"ತಲೆಗೆ ಬಣ್ಣ ಹಚ್ಚುವುದರಿಂದ ಕೂದಲು ಇನ್ನಷ್ಟು ಬಿಳಿಯಾಗುತ್ತದೆ" ಎಂದು ಪುಷ್ಪವಲ್ಲಿ ಘೋಷಿಸಿದರು. "ಈ ರೀತಿ" ಎನ್ನುತ್ತಾ ಅವರು ಬಿಳಿ-ನೀಲಿ ಚೌಕಗಳ ನೆಲದ ಟೈಲ್ಸ್ ತೋರಿಸುತ್ತಾ ಹೇಳಿದರು. ಅರವತ್ತರ ಪ್ರಾಯದ ಅವರ ತಲೆಯ ಕೂದಲು ಎಲ್ಲೋ ಕೆಲವಷ್ಟೇ ಬಿಳಿಯಾಗಿದ್ದವು. ನಾನು ಬಳಸುವುದು "ತೆಂಗಿನ ಎಣ್ಣೆ, ಲೈಫ್ ಬಾಯ್ ಸೋಪ್ ಓನ್ಲಿ" 'ಓನ್ಲಿ' ಎಂಬ ಪದವನ್ನು ಇಂಗ್ಲಿಷಿನಲ್ಲಿ ಒತ್ತಿ ಹೇಳಿದರು.

ಆ ಮಧ್ಯಾಹ್ನ ಅವರು ಟೈಲ್ಸ್‌ ಹಾಕಿದ ನೆಲದ ಮೇಲೆ ಕುಳಿತು ಭೂತ ಮತ್ತು ವರ್ತಮಾನವನ್ನು ನೆನಪಿಸಿಕೊಂಡರು. "ನನ್ನ ತಾಯಿಯ ಕಾಲದಲ್ಲಿ" ಅವರು ಹೇಳಲು ಪ್ರಾರಂಭಿಸಿದರು. "ನನ್ನ ತಾಯಿಯ ಅತ್ತೆ ತಾಯಿಗೆ ತೆಂಗಿನಕಾಯಿ ತುಂಡನ್ನು ನೀಡುತ್ತಿದ್ದರು. ನನ್ನ ತಾಯಿ ತುಂಡನ್ನು ಅಗಿದು ಅದನ್ನು ತಲೆಗೆ ತಿಕ್ಕಿಕೊಳ್ಳುತ್ತಿದ್ದರು. ಅದು ಅವರ ಪಾಲಿನ ತೆಂಗಿನ ಎಣ್ಣೆ."

ಪಕ್ಕದಲ್ಲಿ ಕುಳಿತಿದ್ದ ವಸಂತಿ ಪಿಳ್ಳೈ ಪುಷ್ಪಾ ವೇಣಿಯವರ ಮಾತನ್ನು ಒಪ್ಪಿದರು. ಇಬ್ಬರು ಮಹಿಳೆಯರು (ದೂರದ ಸಂಬಂಧಿಕರು ಸಹ) ಧಾರಾವಿಯ ಒಂದೇ ಓಣಿಯಲ್ಲಿ ಒಂದೇ ಕೋಣೆಯ ಮನೆಗಳಲ್ಲಿ ಸುಮಾರು 50 ವರ್ಷಗಳನ್ನು ಕಳೆದಿದ್ದಾರೆ. ಅವರ ಧ್ವನಿಯಲ್ಲಿ ಸಂತೃಪ್ತಿಯ ಅಪರೂಪದ ಅಭಿವ್ಯಕ್ತಿ ಅವರ ಜೀವನದ ಬಗ್ಗೆ ಹೇಳಿತು. ಇಬ್ಬರೂ ದಶಕಗಳಿಂದ ಸ್ನೇಹಿತರು. ಇಬ್ಬರಲ್ಲೂ ಬದಲಾದ ಪ್ರಪಂಚದ ನೆನಪುಗಳಿವೆ.

ಪುಷ್ಪಾ ವೇಣಿ 14-15ನೇ ವಯಸ್ಸಿನಲ್ಲಿ ಹೊಸ ಮದುಮಗಳಾಗಿ ಧಾರಾವಿಗೆ ಕಾಲಿಟ್ಟರು. ಮದುಮಗ ಧಾರಾವಿಯಲ್ಲಿ ವಾಸಿಸುತ್ತಿದ್ದ. ಅಲ್ಲಿನ ಖಾಲಿ ಜಾಗದಲ್ಲಿ ತಯಾರಿಸಲಾಗಿದ್ದ ಮಂಟಪದಲ್ಲಿ ಮದುವೆ ನಡೆಯಿತು. ಆಗ ಮದುಮಗನಿಗೆ 40 ವರ್ಷ ವಯಸ್ಸಾಗಿತ್ತು" ಎಂದು ಪುಷ್ಪವೇಣಿ ಹೇಳಿದರು. ಅವನು ಅಷ್ಟು ದೊಡ್ಡವರೇ? "ಹೌದು. ಆದರೂ ಆ ದಿನಗಳಲ್ಲಿ ಯಾರೂ ಈ ಬಗ್ಗೆಯೆಲ್ಲ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮದುವೆಯ ನಂತರ ಅನ್ನ, ಸಾರನ್ನು ಮದುವೆಯ ಊಟವಾಗಿ ಬಡಿಸಲಾಯಿತು. ತರಕಾರಿ ಊಟ" ಎಂದು ಅವರು ನೆನಪಿಸಿಕೊಂಡರು.

ಮದುವೆಯ ನಂತರ ಆಕೆ ಪತಿ ಚಿನ್ನಸಾಮಿ ಕೋಣೆಗೆ ತೆರಳಿದರು. ಚಿನ್ನಸಾಮಿ ಈ ಕೋಣೆಯನ್ನು 500 ರೂಪಾಯಿಗೆ ಖರೀದಿಸಿದ್ದರು. ಆ ದಿನಗಳಲ್ಲಿ ಇದು ಬಹಳ ದೊಡ್ಡ ಮೊತ್ತವಾಗಿತ್ತು. ಅವರು ಹತ್ತಿರದ ವರ್ಕ್‌ಶಾಪ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಶಸ್ತ್ರಚಿಕಿತ್ಸೆ ಇತ್ಯಾದಿಗಳಲ್ಲಿ ಬಳಸುವ ದಾರ ಮತ್ತು ವಯರುಗಳನ್ನು ತಯಾರಿಸಲಾಗುತ್ತಿತ್ತು. ಆರಂಭದಲ್ಲಿದ್ದ 60 ರೂಪಾಯಿ ಸಂಬಳವು 1990ರ ದಶಕದಲ್ಲಿ ಅವರು ನಿವೃತ್ತರಾಗುವ ಹೊತ್ತಿಗೆ 25,000ಕ್ಕೆ ಏರಿತ್ತು.

Pushpaveni (left) came to Dharavi as a bride at the age of 14-15, Vasanti arrived here when she got married at 20
PHOTO • Sharmila Joshi

ಪುಷ್ಪವೇಣಿ (ಎಡ) 14-15 ನೇ ವಯಸ್ಸಿನಲ್ಲಿ ಮದುಮಗಳಾ ಗಿ ಧಾರಾವಿಗೆ ಬಂದರು. ವಸಂತಿ 20 ನೇ ವಯಸ್ಸಿನಲ್ಲಿ ಮದುವೆ ನಂತರ ಬಂದರು

ಮುಂದಿನ 50 ವರ್ಷಗಳವರೆಗೆ 200 ಚದರ ಅಡಿ ವಿಸ್ತೀರ್ಣದ ಕೋಣೆಯಲ್ಲೇ ಸಂಸಾರ ನಡೆದಿತ್ತು. (ಕುಟುಂಬವು ಬೆಳೆದಂತೆ, ಕೋಣೆಯಲ್ಲಿ ಒಂದು ಅಟ್ಟಣಿಗೆಯನ್ನು ಮಾಡಿಸಲಾಯಿತು, ಒಂದು ಸಮಯದಲ್ಲಿ ಮನೆಯಲ್ಲಿ ಒಂಬತ್ತು ಜನರು ವಾಸಿಸುತ್ತಿದ್ದರು ಎಂಬುದನ್ನು ಹೊರತುಪಡಿಸಿ ಬೇರೇನೂ ಇಲ್ಲಿ ಬದಲಾಗಲಿಲ್ಲ.) ಇದು ಟಿ-ಜಂಕ್ಷನ್ನಿಂದ ಧಾರಾವಿಗೆ ಹೋಗುವ ಇಕ್ಕಟ್ಟಿನ ಗಲ್ಲಿಯಲ್ಲಿರುವ 200 ಚದರ ಅಡಿ ಕೋಣೆಯಾಗಿದ್ದು, ನಿರಂತರ ಟೆಂಪೊ ವ್ಯಾನುಗಳು ಮತ್ತು ಆಟೋರಿಕ್ಷಾಗಳು ಈ ಗಲ್ಲಿಯನ್ನು ಹಾದುಹೋಗುತ್ತವೆ. "ಆ ಮನೆಯಲ್ಲಿದ್ದಾಗ ನನ್ನ ಮೂವರು ಮಕ್ಕಳು ಜನಿಸಿದರು. ಅವರ ಮದುವೆಯಾಯಿಯಿ. ಅವರಿಗೆ ಮಕ್ಕಳು ಮತ್ತು ಮೊಮ್ಮಕ್ಕಳು ಇದ್ದರು. ನಾವೆಲ್ಲರೂ ಒಂದೇ ಕೋಣೆಯಲ್ಲಿದ್ದೆವು."

ಪ್ರಸ್ತುತ ಅರವತ್ತರ ಪ್ರಾಯದ ವಸಂತಿಯವರೂ ಮದುವೆಯ ನಂತರವೇ ಈ ಬೀದಿಗೆ ಬಂದರು. ಆಗ ಅವರಿಗೆ 20 ವರ್ಷ ವಯಸ್ಸಾಗಿತ್ತು. ವಸಂತಿಯವರ ಅತ್ತೆ ಮತ್ತು ಪುಷ್ಪಾವೇಣಿಯವರ ಪತಿ ಒಂದೇ ತಾಯಿಯ ಮಕ್ಕಳು. ಹೀಗಾಗಿ ಅವರಿಗೆ ಮೊದಲಿನಿಂದಲೂ ಧಾರಾವಿಯಲ್ಲಿ ಸಂಬಂಧಿಕರು ಇದ್ದರು. "ಅಂದಿನಿಂದ ನಾನು ಇದೇ ಗಲ್ಲಿಯಲ್ಲಿ ಬದುಕು ಸಾಗಿಸಿದ್ದೇನೆ” ಎಂದು ವಸಂತಿ ಹೇಳಿದರು.

ಇಬ್ಬರೂ 1970ರ ದಶಕದಲ್ಲಿ ಧಾರಾವಿಗೆ ಬಂದರು. "ಆಗ ಈ ಸ್ಥಳ ಬೇರೆಯೇ ರೀತಿಯಲ್ಲಿತ್ತು. ಕೋಣೆಗಳು ತುಂಬಾ ಚಿಕ್ಕದಾಗಿದ್ದವು ಆದರೆ ಪರಸ್ಪರ ದೂರದಲ್ಲಿದ್ದವು. ನಡುವೆ ಸಾಕಷ್ಟು ಖಾಲಿ ಜಾಗಗಳಿದ್ದವು" ಎಂದು ಪುಷ್ಪವೇಣಿ ಹೇಳಿದರು. ಅವರ ಮನೆ ಮೊದಲ ಮಹಡಿಯಲ್ಲಿತ್ತು. ಅದೊಂದು ಸಣ್ಣ ಕೋಣೆಯಾಗಿತ್ತು. ಅದೇ ಬೀದಿಯಿಂದ ಸ್ವಲ್ಪ ದೂರದಲ್ಲಿ ಸಾಮೂಹಿಕ ಶೌಚಾಲಯವಿತ್ತು." ಈಗ ಅನೇಕ ಕಟ್ಟಡಗಳು ತಲೆ ಎತ್ತಿ ನಿಂತಿವೆ. ನಡೆಯುವುದಕ್ಕೂ ಜಾಗ ಇಲ್ಲ" ಎಂದು ಕೈಗಳನ್ನು ಹತ್ತಿರ ತಂದು ದಾರಿ ಎಷ್ಟು ಇಕ್ಕಟ್ಟಾಗಿದೆಯೆನ್ನುವುದನ್ನು ತೋರಿಸಿದರು. (ಸಮಯ ಕಳೆದಂತೆ, ಉತ್ತರ-ಮಧ್ಯ ಮುಂಬೈನ ಧಾರಾವಿ ಎಷ್ಟು ಬೆಳೆದಿದೆಯೆಂದರೆ, ಇದು ಈಗ ಸುಮಾರು ಒಂದು ಮಿಲಿಯನ್ ಜನಸಂಖ್ಯೆಗೆ ನೆಲೆಯಾಗಿದೆ, ಕೊಳೆಗೇರಿಗಳು, ಕಟ್ಟಡಗಳು,ವರ್ಕ್‌ಶಾಪ್‌ಗಳು ಮತ್ತು ಅಂಗಡಿಗಳ ಈ ಪ್ರದೇಶ ಸುಮಾರು ಒಂದು ಚದರ ಮೈಲಿ ಪ್ರದೇಶವನ್ನು ಒಳಗೊಂಡಿದೆ.)

"ಇಡೀ ಸ್ಥಳವು ಖಾಡಿ [ಕೊಲ್ಲಿ], ಜೌಗು ಅರಣ್ಯದಂತಿತ್ತು" ಎಂದು ವಸಂತಿ ನೆನಪಿಸಿಕೊಳ್ಳುತ್ತಾರೆ. ಮಾಹಿಮ್ ಕೊಲ್ಲಿಯ ನೀರು ಪೊಲೀಸ್ ಠಾಣೆಯವರೆಗೆ (ಟಿ-ಜಂಕ್ಷನ್) ಬರುತ್ತಿತ್ತು. ಆ ಹೊಂಡಗಳಿಗೆಲ್ಲ ಮಣ್ಣು ತುಂಬಿಸಿ ತುಂಬಿಸಿ ಕೋಣೆಗಳನ್ನು ನಿರ್ಮಿಸಲಾಯಿತು. ಈಗ ಬಹುಮಹಡಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಇರುವ ಸ್ಥಳವು ಹಿಂದೆ ಕಾಂಡ್ಲಾ ಗಿಡಗಳಿಂದ ತುಂಬಿದ್ದ ಜೌಗು ಪ್ರದೇಶವಾಗಿತ್ತು" ಎಂದು ಅವರು ನೆನಪಿಸಿಕೊಂಡರು, "ನಾವು ಅಲ್ಲಿಗೆ ಹೋಗಲು ಹೆದರುತ್ತಿದ್ದೆವು. ಮಹಿಳೆಯರು ಕಲಾ ನಗರ ಬಸ್ ನಿಲ್ದಾಣಕ್ಕೆ ಒಟ್ಟಿಗೆ ಸೇರಿ ಹೋಗುತ್ತಿದ್ದರು. ಅಲ್ಲಿ ಒಂದು ಪೈಪ್ ಲೈನ್ ಇತ್ತು. ಅಲ್ಲಿಯೇ ನಾವು ನಮ್ಮ ಬಟ್ಟೆಗಳನ್ನು ಒಗೆಯುತ್ತಿದ್ದೆವು. ಈಗ ಎಲ್ಲವೂ ಮಣ್ಣಿನಡಿ ಮುಚ್ಚಿಹೋಗಿದೆ."

ಅವರು ಚಿಕ್ಕವರಿದ್ದಾಗ, ವಸ್ತುಗಳನ್ನು ಪೈಸೆಗಳಲ್ಲಿ ಖರೀದಿಸಲಾಗುತ್ತಿತ್ತು. ಪುಷ್ಪವೇಣಿ ಪೂನಾದಲ್ಲಿನ ತನ್ನ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ. ಅಲ್ಲಿ ಅವರ ತಂದೆ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು (ಅವರ ತಾಯಿಗೀಗ 80 ವರ್ಷ ಮತ್ತು ವರು ಈಗಲೂ ಪೂನಾದಲ್ಲಿದ್ದಾರೆ). "ಒಂದು ಪೈಸೆಗೆ ಒಂದು ಮುಷ್ಟಿ ಸಿಗುತ್ತಿತ್ತು" ಅವರು ಹೇಳುತ್ತಿದ್ದ ಬೆಲೆಗಳಲ್ಲಿ ನಿಖರತೆ ಇಲ್ಲದೆ ಹೋದರೂ ಕಳೆದ ಕಾಲದ ನೆನಪು ಅದರಲ್ಲಿತ್ತು. ಅಷ್ಟು ಕಡಿಮೆ ಬೆಲೆಯಿದ್ದರೂ ನಮಗೆ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ಒಳ್ಳೆಯ ಹತ್ತಿ ಸೀರೆಗೆ 10 ರೂಪಾಯಿ ಬೆಲೆಯಿತ್ತು. ಅಪ್ಪನ ಮೊದಲ ಸಂಬಳ 10 ರೂಪಾಯಿ. ಅಷ್ಟು ಕಡಿಮೆ ಸಂಬಳದಲ್ಲೇ ಅವರು ಘೋಡಾ ಗಾಡಿ (ಜಟಕಾ ಗಾಡಿ) ತುಂಬಾ ಸಾಮಾಗ್ರಿಗಳನ್ನು ತರುತ್ತಿದ್ದರು.

'I’d not left this galli [lane] and gone to live anywhere else' until October this year, says Vasanti
PHOTO • Sharmila Joshi

ವಸಂತಿ ಹೇಳುತ್ತಾರೆ, ಅಂದಿನಿಂದ ಈ ವರ್ಷದ ಅಕ್ಟೋಬರ್ ತನಕ ನಾನು ಈ ಬೀದಿಯಲ್ಲಿ ಯೇ ವಾಸಿಸುತ್ತಿದ್ದೆ; ಬೇರೆಲ್ಲೂ ವಾಸಕ್ಕೆ ಹೋಗಿರಲಿ ಲ್ಲ

"ಬಹಳ ಕಡಿಮೆ ಹಣದಿಂದ, ನಾವು ಕುಟುಂಬವನ್ನು ನಿರ್ವಹಿಸುತ್ತಿದ್ದೆವು. ದಿನಕ್ಕೆ ಒಂದು ರೂಪಾಯಿ ಸಾಕಾಗುತ್ತಿತ್ತು. ಇದರಲ್ಲಿ ತರಕಾರಿಗಳಿಗೆ 20 ಪೈಸೆ, ಗೋಧಿಗೆ 10 ಪೈಸೆ ಮತ್ತು ಅಕ್ಕಿಗೆ 5 ಪೈಸೆ ಖರ್ಚು ಮಾಡಲಾಗುತ್ತಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ನನ್ನ ಅತ್ತೆ ಆ ಒಂದು ರೂಪಾಯಿಯಲ್ಲೂ 10 ಪೈಸೆ ಉಳಿಸಲು ಪ್ರಯತ್ನಿಸಿ ಎನ್ನುತ್ತಿದ್ದರು".

ಧಾರಾವಿಗೆ ಬಂದ ಹೊಸದರಲ್ಲಿ, ಈ ಮೊದಲು ಹೊಗಳಿದ್ದ ಅವರ ನೆಚ್ಚಿನ ಲೈಫ್ ಬಾಯ್ ಸೋಪು 30 ಪೈಸೆಗೆ ಸಿಗುತ್ತಿತ್ತು. "ಅದು ತುಂಬಾ ದೊಡ್ಡದಾಗಿತ್ತು. ಕೈ ಹಿಡಿಯಲು ಆಗುತ್ತಿರಲಿಲ್ಲ. ಕೆಲವೊಮ್ಮೆ 15 ಪೈಸೆ ಕೊಟ್ಟು ಅರ್ಧ ಸಾಬೂನು ಖರೀದಿಸುತ್ತಿದ್ದೆವು" ಎನ್ನುತ್ತಾರೆ ವಸಂತಿ.

1980ರ ಹೊತ್ತಿಗೆ, ಅವರು ದಿನಕ್ಕೆ 15 ರೂಪಾಯಿ ಸಂಪಾದಿಸುತ್ತಿರು. "ಕೆಲಸ ಇರುವ ಕಡೆ ಓಡುತ್ತಿದ್ದೆ" ಎಂದು ಅವರು ಹೇಳುತ್ತಾರೆ. 17 ವರ್ಷದವರಿದ್ದಾಗ ಅವರು ಸೇಲಂನಿಂದ ಮುಂಬೈಗೆ ಬಂದರು. ಆ ಸಮಯದಲ್ಲಿ ಅವರು ಸೋಪ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. "ನಾನು ಅಲ್ಲಿ ಸೋಪುಗಳನ್ನು ಪ್ಯಾಕ್ ಮಾಡುವ ಕೆಲಸ ಮಾಡುತ್ತಿದ್ದೆ." ನಂತರ ಮಜೀದ್ ಬಂದರ್ ಬಳಿಯ ಮೀನು ಪ್ಯಾಕಿಂಗ್ ಮಾಡುವ ಸ್ಥಳದಲ್ಲಿ ಕೆಲಸಕ್ಕೆ ಸೇರಿದರು. ಆ ಬಳಿಕ ದಿನಕ್ಕೆ ಆರು ಮನೆಗಳಲ್ಲಿ ಸಹಾಯಕಿಯಾಗಿ ಹಲವು ವರ್ಷಗಳ ಕಾಲ ದುಡಿದರು.

ವಸಂತಿಯವರ ತಂದೆ ತಮಿಳುನಾಡಿನಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ವಾಸಂತಿ 3 ವರ್ಷದವರಿದ್ದಾಗ ತಾಯಿ ತೀರಿಕೊಂಡರು. ಅವರು 10ನೇ ತರಗತಿವರೆಗೆ ಓದಿದ್ದಾರೆ. ಅವರಿಗೆ ಉತ್ತಮ ಜ್ಞಾಪಕ ಶಕ್ತಿಯಿದೆ. ಆ ಹಳೆಯ ದಿನಗಳನ್ನು "ಅಸ್ಲಿ ಮಾಲ್" ಎಂದು ಕರೆಯುತ್ತಾರೆ. "ನಾವು ನೇರವಾಗಿ ಗದ್ದೆಯಿಂದ ತಂದ ಕಬ್ಬು ತಿನ್ನುತ್ತಿದ್ದೆವಯ, ಗದ್ದೆಯಿಂದ ನೇರವಾಗಿ ಟೊಮೆಟೊ, ಬೀನ್ಸ್, ಹರಿವೆ ಸೊಪ್ಪುಗಳನ್ನು ತರುತ್ತಿದ್ದೆವು. ಹುಣಸೆ ಹಣ್ಣಿಗೆ ಉಪ್ಪು ಮತ್ತು ಮೆಣಸು ಸೇರಿಸಿ ತಿನ್ನುತ್ತಿದ್ದರು" ಇವುಗಳೇ ತನ್ನ ನೆನಪಿನ ಶಕ್ತಿಯ ರಹಸ್ಯ ಎಂದು ಅವರು ಘೋಷಿಸಿದರು. ಪುಷ್ಪವೇಣಿ ಹೇಳುವಂತೆ ಕಪ್ಪು ಕೂದಲಿಗೆ ತೆಂಗಿನೆಣ್ಣೆ ಮತ್ತು ಲೈಫ್ ಬಾಯ್ ಸೋಪ್ ಬಳಸಬೇಕು.

ವಸಂತಿ ತಾನು ಕೆಲಸ ಮಾಡುವ ಸೋಪ್ ಫ್ಯಾಕ್ಟರಿಯಲ್ಲಿ ಒಬ್ಬ ಹುಡುಗನನ್ನು ಭೇಟಿಯಾದರು. ನಂತರ ಅವರೇ ವಸಂತಿಯವರ ಪತಿಯಾದರು. "ನಮ್ಮದು ಮೊದಲು ಪ್ರೇಮ, ನಂತರ ಅರೇಂಜ್ಡ್ ಮ್ಯಾರೇಜ್" ಎಂದು ವಸಂತಿ ಮುಗುಳ್ನಕ್ಕರು. "ಚಿಕ್ಕ ವಯಸ್ಸಿನಲ್ಲಿ ಯಾರು ಪ್ರೀತಿಯಲ್ಲಿ ಬೀಳುವುದಿಲ್ಲ? ನಂತರ ಅಗತ್ಯವಿರುವ ಮಾಹಿತಿಗಳನ್ನು ನನ್ನ ಚಿಕ್ಕಮ್ಮ ಕಲೆಹಾಕಿದರು. ಅದರ ನಂತರ 1979ರಲ್ಲಿ ಮದುವೆಯನ್ನು ʼವ್ಯವಸ್ಥೆʼ ಮಾಡಲಾಯಿತು.

The lane leading to Pushpaveni's room, wider than many in Dharavi.
PHOTO • Sharmila Joshi
At the end of this lane is the T-Junction
PHOTO • Sharmila Joshi

ಎಡ: ಪುಷ್ಪ ವೇಣಿಯವರ ಮನೆಗೆ ಹೋಗುವ ಗಲ್ಲಿ. ಧಾರಾವಿಯ ಹೆಚ್ಚಿನ ಬೀದಿಗಳಿಗಿಂತ ಇದು ವಿಶಾಲವಾಗಿದೆ. ಬಲ: ಈ ಲೇನ್‌ನ ಕೊನೆಯಲ್ಲಿ ಟಿ-ಜಂಕ್ಷನ್ ಇದೆ

ಅವರು ತನ್ನ ಗಂಡನ ಹೆಸರನ್ನು ಹೇಳುವುದಿಲ್ಲ. ಪುಷ್ಪವೇಣಿಯವರ ಬಳಿ ತಮ್ಮ ಗಂಡನ ಹೆಸರು ಹೇಳುವಂತೆ ಕೇಳಿಕೊಂಡರು. ಕೊನೆಗೆ ಅವರೇ ತನ್ನ ಗಂಡನ ಹೆಸರಿನ ಒಂದೊಂದೇ ಅಕ್ಷರಗಳನ್ನು ಹೇಳತೊಡಗಿದರು: ಆಸೈ ತಂಬಿ. "ಅವರು ಬಹಳ ಒಳ್ಳೆಯವರಾಗಿದ್ದರು" ಮೌನಿ ಮತ್ತು ಮೃದು ವ್ಯಕ್ತಿತ್ವ ಅವರದು. "ನಾವು ಬಹಳ ಸುಂದರ ಬದುಕನ್ನು ಅನುಭವಿಸಿದ್ದೆವು. ನನಗೆ ಬದುಕಿನಲ್ಲಿ ಯಾವ ಕೊರತೆಯೂ ಕಾಡಿಲ್ಲ. ನನ್ನ ಗಂಡನಷ್ಟೇ ಅಲ್ಲ ಅತ್ತೆ ಸಹ ಒಳ್ಳೆಯವರಾಗಿದ್ದರು. ಅತ್ತೆಯ ಮನೆಯಲ್ಲಿ [ಚೆನ್ನೈ] ಸಹ ನನಗೆ ಯಾವುದೇ ಕೊರತೆ ಕಾಡಿರಲಿಲ್ಲ. ನನಗೆ ಬೇಕೆನಿಸಿದ್ದೆಲ್ಲ ಸಿಗುತ್ತಿತ್ತು.

ಆಸೈ ತಂಬಿ 2009ರಲ್ಲಿ ತೀರಿಕೊಂಡರು. "ಅವರು ಕುಡಿಯುತ್ತಿದ್ದರು. ಉಸಿರಾಟದ ಸಮಸ್ಯೆ ಇತ್ತು" ಎಂದು ವಸಂತಿ ನೆನಪಿಸಿಕೊಳ್ಳುತ್ತಾರೆ. "ಆದರೆ ನಾವು ಬಹಳ ನೆಮ್ಮದಿಯ ಬದುಕನ್ನು ಬದುಕಿದ್ದೆವು. ನಾನು ಹತ್ತಿರ ಹತ್ತಿರ 35 ವರ್ಷಗಳ ಕಾಲ ಅವರೊಂದಿಗೆ ಬದುಕು ನಡೆಸಿದೆ. ನನಗೆ ಈಗಲೂ ಕಣ್ಣೀರು ಹಾಕದೆ ಅವರನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ." ಇಷ್ಟು ಹೇಳುವಷ್ಟರಲ್ಲಿ ಅವರ ಕಣ್ಣು ಹನಿಗೂಡಿತ್ತು.

ಅವರಿಗಿದ್ದ ಒಂದು ಗಂಡು ಮಗುವೂ ಬೇಗನೆ, ಎಂದರೆ ಹುಟ್ಟಿದ ತಕ್ಷಣ ತೀರಿಕೊಂಡಿತು. "ನಾನು ಆಸ್ಪತ್ರೆಯಿಂದ ಮನೆಗೆ ಮರಳುವ ಮೊದಲೇ" ಎಂದು ಅವರು ಹೇಳುತ್ತಾರೆ. "ಆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಪುಷ್ಪವೇಣಿಯ ಮಕ್ಕಳನ್ನೇ ನನ್ನ ಮಕ್ಕಳು ಎಂದುಕೊಂಡು ಬದುಕುತ್ತಿದ್ದೇನೆ. ಈಗ ಅವರನ್ನು ಬಿಟ್ಟು ನಲಸೋಪಾರದಲ್ಲಿ ಬದುಕುವುದನ್ನು ನೆನೆಸಿಕೊಂಡರೆ ಜೀವ ಫಡ್ ಫಡ್ ಎನ್ನುತ್ತದೆ."

ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ವಸಂತಿ ತಮ್ಮ ಕೋಣೆಯನ್ನು ಮಾರಿದ್ದರೆ, ಪುಷ್ಪವೇಣಿ ತಮ್ಮ ಕೋಣೆಯನ್ನು ಮೇ ತಿಂಗಳಲ್ಲಿ ಮಾರಿದರು. ಮುಂಬಯಿಯ ದುಬಾರಿ ಭೂಮಿ ಬೆಲೆಯಿಂದಾಗಿ ಇಬ್ಬರಿಗೂ ಕೆಲವು ಲಕ್ಷ ದೊರಕಿತು. ಆದರೆ ನಗರದ ವಿಪರೀತ ಖರ್ಚಿನ ಮುಂದೆ ಆ ನೊತ್ತವೂ ಮಾಹಿಮ್ ಹಳ್ಳದ ಹನಿಯಂತೆಯೇ.

ಈ ಇಬ್ಬರು ಮಹಿಳೆಯರು ಧಾರಾವಿಯ ಹಲವಾರು ಉಡುಪು ತಯಾರಿಕಾ ಕೇಂದ್ರಗಳಿಂದ ಕೆಲಸವನ್ನು ಪಡೆಯುತ್ತಾರೆ - ಜೀನ್ಸ್ ಪ್ಯಾಂಟ್ ಹೊಲಿದ ನಂತರ ಅದರಲ್ಲಿ ಉಳಿದ ದಾರಗಳನ್ನು ಕತ್ತರಿಸುವ ಕೆಲಸ. ಪ್ರತಿ ಪ್ಯಾಂಟ್ ಗೆ 1.50 ರೂ. ಸಿಗುತ್ತದೆ. ಇಬ್ಬರೂ 2,3 ಗಂಟೆಗಳ ಕಾಲ ಒಟ್ಟಿಗೆ ಕೆಲಸ ಮಾಡಿದರೆ, ಅವರು ದಿನಕ್ಕೆ 50-600 ರೂ.ಗಳನ್ನು ಗಳಿಸುತ್ತಾರೆ. ಕೆಲವೊಮ್ಮೆ ಶೆರ್ವಾನಿಗಳಿಗೆ ಹುಕ್ ಹೊಲಿಯುವ ಕೆಲಸವನ್ನು ಪಡೆಯುತ್ತಾರೆ. ಎಲ್ಲಾ ಬಟ್ಟೆಗಳನ್ನು ಬಿಳಿ ನೀಲಿ ಟೈಲ್ ನೆಲದ ಮೇಲೆ ಹಾಕಲಾಗುತ್ತದೆ ಮತ್ತು ಮಧ್ಯಾಹ್ನದ ಸಮಯದಲ್ಲಿ ಕೆಲಸ ಮಾಡಲಾಗುತ್ತದೆ.

ಈ ಇಬ್ಬರು ಮಹಿಳೆಯರು ಧಾರಾವಿಯ ಹಲವಾರು ಉಡುಪು ತಯಾರಿಕಾ ಕೇಂದ್ರಗಳಿಂದ ಕೆಲಸವನ್ನು ಪಡೆಯುತ್ತಾರೆ - ಜೀನ್ಸ್ ಪ್ಯಾಂಟ್ ಹೊಲಿದ ನಂತರ ಅದರಲ್ಲಿ ಉಳಿದ ದಾರಗಳನ್ನು ಕತ್ತರಿಸುವ ಕೆಲಸ. ಪ್ರತಿ ಪ್ಯಾಂಟ್ ಗೆ 1.50 ರೂ. ಸಿಗುತ್ತದೆ

Both women take on piece-rate work from some of the many garments’ workshops in the huge manufacturing hub that is Dharavi – earning Rs. 1.50 per piece cutting threads from the loops and legs of black jeans
PHOTO • Sharmila Joshi

ಈ ಇಬ್ಬರು ಮಹಿಳೆಯರು ಧಾರಾವಿಯ ಹಲವಾರು ಉಡುಪು ತಯಾರಿಕಾ ಕೇಂದ್ರಗಳಿಂದ ಕೆಲಸವನ್ನು ಪಡೆಯುತ್ತಾರೆ - ಜೀನ್ಸ್ ಪ್ಯಾಂಟ್ ಹೊಲಿದ ನಂತರ ಅದರಲ್ಲಿ ಉಳಿದ ದಾರಗಳನ್ನು ಕತ್ತರಿಸುವ ಕೆಲಸ. ಪ್ರತಿ ಪ್ಯಾಂಟ್ ಗೆ 1.50 ರೂ. ಸಿಗುತ್ತದೆ

ತನ್ನ ಮನೆ ಮಾರಾಟದಿಂದ ಬಂದ ಹಣದಿಂದ ಪುಷ್ಪವೇಣು ಪಗಡಿ ವಿಧಾನದಲ್ಲಿ ಎರಡು ಕೋಣೆಗಳ ಮನೆಯನ್ನು ತೆಗೆದುಕೊಂಡರು (ಅತ್ಯಂತ ಕಡಿಮೆ ಬಾಡಿಗೆಯಲ್ಲಿ ಮನೆಯಲ್ಲಿ ಉಳಿಯುವ, ಮುಂಬೈ ಮತ್ತು ದೆಹಲಿಯಂತಹ ನಗರಗಳಲ್ಲಿನ ಸಹ ಮಾಲಿಕತ್ವದ ವಿಧಾನ). ಅವರು ತನ್ನ ಹಿರಿಯ ಮಗನೊಂದಿಗೆ ವಾಸಿಸುತ್ತಿದ್ದಾರೆ. ಆತ ಆಟೋರಿಕ್ಷಾ ಚಾಲಕ.ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ. (ಪುಷ್ಪವೇಣಿಯವರ ಪತಿ 1999ರಲ್ಲಿ ನಿಧನರಾದರು). ಈ ಹೊಸ ಮನೆಯ ಕೆಳಭಾಗದಲ್ಲಿ ಒಂದು ಕೋಣೆ ಮತ್ತು ಕೋಣೆಯ ಮೇಲ್ಭಾಗದಲ್ಲಿ ಒಂದು ಕೋಣೆ ಇದೆ. ಕೆಳಗಿನ ಕೋಣೆಯಲ್ಲಿ ಒಂದು ಸಣ್ಣ ಅಡುಗೆಮನೆ ಮನೆ ಮತ್ತು ಶೌಚಾಲಯವಿದೆ. ಇಂಹದ್ದೊಂದು ಮನೆ ಈ ಕುಟುಂಬದ ಮಟ್ಟಿಗೆ ದೊಡ್ಡ ಬೆಳವಣಿಗೆ.

ಅವರ ಇನ್ನೊಬ್ಬ ಮಗ ಧಾರಾವಿಯ ಇನ್ನೊಂದು ಬದಿಯಲ್ಲಿ ವಾಸಿಸುತ್ತಾರೆ. ಅವರಿಗೆ ಈಗ 42 ವರ್ಷ. ಅವರು ಮೊದಲೇ ಹೇಳಿದಂತೆ, ಅವರು "ಸ್ಪೋರ್ಟ್ಸ್" ಅಂದರೆ ರಫ್ತುಗಳಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ ಸಮಯದಲ್ಲಿ ಅವರು ಕೆಲಸ ಕಳೆದುಕೊಂಡರು. ನಂತರ ಅವರು ಮೆದುಳಿನ ರಕ್ತನಾಳದ ಶಸ್ತ್ರಚಿಕಿತ್ಸೆಗೆ ಒಳಗಾದರು. ಈಗ ಚೇತರಿಸಿಕೊಂಡು ಕೆಲಸ ಹುಡುಕುತ್ತಿದ್ದಾರೆ. ಪುಷ್ಪವೇಣಿ ಅವರ ಮಗಳಿಗೆ 51 ವರ್ಷ. ಅವಳಿಗೆ ನಾಲ್ಕು ಮೊಮ್ಮಕ್ಕಳಿದ್ದಾರೆ." ನಾನೀಗ ಮುತ್ತಜ್ಜಿ" ಎಂದು ಅವರು ಹೇಳುತ್ತಾರೆ.

ನನ್ನ ಇಬ್ಬರು ಮಕ್ಕಳು ಮತ್ತು ಸೊಸೆಯಂದಿರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನನಗೆ ಯಾವುದೇ ಒತ್ತಡವಿಲ್ಲ. ಯಾವುದೇ ಸಮಸ್ಯೆ ಇಲ್ಲ. ಆರಾಮವಾಗಿದ್ದೇನೆ."

ವಸಂತಿ ತನ್ನ ಹಣದಿಂದ "ನಲಸೋಪಾರ" ಎಂಬ ಸ್ಥಳದಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ಈ ಮನೆ ಧಾರಾವಿಯಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ಮನೆ ಕಟ್ಟುವವರೆಗೂ ಅವರು ಬಾಡಿಗೆ ಕೋಣೆಯಲ್ಲಿ ಇದ್ದಾರೆ. ಕೆಲವೊಮ್ಮೆ ಅವರು ಧಾರಾವಿಗೆ ಮತ್ತು ಪುಷ್ಪವೇಣಿಯವರ ಬಳಿಗೆ ಬಂದು ಹೋಗುತ್ತಾರೆ. "ಮನೆಯನ್ನು ನನ್ನ ಕೋಣೆ ಸಿದ್ಧವಾಗುತ್ತಿದೆ. ಹೀಗಾಗಿ ನಾನು ಮನೆಯ ಹತ್ತಿರದಲ್ಲೇ ಇರಬೇಕು. ಆಗ ನಾನು ನನಗೆ ಬೇಕಾದಂತೆ ಕೋಣೆ ರೂಪಿಸಿಕೊಳ್ಳಬಹುದು. ನನಗೆ ಕಡಪ ಕಲ್ಲಿನ ಶೆಲ್ಫ್‌ ಬೇಕು ನನ್ನ ವಸ್ತುಗಳನ್ನು ಇಟ್ಟುಕೊಳ್ಳಲು. ನಾನು ಅಲ್ಲಿ ಇರದೆ ಹೋದರೆ ಅವರು ಏಡಾ-ತೇಡಾ ರೀತಿಯಲ್ಲಿ ಕೆಲಸ ಮುಗಿಸಿಬಿಡುತ್ತಾರೆ.” ವಸಂತಿ ಹೇಳಿದರು.

ಮನೆಯ ನೆಲಮಾಳಿಗೆ ನಿರ್ಮಿಸಿದ ನಂತರ, ಅದರಲ್ಲಿ ಬಿಸ್ಕತ್ತು ಮತ್ತು ಸಾಬೂನುಗಳನ್ನು ಮಾರಾಟ ಮಾಡುವ ಚಿಲ್ಲರೆ ಅಂಗಡಿಯನ್ನು ಸ್ಥಾಪಿಸಲು ಅವರು ಬಯಸುತ್ತಾರೆ. ಅದು ಅವರ ಜೀವನೋಪಾಯ. "ನನಗೆ ವಯಸ್ಸಾಗುತ್ತಿದೆ. ನಾನು ಮನೆ ಕೆಲಸ ಮಾಡಲು ಸಾಧ್ಯವಿಲ್ಲ" ಎಂದು ವಸಂತಿ ಹೇಳಿದರು. ನಾನು ಬಡವಳು. ಆದರೆ ನನ್ನ ಬದುಕು ಆರಾಮದಾಯಕವಾಗಿದೆ. ನನಗೆ ತಿನ್ನಲು ಆಹಾರ, ಧರಿಸಲು ಬಟ್ಟೆಗಳು ಮತ್ತು ಉಳಿಯಲು ಮನೆ ಇದೆ. ನನಗೆ ಯಾವುದೇ ಚಿಂತೆಯಿಲ್ಲ. ಇದಕ್ಕಿಂತ ಹೆಚ್ಚಿನದೇನೂ ನನಗೆ ಬೇಕಾಗಿಲ್ಲ."

ಅನುವಾದ: ಶಂಕರ. ಎನ್. ಕೆಂಚನೂರು

Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Other stories by Sharmila Joshi
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru