ಸುಕುಮಾರ್ ಬಿಸ್ವಾಸ್ ಓರ್ವ ಸರ್ವೇ ಸಾಮಾನ್ಯ ಎಳನೀರು ಮಾರಾಟಗಾರರಲ್ಲ. ಬಾಯಾರಿದ ಗ್ರಾಹಕರಿಗೆ ಕುಡಿಯಲು ಎಳೆನೀರು ಕೊಚ್ಚುವಾಗ “ಅನ್ನವಿಲ್ಲದೆ ಬದುಕಬಲ್ಲೆ, ಆದರೆ ಹಾಡ ಹಾಡದೆ ಬದುಕಲಾರೆ” ಎಂದು ಹಾಡುವ ಅವರ ಹಾಡಿನ ಮೇಲಿನ ಪ್ರೀತಿ ಎಂದಿಗೂ ನಿಲ್ಲುವುದಿಲ್ಲ. ಶಾಂತಿಪುರದ ಲಂಕಾಪಾರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಅವರನ್ನು 'ದಾಬ್ದಾದು' (ಎಳೆನೀರು ಅಜ್ಜ) ಎಂದು ಕರೆಯುತ್ತಾರೆ.
70 ವರ್ಷ ವಯಸ್ಸಿನ ಇವರು ಒಂದು ಸ್ಟ್ರಾ ಜೊತೆಗೆ ಹಸಿರು ಹಸಿರಾದ ಎಳೆನೀರನ್ನು ಕೈಗಿಟ್ಟು, ನೀವು ಕುಡಿದು ಮುಗಿಸಿದ ಮೇಲೆ ಕಾಯನ್ನು ಬಗೆದು ಒಳಗಿರುವ ನುಣುಪಾದ ಸೀಯಾಳದ ಗಂಜಿಯನ್ನು ನಿಮಗೆ ಸ್ಕೂಪ್ ಮಾಡಿಕೊಡುತ್ತಾರೆ. ಆಗೆಲ್ಲಾ ಜಾನಪದ ಹಾಡುಗಳನ್ನು ಹಾಡುತ್ತಾರೆ. ಅವರು ಲಾಲೋನ್ ಫಕೀರ್, ಹಾಡುಗಾರ ಶಾ ಅಬ್ದುಲ್ ಕರೀಮ್, ಭಾಬಾ ಖ್ಯಾಪಾ ಇನ್ನಿತರರು ರಚಿಸಿದ ಹಾಡುಗಳನ್ನು ಹಾಡುತ್ತಾರೆ. ಈ ಹಾಡುಗಳಲ್ಲಿ ಅವರು ತಮ್ಮ ಜೀವನದ ಅರ್ಥವನ್ನು ಕಂಡುಕೊಳ್ಳುತ್ತಾರೆ ಎಂದು ಅವರೇ ಹೇಳುತ್ತಾರೆ. ಒಂದನ್ನು ವಾಕ್ಯವನ್ನು ಉಲ್ಲೇಖಿಸಿ ಅದನ್ನು ಪರಿಗಾಗಿ ಪ್ಯಾರಾಫ್ರೇಸ್ ಮಾಡುತ್ತಾ: “ಸತ್ಯ ಏನೆಂದು ನಮಗೆ ತಿಳಿದಾಗ ಮಾತ್ರ ನಾವು ಸತ್ಯವನ್ನು ತಲುಪಬಹುದು. ಸತ್ಯವನ್ನು ತಿಳಿಯಲು ನಾವು ನಮ್ಮೊಳಗೆ ಪ್ರಾಮಾಣಿಕತೆಯನ್ನು ಇಟ್ಟುಕೊಳ್ಳಬೇಕು. ನಾವು ಅಪ್ರಾಮಾಣಿಕತೆಯಿಂದ ಮುಕ್ತರಾದಾಗ ಮಾತ್ರ ಇತರರನ್ನು ಪ್ರೀತಿಸಲು ಸಾಧ್ಯ,” ಎಂದು ಹೇಳಿದರು.
ಅವರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತಮ್ಮ ಟೋಲಿಯನ್ನು (ಟ್ರೈಸೈಕಲ್ಗೆ ಜೋಡಿಸಲಾದ ವ್ಯಾನ್) ಓಡಿಸುವಾಗಲೂ ಹಾಡು ಹಾಡುವುದನ್ನು ನಿಲ್ಲಿಸುವುದಿಲ್ಲ. ಅವರ ಹಾಡನ್ನು ಕೇಳಿ ಜನರಿಗೆ ಸುಕುಮಾರ್ ಬಿಸ್ವಾಸ್ ಆ ಪ್ರದೇಶಕ್ಕೆ ಬಂದದ್ದು ಗೊತ್ತಾಗುತ್ತದೆ.
“ಎಳೆನೀರು ಬೇಡದವರು ನನ್ನ ಹಾಡುಗಳನ್ನು ಕೇಳಲು ಸ್ವಲ್ಪ ಸಮಯ ನಿಂತಿರುತ್ತಾರೆ. ಅವರು ಎಳೆನೀರನ್ನು ಖರೀದಿಸಬೇಕೇಂದೇನಿಲ್ಲ. ನಾನು ಹೆಚ್ಚು ಮಾರಾಟವನ್ನೂ ನಿರೀಕ್ಷಿಸುವುದಿಲ್ಲ. ನಾನು ಆಗಿದ್ದರಲ್ಲೇ ಸಂತೋಷ ಪಡುತ್ತೇನೆ,” ಎನ್ನುತ್ತಾ ಗ್ರಾಹಕರೊಂದಿಗೆ ವ್ಯವಹಾರವನ್ನು ಮುಂದುವರೆಸುತ್ತಾರೆ.




