಾಡುತ್ತಾ ತಾಳ್ಮೆಯಿಂದ ಕಾಯುತ್ತಿದ್ದಾರೆ. ಅವರು ಅಲ್ಲಿ ಚೌಮೀನ್ ಖರೀದಿಸುವ ಸಲುವಾಗಿ ನಿಂತಿದ್ದಾರೆ. ಅದೊಂದು ಕರಿದ ನೂಡಲ್ಸ್ ಮತ್ತು ತರಕಾರಿಯ ಮಿಶ್ರಣದ ತಿಂಡಿ.
ಈ ಹಸಿದ ಮಕ್ಕಳು ಸದ್ಯದಲ್ಲೇ ತಮ್ಮ ತಾಳ್ಮೆ ಮರೆತು ತನ್ನ ಸುತ್ತ ನೆರೆಯಲಿದ್ದಾರೆ ಎನ್ನುವುದರ ಅರಿವಿರುವ ವ್ಯಾಪಾರಿ, ಕೂಡಲೇ ತನ್ನ ಮೋಟಾರ್ ಸೈಕಲ್ ಮೇಲಿನ ವಸ್ತುಗಳನ್ನು ಒಂದೊಂದಾಗಿ ಬಿಚ್ವತೊಡಗುತ್ತಾರೆ. ಎರಡು ಪ್ಲಾಸ್ಟಿಕ್ ಬಾಟಲ್ ಹೊರತೆಗೆದು, “ಇದರಲ್ಲಿ ಒಂದು ಚಿಲ್ಲಿಸಾಸ್, ಇನ್ನೊಂದು ಸೋಯಾಸಾಸ್” ಎಂದು ಅವರು ವಿವರಿಸಿದರು. ಉಳಿದ ವಸ್ತುಗಳೆಂದರೆ ಎಲೆಕೋಸು, ಸಿಪ್ಪೆ ತೆಗೆದ ಈರುಳ್ಳಿ ಮತ್ತು ಹಸಿರು ಕ್ಯಾಪ್ಸಿಕಮ್. ಮತ್ತು ಬೇಯಿಸಿದ ನೂಡಲ್ಸ್. “ನಾನು ಈ ಸಾಮಾಗ್ರಿಗಳನ್ನು ವಿಜಯಪುರ [ಪಟ್ಟಣ]ದಲ್ಲಿ ಖರೀದಿಸುತ್ತೇನೆ.”
ಆಗ ಸುಮಾರು ಸಂಜೆಯ 6 ಗಂಟೆಯಾಗಿತ್ತು. ಇದು ರಾಮ್ ಅವತಾರ್ ಇಂದು ಭೇಟಿ ನೀಡುತ್ತಿರುವ ನಾಲ್ಕನೇ ಊರು. ಅವರು ನಿಯಮಿತವಾಗಿ ಭೇಟಿ ನೀಡುವ ಇತರ ಕುಗ್ರಾಮಗಳು ಮತ್ತು ಗ್ರಾಮಗಳಾದ ಲಾದರ್, ಪಾಂಡ್ರಿ, ಖಜುರಿ ಕಲಾನ್, ಸಿಲ್ಪಾರಾ, ಪರೋಂಡ್ - ಇವೆಲ್ಲವೂ ವಿಜಯಪುರ ತಹಸಿಲ್ ಗೋಪಾಲ್ಪುರ ಗ್ರಾಮಕ್ಕೆ ಹೊಂದಿಕೊಂಡಿರುವ ಸುಟೈಪುರದಲ್ಲಿರುವ ಅವರ ಮನೆಯಿಂದ 30 ಕಿಲೋಮೀಟರ್ ವ್ಯಾಪ್ತಿಯಲ್ಲಿವೆ. ಈ ಕುಗ್ರಾಮಗಳು ಮತ್ತು ಸಣ್ಣ ಹಳ್ಳಿಗಳಲ್ಲಿ ಸಿಗುವ ಇತರ ಸಿದ್ಧ ತಿಂಡಿಗಳೆಂದರೆ ಪ್ಯಾಕೇಜ್ ಮಾಡಿದ ಚಿಪ್ಸ್ ಮತ್ತು ಬಿಸ್ಕತ್ತುಗಳು ಮಾತ್ರ.
ಅವರು ವಾರಕ್ಕೆ ಕನಿಷ್ಠ 2-3 ಬಾರಿ ಸುಮಾರು 500 ಜನರಿರುವ ಆದಿವಾಸಿ ಪ್ರಾಬಲ್ಯದ ಕುಗ್ರಾಮವಾದ ಅಹರ್ವಾನಿಗೆ ಬರುತ್ತಾರೆ. ಅಹರ್ವಾನಿ ಇತ್ತೀಚಿನ ನೆಲೆ - ಇದರ ನಿವಾಸಿಗಳು 1999ರಲ್ಲಿ ಕುನೊ ರಾಷ್ಟ್ರೀಯ ಉದ್ಯಾನವನದಿಂದ ಸ್ಥಳಾಂತರಗೊಂಡವರು ಮತ್ತು ಇದನ್ನು ಸಿಂಹಗಳಿಗೆಂದು ಮೀಸಲಿಡಲಾದ ಇನ್ನೊಂದು ಅರಣ್ಯವಾಗಿತ್ತು. ಓದಿ: ಕುನೋ: ಚೀತಾಗಳು ಒಳಗೆ, ಆದಿವಾಸಿಗಳು ಹೊರಗೆ. ಆದರೆ ಇಲ್ಲಿಗೆ ಯಾವುದೇ ಸಿಂಹಗಳು ಬರಲಿಲ್ಲ. ಬದಲಿಗೆ ಆಫ್ರಿಕಾದಿಂದ ಚಿರತೆಗಳನ್ನು ತರಿಸಿ 2022ಎ ಸೆಪ್ಟೆಂಬರ್ ತಿಂಗಳಿನಲ್ಲಿ ಇಲ್ಲಿ ಬಿಡಲಾಯಿತು.






