ನಮ್ಮ ಹಳ್ಳಿಯಾದ ಪಾಲ್ಸುಂಡೆಯಲ್ಲಿ ಏಳು ರೀತಿಯ ಬುಡಕಟ್ಟುಗಳ ಜನರಿದ್ದಾರೆ, ಅವರಲ್ಲಿ ವಾರ್ಲಿಗಳದ್ದು ದೊಡ್ಡ ಸಮುದಾಯ. ನಾನು ಎಲ್ಲಾ ಏಳು ಬುಡಕಟ್ಟು ಸಮುದಾಯಗಳ ಭಾಷೆಗಳನ್ನೂ ಕಲಿತಿದ್ದೇನೆ: ವಾರ್ಲಿ, ಕೋಲಿ ಮಹಾದೇವ್, ಕಾಟ್ಕರಿ, ಮಾ ಠಾಕೂರ್, ಕಾ ಠಾಕೂರ್, ಧೋರ್ ಕೋಲಿ ಮತ್ತು ಮಲ್ಹಾರ್ ಕೋಲಿ. ನಾನು ಇಲ್ಲಿಯೇ ಹುಟ್ಟಿರುವ ಕಾರಣ, ಇದು ನನ್ನ ಕರ್ಮಭೂಮಿಯಾಗಿರುವುದರಿಂದ ಕಲಿಯುವುದು ತುಂಬಾ ಕಷ್ಟವಾಗಲಿಲ್ಲ; ನನ್ನ ಶಿಕ್ಷಣವೂ ಇಲ್ಲಿಯೇ ಆಯಿತು.

ನಾನು ಭಾಲಚಂದ್ರ ರಾಮ್‌ಜಿ ಧನ್‌ಗರೆ, ಮೊಖಾಡದ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆಯ ಶಿಕ್ಷಕ.

ನನ್ನ ಸ್ನೇಹಿತರು, "ನೀನು ಕೇಳುವ ಯಾವುದೇ ಭಾಷೆಯನ್ನು ಬೇಗನೆ ಎತ್ತಿಕೊಂಡು ಅದನ್ನು ಬೇಗನೆ ಮಾತನಾಡಲು ಪ್ರಾರಂಭಿಸುತ್ತೀಯ," ಎಂದು ಆಗಾಗ ನನಗೆ ಹೇಳುತ್ತಾರೆ. ನಾನು ಯಾವುದೇ ಸಮುದಾಯದವರನ್ನು ಭೇಟಿಯಾದರೂ, ಆ ಜನರು ನನ್ನನ್ನು ಅವರದೇ ನೆಲದವರಂತೆ ನೋಡುತ್ತಾರೆ, ಅವರ ಸ್ವಂತ ಭಾಷೆಯಲ್ಲಿಯೇ ನನ್ನೊಂದಿಗೆ ಮಾತನಾಡುತ್ತಾರೆ.

ವೀಡಿಯೊ ನೋಡಿ: ವಾರ್ಲಿ ಶಿಕ್ಷಣಕ್ಕೊಂದು ದೊಡ್ಡ ಉತ್ತೇಜನ

ನಮ್ಮ ಆದಿವಾಸಿ ಪ್ರದೇಶಗಳ ಮಕ್ಕಳೊಂದಿಗೆ ಮಾತನಾಡುವಾಗ, ಅವರು ತಮ್ಮ ಶಾಲಾ ಶಿಕ್ಷಣದ ಸಂದರ್ಭದಲ್ಲಿ ಎದುರಿಸುತ್ತಿರುವ ಅನೇಕ ಸವಾಲುಗಳ ಬಗ್ಗೆ ನಾನು ತಿಳಿದುಕೊಂಡೆ. ಮಹಾರಾಷ್ಟ್ರ ಸರ್ಕಾರವು ಬುಡಕಟ್ಟು ಪ್ರದೇಶಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ವಿಶೇಷ ಶ್ರೇಣಿಯನ್ನು ಕೊಡಬೇಕೆಂಬ ನಿಯಮವಿದೆ. ನಿತ್ಯಜೀವನದಲ್ಲಿ ಬಳಸುವ ಸ್ಥಳೀಯ ಭಾಷೆಯನ್ನು ಕಲಿಯುವ ಅಗತ್ಯವಿರುವ ಕಾರಣ ಈ ಗ್ರೇಡ್ ಅನ್ನು ನೀಡಲಾಗುತ್ತದೆ.

ಈ ಮೊಖಾಡದಲ್ಲಿ ವಾರ್ಲಿ ಮಾತನಾಡುವವರ ಸಂಖ್ಯೆ ಹೆಚ್ಚು ಮತ್ತು ಈ ಭಾಷೆಯನ್ನು ಶಾಲೆಯಲ್ಲೂ ಮಾತನಾಡುವ ಅನೇಕ ಮಕ್ಕಳಿದ್ದಾರೆ. ನಾವು ಅವರಿಗೆ ಇಂಗ್ಲಿಷ್ ಕಲಿಸಬೇಕಾದರೆ, ಮೊದಲು ಅದಕ್ಕೆ ಸಮಾನವಾದ ಮರಾಠಿ ಪದವನ್ನು ಅವರಿಗೆ ಪರಿಚಯಿಸಬೇಕು, ಆ ನಂತರ ಅದೇ ಪದವನ್ನು ವಾರ್ಲಿಯಲ್ಲಿ ವಿವರಿಸಬೇಕು. ಆಮೇಲೆ ನಾವು ಇಂಗ್ಲಿಷ್‌ನಲ್ಲಿ ಆ ಪದವನ್ನು ಕಲಿಸುತ್ತೇವೆ.

ಇದು ಸುಲಭದ ಕೆಲಸವಲ್ಲ ಆದರೆ ಇಲ್ಲಿನ ಮಕ್ಕಳು ತುಂಬಾ ಬುದ್ಧಿವಂತರು ಮತ್ತು ಶ್ರಮಪಟ್ಟು ಕಲಿಯುತ್ತಾರೆ. ರಾಜ್ಯದ ಅಧಿಕೃತ ಭಾಷೆಯಾದ ಮರಾಠಿಗೆ ಅವರು ಬೇಗನೆ ಹೊಂದಿಕೊಂಡ ನಂತರ ಅವರೊಂದಿಗೆ ಸಂವಹನ ನಡೆಸುವುದೇ ಒಂದು ಅದ್ಭುತ. ಆದರೆ, ಇಲ್ಲಿ ಶಿಕ್ಷಣದ ಒಟ್ಟಾರೆ ಹಂತವು ತಲುಪಬೇಕಾದ ವೇಗವನ್ನು ಇನ್ನೂ ತಲುಪಿಲ್ಲ. ಇದು ಇಂದು ಅಗತ್ಯವಾಗಿ ಆಗಬೇಕಿರುವುದು. ಜನಸಂಖ್ಯೆಯ ಸುಮಾರು 50 ಪ್ರತಿಶತದಷ್ಟು ಜನರು ಇನ್ನೂ ಅನಕ್ಷರಸ್ಥರಾಗಿದ್ದಾರೆ ಮತ್ತು ಈ ಪ್ರದೇಶ ಅಭಿವೃದ್ಧಿಯಲ್ಲೂ ಹಿಂದುಳಿದಿದೆ.

ಶಿಕ್ಷಕರಾದ ಭಾಲಚಂದ್ರ ಧನ್‌ಗರೆ ಮತ್ತು ಪ್ರಕಾಶ್ ಪಾಟೀಲ್ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ತರಗತಿಯಲ್ಲಿ ಸಾಂಪ್ರದಾಯಿಕ ಕತ್ಕರಿ ಹಾಡನ್ನು ಹಾಡಿಸುತ್ತಿದ್ದಾರೆ

ಸುಮಾರು 1990ರ ದಶಕದವರೆಗೆ ಈ ಪ್ರದೇಶದಲ್ಲಿ 10ನೇ ತರಗತಿಗಿಂತ ಮೇಲೆ ಓದಿದವರು ಯಾರೂ ಇರಲಿಲ್ಲ. ಹೊಸ ತಲೆಮಾರು ನಿಧಾನವಾಗಿ ಔಪಚಾರಿಕ ಶಿಕ್ಷಣವನ್ನು ಮುಂದುವರಿಸಲು ಶುರುಮಾಡಿದೆ. 1 ನೇ ತರಗತಿಗೆ 25 ವಾರ್ಲಿ ವಿದ್ಯಾರ್ಥಿಗಳು ದಾಖಲಾದರೆ, ಹತ್ತನೇ ತರಗತಿಗೆ ಕೇವಲ ಎಂಟು ವಿದ್ಯಾರ್ಥಿಗಳು ಬರುತ್ತಾರೆ. ಡ್ರಾಪ್ಔಟ್ ಪ್ರಮಾಣವೂ ತುಂಬಾ ಹೆಚ್ಚಾಗಿದೆ. ಆ ಎಂಟು ಮಂದಿಯಲ್ಲಿ ಐದಾರು ಮಂದಿ ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾರೆ. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು 12 ನೇ ತರಗತಿಯನ್ನು ತಲುಪುವ ವೇಳೆಗೆ ಓದನ್ನು ಕೈಬಿಡುತ್ತಾರೆ. ಆದ್ದರಿಂದ ಕೊನೆಗೆ 3-4 ವಿದ್ಯಾರ್ಥಿಗಳು ಮಾತ್ರ ಶಾಲಾ ಶಿಕ್ಷಣವನ್ನು ಮುಗಿಸುತ್ತಾರೆ.

ತಾಲೂಕು ಮಟ್ಟದಲ್ಲಿ ಮಾತ್ರ ಪದವಿಪೂರ್ವ ಶಿಕ್ಷಣವನ್ನು ಪಡೆಯಲು ಸಾಧ್ಯ - ಅದಕ್ಕಾಗಿ ಸುಮಾರು 10 ಕಿಲೋಮೀಟರ್ ಪ್ರಯಾಣ ಮಾಡಬೇಕು. ಆದರೆ ಈ ಪ್ರದೇಶದಲ್ಲಿ ಹೆಚ್ಚು ಏನೂ ಇಲ್ಲ ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣಕ್ಕಾಗಿ ಥಾಣೆ, ನಾಸಿಕ್ ಅಥವಾ ಪಾಲ್ಘರ್‌ನಂತಹ ನಗರಗಳಿಗೆ ಹೋಗುತ್ತಾರೆ. ಇದರಿಂದಾಗಿ ಈ ತಾಲೂಕಿನಲ್ಲಿ ಕೇವಲ‌ ಶೇಕಡಾ ಮೂರರಷ್ಟು ಮಂದಿ ಮಾತ್ರ ಪದವಿ ಪೂರ್ವ ಶಿಕ್ಷಣ ಪಡೆದಿದ್ದಾರೆ.

ವಾರ್ಲಿ ಸಮುದಾಯದಲ್ಲಿ ಶಿಕ್ಷಣ ಪಡೆಯುವವರ ಪ್ರಮಾಣವು ವಿಶೇಷವಾಗಿ ಕಡಿಮೆ. ಇದನ್ನು ಸುಧಾರಿಸಲು ಅನೇಕ ಪ್ರಯತ್ನಗಳು ನಡೆಯುತ್ತಿವೆ. ನಾವು ಹಳ್ಳಿಗಳಿಗೆ ಭೇಟಿ ನೀಡುವ ಮೂಲಕ ಮತ್ತು ಜನರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುವ ಮೂಲಕ ಹೆಚ್ಚು ಹೆಚ್ಚು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಈ ಎರಡೂ ಮಾರ್ಗಗಳ ಮೂಲಕ ಸಂಪರ್ಕವನ್ನು ಬೆಳೆಸಲು ಮತ್ತು ನಂಬಿಕೆಯನ್ನು ಹುಟ್ಟುಹಾಕಲು ಶ್ರಮಿಸುತ್ತಿದ್ದೇವೆ.

ಈ ವರದಿ ತಯಾರಿಸಲು ಸಹಾಯ ನೀಡಿದ ಎಆರ್‌ಒಇಎಚ್‌ಎಎನ್‌ ಸಂಸ್ಥೆಯ ಹೇಮಂತ್‌ ಶಿಂಗಾಡೆಯವರಿಗೆ ಪರಿ ತನ್ನ ಧನ್ಯವಾದವನ್ನು ಅರ್ಪಿಸುತ್ತದೆ

ಸಂದರ್ಶನ: ಮೇಧಾ ಕಾಳೆ

ಈ ಕಥೆಯು ಪರಿಯ ಅಳಿವಿನಂಚಿನಲ್ಲಿರುವ ಭಾಷೆಗಳ ಯೋಜನೆಯ ಭಾಗವಾಗಿದ್ದು, ದೇಶದಲ್ಲಿರುವ ದುರ್ಬಲ ಮತ್ತು ಅಳಿವಿನಂಚಿನಲ್ಲಿರುವ ಭಾಷೆಗಳನ್ನು ದಾಖಲು ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ.

ವಾರ್ಲಿಯು ಗುಜರಾತ್, ದಾಮನ್ ಮತ್ತು ದಿಯು, ದಾದ್ರಾ ಮತ್ತು ನಗರ್ ಹವೇಲಿ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾದಲ್ಲಿ ವಾಸಿಸುವ ಭಾರತದ ವಾರ್ಲಿ ಅಥವಾ ವರ್ಲಿ ಆದಿವಾಸಿಗಳು ಮಾತನಾಡುವ ಇಂಡೋ-ಆರ್ಯನ್ ಭಾಷೆಯಾಗಿದೆ. ಯುನೆಸ್ಕೋ ನ ಅಟ್ಲಾಸ್ ಆಫ್ ಲ್ಯಾಂಗ್ವೇಜ್ ವಾರ್ಲಿಯನ್ನು ಭಾರತದಲ್ಲಿ ಸಂಭಾವ್ಯ ದುರ್ಬಲ ಭಾಷೆಗಳಲ್ಲಿ ಒಂದೆಂದು ಪಟ್ಟಿ ಮಾಡಿದೆ.

ನಾವು ಮಹಾರಾಷ್ಟ್ರದಲ್ಲಿ ಮಾತನಾಡುವ ವಾರ್ಲಿ ಭಾಷೆಯನ್ನು ದಾಖಲು ಮಾಡುವ ಗುರಿ ಹೊಂದಿದ್ದೇವೆ.

ಕನ್ನಡ ಅನುವಾದ: ಚರಣ್‌ ಐವರ್ನಾಡು

Bhalchandra Dhanagare

Bhalchandra Dhangare is a school teacher at the Zilla Parishad Primary School in Mokhada of Palghar district.

Other stories by Bhalchandra Dhanagare
Editor : Siddhita Sonavane

Siddhita Sonavane is Content Editor at the People's Archive of Rural India. She completed her master's degree from SNDT Women's University, Mumbai, in 2022 and is a visiting faculty at their Department of English.

Other stories by Siddhita Sonavane
Video : Siddhita Sonavane

Siddhita Sonavane is Content Editor at the People's Archive of Rural India. She completed her master's degree from SNDT Women's University, Mumbai, in 2022 and is a visiting faculty at their Department of English.

Other stories by Siddhita Sonavane
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad