ಭಾರತದಲ್ಲಿ 2022ರಲ್ಲಿ ನಿಖರವಾಗಿ 4,45,256 ಪ್ರಕರಣಗಳನ್ನು 'ಮಹಿಳೆಯರ ವಿರುದ್ಧದ ಅಪರಾಧ' ಎಂದು ದಾಖಲಿಸಲಾಗಿದೆ. ಇದರರ್ಥ ಪ್ರತಿದಿನ ಸುಮಾರು 1,220 ಪ್ರಕರಣಗಳು - ಅಧಿಕೃತವಾಗಿ ವರದಿಯಾದ ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಸಂಗ್ರಹಿಸಿದ ಪ್ರಕರಣಗಳು. ಇಂತಹ ಲಿಂಗಾಧಾರಿತ ಹಿಂಸಾಚಾರದ ನೈಜ ಅಂಕಿಸಂಖ್ಯೆಗಳು ಅಧಿಕೃತ ಸಂಖ್ಯೆಗಳಿಗಿಂತ ಹೆಚ್ಚಾಗಿರುತ್ತವೆ.

ಮಹಿಳೆಯರ ಮೇಲಿನ ಹಿಂಸಾಚಾರವು ಅವರ ದೈನಂದಿನ ಬದುಕಿನ ಪ್ರತಿಯೊಂದು ಅಂಶದಲ್ಲೂ ಕಪಟವಾಗಿ ವ್ಯಾಪಿಸಿದೆ. ಕೆಲಸದ ಸ್ಥಳದಲ್ಲಿನ ಕಿರುಕುಳ, ಮಹಿಳೆಯರ ಕಳ್ಳಸಾಗಣೆ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ಹಿಂಸಾಚಾರ, ಕಲೆ ಮತ್ತು ಭಾಷೆಯಲ್ಲಿನ ಲೈಂಗಿಕತೆ - ಇವೆಲ್ಲವೂ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಅಡ್ಡಿಯಾಗುತ್ತವೆ.

ಸಾಮಾನ್ಯವಾಗಿ ಮಹಿಳೆಯರು ತಮ್ಮ ವಿರುದ್ಧ ನಡೆದ ಅಪರಾಧಗಳ ಪ್ರಕರಣಗಳನ್ನು ವರದಿ ಮಾಡಲು ಹಿಂಜರಿಯುತ್ತಾರೆ, ಇದು ಅವರ ಧ್ವನಿಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ ಎನ್ನುವುದು ಕಣ್ಣಿಗೆ ರಾಚುವ ಸತ್ಯವಾಗಿದೆ. ಉದಾಹರಣೆಗೆ ಉತ್ತರ ಪ್ರದೇಶದ 22 ವರ್ಷದ ದಲಿತ ಮಹಿಳೆ ಬರ್ಖಾ ಅವರ ಪ್ರಕರಣವನ್ನು ತೆಗೆದುಕೊಳ್ಳಿ. ಮುಖ್ಯ ಆರೋಪಿ ಸ್ಥಳೀಯ ರಾಜಕೀಯ ನಾಯಕನಾಗಿದ್ದರಿಂದ ಪೊಲೀಸರು ಅತ್ಯಾಚಾರ ಮತ್ತು ಅಪಹರಣದ ದೂರಿಗೆ ಎಫ್ಐಆರ್ ದಾಖಲಿಸಲು ನಿರಾಕರಿಸಿದರು ಎಂದು ಬರ್ಖಾ ಹೇಳುತ್ತಾರೆ. ಹರಿಯಾಣದ ನಿವಾಸಿಯಾಗಿರುವ ಮತ್ತೊಬ್ಬ ಅತ್ಯಾಚಾರ ಸಂತ್ರಸ್ತೆ ಮಾಲಿನಿ, " ಪೊಲೀಸರು ಆರೋಪಿಗಳಿಂದ ಸ್ವಲ್ಪ ಹಣವನ್ನು ತೆಗೆದುಕೊಂಡು ರಾಜಿ ಮಾಡಿಕೊಳ್ಳುವಂತೆ ಹೇಳಿದರು.” ನಾನು ರಾಜಿ ಮಾಡಿಕೊಳ್ಳಲು ನಿರಾಕರಿಸಿದಾಗ, ಅವರು ಗದರಿಸಿದರು ಮತ್ತು " ರಾಜಿ ಮಾಡಿಕೊಳ್ಳದಿದ್ದರೆ ನಿನ್ನನ್ನು ಲಾಕಪ್ಪಿನಲ್ಲಿರಿಸುತ್ತೇವೆ " ಎಂದು ಹೇಳಿದರು.

ಪೊಲೀಸ್ ನಿರ್ಲಕ್ಷ್ಯ, ಅನೌಪಚಾರಿಕ ಖಾಪ್ ಪಂಚಾಯತುಗಳು ಮತ್ತು ವೈದ್ಯಕೀಯ ಮತ್ತು ಕಾನೂನು ಸಂಪನ್ಮೂಲಗಳ ಲಭ್ಯತೆಯ ಕೊರತೆಯು ಮಹಿಳೆಯರು ತಮ್ಮ ವಿರುದ್ಧದ ಹಿಂಸಾಚಾರಕ್ಕೆ ಪರಿಹಾರವನ್ನು ಪಡೆಯುವುದನ್ನು ತಡೆಯುವಲ್ಲಿ ಒಟ್ಟಾಗಿ ಕೆಲಸ ಮಾಡುತ್ತವೆ. 2020ರ ವರದಿ, ನ್ಯಾಯ ಪಡೆಯುವಲ್ಲಿ ಅಡೆತಡೆಗಳು: ಭಾರತದ ಉತ್ತರ ಪ್ರದೇಶದ 14 ಅತ್ಯಾಚಾರ ಸಂತ್ರಸ್ತರ ಅನುಭವಗಳ ವರದಿಯನ್ನು ಪರಿಶೀಲಿಸಿದಾಗ ಅದರಲ್ಲಿ ಆರು ಪ್ರಕರಣಗಳಲ್ಲಿ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರುಗಳನ್ನು ತಲುಪಿಸಿದ ನಂತರವೇ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಹೇಳುತ್ತದೆ. ಎಫ್ಐಆರ್ ದಾಖಲಾದ ಉಳಿದ ಐದು ಪ್ರಕರಣಗಳಲ್ಲಿ, ನ್ಯಾಯಾಲಯದ ಆದೇಶದ ನಂತರವೇ ಈ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಜಾತಿ, ವರ್ಗ, ಅಂಗವೈಕಲ್ಯ ಮತ್ತು ವಯಸ್ಸಿನಂತಹ ಗುರುತುಗಳು ಲಿಂಗಾಧಾರಿತ ಹಿಂಸಾಚಾರವನ್ನು ನಿವಾರಿಸಲು ಅಸ್ತಿತ್ವದಲ್ಲಿರುವ ಸರ್ಕಾರಿ ಸೌಲಭ್ಯಗಳಿಂದ ಹೊರಗಿಡುತ್ತವೆ. ದಲಿತ್ ಹ್ಯೂಮನ್ ರೈಟ್ಸ್ ಡಿಫೆಂಡರ್ಸ್ ನೆಟ್ವರ್ಕ್ ಸಂಸ್ಥೆಯ ವರದಿಯ ಪ್ರಕಾರ, ದಲಿತ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯದ 50 ಪ್ರಕರಣಗಳಲ್ಲಿ ಶೇಕಡಾ 62ರಷ್ಟು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಅಪರಾಧಿಗಳು ಗುರಿಯಾಗಿಸಿಕೊಂಡಿದ್ದಾರೆ. 18ರಿಂದ 30 ವರ್ಷದೊಳಗಿನ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದು ಹೆಚ್ಚು ಎಂದು ಕ್ರೈಮ್ ಇನ್ ಇಂಡಿಯಾ 2022 ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸರಿಯಾಗಿ ಮಾತನಾಡಲು ಬಾರದಿರುವುದು ಮತ್ತು ಆರೈಕೆದಾರರ ಮೇಲಿನ ಅವಲಂಬನೆಯಿಂದಾಗಿ ಮಾನಸಿಕ ಅಥವಾ ದೈಹಿಕ ಅಂಗವೈಕಲ್ಯ ಹೊಂದಿರುವ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಲೈಂಗಿಕ ಹಿಂಸಾಚಾರಕ್ಕೆ ಹೆಚ್ಚು ಒಳಗಾಗುತ್ತಾರೆ ಎಂದು ಈ ವರದಿ ಹೇಳುತ್ತದೆ. ಮಾನಸಿಕ ಅಂಗವೈಕಲ್ಯದೊಂದಿಗೆ ಬದುಕುತ್ತಿರುವ 21 ವರ್ಷದ ಕಜ್ರಿಯ ಪ್ರಕರಣದಂತೆ ದೂರುಗಳು ದಾಖಲಾದಾಗಲೂ, ಸಂತ್ರಸ್ತರ ಪಾಲಿಗೆ ಕಾನೂನು ಪ್ರಕ್ರಿಯೆಯೇ ಶಿಕ್ಷೆಯಾಗುತ್ತದೆ. ಕಜ್ರಿಯವರನ್ನು 2010ರಲ್ಲಿ ಅಪಹರಿಸಿ ಕಳ್ಳಸಾಗಣೆಗೆ ಒಳಪಡಿಸಲಾಯಿತು. ನಂತರ ಅವರು ಬಾಲಕಾರ್ಮಿಕೆಯಾಗಿ ದುಡಿಯುವುದರ ಜೊತೆಗೆ ಲೈಂಗಿಕ ದೌರ್ಜನ್ಯಕ್ಕೂ ಒಳಗಾಗುತ್ತ ಹತ್ತು ವರ್ಷ ಕಳೆದರು . “ಈ ಪ್ರಕರಣದಿಂದಾಗಿ ನನಗೆ ಒಂದೇ ಸ್ಥಳದಲ್ಲಿ ಕೆಲಸ ಮುಂದುವರೆಸುವುದು ಕಷ್ಟವಾಗುತ್ತಿದೆ. ಕಜ್ರಿಯನ್ನು ಪೊಲೀಸ್‌ ಬಳಿ ಹೇಳಿಕೆ ಕೊಡಿಸಲು, ಪರೀಕ್ಷೆಗಳಿಗೆ ಕರೆದುಕೊಂಡು ಹೋಗಲು ಪದೇ ಪದೇ ಹೋಗಬೇಕಾಗುತ್ತದೆಯಾದ ಕಾರಣ ಪದೇ ಪದೇ ರಜೆ ತೆಗೆದುಕೊಳ್ಳಬೇಕಾಗುತ್ತದೆ. ಹೆಚ್ಚು ರಜೆ ಹಾಕಿದಾಗ ನನ್ನನ್ನು ಕೆಲಸದಿಂದ ತೆಗೆದುಹಾಕುತ್ತಾರೆ” ಎಂದು ಕಜ್ರಿಯ ತಂದೆ ಹೇಳುತ್ತಾರೆ.

ಆರಂಭಿಕ ಭಾರತದಲ್ಲಿ ಬ್ರಾಹ್ಮಣವಾದಿ ಪಿತೃಪ್ರಭುತ್ವದ ಪರಿಕಲ್ಪನೆ ಎಂಬ ಪ್ರಬಂಧದಲ್ಲಿ, ಪ್ರೊಫೆಸರ್ ಉಮಾ ಚಕ್ರವರ್ತಿ ಅವರು "ಪರಿಣಾಮಕಾರಿ ನಿಯಂತ್ರಣ ವ್ಯವಸ್ಥೆಯನ್ನು ರಚಿಸುವ ನಿರಂತರ ಗೀಳು ಮತ್ತು ಅವರನ್ನು [ಮಹಿಳೆಯರನ್ನು] ನಿರಂತರವಾಗಿ ರಕ್ಷಿಸುವ ಅಗತ್ಯ" ಬಗ್ಗೆ ಬರೆಯುತ್ತಾರೆ. ಪ್ರಬಂಧವು ಹೇಳುವಂತೆ, ಪಿತೃಪ್ರಭುತ್ವದ ಕಟ್ಟುಪಾಡುಗಳಿಗೆ ಅಡಿಯಾಳಾಗಿರುವ ಮಹಿಳೆಯರಿಗೆ ಬಹುಮಾನ ನೀಡುವ ಈ ನಿಯಂತ್ರಣವನ್ನು ಹೆಚ್ಚಾಗಿ ಕೈಗೊಳ್ಳಲಾಗುತ್ತದೆ. ಮಹಿಳೆಯರ ಚಲನಶೀಲತೆಯನ್ನು ಹಿಂಸಾತ್ಮಕವಾಗಿ ಮಿತಿಗೊಳಿಸುವ ನಿಯಂತ್ರಕ ಮಾನದಂಡಗಳು ಹೆಚ್ಚಾಗಿ ಮಹಿಳೆಯರ ಲೈಂಗಿಕತೆ ಮತ್ತು ಆರ್ಥಿಕ ಸ್ವಾತಂತ್ರ್ಯದ ಭಯದಲ್ಲಿ ಬೇರೂರಿವೆ. "ಈ ಮೊದಲು ಅವರು [ಆಕೆಯ ಅತ್ತೆ ಮಾವಂದಿರು] ನಾನು ಹಳ್ಳಿಯ ಗರ್ಭಿಣಿ ಮಹಿಳೆಯರನ್ನು ನೋಡಲು ಹೋದಾಗ ಅಥವಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ನಾನು ಬೇರೆ ಪುರುಷರನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎಂದು ಹೇಳುತ್ತಿದ್ದರು. ಆಶಾ ಕಾರ್ಯಕರ್ತೆಯಾಗಿ ಇದು ನನ್ನ ಕರ್ತವ್ಯ" ಎಂದು 30 ವರ್ಷದ ಗಿರಿಜಾ ಹೇಳುತ್ತಾರೆ. ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ನಿವಾಸಿಯಾದ ಗಿರಿಜಾ, ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) ಕೆಲಸವನ್ನು ತ್ಯಜಿಸುವಂತೆ ತನ್ನ ಅತ್ತೆ ಮಾವಂದಿರಿಂದ ಒತ್ತಡವನ್ನು ಎದುರಿಸುತ್ತಿದ್ದಾರೆ. " ನಿನ್ನೆ ನನ್ನ ಗಂಡನ ಅಜ್ಜ ನನ್ನನ್ನು ಲಾಠಿಯಿಂದ ಹೊಡೆದರು ಮತ್ತು ಉಸಿರುಗಟ್ಟಿಸಲು ಸಹ ಪ್ರಯತ್ನಿಸಿದರು " ಎಂದು ಅವರು ಹೇಳುತ್ತಾರೆ.

ಮಹಿಳೆಯರು ಕೆಲಸ ಮಾಡಿ ಹಣವನ್ನು ಸಂಪಾದಿಸಲು ಯಶಸ್ವಿಯಾದಾಗ, ಕೆಲಸದ ಸ್ಥಳದಲ್ಲಿನ ಕಿರುಕುಳವು ಅವರಿಗೆ ಎದುರಾಗುವ ಮುಂದಿನ ಲಿಂಗತ್ವದ ಅಡಚಣೆಯಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ವಲಯದ ಕಾರ್ಮಿಕರ ಸಮೀಕ್ಷೆಯ ಪ್ರಕಾರ, ಶೇಕಡಾ 17ರಷ್ಟು ಮಹಿಳಾ ಕಾರ್ಮಿಕರು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಎದುರಿಸಿರುವುದಾಗಿ ಹೇಳಿದ್ದಾರೆ. "ಪುರುಷ ವ್ಯವಸ್ಥಾಪಕರು, ಮೇಲ್ವಿಚಾರಕರು ಮತ್ತು ಮೆಕ್ಯಾನಿಕ್‌ಗಳು - ನಮ್ಮನ್ನು ಮುಟ್ಟಲು ಪ್ರಯತ್ನಿಸುತ್ತಿದ್ದರು ಮತ್ತು ನಮಗೆ ದೂರು ನೀಡಲು ಯಾವುದೇ ವ್ಯವಸ್ಥೆ ಇರಲಿಲ್ಲ" ಎಂದು ಗಾರ್ಮೆಂಟ್ ಉದ್ಯಮದ ಕಾರ್ಖಾನೆ ಕಾರ್ಮಿಕ ಲತಾ ಹೇಳುತ್ತಾರೆ (ಓದಿ: ದಿಂಡಿಗಲ್: ದಲಿತ ಮಹಿಳೆಯರು ಒಗ್ಗೂಡಿದಾಗ ). ಮಹಿಳಾ ಕಾರ್ಮಿಕರ ಸಾಮೂಹಿಕ ಚೌಕಾಸಿ ಶಕ್ತಿಯನ್ನು ಬಲಪಡಿಸುವ ಗುರಿಯೊಂದಿಗೆ, ವಿಶಾಖ ಮಾರ್ಗಸೂಚಿಗಳು (1997) ದೂರು ಸಮಿತಿಯನ್ನು ರಚಿಸಲು ಸಂಸ್ಥೆಗಳಿಗೆ ಶಿಫಾರಸು ಮಾಡುತ್ತದೆ, ಅದು ಮಹಿಳೆಯ ನೇತೃತ್ವದಲ್ಲಿರಬೇಕು ಮತ್ತು ಅದರ ಅರ್ಧಕ್ಕಿಂತ ಕಡಿಮೆಯಿಲ್ಲದ ಮಹಿಳಾ ಸದಸ್ಯರನ್ನು ಹೊಂದಿರಬೇಕು. ಕಾಗದದ ಮೇಲೆ ಅಂತಹ ನಿರ್ದೇಶನಗಳ ಅಸ್ತಿತ್ವದ ಹೊರತಾಗಿಯೂ, ಅವುಗಳ ಅನುಷ್ಠಾನ ದುರ್ಬಲವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಕೆಲಸದ ಸ್ಥಳ ಮತ್ತು ಮನೆಗಳಿಗೆ ವ್ಯಾಪಿಸಿದೆ.

2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್) ಯಲ್ಲಿ, 18-49 ವರ್ಷ ವಯಸ್ಸಿನ ಶೇಕಡಾ 29ರಷ್ಟು ಮಹಿಳೆಯರು 15 ನೇ ವಯಸ್ಸಿನಿಂದ ಮನೆಯಲ್ಲಿ ದೈಹಿಕ ಹಿಂಸೆಯನ್ನು ಅನುಭವಿಸಿದ್ದಾರೆಂದು ಹೇಳಲಾಗಿದೆ. ಆರು ಪ್ರತಿಶತದಷ್ಟು ಮಹಿಳೆಯರು ಲೈಂಗಿಕ ದೌರ್ಜನ್ಯವನ್ನು ಅನುಭವಿಸಿರುವುದಾಗಿ ವರದಿ ಮಾಡಿದ್ದಾರೆ. ಆದರೆ, ಲೈಂಗಿಕ ಅಥವಾ ದೈಹಿಕ ಹಿಂಸೆಯನ್ನು ಅನುಭವಿಸಿದ ಮಹಿಳೆಯರಲ್ಲಿ ಕೇವಲ 14 ಪ್ರತಿಶತದಷ್ಟು ಮಹಿಳೆಯರು ಮಾತ್ರ ಅದನ್ನು ತಡೆಯಲು ಸಹಾಯವನ್ನು ಕೋರಿದ್ದಾರೆ - ಕುಟುಂಬ, ಸ್ನೇಹಿತರು ಅಥವಾ ಸರ್ಕಾರಿ ಸಂಸ್ಥೆಗಳಿಂದ. ಮಹಿಳೆಯರು ಸಂಗಾತಿಗಳಿಂದ ಬಳಲುತ್ತಿರುವ ಹಿಂಸಾಚಾರದ ಪ್ರಕರಣಗಳು ಹೆಚ್ಚುತ್ತಿವೆ. " ಮೇರಿ ಘರ್ವಾಲಿ ಹೈ, ತುಮ್ ಕ್ಯೂಂ ಬೀಚ್ ಮೇ ಆ ರಹೇ ಹೋ [ಅವಳು ನನ್ನ ಹೆಂಡತಿ. ನೀವು ಯಾಕೆ ಮಧ್ಯಪ್ರವೇಶಿಸುತ್ತಿದ್ದೀರಿ?"ಎಂದು ಯಾರಾದರೂ ತನ್ನ ಹೆಂಡತಿಯನ್ನು ಹೊಡೆಯುವುದನ್ನು ಆಕ್ಷೇಪಿಸಿದಾಗ ರವಿ ಹೇಳುತ್ತಿದ್ದ. ಕೇವಲ 2021ರಲ್ಲಿ, ವಿಶ್ವದಾದ್ಯಂತ ಸುಮಾರು 45,000 ಹೆಣ್ಣುಮಕ್ಕಳು ತಮ್ಮ ಸಂಗಾತಿಗಳು ಅಥವಾ ಇತರ ಕುಟುಂಬ ಸದಸ್ಯರಿಂದ ಕೊಲ್ಲಲ್ಪಟ್ಟಿದ್ದಾರೆ .

ನಿಸ್ಸಂದೇಹವಾಗಿ, ಜನಪ್ರಿಯ ಸಂಸ್ಕೃತಿಯಲ್ಲಿ ಚಿತ್ರಿಸಲಾದ ಪ್ರಣಯ ಸಂಬಂಧಗಳಲ್ಲಿ ಹಿಂಸೆಯ ಅನುಮೋದನೆಯು ಇದಕ್ಕೆ ಕಾರಣವಾಗಿರುವ ಒಂದು ಅಂಶವಾಗಿದೆ . ಯುವ ವೀಕ್ಷಕರ ಮೇಲೆ ಭಾರತೀಯ ಸಿನೆಮಾದ ಪ್ರಭಾವ ಹೇಗಿದೆಯೆಂದರೆ , "ಛೇಡಿಸುವುದು" ಅಥವಾ ಈವ್-ಟೀಸಿಂಗ್ ( ಬೀದಿ ಲೈಂಗಿಕ ಕಿರುಕುಳ ) ಚಿತ್ರಣಗಳನ್ನು ಶೇಕಡಾ 60 ರಷ್ಟು ಯುವಕರು ನಿರುಪದ್ರವಿ ತಮಾಷೆಯಾಗಿ ನೋಡುತ್ತಾರೆ. ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಘೋಷಿತ ಪ್ರಕರಣಗಳೊಂದಿಗೆ ಹಾಲಿ ಸಂಸದರು / ಶಾಸಕರ ವಿಶ್ಲೇಷಣೆ 2024 ಎಂಬ ಮತ್ತೊಂದು ಇತ್ತೀಚಿನ ಪ್ರಕಟಣೆಯಲ್ಲಿ ಲಿಂಗತ್ವ ಹಿಂಸಾಚಾರದ ಕೆಟ್ಟ ಸಾಮಾನ್ಯೀಕರಣವನ್ನು ಗಮನಿಸಲಾಗಿದೆ, ಇದು ಹಾಲಿ ಸಂಸದರು ಮತ್ತು ಶಾಸಕರ ಪೈಕಿ 151 ಪ್ರತಿನಿಧಿಗಳು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ಘೋಷಿಸಿದ್ದಾರೆ ಎಂದು ಹೇಳುತ್ತದೆ.

ಈ ಆತಂಕಕಾರಿ ವಿಷಯಗಳೊಂದಿಗೆ ಬಲಿಪಶುವನ್ನುಅವಮಾನಿಸುವ ಸಂಸ್ಕೃತಿ ಸೇರಿ, ವಿಶೇಷವಾಗಿ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದವರ ಬಗ್ಗೆ: ಬೀಡ್ ಜಿಲ್ಲೆಯಲ್ಲಿ ತನ್ನ ಹಳ್ಳಿಯ ನಾಲ್ವರು ಪುರುಷರಿಂದ ಅತ್ಯಾಚಾರಕ್ಕೊಳಗಾದ ರಾಧಾ, ನಂತರ ಅವರ ವಿರುದ್ಧ ಮಾತನಾಡಿದಾಗ ಅವರನ್ನು " ಚಾರಿತ್ರ್ಯಹೀನೆ " ಎಂದು ಕರೆಯಲಾಯಿತು ಮತ್ತು ಜೊತೆಗೆ ತನ್ನ ಹಳ್ಳಿಗೆ ಅಪಖ್ಯಾತಿ ತರುತ್ತಿದ್ದಾಳೆ ಎಂದು ಆರೋಪಿಸಲಾಯಿತು.

ಇಂತಹ ಅಪರಾಧಗಳ ಪಟ್ಟಿ ಉದ್ದವಾಗಿದೆ, ಮತ್ತು ಅವುಗಳ ಪಿತೃಪ್ರಭುತ್ವದ ಬೇರುಗಳು ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿವೆ. ಲಿಂಗಾಧಾರಿತ ಹಿಂಸಾಚಾರದ ಬಗ್ಗೆ ಪರಿ ಲೈಬ್ರರಿ ವಿಭಾಗದಲ್ಲಿ ಇನ್ನಷ್ಟು ಓದಬಹುದು.

ಕವರ್ ಡಿಸೈನ್: ಸ್ವದೇಶ ಶರ್ಮಾ

ಅನುವಾದ: ಶಂಕರ. ಎನ್. ಕೆಂಚನೂರು

Dipanjali Singh

Dipanjali Singh is an Assistant Editor at the People's Archive of Rural India. She also researches and curates documents for the PARI Library.

Other stories by Dipanjali Singh
PARI Library Team

The PARI Library team of Dipanjali Singh, Swadesha Sharma and Siddhita Sonavane curate documents relevant to PARI's mandate of creating a people's resource archive of everyday lives.

Other stories by PARI Library Team
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru