ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ನ (TERI) 2014ರ ಅಧ್ಯಯನದಲ್ಲಿ ಗಮನಿಸಲಾದಂತೆ; “1901ರಿಂದ 2003ರವರೆಗಿನ ಅವಧಿಯ ಮಳೆಯ ದತ್ತಾಂಶವು, ಜುಲೈ ತಿಂಗಳ ಮಾನ್ಸೂನ್ ಮಳೆಯು ಕ್ಷೀಣಿಸುತ್ತಿದ್ದು (ರಾಜ್ಯಾದ್ಯಂತ), ಆಗಸ್ಟ್ನ ಮಳೆಯ ಪ್ರಮಾಣವು ಹೆಚ್ಚಾಗುತ್ತಿದೆಯೆಂಬುದಾಗಿ ತಿಳಿಸುತ್ತದೆ. ವಿಶೇಷವಾಗಿ ಋತುವಿನ ಮೊದಲ ಅರ್ಧ ಭಾಗದಲ್ಲಿ ಮಾನ್ಸೂನ್ ನ ಮಳೆಯು ಅತ್ಯಧಿಕವಾಗಿ ಸುರಿದ ಸಂದರ್ಭಗಳು ಹೆಚ್ಚುತ್ತಿವೆ.”
ವಿದರ್ಭಕ್ಕಾಗಿ ಕೈಗೊಳ್ಳಲಾದ Assessing Climate Change Vulnerability and Adaptation Strategies for Maharashtra: Maharashtra State Adaptation Action Plan on Climate Change ಎಂಬ ಅಧ್ಯಯನವು; “ದೀರ್ಘ ಒಣ ಹವೆ, ಇತ್ತೀಚಿನ ಮಳೆಯ ಅಸ್ಥಿರತೆಯಲ್ಲಿನ ಹೆಚ್ಚಳ ಮತ್ತು ಮಳೆಯ ಪ್ರಮಾಣವು ಕಡಿಮೆಯಾಗಿರುವ ಸಂಗತಿಗಳು”ಪ್ರಮುಖ ಆಘಾತಕಾರಿ ಅಂಶಗಳೆಂಬುದನ್ನು ಒತ್ತಿ ಹೇಳಿದೆ.
ಅತ್ಯಧಿಕ ಮಳೆಯ ಪ್ರಮಾಣವು ಶೇ. 14ರಿಂದ 18ರವರೆಗೆ ತಲುಪಬಹುದಾದ ಜಿಲ್ಲೆಗಳ ಸಮೂಹದಲ್ಲಿ ಭಂಡಾರವು ನೆಲೆಗೊಂಡಿದೆ (ಮೂಲಾಧಾರಕ್ಕೆ ತುಲನಾತ್ಮಕವಾಗಿ). ಮಳೆಗಾಲದಲ್ಲಿನ ಒಣ ಹವೆಯ ದಿನಗಳೂ ಸಹ ಹೆಚ್ಚಾಗುತ್ತದೆಂದು ಊಹಿಸಲಾಗಿದೆ. ಅಧ್ಯಯನದಲ್ಲಿ ಗಮನಿಸಿರುವಂತೆ ನಾಗ್ಪುರ್ ವಿಭಾಗದಲ್ಲಿ (ಭಂಡಾರವು ನೆಲೆಗೊಂಡಿರುವ), ಸರಾಸರಿ ಹೆಚ್ಚಳವು (ವಾರ್ಷಿಕ ಮಧ್ಯಸ್ಥ ತಾಪಮಾನ 27.19 ಡಿಗ್ರಿಗೂ ಅಧಿಕ), 2030ರ ವೇಳೆಗೆ 1.18ರಿಂದ 1.4, 2050ರ ವೇಳೆಗೆ 1.95ರಿಂದ 2.2, 2070ರ ವೇಳೆಗೆ 2.88ರಿಂದ 3.16 ಡಿಗ್ರಿಗಳೆಂಬುದಾಗಿ ತಿಳಿಸಲಾಗಿದ್ದು ಇದು ರಾಜ್ಯದ ಯಾವುದೇ ವಲಯಕ್ಕಿಂತಲೂ ಅತ್ಯಂತ ಹೆಚ್ಚಿನ ಮಟ್ಟದಲ್ಲಿದೆ.
ಭಂಡಾರದಲ್ಲಿನ ಕೃಷಿ ಅಧಿಕಾರಿಗಳೂ ಸಹ ಮಳೆಯನ್ನು ಅತಿಯಾಗಿ ಅವಲಂಬಿಸಿದ ತಮ್ಮ ಜಿಲ್ಲೆಯಲ್ಲಿನ ಈ ಆರಂಭಿಕ ಬದಲಾವಣೆಗಳನ್ನು ಗಮನಿಸಿದ್ದಾರೆ. ಈಗಲೂ ಸರ್ಕಾರಿ ಬರಹಗಳು ಹಾಗೂ ಜಿಲ್ಲೆಯ ಯೋಜನೆಗಳಲ್ಲಿ ಇದರ ಪಾರಂಪರಿಕ ಕೆರೆಗಳು, ನದಿಗಳು ಮತ್ತು ಸಾಕಷ್ಟು ಮಳೆಯ ಕಾರಣದಿಂದಾಗಿ ಈ ಪ್ರದೇಶವನ್ನು ಉತ್ತಮ ನೀರಾವರಿ ಪ್ರದೇಶವೆಂಬುದಾಗಿ ವರ್ಗೀಕರಿಸಲಾಗಿದೆ. ಭಂಡಾರದ ಪ್ರಾದೇಶಿಕ ಕೃಷಿ ಅಧೀಕ್ಷಕರಾದ ಮಿಲಿಂದ್ ಲಾಡ್ ಅವರು, “ಜಿಲ್ಲೆಯಲ್ಲಿ ಮಳೆಯ ತಡವಾಗುತ್ತಿರುವ ಪ್ರವೃತ್ತಿಯು ಅವಿರತವಾಗಿದ್ದು ಇದರಿಂದಾಗಿ ಬಿತ್ತನೆ ಹಾಗೂ ಫಸಲಿಗೆ ಹಾನಿಯುಂಟಾಗುತ್ತಿದೆ. ಇದಕ್ಕೂ ಹಿಂದೆ 60ರಿಂದ 65 ದಿನಗಳವರೆಗೆ ಮಳೆಯು ಸುರಿಯುತ್ತಿದ್ದು; ಕಳೆದ ದಶಕದಿಂದ ಜೂನ್ ಸೆಪ್ಟೆಂಬರ್ ಅವಧಿಯಲ್ಲಿ, 40ರಿಂದ 45 ದಿನಗಳವರೆಗೆ ಮಾತ್ರವೇ ಮಳೆಯನ್ನು ಕಾಣಬಹುದಾಗಿದೆ. ಭಂಡಾರದಲ್ಲಿನ ರಾಜ್ಯಾದಾಯವಿರುವ 20 ಗ್ರಾಮಗಳ ಸಮೂಹಕ್ಕೆ ಈ ವರ್ಷದಲ್ಲಿ ಕೇವಲ 6ರಿಂದ 7 ದಿನಗಳ ಮಳೆಯಷ್ಟೇ ಲಭ್ಯವಾಗಿದೆ”ಎಂದು ತಿಳಿಸುತ್ತಾರೆ.
“ಮಾನ್ಸೂನ್ ವಿಳಂಬವಾದಲ್ಲಿ ಉತ್ತಮ ಗುಣಮಟ್ಟದ ಅಕ್ಕಿಯನ್ನು ಬೆಳೆಯುವುದು ಸಾಧ್ಯವಾಗದು. ಸಸಿತೋಟದ 21 ದಿನಗಳ ಅವಧಿಯ ಬಳಿಕ ಭತ್ತದ ನಾಟಿಯು ತಡವಾದಲ್ಲಿ ಪ್ರತಿ ದಿನಕ್ಕೆ, ಪ್ರತಿ ಹೆಕ್ಟೇರಿಗೆ 10 ಕೆ.ಜಿ.ಯಷ್ಟು ಉತ್ಪನ್ನವು ಕುಂಠಿತವಾಗುತ್ತದೆ”ಎಂದು ಸಹ ಅವರು ತಿಳಿಸಿದರು.
ಸಸಿಪಾತಿಗಳಲ್ಲಿ ಎಳೆಯ ಚಿಗುರುಗಳನ್ನು ಬೆಳೆಸಿ ನಂತರ ಅವನ್ನು ನಾಟಿ ಮಾಡುವ ಬದಲಾಗಿ, ಬೀಜಗಳನ್ನು ಚೆಲ್ಲುವ ಸಾಂಪ್ರದಾಯಿಕ ವಿಧಾನವನ್ನು ಜಿಲ್ಲೆಯಲ್ಲಿ ಕ್ರಮೇಣ ಅನುಸರಿಸಲಾಗುತ್ತಿದೆ. ಆದರೆ ನಾಟಿಯ ವಿಧಾನದಂತೆ, ಬೀಜಗಳನ್ನು ಚೆಲ್ಲುವ ವಿಧಾನದಲ್ಲಿ ಗಿಡಗಳ ಚಿಗುರುವಿಕೆಯ ಸಾಧ್ಯತೆಯು ಕಡಿಮೆಯಿರುವ ಕಾರಣ; ಫಸಲಿನ ಪ್ರಮಾಣವು ಸಹ ಕಡಿಮೆಯಾಗುತ್ತದೆ. ಮೊದಲ ಮಳೆಯ ಅಭಾವದಿಂದಾಗಿ, ಸಸಿತೋಟದಲ್ಲಿನ ಎಳೆಯ ಚಿಗುರುಗಳು ಬೆಳೆಯದೆ ಬೆಳೆಯು ಸಂಪೂರ್ಣವಾಗಿ ಹಾನಿಗೀಡಾಗುತ್ತದೆ. ಆದರೆ ಬೀಜಗಳನ್ನು ಚೆಲ್ಲುವ ವಿಧಾನದಲ್ಲಿ ರೈತರು ಭಾಗಶಃ ಹಾನಿಯನ್ನಷ್ಟೇ ಅನುಭವಿಸುತ್ತಾರೆ.