ಅನಿಲ್ ನರ್ಕಂಡೆ ಅವರು ಪ್ರತಿ ಬಾರಿಯಂತೆ ಈ ಮದುವೆಯ ಮಂಟಪವನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಈ ಕಥೆಗೊಂದು ತಿರುವು ಸಿಗುವ ಬಗ್ಗೆ ತಿಳಿದಿರಲಿಲ್ಲ!

ಭಂಡಾರದ ಅಲೆಸೂರು ಗ್ರಾಮದಲ್ಲಿ ಮದುವೆ ಮಂಟಪ ಅಲಂಕಾರ ಮತ್ತು ಮ್ಯೂಸಿಕ್‌ ಸಿಸ್ಟಂ ಬಾಡಿಗೆ ನೀಡುವ 36 ವರ್ಷದ ಈ ರೈತ, ಪಕ್ಕದ ಹಳ್ಳಿಯೊಂದರ ಮದುವೆಯಲ್ಲಿ ದೊಡ್ಡದಾದ ಹಳದಿ ಶಾಮಿಯಾನವನ್ನು (ಮಾರ್ಕ್ಯೂ) ಹಾಕಿ, ಹತ್ತಾರು ಪ್ಲಾಸ್ಟಿಕ್ ಹೂವುಗಳಿಂದ ಮಂಟಪವನ್ನು ಅಲಂಕರಿಸಿದ್ದರು. ಅತಿಥಿಗಳಿಗಾಗಿ ಕುರ್ಚಿಗಳನ್ನು; ವಧು ಮತ್ತು ವರನಿಗೆ ಗಾಢ-ಕೆಂಪು ಬಣ್ಣದ ವಿಶೇಷ ಸೋಫಾವನ್ನು ಹಾಕಿಸಿದ್ದರು. ಮದುವೆಗೆ ಬೇಕಾದ ಮ್ಯೂಸಿಕ್‌ ಸಿಸ್ಟಂ ಮತ್ತು ಬೆಳಿಕಿಗಾಗಿ ಡಿಜೆ ಉಪಕರಣಗಳು ಹಾಗೂ ಲೈಟಿಂಗ್‌ ವ್ಯವಸ್ಥೆ ಮಾಡಿದ್ದರು.

ವರನ ಸಾಧಾರಣ ಮಣ್ಣು ಮತ್ತು ಇಟ್ಟಿಗೆಯ ಮನೆಗೆ ಮದುವೆಯ ಕಳೆ ಬಂದಿತ್ತು. ವಧುವಿನ ಕಡೆಯ ದಿಬ್ಬಣ ಮಧ್ಯಪ್ರದೇಶದ ಸಿಯೋನಿಯಿಂದ ಸಾತ್ಪುರ ಬೆಟ್ಟಗಳ ಮೂಲಕ ವರನ ಮನೆಗೆ ಬರುತ್ತಿತ್ತು.

ಮದುವೆಯ ಹಿಂದಿನ ದಿನದಂದು ಈ ಸಾಮಾನುಗಳೆಲ್ಲಾ ದಕ್ಷಿಣಕ್ಕೆ ಹೋಗಿತ್ತು ಎಂದು ಅನಿಲ್ ಹೇಳುತ್ತಾರೆ. ಇವರು ಬೇಸಿಗೆಯ ಮದುವೆಯ ಸೀಸನ್‌ನಲ್ಲಿ ತಮ್ಮ ವ್ಯಾಪಾರ ಹೆಚ್ಚುವುದನ್ನು ಎದುರು ನೋಡುತ್ತಿದ್ದರು. ಅಲ್ಲಿ ನಡೆಯಬೇಕಾಗಿದ್ದ ಮದುವೆಗೆ ಒಂದು ದಿನ ಮೊದಲು, ಬೇರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷ ಪ್ರಾಯದ ವರ ಓಡಿಹೋಗಿದ್ದ.

"ಅವನು ತನ್ನ ತಂದೆ ತಾಯಿಗೆ ಫೋನ್‌ ಮಾಡಿ ಮದುವೆಯನ್ನು ನಿಲ್ಲಿಸದಿದ್ದರೆ ವಿಷ ಕುಡಿಯುತ್ತೇನೆ ಎಂದು ಹೇಳಿದ್ದ. ಅವನಿಗೆ ಬೇರೆ ಯಾರದೋ ಮೇಲೆ ಇಷ್ಟ ಇತ್ತು," ಎಂದು ಅನಿಲ್ ನೆನಪಿಸಿಕೊಳ್ಳುತ್ತಾರೆ.

ಮದುವೆಯನ್ನು ನಿಲ್ಲಿಸುವ ಹೊತ್ತಿಗೆ, ವಧುವಿನ ಕಡೆಯ ದಿಬ್ಬಣ ಆಗಾಗಲೇ ಬಂದಾಗಿತ್ತು. ಮದುವೆ ಸಂಭ್ರಮವಾಗಬೇಕಾಗಿದ್ದ ಆ ಕ್ಷಣ ಹುಡುಗನ ಹೆತ್ತವರಿಗೆ ಮತ್ತು ಇಡೀ ಹಳ್ಳಿಗೆ ದೊಡ್ಡ ಮುಜುಗರವನ್ನು ತಂದಿತ್ತು.

ವರನ ತಂದೆ ಅನಿಲ್‌ ಅವರಿಗೆ ಡೆಕೋರೇಷನ್ ಕೆಲಸದ ಹಣವನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.

PHOTO • Jaideep Hardikar
PHOTO • Jaideep Hardikar

ಎಡ: ಭಂಡಾರದ ತುಮ್ಸಾರ್ ತಹಸಿಲ್‌ನ ಅಲೆಸೂರು ಬಳಿ ಅನಿಲ್ ನರ್ಕಂಡೆ ಅವರು ಡೆಕೋರೇಷನ್‌ ಮಾಡಿದ ಮದುವೆ ಮನೆ. ಈ ಮದುವೆಯ ಹಿಂದಿನ ದಿನದಂದು ಮದುಮಗ ಓಡಿಹೋಗಿ, ಇಡೀ ಮದುವೆಗೆ ಒಂದು ಟ್ವಿಸ್ಟ್‌ ಸಿಕ್ಕಿತ್ತು, ಇದರಿಂದ ಮದುವೆ ನಿಂತುಹೋಯ್ತು. ವರನ ತಂದೆಗೆ ಅನಿಲ್ ಅವರು ಮಾಡಿದ ಡಿಕೋರೇಷನ್‌ ಕೆಲಸದ ಹಣವನ್ನು ಕೊಡಲು ಸಾಧ್ಯವಾಗಲಿಲ್ಲ. ಬಲ: ಕೃಷಿಭೂಮಿಗಳಿಂದ ಮುಂದೆ ಸ್ಥಿರವಾದ ಆದಾಯ ಬರಲಾರದ ಕಾರಣ, ಅನಿಲ್ ಅವರಂತಹ ಅನೇಕರು ಜೀವನೋಪಾಯಕ್ಕಾಗಿ ಸಣ್ಣ ಸಣ್ಣ ಉದ್ಯಮಗಳತ್ತ ಮುಖ ಮಾಡಿದ್ದಾರೆ. ಅನಿಲ್ ಅವರು ಕಳೆದ ವರ್ಷ ತಮ್ಮ ಡೆಕೋರೇಟರ್ ಉದ್ಯಮವನ್ನು 12 ಲಕ್ಷ ರುಪಾಯಿ ಹೂಡಿಕೆ ಮಾಡಿ ಆರಂಭಿಸಿದರು

"ನನಗೆ ಆ ಹಣವನ್ನು ಕೇಳುವ ಮನಸ್ಸಾಗಲಿಲ್ಲ," ಎಂದು ಭಂಡಾರದ ಹಳ್ಳಿಯಾದ ಅಲೆಸೂರಿನಲ್ಲಿರುವ ತನ್ನ ಮನೆಯಲ್ಲಿ ಕುಳಿತುಕೊಂಡು ಅನಿಲ್ ಹೇಳುತ್ತಾರೆ. ಈ ಗ್ರಾಮದ ಹೆಚ್ಚಿನ ಜನರು ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರು. “ಅವರು ಭೂರಹಿತ ಧೀವರ್ [ಮೀನುಗಾರರ ಜಾತಿ]; ವರನ ತಂದೆ ತನ್ನ ಸಂಬಂಧಿಕರಿಂದ ಹಣವನ್ನು ಸಾಲ ಪಡೆಯಬೇಕಾಗಿತ್ತು,” ಎಂದು ಅನಿಲ್ ಹೇಳುತ್ತಾರೆ. ಅನಿಲ್ ತಮ್ಮ ಕೆಲಸಗಾರರಿಗೆ ಸಂಬಳ ಕೊಡಲು ಮಾತ್ರ ಆ ವ್ಯಕ್ತಿಯಲ್ಲಿ ಬಾಡಿಗೆಯ ಹಣ ಕೇಳಿದರು, ಮತ್ತು ತಮ್ಮ ಸ್ವಂತ ಬಿಲ್‌ಗಳನ್ನು ಬಿಟ್ಟುಬಿಡಲು ನಿರ್ಧರಿಸಿದರು.

ಈ ವಿಚಿತ್ರ ಘಟನೆಯಿಂದಾಗಿ ಅನಿಲ್‌ ಅವರಿಗೆ 15,000 ರುಪಾಯಿ ಲಾಸ್‌ ಆಗಿತ್ತು ಎಂದು ಹೇಳುತ್ತಾ, ಬಿದಿರಿನ ಕಂಬಗಳು, ಮಂಟಪದ ಫ್ರೇಮುಗಳು, ದೊಡ್ಡದೊಡ್ಡ ಸ್ಪೀಕರ್‌ಗಳು ಮತ್ತು ಡಿಜೆ ಉಪಕರಣಗಳು, ಬಣ್ಣಬಣ್ಣದ ಪೆಂಡಾಲ್ ಬಟ್ಟೆಗಳು ಮತ್ತು ನವದಂಪತಿಗಳು ಕುಳಿತುಕೊಳ್ಳುವ ವಿಶೇಷವಾದ ಸೋಫಾ ಹಾಗೂ ಇತರ ವಸ್ತುಗಳನ್ನು ಇಟ್ಟಿರುವ ಗೋಡೌನ್ ಅನ್ನು ತೋರಿಸುತ್ತಾರೆ ಅನಿಲ್. ಅವರ ಸಾಧಾರಣ ಸಿಮೆಂಟ್ ಮನೆಯ ಪಕ್ಕದಲ್ಲಿಯೇ ಈ ಗೋಡೌನ್‌ ಹಾಲ್ ಇದೆ.

ಅಲೆಸೂರ್ ಗ್ರಾಮವು ಸಾತ್ಪುರ ಪರ್ವತ ಶ್ರೇಣಿಯ ತಪ್ಪಲಿನಲ್ಲಿದೆ. ಈ ಗ್ರಾಮ ತುಮ್ಸರ್ ತಹಸಿಲ್‌ನ ಅರಣ್ಯ ಪ್ರದೇಶದಲ್ಲಿದೆ. ಈ ಏಕಬೆಳೆ ಪ್ರದೇಶದ ರೈತರು ತಮ್ಮ ಸಣ್ಣ ಹಿಡುವಳಿಯಲ್ಲಿ ಭತ್ತ ಬೆಳೆತ್ತಾರೆ. ಭತ್ತದ ಕಟಾವಿನ ನಂತರ ಹೆಚ್ಚಿನ ಜನ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಾರೆ. ಯಾವುದೇ ಪ್ರಮುಖ ಉದ್ಯಮ ಅಥವಾ ಉದ್ಯೋಗವನ್ನು ಸೃಷ್ಟಿಸುವ ಇತರ ಸೇವೆಗಳು ಇಲ್ಲದೇ ಇರುವುದರಿಂದ, ಈ ಪ್ರದೇಶದ ಬಹುಪಾಲು ಬುಡಕಟ್ಟು ಮತ್ತು ಹಿಂದುಳಿದ ವರ್ಗದ ಜನ ಬೇಸಿಗೆಯಲ್ಲಿ ತಮ್ಮ ಜೀವನೋಪಾಯಕ್ಕಾಗಿ ಅರಣ್ಯವನ್ನು ಅವಲಂಬಿಸಿದ್ದಾರೆ. ಮತ್ತು ಮನರೇಗಾ ಕೆಲಸದಲ್ಲಿ ವಿಚಾರದಲ್ಲಿ ತುಮ್ಸರ್ ಕಳಪೆ ಸಾಧನೆಯನ್ನು ಮಾಡಿದೆ.

ಇದರಿಂದಾಗಿ, ಅನಿಲ್ ಅವರಂತಹ ಅನೇಕರು ತಮ್ಮ ಬದುಕಿಗಾಗಿ ಸಣ್ಣ ಸಣ್ಣ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಕೃಷಿ ಆದಾಯದಲ್ಲಿನ ಏರುಪೇರು ಅಥವಾ ಕುಸಿತದಿಂದಾಗಿ ಇದರ ಮೇಲೂ ಕೆಟ್ಟ ಪರಿಣಾಮಗಳು ಉಂಟಾಗಿವೆ.

ಡಿಜೆಗಳು ಮತ್ತು ಡೆಕೋರೇಷನ್‌ ಕೆಲಸ ಗ್ರಾಮ ಪ್ರದೇಶದಲ್ಲಿಯೇ ಬಾಕಿಯಾಗಿದೆ. ಆದರೆ ಕಷ್ಟದ ಸಂದರ್ಭದಲ್ಲಿ ಈ ವ್ಯಾಪಾರ ನಡೆಸುವುದು ಸುಲಭವಲ್ಲ ಎಂದು ಅನಿಲ್ ಹೇಳುತ್ತಾರೆ. “ಗ್ರಾಮಸ್ಥರ ಆರ್ಥಿಕ ಸ್ಥಿತಿ ಅತಂತ್ರವಾಗಿದೆ,” ಎನ್ನುತ್ತಾರೆ ಅವರು.

ಅನಿಲ್ ಯಾವಾಗಲೂ ಬಿಜೆಪಿಗೆ ಮತ ನೀಡುತ್ತಿದ್ದರು. ಅವರ ಗೌಲಿ ಸಮುದಾಯವು ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಇದೆ. ಆದರೆ ಅವರ ಗ್ರಾಮಸ್ಥರು ರಾಜಕೀಯ ನಾಯಕತ್ವದ ಆಯ್ಕೆಯಲ್ಲಿ ಬದಲಾವಣೆಯನ್ನು ತರಲು ಯೋಚಿಸುತ್ತಿದ್ದಾರೆ (ಭಂಡಾರಾ-ಗೊಂಡಿಯಾ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ). “ಲೋಕನ್ನ ಕಾಮ್ ನಹಿ; ತ್ರಸ್ತ್‌ ಅಹೇತ್ [ಜನರಿಗೆ ಕೆಲಸವಿಲ್ಲ; ಅವರಿಗೆ ಚಿಂತೆಯಾಗಿದೆ]," ಎಂದು ಅವರು ಹೇಳುತ್ತಾರೆ. ಬಿಜೆಪಿಯ ಹಾಲಿ ಸಂಸದ ಸುನೀಲ್ ಮೆಂಡೆಯರು ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಒಮ್ಮೆಯೂ‌ ಜನರನ್ನು ಭೇಟಿ ಮಾಡಲು ಈ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಇದು ಅವರ ವಿರುದ್ಧ ಜನರಲ್ಲಿರುವ ಆಡಳಿತ ವಿರೋಧಿ ಧೋರಣೆಯನ್ನು ಹೆಚ್ಚಿಸಿದೆ ಎಂದು ಜನರ ಒಂದು ಗುಂಪು ಪರಿಗೆ ಹೇಳುತ್ತದೆ.

PHOTO • Jaideep Hardikar
PHOTO • Jaideep Hardikar

ಅನಿಲ್ ತನ್ನ ಮನೆಯ ಗೋಡೌನ್‌ನಲ್ಲಿ ನವದಂಪತಿಗಳಿಗೆ ಬೇಕಾದ ಸೋಫಾಗಳು, ಡಿಜೆ ಸೆಟ್‌ಗಳು, ಸ್ಪೀಕರ್‌ಗಳು, ಶಾಮಿಯಾನದ ಬಟ್ಟೆ ಮತ್ತು ಫ್ರೇಮ್‌ಗಳು- ಮೊದಲಾದ ಮದುವೆಗೆ ಬೇಕಾದ ವಸ್ತುಗಳನ್ನು ತೆಗೆದಿಡುತ್ತಾರೆ

ಇಲ್ಲಿನ ಮಹಿಳೆಯರು ಪ್ರತಿದಿನ ದೊಡ್ಡ ಹೊಲಗಳಿಗೆ ಕೆಲಸಕ್ಕೆ ಹೋಗುತ್ತಾರೆ ಎಂದು ಅನಿಲ್ ಹೇಳುತ್ತಾರೆ. ನೀವು ಬೆಳಿಗ್ಗೆ ಹಳ್ಳಿಗೆ ಬಂದರೆ, ಮೋಟಾರು ವಾಹನಗಳಲ್ಲಿ, ಕೆಲಸಕ್ಕೆ ಹೊರಡುವ, ಸಂಜೆ ತಡವಾಗಿ ಮನೆಗೆ ಹಿಂತಿರುಗುವುದನ್ನು ನೀವು ನೋಡಬಹುದು. "ಯುವಕರು ಕೈಗಾರಿಕೆಗಳಿಗೆ, ರಸ್ತೆ ಅಥವಾ ಕಾಲುವೆ ನಿರ್ಮಾಣ ಕೆಲಸಗಳಿಗೆ ಮತ್ತು ಹೆವಿ ಡ್ಯೂಟಿ ಉದ್ಯೋಗಗಳಲ್ಲಿ ಕೆಲಸ ಮಾಡಲು ಬೇರೆ ರಾಜ್ಯಗಳಿಗೆ ಹೋಗುತ್ತಾರೆ," ಎಂದು ಅವರು ಹೇಳುತ್ತಾರೆ.

ಆರೋಗ್ಯ ಚೆನ್ನಾಗಿದ್ದರೆ, ತಾವೂ ಕೆಲಸ ಹುಡುಕಿಕೊಂಡು ವಲಸೆ ಹೋಗಬಹುದಿತ್ತು ಎಂದು ಅನಿಲ್ ಹೇಳುತ್ತಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ, ಅವರಲ್ಲಿ ಒಂದು ಮಗುವಿಗೆ ಡೌನ್ ಸಿಂಡ್ರೋಮ್ ಇದೆ. "ನಾನು ಹತ್ತನೇ ತರಗತಿಯಲ್ಲಿ ಫೇಲ್‌ ಆದ ನಂತರ ನಾಗ್ಪುರಕ್ಕೆ ಹೋಗಿ ಹೋಟೆಲ್ ಮಾಣಿಯಾಗಿ ಕೆಲಸ ಮಾಡಿದೆ," ಎಂದು ಅವರು ಹೇಳುತ್ತಾರೆ. ಆದರೆ ಆ ನಂತರ, ಅವರು ಮನೆಗೆ ವಾಪಾಸ್ ಮರಳಿದರು. ಸಾಲ ತೆಗೆದುಕೊಂಡು ಮಹಿಳಾ ಕಾರ್ಮಿಕರನ್ನು ಸಾಗಿಸುವ ಟೆಂಪೋ ಖರೀದಿಸಿದರು. ಅದರಲ್ಲಿ ಲಾಭ ಬಾರದೆ, ಸಮಸ್ಯೆಗಳು ಬಂದು ಅದನ್ನೂ ಮಾರಿದರು. ಸುಮಾರು ಐದು ವರ್ಷಗಳ ಹಿಂದೆ ಡೆಕೋರೇಶನ್ ವ್ಯವಹಾರವನ್ನು ಆರಂಭಿಸುವ ಯೋಚನೆ ಮಾಡಿದರು. ಇದರಲ್ಲೂ ಸಹ ಅವರು ಹೆಚ್ಚಾಗಿ ಉದಾರಿ (ಕ್ರೆಡಿಟ್) ಕೆಲಸ ಮಾಡುತ್ತಾರೆ ಎಂದು ಅವರು ಹೇಳುತ್ತಾರೆ. "ಜನರು ನನ್ನ ಸರ್ವಿಸ್ ತೆಗೆದುಕೊಳ್ಳುತ್ತಾರೆ ಮತ್ತು ಆಮೇಲೆ ನನಗೆ ಹಣ ಕೊಡುವುದಾಗಿ ಭರವಸೆ ಕೊಡುತ್ತಾರೆ," ಎಂದು ಅನಿಲ್ ಹೇಳುತ್ತಾರೆ.

"ಉತ್ತರಕ್ರಿಯೆಯ ಆಚರಣೆಗಳಿಗೆ ನಾನು ಪೆಂಡಾಲ್ ಹಾಕಿದರೆ ನಾನು ಗ್ರಾಹಕರಿಂದ ಹಣವನ್ನು ತೆಗೆದುಕೊಳ್ಳುವುದಿಲ್ಲ. ಮತ್ತು ನಾನು ಮದುವೆಗಳಿಗೆ ಕೇವಲ 15-20,000 [ರೂಪಾಯಿಗಳು] ಶುಲ್ಕ ಹಾಕುತ್ತೇನೆ. ಏಕೆಂದರೆ ಜನರಿಗೆ ಅಷ್ಟು ಮಾತ್ರ ಕೊಡಲು ಸಾಧ್ಯ,” ಎಂದು ಅವರು ಹೇಳುತ್ತಾರೆ.

ಅನಿಲ್ ಅವರು ತಮ್ಮ ವ್ಯವಹಾರಕ್ಕೆ 12 ಲಕ್ಷ ರುಪಾಯಿ ಬಂಡವಾಳ ಹಾಕಿದ್ದಾರೆ. ತಮ್ಮ ಏಳು ಎಕರೆ ಜಮೀನಿನ ಮೇಲಾಧಾರದ ಮೇಲೆ ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ. ಆ ಸಾಲವನ್ನು ಕಂತುಗಳಲ್ಲಿ ಪಾವತಿಸುತ್ತಾರೆ.

"ನನ್ನ ಕೃಷಿ ಮತ್ತು ಹಾಲಿನ ವ್ಯಾಪಾರವೂ ಯಾವುದೇ ಒಳ್ಳೆಯ ಆದಾಯವನ್ನು ಕೊಡುತ್ತಿಲ್ಲ. ನಾನು ಬಿಚಾಯತ್ [ಡೆಕೋರೇಷನ್] ನಲ್ಲಿ ನನ್ನ ಅದೃಷ್ಟವನ್ನು ನೋಡುತ್ತಿದ್ದೇನೆ, ಆದರೆ‌ ಹೆಚ್ಚು ಹೆಚ್ಚು ಜನ ಈ ವ್ಯವಹಾರ ಮಾಡಲು ಬರುತ್ತಿದ್ದಾರೆ," ಎಂದು ಅವರು ಹೇಳುತ್ತಾರೆ.

*****

ಸದ್ದಿಲ್ಲದಂತೆ ಇಲ್ಲಿನ ಸಾರ್ವಜನಿಕರ ಕೋಪವನ್ನು ಹೆಚ್ಚಿಸುವ ಮತ್ತೊಂದು ದುರಂತ ನಡೆಯುತ್ತದೆ: ಅದು ದೂರದ ಸ್ಥಳಗಳಿಗೆ ಕೆಲಸಕ್ಕೆ ಈ ಹಳ್ಳಿಗಳಿಂದ ಹೋಗಿರುವ  ಯುವ ವಲಸೆ ಕಾರ್ಮಿಕರ ಆಕಸ್ಮಿಕ ಸಾವು. ಹೆಚ್ಚಿನ ಸಂದರ್ಭಗಳಲ್ಲಿ, ಈ ಸಾವಿನ ಪ್ರಕರಣಗಳನ್ನು ಮುಚ್ಚಿ ಹಾಕಲಾಗುತ್ತದೆ, ಇಲ್ಲವೇ ತನಿಖೆಯನ್ನು ನಡೆಸುವುದಿಲ್ಲ.

ಉದಾಹರಣೆಗೆ, ಏಪ್ರಿಲ್ ಆರಂಭದಲ್ಲಿ ಪರಿ ಭೇಟಿ ನೀಡಿದ ಎರಡು ಮನೆಗಳಲ್ಲಿ ಒಂದರಲ್ಲಿ: ಭೂರಹಿತ ಗೋವಾರಿ (ಪರಿಶಿಷ್ಟ ಪಂಗಡ) ಸಮುದಾಯದ 27 ವರ್ಷದ ಅವಿವಾಹಿತ ವಿಜೇಶ್ ಕೋವಾಲೆ, ಸೊನ್ನೆಗೌನಿಪಲ್ಲೆ ಬಳಿಯ ಪ್ರಮುಖ ಅಣೆಕಟ್ಟಿನ ಭೂಗತ ಕಾಲುವೆಯಲ್ಲಿ ಕೆಲಸ ಮಾಡುವಾಗ ಮರಣ ಹೊಂದಿದರು. ಈ ಘಟನೆ ಮೇ 30, 2023 ರಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸೊನ್ನೆಗೌನಿಪಲ್ಲೆ ಗ್ರಾಮದಲ್ಲಿ ನಡೆಯಿತು.

PHOTO • Jaideep Hardikar

ಭಂಡಾರದ ಅಲೆಸೂರಿನಲ್ಲಿರುವ ರಮೇಶ್ ಕೋವಲೆ ಮತ್ತು ಅವರ ಪತ್ನಿ ಜನಾಬಾಯಿ ಅವರು ಇಂದಿಗೂ ತಮ್ಮ ಮಗ ವಿಜೇಶ್‌ನ ಆಕಸ್ಮಿಕ ಸಾವಿನ ನೋವಿನಲ್ಲಿದ್ದಾರೆ. ವಿಜೇಶ್‌ ಪ್ರತಿ ವರ್ಷ ಆಂಧ್ರಪ್ರದೇಶಕ್ಕೆ ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದರು. ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುವ ಇವರ ದೊಡ್ಡ ಮಗ ರಾಜೇಶ್ ಅವರ ಮದುವೆಗೆ ತಯಾರಿ ನಡೆಸುತ್ತಿರುವ ಕೋವಾಲೆಯವರು, ಅದೇ ವರ್ಷ ತಮ್ಮ ಮಗನ ಮೊದಲ ಮರಣ ವಾರ್ಷಿಕೋತ್ಸವವನ್ನು ಆಚರಿಸುತ್ತಾರೆ. ಕುಟುಂಬವು ಈಗ ತಮ್ಮ ಇತರ ಗಂಡು ಮಕ್ಕಳನ್ನು ಕಟ್ಟಡ ನಿರ್ಮಾಣ ಅಥವಾ ಹೆವಿ ಡ್ಯೂಟಿ ಕೆಲಸ ಮಾಡಲು ಬೇರೆ ರಾಜ್ಯಗಳಿಗೆ ವಲಸೆ ಹೋಗಲು ಬಿಡುತ್ತಿಲ್ಲ

“ನಾವು ಅವನ ಮೃತದೇಹವನ್ನು ನಮ್ಮ ಗ್ರಾಮಕ್ಕೆ ತಂದು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು 1.5 ಲಕ್ಷ ರುಪಾಯಿ ಖರ್ಚು ಮಾಡಿದ್ದೆವು,” ಎಂದು‌ ರಮೇಶ್ ಕೋವಲೆ ಹೇಳುತ್ತಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರ ಮಗನ ಅಕಾಲಿಕ ಮರಣಕ್ಕೆ ಕೊಟ್ಟಿರುವ ಸ್ಪಷ್ಟ ಕಾರಣ: "ವಿದ್ಯುತ್ ಆಘಾತ."

ವಿಜೇಶ್ ಅವರು ಮದ್ಯಪಾನ ಮಾಡಿ ಆಕಸ್ಮಿಕವಾಗಿ ಸೈಟ್‌ನಲ್ಲಿನ ಲೈವ್ ವೈರ್ ಅನ್ನು ಸ್ಪರ್ಶಿಸಿದ್ದಾರೆ ಎಂದು ಪ್ರಥಮ ತನಿಖಾ ವರದಿ (ಎಫ್‌ಐಆರ್) ಹೇಳುತ್ತದೆ. ಅವರು ಆ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.

"ಏನೇ ಭರವಸೆಯ ನೀಡಿದರೂ ಅವರನ್ನು ನೇಮಕ ಮಾಡಿದ ಕಂಪನಿಯು ನಮಗೆ ಯಾವುದೇ ಪರಿಹಾರವನ್ನು ಕೊಡಲಿಲ್ಲ. ಕಳೆದ ವರ್ಷ ನನ್ನ ಸಂಬಂಧಿಕರಿಂದ ನಾನು ಪಡೆದ ಕೈ-ಸಾಲವನ್ನು ನಾನು ಇನ್ನೂ ಮರುಪಾವತಿ ಮಾಡಬೇಕಾಗಿದೆ," ಎಂದು ಕೋವಲೆ ಹೇಳುತ್ತಾರೆ. ವಿವಾಹವಾಗಲಿರುವ ವಿಜೇಶ್ ಅವರ ದೊಡ್ಡ ಅಣ್ಣ ರಾಜೇಶ್ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರೆ, ಅವರ ಸಣ್ಣ ಅಣ್ಣ ಸತೀಶ್ ಸ್ಥಳೀಯ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಆಂಬ್ಯುಲೆನ್ಸ್‌ನಲ್ಲಿ ಅವರ ಮೃತದೇಹವನ್ನು ರಸ್ತೆ ಮೂಲಕ ತರಲು ನಮಗೆ ಎರಡು ದಿನ ಬೇಕಾಯಿತು ಎಂದು ರಮೇಶ್ ಹೇಳುತ್ತಾರೆ.

ಕಳೆದ ವರ್ಷದಲ್ಲಿ ವಿಜೇಶ್ ಅವರಂತಹ ನಾಲ್ಕೈದು ಯುವಕರು ತಾವು ಕೆಲಸ ಮಾಡುವ ದೂರದ ಸ್ಥಳಗಳಲ್ಲಿ ಅಪಘಾತದಿಂದ ಸಾವನ್ನಪ್ಪಿದ್ದರು ಎಂದು ಅನಿಲ್ ಹೇಳುತ್ತಾರೆ. ಆದರೆ ಅದು ಮತ್ತೊಂದು ಕಥೆ.

ಚಿಖ್ಲಿ ಗ್ರಾಮದ ಸುಖದೇವ್ ಉಯಿಕೆ ತಮ್ಮ ಒಬ್ಬನೇ ಒಬ್ಬ ಯುವಕ ಮಗ ಅತುಲ್‌ನ ಮರಣವನ್ನು ಇನ್ನೂ ಮರೆತಿಲ್ಲ.

"ಇದು ತನ್ನದೇ ಗುಂಪಿನ ಇತರರಿಂದ ನಡೆದ ಕೊಲೆಯೋ ಅಥವಾ ಅಪಘಾತವೋ, ನಮಗೆ ಗೊತ್ತಿಲ್ಲ‌. ನಾವು ಅವನ ಶವವನ್ನು ನೋಡಲೂ ಸಾಧ್ಯವಾಗಲಿಲ್ಲ, ಏಕೆಂದರೆ ಆಂಧ್ರಪ್ರದೇಶದ ಪೊಲೀಸರು ನಮಗೆ ತಿಳಿಸದೆ, ಕೇಳದೆ ಮೃತದೇಹವನ್ನು ಸುಟ್ಟುಹಾಕಿದರು," ಎಂದು ಗ್ರಾಮದಲ್ಲಿ ಕೂಲಿ ಕೆಲಸ ಮಾಡುವ ಸಣ್ಣ ರೈತ ಉಯಿಕೆ ಹೇಳುತ್ತಾರೆ.

PHOTO • Jaideep Hardikar

ಅತುಲ್ ಉಯಿಕೆ ಅವರು ತಾವು ಕೆಲಸ ಮಾಡಲು ಹೋಗಿದ್ದ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಮೇ 2023 ರಂದು ನಿಧನರಾದರು. ಅವರ ತಂದೆ ಸುಖದೇವ್, ತಾಯಿ ಮತ್ತು ಸಹೋದರಿ ಶಾಲು ಮಡವಿ ಇನ್ನೂ ಈ ಸಾವಿಗೆ ಉತ್ತರಗಳನ್ನು ಹುಡುಕುತ್ತಿದ್ದಾರೆ. ಸಾರ್ವತ್ರಿಕ ಚುನಾವಣೆಯ ಮತದಾನದ ಬಗ್ಗೆ ಅವರಿಗೆ ಯೋಚನೆಯೇ ಇಲ್ಲ

2022 ರ ಡಿಸೆಂಬರ್ ತಿಂಗಳಲ್ಲಿ, ಅತುಲ್ ಈ ಪ್ರದೇಶದಿಂದ ವಲಸೆ ಬಂದವರ ಗುಂಪಿನೊಂದಿಗೆ ಆಂಧ್ರಪ್ರದೇಶದ ರಾಜಮಂಡ್ರಿಗೆ ಭತ್ತದ ಗದ್ದೆಗಳಲ್ಲಿ ಥ್ರೆಶರ್ ಆಪರೇಟರ್ ಆಗಿ ಕೆಲಸ ಮಾಡಲು ಹೋಗಿದ್ದರು. ಮೇ 22, 2023 ರಂದು ಅವರು ತಮ್ಮ ಹೆತ್ತವರಿಗೆ ಫೋನ್‌ ಮಾಡಿ ಮನೆಗೆ ಹಿಂದಿರುಗುವುದಾಗಿ ಹೇಳಿದ್ದರು.

"ಅದು ಅವರ ಕೊನೆಯ ಕರೆ," ಉಯಿಕೆ ನೆನಪಿಸಿಕೊಳ್ಳುತ್ತಾರೆ. ಆ ನಂತರ ಅತುಲ್ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಅವರು ಮನೆಗೆ ಬರಲಿಲ್ಲ ಎಂದು ಅವರ ಸಹೋದರಿ ಶಾಲು ಮಡವಿ ಹೇಳುತ್ತಾರೆ. "ಒಂದು ವಾರದ ನಂತರ ನಾವು ವಿಚಾರಿಸಲು ಆರಂಭಿಸಿ, ಆ ಸ್ಥಳಕ್ಕೆ ಹೋದಾಗ ಅವರ ಸಾವಿನ ಬಗ್ಗೆ ನಮಗೆ ಗೊತ್ತಾಯಿತು," ಎಂದು ಅವರು ಹೇಳುತ್ತಾರೆ.

ಮನೆಯವರಿಗೆ ಕೆಲವು ವೀಡಿಯೊ ಕ್ಲಿಪ್‌ಗಳನ್ನು ತೋರಿಸಲಾಯಿತು. ಅವು ಸಂಗತಿಯನ್ನು ಇನ್ನಷ್ಟು ಗೊಂದಲಕ್ಕೀಡು ಮಾಡಿತು. ಕ್ಲಿಪ್‌ಗಳಲ್ಲಿ ಅತುಲ್ ವೈನ್ ಬಾರ್ ಬಳಿ ರಸ್ತೆಯ ಬದಿಯಲ್ಲಿ ಮಲಗಿರುವುದು ಕಂಡುಬಂದಿದೆ. “ಅವನು ಕುಡಿದು ಬಿದ್ದಿದ್ದಾನೆ ಎಂದು ಜನರು ಭಾವಿಸಿದ್ದರು. ಆದರೆ ಅವನಿಗೆ ಪೆಟ್ಟು ಬಿದ್ದಿರಬೇಕು,” ಎಂದು ಅವನ ತಂದೆ ಹೇಳುತ್ತಾರೆ. ಮರಣೋತ್ತರ ಪರೀಕ್ಷೆಯ ವರದಿಯು ಆತನ ತಲೆಯ ಹಿಂಭಾಗದಲ್ಲಿ ಆಳವಾದ ಗಾಯವಾಗಿರುವುದನ್ನು ತಿಳಿಸಿದೆ. ಎಫ್‌ಐಆರ್ ಮತ್ತು ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಗೆ ತೋರಿಸುತ್ತಾ ಪ್ರಕ್ಷುಬ್ಧನಾದ ಉಯಿಕೆಯವರು "ಅವನನ್ನು ಎಲ್ಲಿ ಸಮಾಧಿ ಮಾಡಲಾಗಿದೆ ಎಂದು ಪೊಲೀಸರು ನಮಗೆ ತೋರಿಸಿದರು," ಎಂದು ಹೇಳುತ್ತಾರೆ. "ನಮ್ಮ ಮಗನಿಗೆ ನಿಜವಾಗಿಯೂ ಏನಾಯಿತು ಎಂಬುದು ನಿಗೂಢವಾಗಿ ಉಳಿದಿದೆ," ಎನ್ನುತ್ತಾರೆ ಅವರು. ಅವನ ಸಾವಿನ ಬಗ್ಗೆ ಅವರೊಂದಿಗೆ ಕೆಲಸಕ್ಕೆ ಹೋಗಿದ್ದ ವ್ಯಕ್ತಿಗಳೂ ಬಾಯಿ ಮುಚ್ಚಿಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಈ ಸೀಸನ್‌ನಲ್ಲಿ ಕೆಲಸಕ್ಕಾಗಿ ಗ್ರಾಮವನ್ನು ತೊರೆದಿದ್ದಾರೆ ಎಂದು ಅವರು ಪರಿಗೆ ಹೇಳುತ್ತಾರೆ.

"ಈ ರೀತಿಯ ವಲಸೆ ಕಾರ್ಮಿಕರ ಆಕಸ್ಮಿಕ ಸಾವು ತುಂಬಾ ಸಾಮಾನ್ಯವಾಗಿ ಹೋಗಿದೆ, ಆದರೆ ನಾವು ಹೆಚ್ಚು ನೆರವಾಗಲು ಸಾಧ್ಯವಿಲ್ಲ," ಎಂದು  ಚಿಖ್ಲಿಯ ಸರಪಂಚ್ ಸುಲೋಚನಾ ಮೆಹರ್ ಹೇಳುತ್ತಾರೆ. ಇವರು ಈ ಸಾವಿನ ಬಗ್ಗೆ ಭಂಡಾರಾ ಪೊಲೀಸರ ತನಿಖೆಯನ್ನು ಫಾಲೋಅಪ್‌ ಮಾಡುವ ವ್ಯರ್ಥ ಪ್ರಯತ್ನ ಮಾಡಿದ್ದರು.

ಉಯಿಕೆ ಮತ್ತು ಅವರ ಕುಟುಂಬವು ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸುವುದಕ್ಕಿಂತಲೂ ಅತುಲ್ ಸಾವಿನ ಹಿಂದಿರುವ ಸತ್ಯವನ್ನು ಹುಡುಕುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. "ಅವರಿಂದ ಯಾವುದೇ ಪ್ರಯೋಜನವಿಲ್ಲ," ಎಂದು ಸುಖದೇವ್ ಅವರು ಜನಪ್ರತಿನಿಧಿಗಳ ಬಗ್ಗೆ ಹೇಳುತ್ತಾರೆ. ಸಂಸದರು ಮತ್ತು ಶಾಸಕರು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ತಳಮಟ್ಟದ ಜನರ ಸಂಪರ್ಕವನ್ನು ಕಳೆದುಕೊಂಡಿದ್ದಾರೆ ಎಂಬ ಅಂಶವನ್ನು ಅವರು ಒತ್ತಿಹೇಳುತ್ತಾರೆ.

ಅಲೆಸೂರಿನಲ್ಲಿರುವ ಅನಿಲ್ ಅವರಿಗೆ ಕೋವಲೆ ಮತ್ತು ಉಯಿಕೆಯವರ ದುಃಖಿತಪ್ತ ಕುಟುಂಬಗಳ ಬಗ್ಗೆ ತಿಳಿದಿದೆ. ಏಕೆಂದರೆ ಅವರು ಆ ಮನೆಗಳಲ್ಲಿ ಉತ್ತರಕ್ರಿಯೆಯ ಆಚರಣೆಗಳ ಸಂದರ್ಭದಲ್ಲಿ ಉಚಿತವಾಗಿ ಟೆಂಟ್ ಹಾಕಿದ್ದರು. "ಆದಾಯ ಹೆಚ್ಚು ಇಲ್ಲದಿದ್ದರೂ ನನ್ನ ವ್ಯಾಪಾರ ಮತ್ತು ನನ್ನ ಹೊಲದೊಂದಿಗೆ ನಾನು ನೆಮ್ಮದಿಯಾಗಿದ್ದೇನೆ ಕನಿಷ್ಠ, ನಾನು ಜೀವಂತವಾಗಿದ್ದೇನೆ," ಎಂದು ಅವರು ಹೇಳುತ್ತಾರೆ.

ಅನುವಾದ: ಚರಣ್‌ ಐವರ್ನಾಡು

Jaideep Hardikar

जयदीप हार्दिकर, नागपुर स्थित पत्रकार-लेखक हैं और पारी की कोर टीम के सदस्य भी हैं.

की अन्य स्टोरी जयदीप हरडिकर
Editor : Sarbajaya Bhattacharya

सर्वजया भट्टाचार्य, पारी के लिए बतौर सीनियर असिस्टेंट एडिटर काम करती हैं. वह एक अनुभवी बांग्ला अनुवादक हैं. कोलकाता की रहने वाली सर्वजया शहर के इतिहास और यात्रा साहित्य में दिलचस्पी रखती हैं.

की अन्य स्टोरी Sarbajaya Bhattacharya
Translator : Charan Aivarnad

Charan Aivarnad is a poet and a writer. He can be reached at: [email protected]

की अन्य स्टोरी Charan Aivarnad