1947ರ ರಕ್ತಸಿಕ್ತ ವಿಭಜನೆ ಕೆತ್ತಿದ ಎರಡು ದೇಶಗಳ ನಡುವಿನ ಗಡಿಯನ್ನು ಗುರುತಿಸುವ ರಾಡ್ಕ್ಲಿಫ್ ರೇಖೆಯು ಪಂಜಾಬನ್ನು ಎರಡು ಭಾಗಗಳಾಗಿ ವಿಭಜಿಸುತ್ತದೆ. ಆ ಪ್ರದೇಶದ ಭೌಗೋಳಿಕತೆಯ ಜೊತೆಗೆ, ಗಡಿ ಆಯೋಗಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬ್ರಿಟಿಷ್ ವಕೀಲರ ಹೆಸರಿನ ಈ ರೇಖೆಯು ಪಂಜಾಬಿ ಭಾಷೆಯ ಎರಡು ಲಿಪಿಗಳನ್ನು ಸಹ ವಿಭಜಿಸುತ್ತದೆ. "ವಿಭಜನೆಯು ಸಾಹಿತ್ಯ ಮತ್ತು ಪಂಜಾಬಿ ಭಾಷೆಯ ಎರಡೂ ಲಿಪಿಗಳಿಗೆ ಹಸಿ ಗಾಯವನ್ನುಂಟುಮಾಡಿದೆ" ಎಂದು ರಾಜ್ಯದ ಲುಧಿಯಾನ ಜಿಲ್ಲೆಯ ಪಾಯಲ್ ತೆಹ್ಸಿಲ್ನ ಕಟಾಹ್ರಿ ಗ್ರಾಮದ ಕಿರ್ಪಾಲ್ ಸಿಂಗ್ ಪನ್ನು ಹೇಳಿದರು.
ಪನ್ನು ಅವರು 90 ವರ್ಷದ ಮಾಜಿ ಸೈನಿಕರಾಗಿದ್ದು, ವಿಭಜನೆ ಮಾಡಿದ ಈ ನಿರ್ದಿಷ್ಟ ಗಾಯಕ್ಕೆ ಮುಲಾಮು ಹಚ್ಚಲು ತಮ್ಮ ಜೀವನದ ಮೂರು ದಶಕಗಳನ್ನು ಮುಡಿಪಾಗಿಟ್ಟಿದ್ದಾರೆ. ಗಡಿ ಭದ್ರತಾ ಪಡೆಯಲ್ಲಿ (ಬಿಎಸ್ಎಫ್) ನಿವೃತ್ತ ಡೆಪ್ಯುಟಿ ಕಮಾಂಡೆಂಟ್ ಆಗಿರುವ ಪನ್ನು ಅವರು ಗುರು ಗ್ರಂಥ ಸಾಹಿಬ್, ಮಹಾನ್ ಕೋಶ್ (ಪಂಜಾಬಿನ ಅತ್ಯಂತ ಪೂಜ್ಯ ವಿಶ್ವಕೋಶಗಳಲ್ಲಿ ಒಂದಾಗಿದೆ) ಮತ್ತು ಇತರ ಸಾಹಿತ್ಯ ಕೃತಿಗಳನ್ನು ಗುರುಮುಖಿಯಿಂದ ಶಾಮುಖಿಗೆ ಹಾಗೂ ಶಾಮುಖಿಯಿಂದ ಗುರುಮುಖಿಗೆ ಲಿಪ್ಯಂತರಗೊಳಿಸಿದ್ದಾರೆ.
ಉರ್ದುವಿನಂತೆ ಬಲದಿಂದ ಎಡಕ್ಕೆ ಬರೆಯಲಾಗುವ ಶಾಮುಖಿಯನ್ನು 1947ರಿಂದ ಭಾರತೀಯ ಪಂಜಾಬಿಯಲ್ಲಿ ಬಳಸಲಾಗಿಲ್ಲ. 1995-1996ರಲ್ಲಿ, ಪನ್ನು ಕಂಪ್ಯೂಟರ್ ಪ್ರೋಗ್ರಾಂ ಒಂದನ್ನು ಅಭಿವೃದ್ಧಿಪಡಿಸಿದರು, ಅದು ಗುರು ಗ್ರಂಥ ಸಾಹಿಬ್ ಪಠ್ಯವನ್ನು ಗುರುಮುಖಿಯಿಂದ ಶಾಮುಖಿಗೆ ಮತ್ತು ಪ್ರತಿಯಾಗಿ ಪರಿವರ್ತಿಸುತ್ತಿತ್ತು.
ವಿಭಜನೆಗೂ ಮೊದಲು, ಉರ್ದು ಭಾಷಿಕರು ಶಾಮುಖಿಯಲ್ಲಿ ಬರೆದ ಪಂಜಾಬಿಯನ್ನು ಓದಲು ಸಾಧ್ಯವಾಗುತ್ತದೆ. ಪಾಕಿಸ್ತಾನ ರಚನೆಯಾಗುವ ಮೊದಲು, ಹೆಚ್ಚಿನ ಸಾಹಿತ್ಯ ಕೃತಿಗಳು ಮತ್ತು ಅಧಿಕೃತ ನ್ಯಾಯಾಲಯದ ದಾಖಲೆಗಳು ಶಾಮುಖಿಯಲ್ಲಿದ್ದವು. ಹಿಂದಿನ ಅವಿಭಜಿತ ಪ್ರಾಂತ್ಯದ ಸಾಂಪ್ರದಾಯಿಕ ಕಥೆ ಹೇಳುವ ಕಲಾ ಪ್ರಕಾರವಾದ ಕಿಸ್ಸಾ ಕೂಡ ಶಾಮುಖಿಯನ್ನು ಮಾತ್ರ ಬಳಸುತ್ತಿತ್ತು.
ಎಡದಿಂದ ಬಲಕ್ಕೆ ಬರೆಯಲಾಗುವ ಮತ್ತು ದೇವನಾಗರಿ ಲಿಪಿಗೆ ಸ್ವಲ್ಪ ಹೋಲಿಕೆಯನ್ನು ಹೊಂದಿರುವ ಗುರುಮುಖಿಯನ್ನು ಪಾಕಿಸ್ತಾನದ ಪಂಜಾಬಿನಲ್ಲಿ ಬಳಸಲಾಗುವುದಿಲ್ಲ. ಇದರ ಪರಿಣಾಮವಾಗಿ, ಗುರುಮುಖಿಯನ್ನು ಓದಲು ಸಾಧ್ಯವಾಗದ ಪಂಜಾಬಿ ಮಾತನಾಡುವ ಪಾಕಿಸ್ತಾನಿಗಳ ನಂತರದ ತಲೆಮಾರುಗಳು ತಮ್ಮ ಸಾಹಿತ್ಯದಿಂದ ದೂರವುಳಿದವು. ಅವಿಭಜಿತ ಪಂಜಾಬಿನ ಮಹಾನ್ ಸಾಹಿತ್ಯ ಕೃತಿಗಳನ್ನು ತಮಗೆ ಗೊತ್ತಿದ್ದ ಶಾಮುಖಿ ಲಿಪಿಯಲ್ಲಿ ಬಂದ ಮೇಲಷ್ಟೇ ಅವರು ಓದಲು ಸಾಧ್ಯವಾಯಿತು.













