“ನಾವು ಹಸಿದು ಬೇಕಾದರೂ ಇರುತ್ತೇವೆ, ಆದರೆ ನಾವು ನಮ್ಮ ಪಕ್ಷದ ಬಾವುಟ ಹಿಡಿದು ತಿರುಗಾಟಕ್ಕೆ ಹೋಗದೆ ಇರುವುದಿಲ್ಲ. ನಾವು ಹೋಗಲೇಬೇಕು. ನಮಗೆ ಬೇರೆ ಆಯ್ಕೆಯಿಲ್ಲ,” ಎನ್ನುತ್ತಾರೆ ತಲುಪೂರಿನ ನಾರಾಯಣ ಸ್ವಾಮಿ. ಅವರು ರಾಪ್ತಾಡು ವಿಧಾನಸಭಾ ಕ್ಷೇತ್ರದಲ್ಲಿ ಒಂದು ರೇಷನ್ ಅಂಗಡಿ ನಡೆಸುತ್ತಿದ್ದಾರೆ. ಈ ಕ್ಷೇತ್ರವಿರುವುದು ಅನಂತಪುರ ಜಿಲ್ಲೆಯಲ್ಲಿ. ಅವರು ಇಂದು, ಅಂದರೆ ಎಪ್ರಿಲ್ 11ರಂದು ನಡೆಯಲಿರುವ ಚುನಾವಣೆ ಕುರಿತು ಮಾತನಾಡುತ್ತಿದ್ದರು. ಈ ಚುನಾವಣೆಯಲ್ಲಿ ಆಂಧ್ರಪ್ರದೇಶವು ವಿಧಾನಸಭೆ ಮತ್ತು ಲೋಕಸಭೆ ಎರಡಕ್ಕೂ ಮತ ಚಲಾಯಿಸಲಿದೆ. ಇಲ್ಲಿ ಜನರು ಏನು ಯೋಚಿಸುತ್ತಿದ್ದಾರೆ, ಅವರು ಹೇಗೆ ಮತ ಹಾಕುತ್ತಾರೆ ಮತ್ತು ಯಾರಿಗೆ ಮತ ಹಾಕುತ್ತಾರೆ ಮತ್ತು ಏಕೆ ಎನ್ನುವುದರ ಕುರಿತು ಅವರು ಮಾತನಾಡುತ್ತಾರೆ.
ಹಿಂದೂಪುರ ಮತ್ತು ಕಡಪ ಲೋಕಸಭಾ ಕ್ಷೇತ್ರಗಳಲ್ಲಿ ಕ್ರಮವಾಗಿ ರಾಪ್ತಾಡು ಮತ್ತು ಪುಲಿವೆಂದುಲ ಎಂಬ ಎರಡು ವಿಧಾನಸಭಾ ಕ್ಷೇತ್ರಗಳ ಬಗ್ಗೆ ಇಲ್ಲಿ ಹೆಚ್ಚಿನ ಗಮನ ನೀಡಲಾಗುತ್ತಿದೆ ಮತ್ತು ಚರ್ಚೆ ನಡೆಯುತ್ತಿದೆ.
ರಾಪ್ತಾಡುವಿನಲ್ಲಿ ಆಡಳಿತಾರೂಢ ತೆಲುಗು ದೇಶಂ ಪಕ್ಷದ ಪರಿಟಾಲ ಶ್ರೀರಾಮ್ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪ್ರಕಾಶ್ ರೆಡ್ಡಿ ನಡುವೆ ಹಣಾಹಣಿ ಏರ್ಪಟ್ಟಿದೆ. ರೆಡ್ಡಿ ಶ್ರೀರಾಮ್ ಅವರ ತಾಯಿ ಅವರನ್ನು 2009 ಮತ್ತು 2014ರಲ್ಲಿ ಪರಿಟಾಲ ಸುನೀತಾ ಸೋಲಿಸಿದ್ದರು. ಪುಲಿವೆಂದುಲಾದಲ್ಲಿ ವೈಎಸ್ಆರ್ ಕಾಂಗ್ರೆಸ್ ನಾಯಕ ಜಗನ್ಮೋಹನ್ ರೆಡ್ಡಿ ತೆಲುಗುದೇಶಂನ ಕುಮಾರ್ ರೆಡ್ಡಿ ವಿರುದ್ಧ ಕಣಕ್ಕಿಳಿದಿದ್ದಾರೆ. ಅನೇಕರು ಜಗನ್ಮೋಹನ್ ಅವರನ್ನು ಭವಿಷ್ಯದ ಮುಖ್ಯಮಂತ್ರಿ ಎಂದು ನೋಡುತ್ತಿದ್ದಾರೆ ಮತ್ತು ಅವರೇ ಮೇಲುಗೈ ಸಾಧಿಸಿದ್ದಾರೆ.
ಹಿಂದೂಪುರ ಲೋಕಸಭಾ ಕ್ಷೇತ್ರದಲ್ಲಿ ತೆಲುಗುದೇಶಂನ ನಿರ್ಮಲಾ ಕಿಸ್ತಪ್ಪ ಮತ್ತು ವೈಎಸ್ಆರ್ ಕಾಂಗ್ರೆಸ್ನಿಂದ ಗೋರಂಟ್ಲಾ ಮಾಧವ್ ಸ್ಪರ್ಧಿಸಿದ್ದಾರೆ. ಹಾಲಿ ಅಧ್ಯಕ್ಷ ವೈಎಸ್ ಅವಿನಾಶ್ ರೆಡ್ಡಿ ಕಡಪ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಪ್ರಮುಖ ಪ್ರತಿಸ್ಪರ್ಧಿ ತೆಲುಗುದೇಶಂನ ಆದಿನಾರಾಯಣರೆಡ್ಡಿ ವಿರುದ್ಧ ಸ್ಪರ್ಧಿಸಲಿದ್ದಾರೆ.
ಆದರೆ, ಅನಂತಪುರದ ಹಳ್ಳಿಗಳಲ್ಲಿ ಅಭ್ಯರ್ಥಿಗಳಿಗಿಂತ ಪಕ್ಷ, ಗುಂಪು ನಿಷ್ಠೆ ಜನರಿಗೆ ಮುಖ್ಯ. ನಾವು ರಾಪ್ತಾಡುಡುವಿನಲ್ಲಿ ಮಾತನಾಡಿದ ಗ್ರಾಮಸ್ಥರು ಹಿಂದೂಪುರ ಲೋಕಸಭೆ ಸ್ಪರ್ಧೆಗಿಂತ ವಿಧಾನಸಭೆ ಚುನಾವಣೆಯತ್ತ ಹೆಚ್ಚು ಗಮನಹರಿಸಿದ್ದರು (ಅಂದರೆ ಅವರು ಇಬ್ಬರಿಗೂ ಮತ ಹಾಕಲಿದ್ದಾರೆ). ಈ ಕ್ಷೇತ್ರಗಳಲ್ಲಿ ಎಲ್ಲೆಡೆ ಮತದಾರರು ರಾಜ್ಯ ವಿಧಾನಸಭೆ ಚುನಾವಣೆಯತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.










