“ಇದು ಕೇವಲ ಬೊಂಬೆಯಾಟ ಅಥವಾ ಪ್ರದರ್ಶನವಲ್ಲ” ಎನ್ನುತ್ತಾರೆ ರಾಮಚಂದ್ರ ಪುಲವರ್.‌ ಕಳೆದ ವರ್ಷಗಳಿಂದ ತೋಳ್‌ ಪಾವಕೂತ್‌ ಕಲಾವಿದರಾಗಿರುವ ಅವರು ವಿವಿಧ ಸಮುದಾಯದ ಜನರು ಈ ಕಲೆಯಲ್ಲಿ ತೊಡಗಿಸಿಕೊಂಡಿರುವುದು ಅದರ ಸೌಹಾರ್ದ ಪರಂಪರೆಯನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯಪಡುತ್ತಾರೆ.

"ಇದು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಭವಿಷ್ಯದ ಪೀಳಿಗೆಗೆ ರವಾನಿಸುವ ಕೆಲಸವೂ ಹೌದು. ನಾವು ತೋಳ್‌ಪಾವಕೂತ್‌ ಮೂಲಕ ಹೇಳುವ ಕಥೆಗಳು ಆಳವಾದ ಅರ್ಥವನ್ನು ಹೊಂದಿವೆ ಮತ್ತು ಜನರನ್ನು ಉತ್ತಮ ಮನುಷ್ಯರಾಗಲು ಪ್ರೇರೇಪಿಸುತ್ತದೆ” ಎಂದು ಅವರು ಹೇಳುತ್ತಾರೆ.

ತೋಳ್‌ಪಾವಕೂತ್‌ ಎನ್ನುವುದು ಕೇರಳದ ಸಾಂಪ್ರದಾಯಿಕ ನೆರಳು ಗೊಂಬೆಯಾಟ. ಇದು ಮಲಬಾರ್ ಪ್ರದೇಶದ ಭಾರತಪುಳ (ನಿಲಾ) ನದಿಯ ದಡದ ಹಳ್ಳಿಗಳಲ್ಲಿ ಕಂಡುಬರುತ್ತದೆ. ಗೊಂಬೆಯಾಟಗಾರರು ವಿವಿಧ ಜಾತಿಗಳು ಮತ್ತು ಸಮುದಾಯಗಳಿಗೆ ಸೇರಿದವರಾಗಿರುತ್ತಾರೆ ಮತ್ತು ಈ ಪ್ರದರ್ಶನಗಳು ಎಲ್ಲರಿಗೂ ಮುಕ್ತವಾಗಿರುತ್ತವೆ.

ದೇವಾಲಯದ ಆವರಣದ ಹೊರಗಿರುವ ಕೂತುಮಡಂ ಎಂದು ಕರೆಯಲಾಗುವ ಶಾಶ್ವತ ರಂಗಮಂದಿರದಲ್ಲಿ ತೋಳ್‌ಪಾವಕೂತು ಪ್ರದರ್ಶನಗೊಳ್ಳುತ್ತದೆ. ರಂಗಸ್ಥಳದ ಎದುರಿನ ಸ್ಥಳದಲ್ಲಿ ಜಾತಿ-ವರ್ಗದ ಭೇದವಿಲ್ಲದೆ ಎಲ್ಲರೂ ಈ ಕಲೆಯನ್ನು ಆಸ್ವಾದಿಸಬಹುದು. ಸಾಂಪ್ರದಾಯಿಕವಾಗಿ ಈ ರಂಗಕಲೆಯನ್ನು ಭದ್ರಕಾಳಿ ದೇವಿಯ ಪವಿತ್ರ ತೋಪುಗಳಲ್ಲಿ ವಾರ್ಷಿಕ ಉತ್ಸವದ ಭಾಗವಾಗಿ ನಡೆಸಲಾಗುತ್ತದೆ, ಇದು ರಾಮಾಯಣದಿಂದ ರಾಮ ಮತ್ತು ರಾವಣನ ನಡುವಿನ ಮಹಾಕಾವ್ಯದ ಯುದ್ಧದ ಸನ್ನಿವೇಶಗಳನ್ನು ನಿರೂಪಿಸುತ್ತದೆ. ಆದರೆ, ಪ್ರದರ್ಶನವು ರಾಮಾಯಣದಲ್ಲಿ ಚಿತ್ರಿಸುವ ಕಥೆಗಳಿಗೆ ಸೀಮಿತವಾಗಿರದೆ ಜಾನಪದ ಕತೆಗಳನ್ನು ಸಹ ಒಳಗೊಂಡಿದೆ.

ಕಲಾವಿದ ನಾರಾಯಣನ್ ನಾಯರ್ ಹೇಳುವಂತೆ, “ನಮ್ಮ ಪ್ರದರ್ಶನಗಳಿಗೆ ಹಣ ಮತ್ತು ಸಹಾಯವನ್ನು ಹುಡುಕಲು ನಾವು ಹೆಣಗಾಡುತ್ತೇವೆ. ಹಲವರಿಗೆ ತೋಳ್‌ಪಾವಕೂತ್‌ನ ಮೌಲ್ಯ ಅರ್ಥವಾಗುವುದಿಲ್ಲ ಮತ್ತು ಅವರು  ಅದನ್ನು ಒಂದು ಸಂರಕ್ಷಿಸಬೇಕಾದ ಕಲಾ ಪ್ರಕಾರವಾಗಿ ನೋಡುವುದಿಲ್ಲ."

ಈ ಚಿತ್ರವು ಅನೇಕ ಸವಾಲುಗಳ ನಡುವೆಯೂ ಕಲೆಯ ತೇರನ್ನು ನಿಲ್ಲದಂತೆ ಎಳೆಯುತ್ತಿರುವ ಬೊಂಬೆಯಾಟಗಾರರಾದ ಬಾಲಕೃಷ್ಣ ಪುಲವರ್, ರಾಮಚಂದ್ರ ಪುಲವರ್, ನಾರಾಯಣನ್ ನಾಯರ್ ಮತ್ತು ಸದಾನಂದ ಪುಲವರ್ ಅವರ ಕಲೆಯ ಕುರಿತಾದ ಮಾತುಗಳನ್ನು ನಮ್ಮೆದುರು ತೆರೆದಿಡುತ್ತದೆ.

ಚಿತ್ರ ನೋಡಿ: ನೆರಳು ಹೇಳುವ ಕತೆಗಳು

ಈ ವರದಿ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಬೆಂಬಲದೊಂದಿಗೆ ತಯಾರಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Sangeeth Sankar

ಸಂಗೀತ್ ಶಂಕರ್ ಅವರು ಐಡಿಸಿ ಸ್ಕೂಲ್ ಆಫ್ ಡಿಸೈನ್ ಎನ್ನುವಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಅವರ ಜನಾಂಗಶಾಸ್ತ್ರೀಯ ಸಂಶೋಧನೆಯು ಕೇರಳದ ನೆರಳು ಬೊಂಬೆಯಾಟದಲ್ಲಿನ ಪರಿವರ್ತನೆಯ ಕುರಿತಾಗಿದೆ. ಸಂಗೀತ್ 2022ರಲ್ಲಿ ಎಂಎಂಎಫ್-ಪರಿ ಫೆಲೋಶಿಪ್ ಪಡೆದರು.

Other stories by Sangeeth Sankar
Text Editor : Archana Shukla

ಅರ್ಚನಾ ಶುಕ್ಲಾ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಕಂಟೆಂಟ್ ಎಡಿಟರ್ ಮತ್ತು ಪಬ್ಲಿಷಿಂಗ್ ತಂಡದಲ್ಲಿ ಕೆಲಸ ಮಾಡುತ್ತಾರೆ.

Other stories by Archana Shukla
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru