ಸುನಿಲ್ ಗುಪ್ತಾ ಅವರಿಗೆ ಮನೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಮತ್ತು ಅವರ ಕಚೇರಿಯಾದ, ಗೇಟ್ವೇ ಆಫ್ ಇಂಡಿಯಾ, ಕಳೆದ 15 ತಿಂಗಳುಗಳ ಲಾಕ್ಡೌನ್ ಸಮಯದಲ್ಲಿ ಹಲವು ಬಾರಿ ದೀರ್ಘಾವಧಿಯವರೆಗೆ ಮುಚ್ಚಿದೆ.
“ಇದು ನಮ್ಮ ಪಾಲಿನ ದಫ್ತಾರ್ [ಕಚೇರಿ]. ನಾವು ಈಗ ಎಲ್ಲಿಗೆ ಹೋಗಬೇಕು?” ದಕ್ಷಿಣ ಮುಂಬೈನ ಸ್ಮಾರಕ ಸಂಕೀರ್ಣವನ್ನು ತೋರಿಸುತ್ತಾ ಅವರು ಕೇಳುತ್ತಾರೆ.
ಲಾಕ್ಡೌನ್ಗಳು ಪ್ರಾರಂಭವಾಗುವವರೆಗೂ, ಸುನಿಲ್ ತನ್ನ ಕ್ಯಾಮೆರಾದೊಂದಿಗೆ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಈ ಜನಪ್ರಿಯ ಪ್ರವಾಸಿ ತಾಣದಲ್ಲಿ ಕಾಯುತ್ತಿದ್ದರು. ಜನರು ಗೇಟ್ವೇ ಕಡೆಗೆ ಹೋಗುವ ಚೆಕ್ಪೋಸ್ಟ್ಗಳನ್ನು ದಾಟುತ್ತಿದ್ದಂತೆ, ಅವರು ಮತ್ತು ಇತರ ಉತ್ಸಾಹಿ ಛಾಯಾಗ್ರಾಹಕರು ಕ್ಲಿಕ್-ಅಂಡ್-ಪ್ರಿಂಟ್ ತ್ವರಿತ ಫೋಟೋಗಳ ಆಲ್ಬಮ್ಗಳೊಂದಿಗೆ 'ಏಕ್ ಮಿನಿಟ್ ಮೇ ಫುಲ್ ಫ್ಯಾಮಿಲಿ ಫೋಟೊ' ಅಥವಾ ' ದಯವಿಟ್ಟು ಒಂದು ಫೋಟೋ ತೆಗೆಸಿಕೊಳ್ಳಿ. ಕೇವಲ 30 ರೂಪಾಯಿಗೆ ಎನ್ನುತ್ತಾ ಅವರನ್ನು ಸ್ವಾಗತಿಸುತ್ತಿದ್ದರು.
ಕೋವಿಡ್ -19 ಪ್ರಕರಣಗಳು ಉಲ್ಬಣದಲ್ಲಿ ಇಳಿತ ಕಂಡುಬಂದ ಕಾರಣ ಈ ವರ್ಷದ ಏಪ್ರಿಲ್ ತಿಂಗಳ ಮಧ್ಯದಿಂದ ಮುಂಬಯಿಯಲ್ಲಿ ನವೀಕರಿಸಿದ ನಿರ್ಬಂಧ ನಿಯಮಗಳಗಳ ನಂತರ, ಅವರೆಲ್ಲರಿಗೂ ಮತ್ತೆ ಒಂದಿಷ್ಟು ಕೆಲಸ ಸಿಗತೊಡಗಿತು. "ನಾನು ಬೆಳಿಗ್ಗೆ ಇಲ್ಲಿಗೆ ಬಂದಾಗ ಮುಖಕ್ಕೆ ರಾಚುವಂತೆ ʼನೋ ಎಂಟ್ರಿʼ ಬೋರ್ಡ್ ಕಾಣಿಸಿತು. ಎಂದು 39 ವರ್ಷದ ಸುನಿಲ್ ಏಪ್ರಿಲ್ನಲ್ಲಿ ಹೇಳಿದ್ದರು. "ನಾವು ಈಗಾಗಲೇ ಸಂಪಾದನೆಗಾಗಿ ಹೆಣಗಾಡುತ್ತಿದ್ದೆವು ಮತ್ತು ಈಗ ನಾವು ಋಣಾತ್ಮಕ ಗಳಿಕೆ [ಆದಾಯ] ಎದುರಿಸುತ್ತಿದ್ದೇವೆ. ಇದಕ್ಕೂ ಹೆಚ್ಚಿನ ನಷ್ಟವನ್ನು ಭರಿಸುವ ಸಾಮರ್ಥ್ಯ ನನಗಿಲ್ಲ.”


















