ತುಳುನಾಡಿನ ಗರ್ನಾಲ್ ಸಾಯ್ಬೆರ್ ಅಥವಾ ಸಿಡಿಮದ್ದು ತಯಾರಿಸುವ ಕುಶಲಕರ್ಮಿಗಳಿಗೆ ಕರಾವಳಿ ಕರ್ನಾಟಕದ ವಿವಿಧ ಸಾಂಸ್ಕೃತಿಕ ಆಚರಣೆಗಳಲ್ಲಿ ಹೆಚ್ಚು ಬೇಡಿಕೆಯಿದೆ. ಭೂತಕೋಲ, ಹಬ್ಬ ಹರಿದಿನಗಳು, ಮದುವೆಗಳು, ಹುಟ್ಟುಹಬ್ಬದ ಆಚರಣೆಗಳು, ಗೃಹಪ್ರವೇಶ ಮತ್ತು ಅಂತ್ಯಕ್ರಿಯೆಗಳಲ್ಲಿ ಅವರು ಒಂದು ಅವಿಭಾಜ್ಯ ಭಾಗವಾಗಿದ್ದಾರೆ.

ಗರ್ನಲ್‌ ಎಂದರೆ ಸಿಡಿಮದ್ದು ಮತ್ತು ಸಾಯ್ಬೆರ್‌ ಎಂದರೆ ಮುಸಲ್ಮಾನ ವ್ಯಕ್ತಿ.

ಮುಲ್ಕಿ ಪಟ್ಟಣದ ಗರ್ನಾಲ್ ಸಾಯಿಬರಾದ ಅಮೀರ್ ಹುಸೇನ್‌ ಅವರು ಹೇಳುವಂತೆ ಅವರಿಗೆ ಈ ಕಸುಬನ್ನು ಕಲಿಸಿದ್ದು ಅವರ ತಂದೆ ಮತ್ತು ತಲೆಮಾರುಗಳಿಂದ ಅವರ ಕುಟುಂಬ ಈ ವೃತ್ತಿಯನ್ನು ಮಾಡುತ್ತಾ ಬಂದಿದೆ.

"ಸಿಡಿಮದ್ದುಗಳನ್ನು, ಅದರಲ್ಲೂ ದೊಡ್ದ ಪಟಾಕಿಗಳನ್ನು ಎಸೆಯುವುದು ಮತ್ತು ಹ್ಯಾಂಡಲ್‌ ಮಾಡುವುದು ಅಪಾಯಕಾರಿ ಕೆಲಸ," ಎಂದು ಕರ್ನಾಟಕದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಸಂಶೋಧನಾ ಸಹವರ್ತಿ ನಿತೇಶ್ ಅಂಚನ್ ಹೇಳುತ್ತಾರೆ.

ಉಡುಪಿ ಜಿಲ್ಲೆಯ ಆತ್ರಾಡಿ ಗ್ರಾಮದ ಮುಸ್ಲಿಂ ಯುವಕ ಮುಸ್ತಾಕ್ ಆತ್ರಾಡಿ ಅವರು ಭೂತದ ಆಚರಣೆಗಳಲ್ಲಿ ಗರ್ನಲ್ಗಳನ್ನು ತಯಾರಿಸಿ ಸಿಡಿಸುತ್ತಾರೆ.  ಇವರು ಅತ್ಯಂತ ಶಕ್ತಿಶಾಲಿ ಗರ್ನಲ್‌ಗಳಲ್ಲಿ ಒಂದಾದ ಕದೊಣಿಯನ್ನು ತಯಾರಿಸುವ ವಿಶೇಷ ಪರಿಣತಿಯನ್ನು ಪಡೆದಿದ್ದಾರೆ. "ಕದೊಣಿ ವಿವಿಧ ರಾಸಾಯನಿಕಗಳನ್ನು ಬಳಸಿ ವಿಸ್ತಾರವಾದ ಪ್ರಕ್ರಿಯೆಗಳಿಗೆ ಒಳಪಡಿಸಿ ತಯಾರಿಸಿದ ಸಿಡಿಮದ್ದು," ಎಂದು ಅವರು ಹೇಳುತ್ತಾರೆ. ಕದೊಣಿ ಸಿಡಿಯುವಾಗ ಇಡೀ ನೆಲವೇ ಅದುರುತ್ತದೆ.

ಕಿರು ಚಿತ್ರ ನೋಡಿ: ತುಳುನಾಡಿನ ಗರ್ನಲ್ ಸಾಯ್ಬೆರ್

ಭೂತಕೋಲದ ಸಂದರ್ಭದಲ್ಲಿ ಸಿಡಿಮದ್ದು ಸಿಡಿಸಿ ನೋಡುಗರ ಕಣ್ಮನ ಸೆಳೆಯಲಾಗುತ್ತದೆ. ತುಳುನಾಡಿನ ಭೂತಾರಾಧನೆಗೆ (ಸ್ಪಿರಿಟ್ ವರ್ಷಿಪ್) ಅನೇಕ ಶತಮಾನಗಳ ಇತಿಹಾಸವಿದೆ.  ಕೋಲ (ಪ್ರದರ್ಶನ) ಭೂತಾರಾಧನೆಗೆ ಸಂಬಂಧಿಸಿದ ಒಂದು ಆಚರಣೆಯಾಗಿದೆ. ನಾದಸ್ವರ, ತಾಸೆ ಮತ್ತು ಇತರ ಸಾಂಪ್ರದಾಯಿಕ ವಾದ್ಯಗಳ ಹಿಮ್ಮೇಳದ ಜೊತೆಗೆ, ಗರ್ನಲ್ ಸಿಡಿಯುವ ದೊಡ್ಡ ಶಬ್ದ ಭೂತ ಕೋಲಕ್ಕೆ ಮೆರುಗನ್ನು ನೀಡುತ್ತದೆ. ವೀಕ್ಷಿಸಿ: ತುಳುನಾಡಿನ ಭೂತಗಳು: ಸೌಹಾರ್ದ ಪರಂಪರೆಯ ಶಕ್ತಿಗಳು

ಕೋಲದ ಸಂದರ್ಭದಲ್ಲಿ  ಗರ್ನಲ್‌ ಸಾಯ್ಬೆರ್ ಸಿಡಿಮದ್ದನ್ನು ಉರಿಸಿ‌ ಆಕಾಶದ ಕಡೆಗೆ ಎಸೆದು ಮಾಡುವ ಸ್ಫೋಟಕ ಪ್ರದರ್ಶನ ಒಂದು ಮಾಂತ್ರಿಕ ವಾತಾವರಣವನ್ನು ಸೃಷ್ಟಿ ಮಾಡುತ್ತದೆ.

ಭೂತಾರಾಧನೆಯಲ್ಲಿ ಬೇರೆ ಬೇರೆ ಸಮುದಾಯಗಳ ಪಾಲ್ಗೊಳ್ಳುವಿಕೆಯನ್ನು ನೋಡಬಹುದು ಎಂದು ಪ್ರಾಧ್ಯಾಪಕ ಪ್ರವೀಣ್ ಶೆಟ್ಟಿ ವಿವರಿಸುತ್ತಾರೆ. “ತುಳುನಾಡಿನ ದೈವಗಳ (ಭೂತಗಳ) ಆಚರಣೆಗಳು ಸಾಮಾನ್ಯವಾಗಿ ಹಿಂದೂ ಸಮುದಾಯಗಳಿಗೆ ಮಾತ್ರ ಸೀಮಿತವಾದ ನಿಯಮ ಮತ್ತು ಕಟ್ಟಳೆಗಳನ್ನು ಹೊಂದಿವೆ.  ಆದರೆ ಕಾಲಾನಂತರದಲ್ಲಿ ಭೂತಾರಾಧನೆಯಲ್ಲಿ ಸಿಡಿಮದ್ದು ಸಿಡಿಸುವ, ಕೋಲಕ್ಕೆ ಹಿಮ್ಮೇಳ ಸಂಗೀತವನ್ನು ನುಡಿಸುವ ಮೂಲಕ ಮುಸ್ಲಿಂ ಸಮುದಾಯವೂ ಈ ಆಚರಣೆಗಳಲ್ಲಿ ಪಾಲನ್ನು ಪಡೆದುಕೊಂಡಿರುವುದು ಕುತೂಹಲಕಾರಿಯಾಗಿದೆ.

"ಸಿಡಿಮದ್ದುಗಳನ್ನು ಬಳಸುವುದರಿಂದ ಭೂತಕೋಲವು ವೈಭವ ಮತ್ತು ಮೆರುಗನ್ನು ಪಡೆದುಕೊಳ್ಳುತ್ತದೆ" ಎಂದು ಉಡುಪಿಯ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ತುಳು ಸಂಸ್ಕೃತಿ ವಿದ್ವಾಂಸರಾದ ಪ್ರೊಫೆಸರ್ ಶೆಟ್ಟಿ ಹೇಳುತ್ತಾರೆ.

ಅಮೀರ್ ಮತ್ತು ಮುಸ್ತಾಕ್ ತಮ್ಮ ಸೌಹಾರ್ದತೆಯ ಪರಂಪರೆಯನ್ನು ಮುಂದುವರಿಸುತ್ತಾ ಇಡೀ ಆಕಾಶವನ್ನು ಸಿಡಿಮದ್ದು ಪ್ರದರ್ಶನದ ಮೂಲಕ ಬೆಳಗಿಸುವುದನ್ನು ನೋಡಲು ಈ ಚಲನಚಿತ್ರವನ್ನು ನೀವು ವೀಕ್ಷಿಸಿ

ಈ ಕಥೆಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂ.ಎಂ.ಎಫ್ ) ನ ಫೆಲೋಶಿಪ್ ಬೆಂಬಲದೊಂದಿಗೆ ನಿರ್ಮಾಣ ಮಾಡಲಾಗಿದೆ.

ಕವರ್‌ ಫೋಟೋ: ಸಿದ್ಧಿತಾ ಸೊನಾವಣೆ

ಅನುವಾದ: ಚರಣ್‌ ಐವರ್ನಾಡು

Faisal Ahmed

ಫೈಸಲ್ ಅಹ್ಮದ್ ಸಾಕ್ಷ್ಯಚಿತ್ರ ನಿರ್ಮಾಪಕರಾಗಿದ್ದು, ಪ್ರಸ್ತುತ ಕರಾವಳಿ ಕರ್ನಾಟಕದ ಮಲ್ಪೆಯಲ್ಲಿ ನೆಲೆಸಿದ್ದಾರೆ. ಅವರು ಈ ಹಿಂದೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲಿ ಅವರು ತುಳುನಾಡಿನ ಜೀವಂತ ಸಂಸ್ಕೃತಿಗಳ ಬಗ್ಗೆ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು ಎಂಎಂಎಫ್-ಪರಿ ಫೆಲೋ (2022-23).

Other stories by Faisal Ahmed
Text Editor : Siddhita Sonavane

ಸಿದ್ಧಿತಾ ಸೊನಾವಣೆ ಪತ್ರಕರ್ತರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ವಿಷಯ ಸಂಪಾದಕರಾಗಿ ಮಾಡುತ್ತಿದ್ದಾರೆ. ಅವರು 2022ರಲ್ಲಿ ಮುಂಬೈನ ಎಸ್ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಅದರ ಇಂಗ್ಲಿಷ್ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

Other stories by Siddhita Sonavane
Translator : Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Charan Aivarnad