ಲಡಾಖಿನ ಸುರು ಕಣಿವೆಯ ಹಳ್ಳಿಗಳು ಬೇಸಿಗೆಯ ತಿಂಗಳುಗಳಲ್ಲಿ ಜೀವತುಂಬಿಕೊಳ್ಳುತ್ತವೆ. ಸೊಂಪಾದ ಹಸಿರು ಗದ್ದೆಗಳ ಮೂಲಕ ತೊರೆಗಳು ಜುಳುಜುಳು ಎನ್ನುತ್ತ ಹರಿಯುತ್ತವೆ, ಕಾಡು ಹೂಗಳು ಅರಳಿ ನಿಲ್ಲುತ್ತವೆ ಮತ್ತು ಹಿಮಾಚ್ಛಾದಿತ ಪರ್ವತಗಳು ಸುತ್ತಲೂ ಕಾಣುತ್ತವೆ. ಹಗಲಿನ ಆಕಾಶವು ಸುಂದರ ನೀಲಿ ಬಣ್ಣದಲ್ಲಿದ್ದರೆ, ರಾತ್ರಿ ಆಕಾಶದಲ್ಲಿ ನೀವು ಕ್ಷೀರಪಥವನ್ನು ಕಾಣಬಹುದು.
ಕಾರ್ಗಿಲ್ ಜಿಲ್ಲೆಯ ಈ ಕಣಿವೆಯ ಪರಿಸರದೊಡನೆ ಇಲ್ಲಿಯ ಮಕ್ಕಳು ಹಂಚಿಕೊಳ್ಳುವ ಸಂಬಂಧವು ಬಹಳ ಸಂವೇದನಾಶೀಲವಾದದ್ದು. 2021ರಲ್ಲಿ ತಾಯ್ ಸುರು ಗ್ರಾಮದಲ್ಲಿ ತೆಗೆದ ಈ ಫೋಟೋಗಳಲ್ಲಿ, ಇಲ್ಲಿನ ಹೆಣ್ಣುಮಕ್ಕಳು ಬೇಸಿಗೆಯಲ್ಲಿ ಹೂಗಳನ್ನು ಸಂಗ್ರಹಿಸುವುದು, ಚಳಿಗಾಲದಲ್ಲಿ ಹಿಮದೊಡನೆ ಆಡುವುದು ಮತ್ತು ತೊರೆಗಳಲ್ಲಿ ಜಿಗಿಯುವುದನ್ನು ಕಾಣಬಹುದು. ಬಾರ್ಲಿ ಹೊಲಗಳಲ್ಲಿ ಆಡುವುದು ಇಲ್ಲಿನ ಮಕ್ಕಳ ಬೇಸಿಗೆಯ ನೆಚ್ಚಿನ ಚಟುವಟಿಕೆಯಾಗಿದೆ.
ಕಾರ್ಗಿಲ್ ಬಹಳ ದೂರದಲ್ಲಿದೆ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದ ಏಕೈಕ ಜಿಲ್ಲೆಯಾದ ಲೇಹ್ನ ಜನಪ್ರಿಯ ಪ್ರವಾಸಿ ತಾಣದಿಂದ ಬಹಳ ದೂರದಲ್ಲಿದೆ.
ಹೆಚ್ಚಿನ ಸಂದರ್ಭದಲ್ಲಿ, ಅನೇಕ ಜನರು ಕಾರ್ಗಿಲ್ ಕಾಶ್ಮೀರ ಕಣಿವೆಯಲ್ಲಿರಬೇಕೆಂದು ಗೊಂದಲಕ್ಕೊಳಗಾಗುತ್ತಾರೆ, ಆದರೆ ಅದು ಅಲ್ಲಿಲ್ಲ. ಮತ್ತು ಕಾಶ್ಮೀರದಂತೆ ಇಲ್ಲಿ ಸುನ್ನಿ ಮುಸ್ಲಿಮರು ಬಹುಸಂಖ್ಯಾತರಲ್ಲ. ಇಲ್ಲಿನ ಬಹುಸಂಖ್ಯಾತರ ನಂಬಿಕೆ ಶಿಯಾ ಪಂಥವಾಗಿದೆ.
ಕಾರ್ಗಿಲ್ ಪಟ್ಟಣದಿಂದ ದಕ್ಷಿಣಕ್ಕೆ 70 ಕಿಲೋಮೀಟರ್ ದೂರದಲ್ಲಿರುವ ತಾಯ್ ಸುರುವನ್ನು ಸುರು ಕಣಿವೆಯ ಶಿಯಾ ಮುಸ್ಲಿಮರು ಪ್ರಮುಖ ಧಾರ್ಮಿಕ ಕೇಂದ್ರವೆಂದು ಪರಿಗಣಿಸುತ್ತಾರೆ. ಇಲ್ಲಿನ ಜನರಿಗೆ, ಇಸ್ಲಾಮಿಕ್ ಹೊಸ ವರ್ಷದ ಮೊದಲ ತಿಂಗಳು ಮೊಹರಂ - ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರಿಗೆ ಸಂಬಂಧಿಸಿದಂತೆ ತೀವ್ರ ಶೋಕದ ಸಮಯವಾಗಿದೆ. CE 680ರ ಅಕ್ಟೋಬರ್ 10ರಂದು ಕರ್ಬಲಾ ಕದನದಲ್ಲಿ (ಆಧುನಿಕ ಇರಾನಿನಲ್ಲಿ) 72 ಸಹಚರರೊಂದಿಗೆ ಅವರನ್ನು ಕೊಲ್ಲಲಾಯಿತು.
ಮೊಹರಂ ಸಮಯದಲ್ಲಿ ನಡೆದ ಘಟನೆಯನ್ನು ನೆನಪಿಸುವ ಆಚರಣೆಗಳಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಭಾಗವಹಿಸುತ್ತಾರೆ. ಜುಲೂಸ್ ಅಥವಾ ದಸ್ತ ಎಂದು ಕರೆಯಲ್ಪಡುವ ಮೆರವಣಿಗೆಗಳನ್ನು ಹಲವಾರು ದಿನಗಳವರೆಗೆ ನಡೆಸಲಾಗುತ್ತದೆ. ಇವುಗಳಲ್ಲಿ ಅತಿ ದೊಡ್ಡದು ಮೊಹರಂನ ಹತ್ತನೇ ದಿನವಾದ ಅಶುರಾದಲ್ಲಿ ಹುಸೈನ್ ಮತ್ತು ಅವನ ಪರಿವಾರವನ್ನು ಕರ್ಬಲಾದಲ್ಲಿ ಹತ್ಯಾಕಾಂಡಕ್ಕೆ ಒಳಪಡಿಸಿದ ಸಂದರ್ಭದ ನೆನಪಿನಲ್ಲಿ. ಕೆಲವು ಪುರುಷರು ಸರಪಳಿಗಳು ಮತ್ತು ಬ್ಲೇಡುಗಳಿಂದ ಸ್ವಯಂ-ಹೊಡೆದುಕೊಳ್ಳುವ (ಖಮಾ ಜಾನಿ) ಆಚರಣೆಯನ್ನು ಆಚರಿಸುತ್ತಾರೆ, ಮತ್ತು ಪ್ರತಿಯೊಬ್ಬರೂ ತಮ್ಮ ಎದೆಗಳನ್ನು (ಸೀನಾ ಜಾನಿ) ಹೊಡೆದುಕೊಳ್ಳುತ್ತಾರೆ.


























