ಉತ್ತರ ಪ್ರದೇಶ ರಾಜ್ಯ ದೇಶದ ಪ್ರಮುಖ ಆಹಾರ ಧಾನ್ಯ ಪೂರೈಕೆದಾರ ರಾಜ್ಯ. ಅಲ್ಲಿನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಉತ್ತರ ಪ್ರದೇಶದ ಕೃಷಿಯ ಮೇಲೆ ಪರಿಣಾಮ ಬೀರುವ ಪ್ರಮುಖ ವಿಪತ್ತುಗಳಲ್ಲಿ ಬರವೂ ಒಂದು. ಮಧ್ಯಪ್ರದೇಶದ ಕೆಲವು ಭಾಗಗಳು ಸಹ ಹೀಗೆ ಬರ ಪರಿಸ್ಥಿತಿಯನ್ನು ಎದುರಿಸುತ್ತವೆ. ಕಳೆದ 29 ವರ್ಷಗಳಲ್ಲಿ ಇಲ್ಲಿನ 51 ಜಿಲ್ಲೆಗಳು ಹಲವಾರು ಬರಗಾಲಗಳನ್ನು ಕಂಡಿವೆ. ಈ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜೀವನೋಪಾಯಕ್ಕಾಗಿ ಮಳೆಯಾಧಾರಿತ ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಈ ಪುನರಾವರ್ತಿತ ಬಿಸಿಗಾಳಿ, ಅಂತರ್ಜಲ ಕುಸಿತ ಮತ್ತು ಮಳೆಯ ಕೊರತೆ ಈ ಪ್ರದೇಶಗಳಲ್ಲಿ ವಿನಾಶವನ್ನು ತಂದಿದೆ.

ಬರದ ಭೀಕರತೆ ಅದನ್ನು ಅನುಭವಿಸಿದವರಿಗೆ ಮಾತ್ರ ತಿಳಿದಿರುತ್ತದೆ. ನಗರವಾಸಿಗಳ ಪಾಲಿಗೆ ಈ ಬರವೆನ್ನುವುದು ಕೇವಲ ಇನ್ನೊಂದು ಸುದ್ದಿ. ಆದರೆ ವರ್ಷ ವರ್ಷವೂ ಈ ಭೀಕರತೆಯನ್ನು ಎದುರಿಸುವ ರೈತರ ಪಾಲಿಗೆ ಈ ಬರವೆನ್ನುವುದು ಸಾಕ್ಷಾತ್‌ ಯಮನಿದ್ದಂತೆ. ಮಳೆಗಾಗಿ ಕಾಯ್ದು ಒಣಗಿ ಹೋದ ಕಣ್ಣುಗಳು, ಬೆಂಕಿಯುಗುಳುವ ಬಿರುಕು ಬಿಟ್ಟ ನೆಲ, ಹಸಿವು, ಬತ್ತಿದ ಹೊಟ್ಟೆಯ ಮಕ್ಕಳು, ಜಾನುವಾರುಗಳ ಮೂಳೆ ರಾಶಿ, ನೀರು ಹುಡುಕಿಕೊಂಡು ಅಲೆಯುವ ಮಹಿಳೆಯರು – ಇವು ರಾಜ್ಯದ ಉದ್ದಕ್ಕೂ ಕಂಡು ಬರುವ ನೋಟಗಳು.

ಈ ಕವಿತೆಯು ಮಧ್ಯ ಭಾರತದ ಪ್ರಸ್ಥಭೂಮಿಗಳಲ್ಲಿ ನಾನು ಕಂಡ ಬರದ ಪ್ರತಿರೂಪ.

ಸೈಯದ್ ಮೆರಾಜುದ್ದೀನ್ ಅವರ ದನಿಯಲ್ಲಿ ಹಿಂದಿ ಮೂಲ ಕವಿತೆಯನ್ನು ಕೇಳಿ

ಕವಿತೆಯ ಇಂಗ್ಲಿಷ್‌ ಅನುವಾದವನ್ನು ಪ್ರತಿಷ್ಠಾ ಪಾಂಡ್ಯ ದನಿಯಲ್ಲಿ ಆಲಿಸಿ

सूखा

रोज़ बरसता नैनों का जल
रोज़ उठा सरका देता हल
रूठ गए जब सूखे बादल
क्या जोते क्या बोवे पागल

सागर ताल बला से सूखे
हार न जीते प्यासे सूखे
दान दिया परसाद चढ़ाया
फिर काहे चौमासे सूखे

धूप ताप से बर गई धरती
अबके सूखे मर गई धरती
एक बाल ना एक कनूका
आग लगी परती की परती

भूखी आंखें मोटी मोटी
हाड़ से चिपकी सूखी बोटी
सूखी साखी उंगलियों में
सूखी चमड़ी सूखी रोटी

सूख गई है अमराई भी
सूख गई है अंगनाई भी
तीर सी लगती है छाती में
सूख गई है पुरवाई भी

गड्डे गिर्री डोरी सूखी
गगरी मटकी मोरी सूखी
पनघट पर क्या लेने जाए
इंतज़ार में गोरी सूखी

मावर लाली बिंदिया सूखी
धीरे धीरे निंदिया सूखी
आंचल में पलने वाली फिर
आशा चिंदिया चिंदिया सूखी

सूख चुके सब ज्वारों के तन
सूख चुके सब गायों के थन
काहे का घी कैसा मक्खन
सूख चुके सब हांडी बर्तन

फूलों के परखच्चे सूखे
पके नहीं फल कच्चे सूखे
जो बिरवान नहीं सूखे थे
सूखे अच्छे अच्छे सूखे

जातें, मेले, झांकी सूखी
दीवाली बैसाखी सूखी
चौथ मनी ना होली भीगी
चन्दन रोली राखी सूखी

बस कोयल की कूक न सूखी
घड़ी घड़ी की हूक न सूखी
सूखे चेहरे सूखे पंजर
लेकिन पेट की भूक न सूखी

ಬರ

ಕಣ್ಣೀರು ಸುರಿಯುತ್ತದೆ ಈ ಕಣ್ಣುಗಳಿಂದ ದಿನವೂ
ನೇಗಿಲು ಜಾರುತ್ತದೆ ಕೈಯಿಂದ.
ಮೋಡಗಳು ಕೋಪಗೊಳ್ಳುತ್ತವೆ ಪ್ರತಿ ದಿನವೂ
ಮತ್ತೆ ಹೇಗೆ ಮಾಡುವೆ ಬೇಸಾಯ ಮರುಳ?

ಕಡಲು ಒಣಗಿದೆ, ಕೆರೆಯೂ ಒಣಗಿದೆ.
ಹೊಲಗಳು ಬಾಡಿವೆ, ನೆಲ ಬಾಯಿಬಿಟ್ಟಿದೆ
ದೇವರಿಗೆ ಹರಕೆ ಕೊಟ್ಟೆ, ಹಣೆ ಹಚ್ಚಿ ಬೇಡಿಕೊಂಡೆ
ಆದರೂ ಕರುಣೆ ತೋರಲಿಲ್ಲವೇಕೆ ಮಳೆಯೇ?

ಸೂರ್ಯನ ಸಿಟ್ಟಿಗೆ ನೆಲ ಹೋಗಿದೆ ಸುಟ್ಟು
ಇನ್ನು ಉಳಿಯದು ನೆಲ, ಊರಿಗೆ ಬರ ಬಂದಿದೆ
ಕಾಣುತ್ತಿಲ್ಲ ಎಲ್ಲೂ ಕಡೇ ಪಕ್ಷ ಹೊಟ್ಟು
ಪಾಳು ಬಿದ್ದಿದೆ ಭೂಮಿ ಸೂರ್ಯನ ಶಾಪಕ್ಕೆ ಸಿಕ್ಕು

ಹಸಿದ ಕಣ್ಣುಗಳು ಹೊರಬಿದ್ದಿವೆ
ಮೈಯಲ್ಲಿ ನೆಣವಿಲ್ಲದೆ ಹೊರ ಬಿದ್ದಿದೆ ಮೂಳೆ
ಒಣ ಚರ್ಮ, ಅಯ್ಯೋ ಬರವೇ!
ಒಣ ಬೆರಳುಗಳು ಒಣ ರೊಟ್ಟಿ ಮುರಿಯುತ್ತಿವೆ

ತೋಟ ಒಣಗಿದೆ
ಅಂಗಳವೂ ಒಣಗಿದೆ
ತೇವವಿಲ್ಲದ ನನ್ನೆದೆಯಂತೆ
ಬೇಸರದಿಂದ ಉಸಿರೆಳೆದುಕೊಂಡರೆ
ಬೀಸುವ ಗಾಳಿಯೂ ಬಿಸಿ

ಮಡಕೆ, ಕೊಡಪಾನಗಳು ಒಣಗಿವೆ
ಮರದ ಕಂಬ, ರಾಟೆ, ಮತ್ತೆ ಹಗ್ಗವೂ ಒಣಗಿದೆ
ಎಲ್ಲಿಂದ ತರುವುದು ನೀರನ್ನು?
ಭರವಸೆಯೇ ಕಾಣದೆ ಈಗ ಅವಳ ಗಂಟಲೂ ಬತ್ತಿದೆ

ಮೊದಲಿಗೆ ಕೆನ್ನೆಯ ಮೇಲಿನ ಗುಲಾಬಿ
ನಂತರ ಹಣೆಯ ಮೇಲಿನ ಕುಂಕುಮ
ಮತ್ತೆ ನಿಧಾನವಾಗಿ ನಿದ್ರೆ
ಹೀಗೆ ಎಲ್ಲವನ್ನೂ ಕಳೆದುಕೊಂಡಿದ್ದಾಳೆ ಬರದಿಂದಾಗಿ
ಇದೆಲ್ಲದರ ನಡುವೆ
ಹೊಟ್ಟೆಯೊಳಗೆ ಮೊಳೆತಿತ್ತು ಭರವಸೆಯೊಂದು
ಈಗ ಅದೂ ಕರಗಿ ಹೋಯಿತು ಹನಿ ಹನಿಯಾಗಿ

ಎತ್ತುಗಳ ಮೈ ಒಣಗಿದೆ
ಹಸುಗಳ ಕೆಚ್ಚಲು ಬತ್ತಿದೆ
ಎಲ್ಲಿದೆ ಬೆಣ್ಣೆ? ಎಲ್ಲಿದೆ ತುಪ್ಪ?
ಈಗ ಮನೆಯ ಪಾತ್ರೆಗಳೂ ಖಾಲಿ ಖಾಲಿ

ಕಾಲಕ್ಕೂ ಮೊದಲೇ ಹಣ್ಣುಗಳು ಒಣಗಿವೆ
ಹೂವಿನ ದಳಗಳೂ ಉದುರುತ್ತಿವೆ
ಹಸಿರಿದ್ದ ಮರವೂ ಒಣಗಿ ನಿಂತಿದೆ
ದಿನ, ಗಂಟೆಗಳೂ ಈಗ ಒಣಗಿದಂತೆ ಭಾಸ

ಹಬ್ಬ, ಸಂತೆ, ಮತ್ತು ಮೆರವಣಿಗೆಗಳು
ದೀಪಾವಳಿ, ಬೈಸಾಖಿ, ಛೌತ್‌, ಹೋಲಿ
ಚಂದನ ತಿಲಕವಿಲ್ಲ, ಕುಂಕುಮವಿಲ್ಲ
ಈ ಬಾರಿಯ ರಾಖಿಯೂ ಶುಷ್ಕ

ಆದರೆ ಕೋಗಿಲೆ ಈಗಲೂ ಹಾಡುತ್ತಿದೆ.
ನೋವು, ದುಃಖ ಎದೆಯಲ್ಲಿ ಇನ್ನೂ ಜೀವಂತವಿದೆ
ನೀರ್ಜೀವ ಮುಖ ಹಾಗೂ ಅಸ್ಥಿಪಂಜರದ ಹಿಂದೆ
ಒಲೆಯಲ್ಲಿ ಒಂದೇ ಸಮನೇ ಉರಿಯುತ್ತಿದೆ ಹಸಿವೆಯ ಬೆಂಕಿ


ಅನುವಾದ: ಶಂಕರ. ಎನ್. ಕೆಂಚನೂರು

Syed Merajuddin

ಸೈಯದ್ ಮೆರಾಜುದ್ದೀನ್ ಓರ್ವ ಕವಿ ಮತ್ತು ಶಿಕ್ಷಕ. ಅವರು ಮಧ್ಯಪ್ರದೇಶದ ಅಗರ ನಿವಾಸಿ ಮತ್ತು ಪ್ರಸ್ತುತ ಕುನೊ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ ವಾಸಿಸುತ್ತಿರುವ ಸ್ಥಳಾಂತರಗೊಂಡ ಆದಿವಾಸಿ ಮತ್ತು ದಲಿತ ಸಮುದಾಯಗಳ ಮಕ್ಕಳಿಗಾಗಿ ಹೈಯರ್ ಸೆಕೆಂಡರಿ ಶಾಲೆಯನ್ನು ನಡೆಸುತ್ತಿರುವ ಆದರ್ಶಶಿಲಾ ಶಿಕ್ಷಾ ಸಮಿತಿಯ ಸಹ ಸಂಸ್ಥಾಪಕ ಮತ್ತು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Other stories by Syed Merajuddin
Illustration : Manita Kumari Oraon

ಮನಿತಾ ಕುಮಾರಿ ಜಾರ್ಖಂಡ್‌ ಮೂಲದ ಉರಾಂವ್ ಕಲಾವಿದರು ಮತ್ತು ಆದಿವಾಸಿ ಸಮುದಾಯಗಳಿಗೆ ಸಂಬಂಧಿಸಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಶಿಲ್ಪಗಳು ಮತ್ತು ವರ್ಣಚಿತ್ರಗಳನ್ನು ತಯಾರಿಸುತ್ತಾರೆ.

Other stories by Manita Kumari Oraon
Editor : Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

Other stories by Pratishtha Pandya
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru