ನಾವು ಮಹಾರಾಷ್ಟ್ರದ ಸುಂದರವಾದ ತಿಲಾರಿ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದೇವೆ. ಅಲ್ಲಿ ಅರಣ್ಯ ಪ್ರದೇಶದ ಗಡಿಯಲ್ಲಿರುವ ಮತ್ತು ಕುರಿಗಾಹಿಗಳ ನೆಲೆಯಾಗಿರುವ ಕುಗ್ರಾಮಗಳಲ್ಲಿ ವಾಸಿಸುವ ಮಹಿಳೆಯರನ್ನು ನಾವು ಭೇಟಿಯಾಗಬೇಕಿತ್ತು, ಅವರ ಆರೋಗ್ಯ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿತ್ತು. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಂದಗಡ್ ಎಂಬ ಪಟ್ಟಣಕ್ಕೆ ಹೋಗುವಾಗ, ಐವತ್ತರ ಹರೆಯದ ಮಹಿಳೆಯೊಬ್ಬರು ತನ್ನ ನಾಲ್ಕು ಆಡುಗಳನ್ನು ನೋಡಿಕೊಳ್ಳುತ್ತಾ, ರಸ್ತೆಯ ಬದಿಯ ಮರದ ಕೆಳಗೆ ಪುಸ್ತಕವನ್ನು ಹಿಡಿದುಕೊಂಡು ಸಂತೋಷದಿಂದ ಕುಳಿತಿರುವುದನ್ನು ನಾನು ನೋಡಿದೆ.

ಮೇ ತಿಂಗಳ ಮೋಡ ಕವಿದ ಮಧ್ಯಾಹ್ನದ ಈ ಅಸಾಮಾನ್ಯ ದೃಶ್ಯವು ನಮ್ಮ ಕಾರನ್ನು ನಿಲ್ಲಿಸಿ ಅವರೆಡೆಗೆ ಸಾಗುವಂತೆ ಮಾಡಿತು. ರೇಖಾ ರಮೇಶ್ ಚಂದಗಡ್ ಅವರು, ಮಹಾರಾಷ್ಟ್ರ ಮತ್ತು ಕರ್ನಾಟಕದ ಅನೇಕ ಸಮುದಾಯಗಳಿಂದ ಪೂಜಿಸಲ್ಪಡುವ ವಿಠ್ಠಲನ ಸಂತೃಪ್ತ ಭಕ್ತರಲ್ಲಿ ಒಬ್ಬರು. ನಾವು ಅವರೊಡನೆ ಮಾತುಕತೆ ಪ್ರಾರಂಭಿಸುತ್ತಿದ್ದಂತೆ, ಅವರು ವಿಠ್ಠಲನ ಹೆಸರನ್ನು ಜಪಿಸುತ್ತಾ ಸಂತ ನಾಮದೇವರ ಭಜನೆಯೊಂದನ್ನು ನಮಗಾಗಿ ಹಾಡಿದರು. ನಾಮದೇವ್ ಮಹಾರಾಷ್ಟ್ರದ ಸಂತ-ಕವಿ ಮತ್ತು ಪಂಜಾಬಿನಲ್ಲಿ ಪೂಜಿಸಲ್ಪಡುತ್ತಾರೆ. ವಾರಕರಿ ಪಂಥದ ಪ್ರತಿಪಾದಕರಾದ ಅವರ ಅಭಾಂಗ್‌ ರಚನೆಗಳು ಧಾರ್ಮಿಕ ಶ್ರೇಣೀಕರಣಗಳಿಗೆ ಸವಾಲೊಡ್ಡುವ ಆಚರಣೆಗಳಿಲ್ಲದೆ ಪೂಜೆಯನ್ನು ಉತ್ತೇಜಿಸುವ ಭಕ್ತಿ ಸಂಪ್ರದಾಯದ ಅಭಿವ್ಯಕ್ತಿಗಳಿಗೆ ಹೆಸರುವಾಸಿಯಾಗಿವೆ. ರೇಖಾತಾಯಿ ಈ ಭಕ್ತಿ ಚಳವಳಿಯ ಅನುಯಾಯಿ.

ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಷಾಢ (ಜೂನ್ / ಜುಲೈ) ಮತ್ತು ಕಾರ್ತಿಕ (ಅಕ್ಟೋಬರ್-ನವೆಂಬರ್, ದೀಪಾವಳಿಯ ನಂತರ) ಸಮಯದಲ್ಲಿ ತಂಡಗಳಲ್ಲಿ ನಡೆದು, ಜ್ಞಾನೇಶ್ವರ, ತುಕಾರಾಂ ಮತ್ತು ನಾಮದೇವ್ ಅವರಂತಹ ಸಂತರ ಭಕ್ತಿಗೀತೆಗಳು ಮತ್ತು ಕವಿತೆಗಳನ್ನು ಹಾಡುತ್ತಾರೆ. ಪ್ರತಿ ವರ್ಷ, ರೇಖಾತಾಯಿಯೂ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಢರಪುರ ದೇವಸ್ಥಾನಕ್ಕೆ ನಡೆದುಕೊಂಡು ಹೋಗುವ ಭಕ್ತರೊಂದಿಗೆ ಶ್ರದ್ಧೆಯಿಂದ ಸೇರಿಕೊಳ್ಳುತ್ತಾರೆ. ಈ ಪಂಥದ ಜನರನ್ನು ವಾರಿಗಳು ಎಂದು ಕರೆಯಲಾಗುತ್ತದೆ.

"ನನ್ನ ಮಕ್ಕಳು ʼನನ್ನ ಮಕ್ಕಳು ಆಡು ಮೇಯಿಸುವುದು ಬೇಡ ಮನೆಯಲ್ಲಿ ಆರಾಮಾಗಿರಿ' ಎನ್ನುತ್ತಾರೆ. ಆದರೆ ನನಗೆ ಇಲ್ಲಿ ಕುಳಿತು ವಿಠ್ಠಲನ ಭಜನೆ ಹಾಡುವುದೆಂದರೆ ಇಷ್ಟ. ಸಮಯ ಸರಿದಿದ್ದೇ ತಿಳಿಯುವುದಿಲ್ಲ. ಮನ್ ಆನಂದಾನೆ ಭರುನ್ ಯೇತಾ [ಇದು ಮನಸ್ಸಿಗೆ ಅಪಾರ ಸಂತೋಷವನ್ನು ತುಂಬುತ್ತದೆ]" ಎಂದು ದೀಪಾವಳಿಯ ನಂತರ ಕಾರ್ತಿಕ್ ವಾರಿಯೊಂದಿಗೆ ಸೇರಲು ಹಾತೊರೆಯುತ್ತಿರುವ ರೇಖಾತಾಯಿ ಹೇಳುತ್ತಾರೆ.

ವಿಡಿಯೋ ನೋಡಿ: ಆಡು ಮೇಯಿಸುತ್ತಾ ವಿಠ್ಠಲ ಧ್ಯಾನ

ಅನುವಾದ: ಶಂಕರ. ಎನ್. ಕೆಂಚನೂರು

Medha Kale

Medha Kale is based in Pune and has worked in the field of women and health. She is the Translations Editor, Marathi, at the People’s Archive of Rural India.

Other stories by Medha Kale
Text Editor : S. Senthalir

S. Senthalir is Senior Editor at People's Archive of Rural India and a 2020 PARI Fellow. She reports on the intersection of gender, caste and labour. Senthalir is a 2023 fellow of the Chevening South Asia Journalism Programme at University of Westminster.

Other stories by S. Senthalir
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru