ಅದು ಪಾವಗಡದ ಮಟ್ಟಿಗೆ ಪೋಸ್ಟ್ ಕಾರ್ಡ್ ಕ್ಷಣವೇ ಸರಿ. ಮೇಲ್ನೋಟಕ್ಕಾದರೂ ಇದೊಂದು ಸತ್ಯದ ಸಂಗತಿ. ರಸ್ತೆಗಳಲ್ಲಿದ್ದ ಬೋಗನ್ ವಿಲ್ಲಾ ಗೊಂಚಲುಗಳು, ವರ್ಣಮಯ ಮನೆಗಳು, ಅಲಂಕೃತ ದೇವಾಲಯಗಳು ಮತ್ತು ಅಲ್ಲಿಂದ ಹೊರಹೊಮ್ಮುತ್ತಿದ್ದ ಸಂಗೀತವು ಕರ್ನಾಟಕದ ತುಮಕೂರು ಜಿಲ್ಲೆಯ ಗ್ರಾಮೀಣ ಭಾಗವೊಂದರ ಬೀದಿಯಲ್ಲಿ ನಡೆದಾಡುತ್ತಿದ್ದವರ ಕಿವಿಗಳನ್ನು ಹಿತವಾಗಿ ತಲುಪುತ್ತಿದ್ದವು. ಒಂದು ರೀತಿಯಲ್ಲಿ ಸುಂದರವಾಗಿದ್ದರೂ ನೈಜನೆಲೆಯಲ್ಲಿ ಅಂಥದ್ದೇನೂ ಇರಲಿಲ್ಲ. ಏಕೆಂದರೆ ನಾವಂದು s***t ಬಗ್ಗೆ ಮಾತನಾಡುತ್ತಿದ್ದೆವು.
ಸವಲತ್ತುಗಳ ಮೋಜನ್ನು ಸವಿಯುತ್ತಿರುವ ಮಧ್ಯಮವರ್ಗದ ಸೂಕ್ಷ್ಮತೆಗಳನ್ನು ಗಮನದಲ್ಲಿರಿಸಿಕೊಂಡು ಇಲ್ಲಿ ಈ ಪದವನ್ನು ನಕ್ಷತ್ರಚಿಹ್ನೆಗಳಿಂದ ಮರೆಮಾಚಲಾಗಿದೆ. ಆದರೆ ರಾಮಾಂಜನಪ್ಪನಿಗೆ ಅಂಥಾ ವಿಲಾಸಗಳಿಲ್ಲ. "ತನ್ನ ಬರಿಗೈಯಿಂದ ನಾನು ಮಲವನ್ನು ಸ್ವಚ್ಛಗೊಳಿಸುತ್ತೇನೆ", ಎನ್ನುತ್ತಿದ್ದಾರೆ ಪಾವಗಡ ತಾಲೂಕಿನ ಕನ್ನಮೇಡಿ ಹಳ್ಳಿಯ ಈ ಸಫಾಯಿ ಕರ್ಮಚಾರಿ. ಇದೂ ಕಮ್ಮಿಯೆಂಬಂತೆ ರಾಮಾಂಜನಪ್ಪನಿಗೆ ಸಿಕ್ಕ ಕೊನೆಯ ಸಂಬಳವೆಂದರೆ 2017 ರ ಅಕ್ಟೋಬರ್ ತಿಂಗಳಿನಲ್ಲಿ.
ಇತ್ತ ಟೌನ್ ಹಾಲಿನ ಗೋಡೆಗಳು ತ್ಯಾಜ್ಯ ಪ್ರತ್ಯೇಕತೆಯನ್ನು ಬಿಂಬಿಸುವ ಮ್ಯೂರಲ್ ಗಳಿಂದ ಸಿಂಗರಿಸಲ್ಪಟ್ಟಿವೆ. ಆದರೆ ಇದೊಂದು ಸರಕಾರಿ ಮುಖವಾಡ ಮಾತ್ರ. ಟೌನ್ ಹಾಲಿನ ಮ್ಯೂರಲ್ ಕಲಾಕೃತಿಗಳಿಂದ ಕೇವಲ 10 ಮೀಟರ್ ದೂರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ಸಮಾಲೋಚನೆಯೊಂದರಲ್ಲಿ ಮಾದಿಗ ಸಮುದಾಯದ ದಲಿತರಾದ 20 ಸ್ವಚ್ಛತಾ ಕಾರ್ಮಿಕರು ತಮ್ಮ ದೀನಸ್ಥಿತಿಯ ಬಗ್ಗೆ ಮಾತನಾಡಿದ್ದರು.
ರಾಮಾಂಜನಪ್ಪ ಸಂಬಳವಾಗಿ ಪ್ರತೀ ತಿಂಗಳೂ ಪಡೆಯುತ್ತಿದ್ದ 3500 ರೂಪಾಯಿಗಳು ತನ್ನ ಪತ್ನಿ ಮತ್ತು ಶಾಲೆಗೆ ಹೋಗುವ ಮೂವರು ಮಕ್ಕಳನ್ನು ಹೊಂದಿರುವ ಐವರು ಸದಸ್ಯರ ಕುಟುಂಬಕ್ಕೆ ಯಾವುದಕ್ಕೂ ಸಾಲುತ್ತಿರಲಿಲ್ಲ. ಹೀಗಿರುವಾಗ ಕಳೆದ ಒಂಭತ್ತು ತಿಂಗಳುಗಳಿಂದ ರಾಮಾಂಜನಪ್ಪ ಸಂಬಳವಿಲ್ಲದೆ ದಿನ ಸಾಗಿಸುತ್ತಿದ್ದಾನೆ.
ಹೀಗೆ ಕೆಲವು ಕಾರ್ಮಿಕರ ಸಂಬಳ ಬರುವುದು ಬಾಕಿಯಾಗಿದ್ದರೆ, ಇನ್ನು ಕೆಲವರಿಗೆ ನೀಡಿರುವ ಭರವಸೆಯಂತೆ ಅವರ ಸಂಬಳದಲ್ಲಿ ಏರಿಕೆಯಾಗುವುದು ಬಾಕಿಯಾಗಿಬಿಟ್ಟಿದೆ.












