ಸೌದೆಯ ಸಂಗ್ರಹವನ್ನು ಸಾಲಾಗಿ ಜೋಡಿಸಿಟ್ಟಿದ್ದ ಎರಡು ಪಕ್ಕಾ ಮನೆಗಳ ಧೂಳು ತುಂಬಿದ ರಸ್ತೆಗೆ ಪ್ರವೇಶಿಸುತ್ತಿದ್ದಂತೆಯೇ ನಲ್ಲಮ್ಮ, ದ್ರವರೂಪದ ಹೊಲಸು ಮಡುಗಟ್ಟಿದ ತೊರೆಯ ಆಚೆಯ ಬದಿಗೆ ಹೆಜ್ಜೆಯಿಟ್ಟರು. ನೀಲಿ ಹೂಗಳ ಶಿಫಾನ್‌ ಸೀರಿಯುಟ್ಟಿದ್ದ ಆಕೆ ಹೆಚ್ಚು ಬಳಕೆಯಲ್ಲಿರುವಂತೆ ಕಾಣುತ್ತಿದ್ದ ಮಾರ್ಗವೊಂದರಲ್ಲಿ ದಾರಿಮಾಡಿಕೊಳ್ಳುತ್ತ ಬರಿಗಾಲಿನಲ್ಲಿ ತೆರಳಿದರು.

ನಾವು ಈಗ ತಾನೆ ಸಾಗಿ ಬಂದ ಗುಡಿಕಲ್‌ ಗ್ರಾಮದ ಮನೆಗಳತ್ತ ಬೊಟ್ಟು ಮಾಡುತ್ತ, “ಪೊದೆ, ಒಣ ಹುಲ್ಲು, ಕಸದಿಂದ ತುಂಬಿದ ತೆರೆದ ಸ್ಥಳವನ್ನು ತಲುಪಿ, ಜಾಗವಿರುವ ಕಡೆ ನಾವು ಕುಳಿತುಕೊಳ್ಳುತ್ತೇವೆ (ಶೌಚಕ್ಕೆ). ನಮ್ಮ ಯಾವುದೇ ಮನೆಗಳಿಗೆ ಶೌಚಾಲಯವಿಲ್ಲ. ಸಿಸೇರಿಯನ್‌ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರಲಿ, ಬಸಿರು ಅಥವಾ ಋತುಕಾಲವಿರಲಿ ನಾವು ಇಲ್ಲಿಗೇ ಬರಬೇಕು” ಎಂದು ಆಕೆ ನಿಶ್ಚಯಪೂರ್ವಕವಾಗಿ ಹೇಳಿದರು.

ಕೆಲವು ವರ್ಷಗಳಿಂದಲೂ, ಇಂತಿ ವೆನುಕ (ಮನೆಯ ಹಿಂಭಾಗ), ಬಯಲು ಶೌಚಕ್ಕೆಂದು ಗೊತ್ತುಪಡಿಸಿದ ಜಾಗವಾಗಿದೆ. “ನನ್ನ ಬೀದಿಯ ಪ್ರತಿಯೊಬ್ಬ ಮಹಿಳೆಯೂ ಇಲ್ಲಿಗೆ ಬರುತ್ತಾರೆ. ಬೀದಿಯ ಮತ್ತೊಂದು ಕಡೆಯಲ್ಲಿ ಪುರುಷರಿಗೆ ಇಂಥದ್ದೇ ಜಾಗವಿದೆ” ಎಂಬುದಾಗಿ ನಲ್ಲಮ್ಮ ವಿವರಿಸಿದರು.

ಕರ್ನೂಲ್‌ ಜಿಲ್ಲೆಯ ಎಮ್ಮಿಗನೂರು ವಲಯದ ಗುಡಿಕಲ್‌ ಗ್ರಾಮದ ಜನಸಂಖ್ಯೆ 11,213 (ಜನಗಣತಿ 2011). 2019ರಲ್ಲಿ ಕೇಂದ್ರ ಸರ್ಕಾರ ಮತ್ತು ನಂತರದಲ್ಲಿ ರಾಜ್ಯ ಸರ್ಕಾರದಿಂದ “ಬಯಲು ಶೌಚ – ಮುಕ್ತ”ವೆಂದು ಇದನ್ನು ಘೋಷಿಸಲಾಯಿತು. ಆದರೆ ನಲ್ಲಮ್ಮ ವಾಸಿಸುವ ಗುಡಿಕಲ್‌ನ ಮೂರನೆ ವಾರ್ಡ್‌, ಖಂಡಿತವಾಗಿಯೂ ಬಯಲು ಶೌಚ – ಮುಕ್ತವಲ್ಲವೆಂದು ನಿವಾಸಿಗಳು ತಿಳಿಸುತ್ತಾರೆ. ವಾಸ್ತವವಾಗಿ, ಇಲ್ಲಿನ ಎಂಟು ವಾರ್ಡ್‌ಗಳಲ್ಲಿನ ಆರು ವಾರ್ಡ್‌ಗಳಿಗೆ ಶೌಚಾಲಯವಿಲ್ಲ. (ಅಧಿಕೃತ ದತ್ತಾಂಶವು 20 ವಾರ್ಡುಗಳೆಂಬುದಾಗಿ ತಿಳಿಸುತ್ತದೆಯಾದೂ, ಸ್ಥಳೀಯ ಆಡಳಿತಾಧಿಕಾರಿ ಮತ್ತು ಆಕೆಯ ಸಹಾಯಕನನ್ನು ಒಳಗೊಂಡಂತೆ ಸ್ಥಳೀಯ ಸರ್ಕಾರಿ ನೌಕರರು ಎಂಟು ವಾರ್ಡುಗಳೆಂದು ತಿಳಿಸುತ್ತಾರೆ.)

ಸ್ಥೂಲವಾಗಿ ಹೇಳುವುದಾದರೆ, ಗುಡಿಕಲ್‌ನ 25% ಮನೆಗಳು ದಿನಗೂಲಿ ಕಾರ್ಮಿಕರದ್ದು; ಜನಸಂಖ್ಯೆಯ ಅರ್ಧದಷ್ಟು ಕೃಷಿಕರು. ಬಹುತೇಕ ರೈತರು ಮೆಣಸಿನಕಾಯಿ, ಹತ್ತಿಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಈ ಪ್ರದೇಶದಲ್ಲಿ ಮುಂದುವರಿಯುತ್ತಿರುವ ನೀರಿನ ಸಮಸ್ಯೆಯಿಂದಾಗಿ, ಒಟ್ಟಾರೆ 1420 ಹೆಕ್ಟೇರ್‌ ನೀರಾವರಿ ಭೂಮಿಯು ಪ್ರಮುಖವಾಗಿ, ಮಳೆ-ಸಿಂಚಿತ(rain-fed) ಜಾಗವಾಗಿದೆ.

ಹಳೆಯ ಬನ್ನಿ ಮರವೊಂದರ ನೆರಳಿನಲ್ಲಿ ವಿಶ್ರಮಿಸುತ್ತಿದ್ದ ಕಾಡು ಹಂದಿಗಳತ್ತ ಬೊಟ್ಟು ಮಾಡುತ್ತ, “ಬಿಳಿಯ ಕೊಕ್ಕರೆ ಮತ್ತು ಹಾವುಗಳೊಂದಿಗೆ ಇವೂ ಇಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ನಾವು ಬರುವಾಗ, ಮುಂಜಾನೆ ಕಗ್ಗತ್ತಲಿರುತ್ತದೆ. ಇಲ್ಲಿಯವರೆಗೂ ಏನೂ ಆಗಿಲ್ಲವಾದರೂ ಭಯವಂತೂ ಇದೆ” ಎಂದರು ನಲ್ಲಮ್ಮ.

The area where the residents of Gudikal use to defecate (left) and an open sewer (right) in Gudikal’s ward three
PHOTO • Kruti Nakum
The area where the residents of Gudikal use to defecate (left) and an open sewer (right) in Gudikal’s ward three
PHOTO • Kruti Nakum

ಗುಡಿಕಲ್‌ನ ನಿವಾಸಿಗಳು ಶೌಚಕ್ಕೆ ಬಳಸುವ ಪ್ರದೇಶ (ಎಡಕ್ಕೆ) ಮತ್ತು ಗುಡಿಕಲ್‌ನ ಮೂರನೇ ವಾರ್ಡಿನ ತೆರೆದ ಚರಂಡಿ(ಬಲಕ್ಕೆ)

ಮೂರು ಮಕ್ಕಳ ತಾಯಿ ಮುಂಜಾನೆ ತಮ್ಮ ಗೃಹಕೃತ್ಯಗಳಲ್ಲಿ ಮಗ್ನರಾಗಿದ್ದರು. ಬೆಳಿಗ್ಗೆ 4 ಗಂಟೆಗೆ ಇನ್ನೂ ಕತ್ತಲಿರುವಾಗಲೇ ತನ್ನ ಹಳ್ಳಿಯ ಬಹುತೇಕ ಜನರಂತೆ ಇವರೂ ಇಲ್ಲಿಗೆ ಬರುತ್ತಾರೆ. ದಿನಗೂಲಿ ಕಟ್ಟಡ ಕಾರ್ಮಿಕರಾದ ಈಕೆ, ಕೆಲಸನ್ನರಸಿ ಮುಂಜಾನೆ 8 ಗಂಟೆಯ ಹೊತ್ತಿಗೆ ಸುಮಾರು ಮೂರು ಕಿ.ಮೀ. ದೂರದ ಯೆಮ್ಮಿಗನೂರಿನ ಒಂದು ಊರಿಗೆ ತೆರಳುತ್ತಾರೆ. “ನಾನು ಕೆಲಸ ಮಾಡುವ ನಿರ್ಮಾಣ ಸ್ಥಳದಲ್ಲಿಯೂ ಶೌಚಾಲಯಗಳಿಲ್ಲ. ನಮ್ಮ ದೇಹಬಾಧೆಯನ್ನು ತೀರಿಸಿಕೊಳ್ಳಲು ಸಮೀಪದ ಮರ ಅಥವಾ ಬಯಲಿನ ಜಾಗಕ್ಕೆ ಹೋಗುತ್ತೇವೆ” ಎಂದರವರು.

*****

ಆಂಧ್ರ ಪ್ರದೇಶದಲ್ಲಿ ಪ್ರಮುಖವಾಗಿ ಪರಿಶಿಷ್ಟ ಜಾತಿ ಮತ್ತು ಇತರೆ ಹಿಂದುಳಿದ ವರ್ಗವೆಂದು ಪಟ್ಟಿ ಮಾಡಿರುವ, ಇಲ್ಲಿನ ಸುತ್ತಮುತ್ತ ವಾಸಿಸುವ ವಿವಿಧ ಸಮುದಾಯಗಳ ಜನರನ್ನು ತಿಳಿಸುತ್ತ, “ಮಾಲ, ಮಾದಿಗ, ಛಕಲಿ, ನೆಟ್ಕನಿ, ಬೊಯ, ಪದ್ಮಸಾಲಿ ಈ ಪ್ರತಿಯೊಬ್ಬರೂ ವಿವಿಧ ಜಾಗಗಳಿಗೆ ತೆರಳುತ್ತಾರೆ. ಪುರುಷರು ಮತ್ತು ಮಹಿಳೆಯರು ವಿವಿಧ ಜಾಗಗಳಿಗೆ; ಯುವಜನರು ಹಾಗೂ ಅವರಲ್ಲಿನ ಹಿರಿಯರು ಬೇರೆ ಬೇರೆ ಸ್ಥಳಗಳಿಗೆ ತೆರಳುತ್ತಾರೆ” ಎಂಬುದಾಗಿ ಗುಡಿಕಲ್‌ನ ಐದನೇ ವಾರ್ಡಿನ ನಿವಾಸಿ, ಬೋಯ ಸಮುದಾಯಕ್ಕೆ ಸೇರಿದ ೬೦ರ ಹೊಸ್ತಿಲಲ್ಲಿರುವ ಆಕೆ ತಿಳಿಯಪಡಿಸಿದರು.

೬೦ರ ವಯಸ್ಸಿನ ಅಂಜನಮ್ಮ, ಎಲ್ಲಮ್ಮ ಅವರೊಂದಿಗೆ ಐದನೇ ವಾರ್ಡಿನ ಸಮುದಾಯ ಸ್ಥಳವೊಂದರಲ್ಲಿ ಕುಳಿತಿದ್ದ ರಮಣಮ್ಮ. ಅನೇಕ ಸ್ಥಾನಿಕರಿಗೆ ಭೂಮಿಯ ಒಡೆತನವಿಲ್ಲ. ಅವರು ಕಚ್ಚಾ ಮನೆಗಳಲ್ಲಿ ವಾಸಿಸುತ್ತಾರೆ. “ನಮ್ಮ ಇಳಿ ವಯಸ್ಸಿನಲ್ಲಿ, ಏಕಾಂತವನ್ನರಸಿ, ಬಂಡೆ ಅಥವಾ ಬೆಟ್ಟಗಳನ್ನು ಹತ್ತಲು ಸಾಧ್ಯವಾಗುವುದಿಲ್ಲ. ಹತ್ತಿರದ ಜಾಗಕ್ಕೆ ತೆರಳಬೇಕಾಗುತ್ತದೆ” ಎನ್ನುತ್ತಾರೆ.

ಕೆಲವು ತಿಂಗಳ ಹಿಂದೆ, ಪ್ರಬಲ ಜಾತಿಯವರೊಬ್ಬರು ಆ ಭೂಮಿಯನ್ನು ಕೊಳ್ಳುವವರೆಗೂ ಗುಡಿಕಲ್‌ ಕೆರೆಯು ಅವರ ಬಯಲು ಶೌಚದ ಸ್ಥಳವಾಗಿತ್ತು. ಈಗ ಬಯಲಿಗೆ ಹತ್ತಿರದಲ್ಲಿ ಗುಡಿಸಲುಗಳನ್ನು ಕಟ್ಟಿಕೊಳ್ಳುತ್ತೇವೆ” ಎಂದು ನಿರಾಶರಾಗಿ ನುಡಿದರು ರಮಣಮ್ಮ.

Left: Roughly 53 per cent of Gudikal’s residents earned their primary source of income from cultivation.
PHOTO • Kota Adarsh Venkat
Right: The banks of the village lake was an open defecation space until a few months ago, when someone from a dominant caste bought this land and it became inaccessible for others
PHOTO • Kruti Nakum

ಎಡಕ್ಕೆ: ಪ್ರಮುಖವಾಗಿ, ಗುಡಿಕಲ್‌ನ ಸುಮಾರು 53% ನಿವಾಸಿಗಳ ಆದಾಯದ ಮೂಲ ಕೃಷಿ. ಬಲಕ್ಕೆ: ಕೆಲವು ತಿಂಗಳ ಹಿಂದೆ, ಪ್ರಬಲ ಜಾತಿಯವರೊಬ್ಬರು ಭೂಮಿಯನ್ನು ಕೊಳ್ಳುವವರೆಗೂ ಗುಡಿಕಲ್‌ ಕೆರೆಯು ಅವರ ಬಯಲು ಶೌಚದ ಸ್ಥಳವಾಗಿದ್ದು, ನಂತರದಲ್ಲಿ ಅದು ಇತರರಿಗೆ ಲಭ್ಯವಾಗಲಿಲ್ಲ

“ಮೊದಲಿನಂತೆ ಬಂಡೆಯ ಹಿಂದೆ ಹತ್ತುವುದು ಅಥವಾ ಬೆಟ್ಟದ ಮೇಲಕ್ಕೆ ತೆರಳುವುದು ನನ್ನ ವಯಸ್ಸಿನವರಿಗೆ ಅಪಾಯಕಾರಿ. ಆದ್ದರಿಂದ ಏಕಾಂತವು ನನ್ನ ಆದ್ಯತೆಯೆಂದು ನಾನು ಭಾವಿಸುವುದಿಲ್ಲ” ಎಂದು ಎಲ್ಲಮ್ಮ ಸಮ್ಮತಿಪೂರ್ವಕವಾಗಿ ತಿಳಿಸುತ್ತಾರೆ.

ಒಂದು ಕಿ.ಮೀ.ಗಿಂತಲೂ ಕಡಿಮೆ ದೂರದಲ್ಲಿನ ಆರನೇ ವಾರ್ಡಿನ ನಿವಾಸಿಯಾದ ಪಾರ್ವತಮ್ಮ, “ಈ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಶೌಚಾಲಯಗಳಿಲ್ಲ. ಚರಂಡಿ ಸಹ ಇರುವುದಿಲ್ಲ. ತೆರೆದ ಚರಂಡಿಗಳ ದುರ್ವಾಸನೆಯಿಂದಾಗಿ ಕೆಲವೊಮ್ಮೆ ಊಟ ಮಾಡುವುದೂ ಕಷ್ಟವಾಗುತ್ತದೆ” ಎಂದರು.

ಚುನಾವಣೆಯ ಸಮಯದಲ್ಲಿ ಅಭಿಯಾನವನ್ನು ನಡೆಸುವ ರಾಜಕೀಯ ನಾಯಕರುಗಳೊಂದಿಗೆ ತಾನು ಮತ್ತು ಇತರೆ ಮಹಿಳೆಯರು ಈ ಸಮಸ್ಯೆಯ ಬಗ್ಗೆ ಮಾತನಾಡಲು ಲೆಕ್ಕವಿಲ್ಲದಷ್ಟು ಬಾರಿ ಪ್ರಯತ್ನಿಸಿದ್ದನ್ನು 38ರ ಆಕೆ ನೆನಪಿಸಿಕೊಳ್ಳುತ್ತಾರೆ. ಮಹಿಳೆಯರ ಮಾತುಗಳನ್ನು ಕೇಳಿಸಿಕೊಳ್ಳುತ್ತಿರಲಿಲ್ಲ: ನಮ್ಮ ಸುತ್ತಮುತ್ತಲಿನ ಪುರುಷರು ನಮ್ಮನ್ನು ಮಾತನಾಡಲು ಬಿಡುತ್ತಿರಲಿಲ್ಲ. ನಾವು ಏನು ಹೇಳುತ್ತಿದ್ದೇವೆಂಬುದು ನಮಗೆ ತಿಳಿದಿಲ್ಲವೆಂದು ಅವರು ನಮಗೆ ಹೇಳುತ್ತಿದ್ದರು.

ಪಾರ್ವತಮ್ಮನಿಗೆ ಸ್ಥಳೀಯ ಆಡಳಿತದ ಬಗ್ಗೆ, ಮುಖ್ಯವಾಗಿ ಗ್ರಾಮ-ವಾರ್ಡ್‌ ಸಚಿವಾಲಯಂ ಅಥವಾ ಗ್ರಾಮ-ವಾರ್ಡ್‌ ಆಡಳಿತದ ಬಗ್ಗೆ ಹೆಚ್ಚಿನ ವಿಶ್ವಾಸವಿಲ್ಲ (ಎಲ್ಲ ಸರ್ಕಾರಿ ಕಚೇರಿಗಳ ಸೇವೆ ಮತ್ತು ಜನಹಿತ ಕಾರ್ಯಗಳು ಒಂದು ಜಾಗದಲ್ಲಿ ದೊರೆಯುವಂತೆ ಆಡಳಿತವನ್ನು ವಿಕೇಂದ್ರೀಕರಿಸಲು ಭಾರತದ ಆಂಧ್ರ ಪ್ರದೇಶ ರಾಜ್ಯದಲ್ಲಿ ವ್ಯವಸ್ಥೆಗೊಳಿಸಲಾದ ಆಡಳಿತ ವರ್ಗ) ಮೂರು ಸಚಿವಾಲಯಂಗಳಲ್ಲಿ ಹಂಚಲ್ಪಟ್ಟ ಗುಡಿಕಲ್‌ನಲ್ಲಿ ಐವತ್ತೊಂದು ಸಚಿವಾಲಯಂ ಸ್ವಯಂಸೇವಕರಿದ್ದು, ಪ್ರತಿಯೊಬ್ಬರು ಐವತ್ತು ಮನೆಗಳನ್ನು ನಿರ್ವಹಿಸುತ್ತಾರೆ.

“ಮೂರು ವರ್ಷಗಳ ಹಿಂದೆ, ಸಚಿವಾಲಯಂನ ಜನರು ಬಂದು ಗುಡಿಕಲ್‌ನ ಕೆಲವು ಮನೆಗಳಲ್ಲಿ ಶೌಚಾಲಯವನ್ನು ನಿರ್ಮಿಸಲು ಜಾಗವನ್ನು ಗುರುತಿಸಿದರು. ಅವರು ನಮ್ಮ ಮನೆಗಳನ್ನು ಗುರುತಿಸಿದರಾದರೂ, ಮತ್ತೊಮ್ಮೆ ವಾಪಸ್ಸು ಬರಲೇ ಇಲ್ಲ. ಅನೇಕ ಸ್ವಯಂಸೇವಕರಿದ್ದಾಗ್ಯೂ, ಅವರು ಕಾಳಜಿವಹಿಸುವುದಿಲ್ಲ. ಅಧಿಕಾರದ ಮದ ಅವರ ತಲೆಗೀರಿದೆ” ಎಂದರು 49ರ ನರಸಮ್ಮ.

ಗುಡಿಕಲ್‌ನ ಪಂಚಾಯತ್‌ ಕಾರ್ಯದರ್ಶಿ ಮತ್ತು ಆ ಪ್ರದೇಶದ ಎಲ್ಲ ಸಚಿವಾಲಯಂಗಳ ಮುಖ್ಯಸ್ಥರಾದ 43ರ ಗುಲಾಂ ಜಮೀಲ ಬೀ, ಶೌಚಾಲಯದ ಅರ್ಹತೆಗಳನ್ನು ಪಟ್ಟಿಮಾಡಿದರು: “ಶೌಚಾಲಯವಿಲ್ಲದಿರುವುದು, ಮನೆಯ ಮಾಲೀಕತ್ವ, ಬಿ.ಪಿ.ಎಲ್‌ (ಬಡತನ ರೇಖೆಗಿಂತ ಕೆಳಗಿನವರು) ಕಾರ್ಡ್‌ ಮತ್ತು ಆಧಾರ್‌ ದಾಖಲೀಕರಣ. ಇವನ್ನು ಆಧರಿಸಿ ಗ್ರಾಮದ ರೆವಿನ್ಯೂ ಅಧಿಕಾರಿಯು (VRO) ಪಟ್ಟಿಯೊಂದನ್ನು ತಯಾರಿಸಿ, ʼಸ್ವಚ್ಛ ಆಂಧ್ರ ಯೋಜನೆʼಯಡಿಯಲ್ಲಿ ಶೌಚಾಲಯಗಳ ಉಚಿತ ಒದಗಣೆಯನ್ನು ಮಂಜೂರು ಮಾಡುತ್ತಾರೆ.”

Narsamma indicates the spot marked with rocks (left), where a toilet was to be built three years ago by local officials, but nothing has happened. 'There are no toilets in this SC colony, not even a drain’
PHOTO • Kruti Nakum
Narsamma indicates the spot marked with rocks (left), where a toilet was to be built three years ago by local officials, but nothing has happened. 'There are no toilets in this SC colony, not even a drain’
PHOTO • Kruti Nakum

ನರಸಮ್ಮ, ಕಲ್ಲುಗಳಿಂದ ಗುರುತಿಸಲ್ಪಟ್ಟ, ಸ್ಥಳೀಯ ಅಧಿಕಾರಿಗಳು ನಿರ್ಮಿಸಬೇಕಿದ್ದ ಶೌಚಾಲಯವನ್ನು ತೋರಿಸುತ್ತಿದ್ದಾರೆ. ಆದರೆ ಯಾವುದೂ ಆಗಲಿಲ್ಲ. ʼಈ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ಶೌಚಾಲಯಗಳಿಲ್ಲ. ಚರಂಡಿಯೂ ಇಲ್ಲʼ

ಬಹುತೇಕ ಮನೆಗಳು ಶೌಚಾಲಯ ಸೌಲಭ್ಯಕ್ಕೆ ಅರ್ಹವಿದ್ದಾಗ್ಯೂ, ಕೇವಲ ಅಂತಹ ಆರು ಶೌಚಾಲಯಗಳನ್ನು ಗುಡಿಕಲ್‌ನಲ್ಲಿ ನಿರ್ಮಿಸಲಾಯಿತು ಎನ್ನುತ್ತಾರೆ ಗುಲಾಂ. 2019ರ YSRCP (ಯುವಜನ ಸ್ರಮಿಕ ರೈತು ಕಾಂಗ್ರೆಸ್‌ ಪಾರ್ಟಿ) ಚುನಾವಣಾ ಪ್ರಣಾಳಿಕೆಯನ್ನು ನಮ್ಮ ಕೈಗಿತ್ತ ಆಕೆ, “ಇಲ್ಲಿನ ಎಲ್ಲವೂ ಕಾರ್ಯರೂಪಕ್ಕೆ ತರುವ ದೃಷ್ಟಿಯಿಂದ ಜಗನ್‌ ರೂಪಿಸಿದ ಯೋಜನೆಗಳು” ಎಂದು ತಿಳಿಸಿದರು ಈ ಪ್ರಣಾಳಿಕೆಯಲ್ಲಿ ಶೌಚಾಲಯವೇ ಇಲ್ಲ.

ಮಳೆಗಾಲದ ಜೂನ್‌ ಮತ್ತು ಅಕ್ಟೋಬರ್‌ನಲ್ಲಿ ನೀರು ಮಡುಗಟ್ಟುವುದನ್ನು ಮತ್ತು ಪ್ರವಾಹವನ್ನು ತಡೆಗಟ್ಟಲು ತಗ್ಗಿನ ಪ್ರದೇಶಗಳಲ್ಲಿ ಎಲ್ಲ ಮನೆಗಳನ್ನು ಎರಡು ಅಡಿ ಎತ್ತರಕ್ಕೆ ಕಟ್ಟಿರುವಂತಹ ಪ್ರದೇಶದಲ್ಲಿ – ಅಂದರೆ ನಾಲ್ಕನೇ ವಾರ್ಡಿನ ಮೂಲೆಯಲ್ಲಿ ನರಸಮ್ಮನವರ ವಾಸ. 2019ರಲ್ಲಿ ಶೌಚಾಲಯದ ಒದಗಣೆಯನ್ನು ಮಂಜೂರುಮಾಡಲಾಗಿತ್ತು.

ಕಲ್ಲುಗಳಿಂದ ಸೀಮಾಂಕಿತಗೊಂಡಿದ್ದು, 4x4 ಅಡಿಯ ಚೌಕಾಕಾರದ ಪ್ರದೇಶದ ಪಕ್ಕದಲ್ಲಿ ಆಕೆ ನಿಂತಿದ್ದರು. ಮೂರು ತಿಂಗಳ ಹಿಂದೆ ಶೌಚಾಲಯವನ್ನು ನಿರ್ಮಿಸಬೇಕಿದ್ದ ಪ್ರದೇಶವನ್ನು ಕಲ್ಲುಗಳಿಂದ ಗುರುತಿಸಲಾಗಿತ್ತು. ಆದರೆ ಯಾವುದೂ ಆಗಲಿಲ್ಲ.

ನರಸಮ್ಮನವರ ಪಕ್ಕದಲ್ಲಿ 51ರ ಭದ್ರಮ್ಮನವರು ವಾಸಿಸುತ್ತಿದ್ದಾರೆ. “ಮಳೆಗಾಲದಲ್ಲಿ ಮಳೆಯ ನೀರು ಗುಡಿಕಲ್‌ನ ಅನೇಕ ಭಾಗಗಳಿಂದ ಕಸವನ್ನು ಹೊತ್ತು ತಂದು ನಮ್ಮ ಬೀದಿಯಲ್ಲಿ ತೇಲುತ್ತದೆಯಲ್ಲದೆ, ಸಹಿಸಲಸಾಧ್ಯವಾದ ದುರ್ಗಂಧವನ್ನು ಸಹ ತರುವ ಅದು ದಾರಿಯನ್ನೇ ಮುಚ್ಚಿಬಿಡುತ್ತದೆ” ಎಂದ ಅವರು, ತಮ್ಮ ಬೀದಿಯ ಕೊನೆಯಲ್ಲಿರುವ ಪವಿತ್ರ ದೇವಸ್ಥಾನವನ್ನು ಪ್ರಸ್ತಾಪಿಸುತ್ತ, “ಇದೇ ಜಾಗದಲ್ಲಿ, ಬೇಸಿಗೆಯಲ್ಲಿ ಜಾತ್ರೆಯು ನಡೆಯುತ್ತದೆ. ಗ್ರಾಮದಾದ್ಯಂತದ ಜನರು ಈ ಮಾರ್ಗದಿಂದ ಮೆರವಣಿಗೆಯ ಮುಂದಾಳತ್ವ ವಹಿಸಿ, ಅದನ್ನು ಆಚರಿಸುತ್ತಾರೆ. ಆದರೆ ಮಳೆಗಾಲದಲ್ಲಿ ಮಳೆ ಬಂದಾಗ ಇಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ಯಾರೂ ಕಾಳಜಿ ತೋರುವುದಿಲ್ಲ” ಎಂದು ತಿಳಿಸಿದರು.

ರಾಮಲಕ್ಷ್ಮಿಯವರ ಕಾಂಕ್ರೀಟಿನ ಮನೆಯೊಂದರಲ್ಲಿ ಪ್ರವೇಶದ್ವಾರದ ಬಳಿ ಬಚ್ಚಲು ಮನೆಯ ಷೆಡ್‌ ಇದೆಯಾದರೂ, ಒಳಗೆ ಶೌಚಾಲಯವಿಲ್ಲ. 21ರ ವಯಸ್ಸಿನ ಇವರು ಮೂರು ವರ್ಷಗಳ ಹಿಂದೆ, ವಿವಾಹದ ನಂತರ ಗುಡಿಕಲ್‌ಗೆ ಬಂದರು. “ನನ್ನ ಅತ್ತೆ, ಮಾವ, ಪತಿ ಮತ್ತು ನಾನು ಬಯಲು ಶೌಚದ ಜಾಗವನ್ನು ಬಳಸುತ್ತೇವೆ” ಎಂದು ಅವರು ತಿಳಿಸಿದರು. ಇವರ ಇಬ್ಬರು ಚಿಕ್ಕ ಮಕ್ಕಳು ಮನೆಗೆ ಹತ್ತಿರದಲ್ಲಿ ದೇಹಬಾಧೆಯನ್ನು ತೀರಿಸಿಕೊಳ್ಳಬೇಕು.

ಗುಡಿಕಲ್‌ನ ಪಂಚಾಯತ್‌ ಕಾರ್ಯದರ್ಶಿ, ಗುಲಾಂ ಜಮೀರ ಬೀ ಅವರ ಹೊರತಾಗಿ ಈ ಕಥಾನಕದಲ್ಲಿ ಉದಾಹರಿಸಲ್ಪಟ್ಟ ಎಲ್ಲ ಮಹಿಳೆಯರು ಅನಾಮಧೇಯತೆಯ ಷರತ್ತಿನೊಂದಿಗೆ ತಮ್ಮ ಕತೆಯನ್ನು ಹಂಚಿಕೊಂಡರು.

ಅನುವಾದ: ಶೈಲಜಾ ಜಿ.ಪಿ.

Student Reporter : Kasturi Kandalam

Kasturi Kandalam is a first year Masters student in Economics at Azim Premji University, Bengaluru.

Other stories by Kasturi Kandalam
Student Reporter : Kruti Nakum

Kruti Nakum is a first year Masters student in Economics at Azim Premji University, Bengaluru.

Other stories by Kruti Nakum
Editor : Riya Behl

Riya Behl is Senior Assistant Editor at People’s Archive of Rural India (PARI). As a multimedia journalist, she writes on gender and education. Riya also works closely with students who report for PARI, and with educators to bring PARI stories into the classroom.

Other stories by Riya Behl
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.