2000ದ ದಶಕದ ಆರಂಭದಲ್ಲಿ ಅವರು ಮೂವತ್ತು ವರ್ಷಗಳ ಕಠಿಣ ಪರಿಶ್ರಮದ ನಂತರ ತೋಟದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದಾಗ, ಹೆಚ್ಚಳದ ನಂತರವೂ 10 ಗಂಟೆಗಳ ಕೆಲಸಕ್ಕೆ ದಿನಕ್ಕೆ ಕೇವಲ 160 ರೂ. ಕೂಲಿ ದೊರೆಯುತ್ತಿತ್ತು. ತನ್ನ ಕಠಿಣ ಪರಿಶ್ರಮ ಮತ್ತು ಬಡತನದ ದಿನಗಳನ್ನು ನೆನಪಿಸಿಕೊಳ್ಳುತ್ತಾ, "ಕೊಂಡಾಚಾ ಧೋಂಡಾ ಖಲಾ ಪನಾ ಮುಲಾನಾ ಕಧಿ ಮಗಾ ಥೇವ್ಲೋ ನಹೀ [ನಾವು ಹೊಟ್ಟು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು, ಆದರೆ ಮಕ್ಕಳಿಗೆ ಕಷ್ಟ ಸೋಕಲು ಬಿಡಲಿಲ್ಲ]." ಅವರ ಹೋರಾಟ ಮತ್ತು ತ್ಯಾಗ ವ್ಯರ್ಥವಾಗಲಿಲ್ಲ. ಇಂದು ಅವರ ಹಿರಿಯ ಮಗ ಪ್ರಭಾಕರ್ ಹತ್ತಿರದ ಪಟ್ಟಣವಾದ ಜೈಸಿಂಗ್ಪುರದಲ್ಲಿ ರಸಗೊಬ್ಬರ ಅಂಗಡಿಯನ್ನು ನಡೆಸುತ್ತಿದ್ದಾರೆ ಮತ್ತು ಕಿರಿಯ ಮಗ ಬಾಪುಸೋ ಜಂಭಾಲಿಯ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಜಮೀನಿನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ, ಮನೆಯಲ್ಲಿ ಬೇಸರ ಕಾಡತೊಡಗಿತು. ಆಗ ಮತ್ತೆ ಕೃಷಿ ಕೂಲಿ ಕೆಲಸಕ್ಕೆ ಹೋಗತೊಡಗಿದರು. ಮೂರು ವರ್ಷಗಳ ಹಿಂದೆ, ಮನೆಯಲ್ಲಿ ಬಿದ್ದು ಉಂಟಾದ ಗಾಯಗಳು ಅವರನ್ನು ಕೃಷಿ ಕೆಲಸದಿಂದ ನಿವೃತ್ತರಾಗುವಂತೆ ಮಾಡಿದವು. "ನನ್ನ ಬಲಭುಜಕ್ಕೆ ಎರಡು ಶಸ್ತ್ರಚಿಕಿತ್ಸೆಗಳು ಮತ್ತು ಆರು ತಿಂಗಳ ಕಾಲ ಆಸ್ಪತ್ರೆಗೆ ದಾಖಲಾದರೂ, ನೋವು ಮುಂದುವರೆದಿದೆ" ಎಂದು ಅವರು ವಿವರಿಸುತ್ತಾರೆ. ಆದಾಗ್ಯೂ, ತನ್ನ ಮೊಮ್ಮಗ ಸಂಪತ್ ಬಿರಂಜೆಗಾಗಿ ಮತ್ತೊಂದು ವಾಕಲ್ ಮಾಡುವುದನ್ನು ಈ ನೋವಿಗೆ ತಡೆಯಲು ಸಾಧ್ಯವಾಗಿಲ್ಲ.
ತನ್ನ ಭುಜದ ನೋವಿನ ಹೊರತಾಗಿಯೂ, ತನುಬಾಯಿ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಹೊಲಿಗೆಯನ್ನು ಪ್ರಾರಂಭಿಸುತ್ತಾರೆ ಮತ್ತು ಸಂಜೆ 6 ಗಂಟೆಯವರೆಗೆ ಮುಂದುವರಿಸುತ್ತಾರೆ, ಹೊರಗೆ ಒಣಗಿಸಲು ಹಾಕಲಾದ ಜೋಳವನ್ನು ತಿನ್ನಲು ಬರುವ ಕೋತಿಗಳನ್ನು ಓಡಿಸಲು ಸಾಂದರ್ಭಿಕವಾಗಿ ನಿಲ್ಲುತ್ತಾರೆ. "ಕೋತಿಗಳೊಂದಿಗೆ ಅದನ್ನು ಹಂಚಿಕೊಳ್ಳಲು ನನಗೆ ಯಾವುದೇ ಅಭ್ಯಂತರವಿಲ್ಲ, ಆದರೆ ನನ್ನ ಮೊಮ್ಮಗ, ರುದ್ರನಿಗೆ ಜೋಳವೆಂದರೆ ಇಷ್ಟ," ಎಂದು ಅವರು ಹೇಳುತ್ತಾರೆ. ತನ್ನ ಉತ್ಸಾಹವನ್ನು ಬೆಂಬಲಿಸಿದ್ದಕ್ಕಾಗಿ ಅವರು ತನ್ನ ಇಬ್ಬರು ಸೊಸೆಯಂದಿರಿಗೆ ಸಾಕಷ್ಟು ಋಣಿಯಾಗಿರುವುದಾಗಿ ಅವರು ಹೇಳುತ್ತಾರೆ. "ಅವರ ಕಾರಣದಿಂದಾಗಿ ನಾನು ಮನೆಯ ಜವಾಬ್ದಾರಿಗಳಿಂದ ಮುಕ್ತಳಾಗಿದ್ದೇನೆ."
74ರ ಹರೆಯದಲ್ಲೂ ತನುಬಾಯಿ ಸೂಜಿ ಹಿಡಿದು ಹೊಲಿಯುತ್ತಾ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದ್ದಾರೆ. ಇಲ್ಲಿಯವರೆಗೆ ಅವರು ಒಂದೇ ಒಂದು ತಪ್ಪು ಹೊಲಿಗೆಯನ್ನು ಹೊಲಿದಿಲ್ಲ. ಅವರ ತೀಕ್ಷ್ಣ ದೃಷ್ಟಿ ಮತ್ತು ಬೆರಳುಗಳ ಮಾಂತ್ರಿಕತೆ ಇಂದಿಗೂ ಜೀವಂತವಾಗಿದೆ. ಅವರು ನಮ್ರತೆಯಿಂದ ಹೇಳುತ್ತಾರೆ, “ತ್ಯಾತ್ ಕಾಯ ವಿಸಾರನಾರ್ ಬಾಲಾ? ತ್ಯಾತ್ ಕಾಯ್ ವಿದ್ಯಾ ಆಹೆ? [ಇದರಲ್ಲಿ ಮರೆಯುವಂತಹದ್ದು ಏನಿದೆ? ಇದಕ್ಕೆ ಯಾವ ದೊಡ್ಡ ಕೌಶಲ ಬೇಕು]"
ಇತರರಿಗೆ, ತನುಬಾಯಿ ಈ ಒಂದು ಸಲಹೆಯನ್ನು ಮಾತ್ರ ನೀಡಿದ್ದಾರೆ: "ಏನೇ ಆಗಲಿ, ನೆಹ್ಮಿ ಪ್ರಮಾಣಿಕ್ ರಹಾವ [ಜೀವನವನ್ನು ಪ್ರಾಮಾಣಿಕವಾಗಿ ಜೀವಿಸಿ]." ಉತ್ತಮವಾದ ಹೊಲಿಗೆಯು ಅನೇಕ ಮಡಿಕೆಗಳನ್ನು ಒಟ್ಟಿಗೆ ಇರಿಸುತ್ತದೆ, ಅವರು ತಮ್ಮ ಇಡೀ ಜೀವನವನ್ನು ಕುಟುಂಬವನ್ನು ಒಟ್ಟಿಗೆ ಇರಿಸುವಲ್ಲಿ ಕಳೆದರು. "ಪೂರ್ಣ ಆಯುಷ್ಯ ಮೇ ಶಿವತ್ ಗೆಲೆ [ನಾನು ನನ್ನ ಇಡೀ ಜೀವನವನ್ನು ಕೇವಲ ಹೊಲಿಗೆಯಲ್ಲಿ ಕಳೆದಿದ್ದೇನೆ]."