ತಮ್ಮ ಮನೆಯೊಳಗೆ ಕುರ್ಚಿಯೊಂದರ ಮೇಲೆ ಕುಳಿತಿರುವ ಗೋಮಾ ರಾಮ ಹಜಾರೆಯವರು ಶಾಂತವಾಗಿ ತಮ್ಮ ಹಳ್ಳಿಯ ಖಾಲಿ ಮುಖ್ಯ ರಸ್ತೆಯನ್ನು ನಿರಾಸಕ್ತಿಯಿಂದ ನೋಡುತ್ತಾ ಸಮಯ ಕಳೆಯುತ್ತಿದ್ದಾರೆ.
ಒಮ್ಮೊಮ್ಮೆ ತಮ್ಮ ಯೋಗಕ್ಷೇಮವನ್ನು ವಿಚಾರಿಸುವ ದಾರಿಹೋಕರೊಂದಿಗೆ ಮಾತಿಗಿಳಿಯುತ್ತಾರೆ. ಒಂದು ವಾರದ ಹಿಂದೆ ಇವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪತ್ನಿಯನ್ನು ಕಳೆದುಕೊಂಡರು.
ಸಂಜೆ 5 ಗಂಟೆ, 2024ರ ಏಪ್ರಿಲ್ ತಿಂಗಳ ಮಧ್ಯೆ, ವಾತಾವರಣ ತುಂಬಾ ಬಿಸಿಯಾಗಿದೆ. ಬಿದಿರು ಮತ್ತು ತೇಗದ ಮರಗಳು ಹೇರಳವಾಗಿರುವ ಕಾಡುಗಳ ಮಡಿಲಲ್ಲಿರುವ ಉತ್ತರ ಗಡ್ಚಿರೋಲಿಯ ಅರ್ಮೋರಿ ತೆಹಸಿಲ್ನ ಪಲಾಸ್ಗಾಂವ್ ಹಳ್ಳಿ ಶಾಂತವಾಗಿದೆ. ಗಡ್ಚಿರೋಲಿ-ಚಿಮೂರ್ ಲೋಕಸಭಾ ಕ್ಷೇತ್ರದ ಮತದಾನ ಕೆಲವೇ ದಿನಗಳಲ್ಲಿ ನಡೆಯಲಿದೆ. ಬಿಜೆಪಿಯ ಹಾಲಿ ಸಂಸದ ಅಶೋಕ್ ನೇತೆ ಮತ್ತೆ ಸ್ಪರ್ಧಿಸಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಯಾವುದೇ ಉತ್ಸಾಹವಿಲ್ಲ. ನಿಜ ಹೇಳಬೇಕೆಂದರೆ, ಕೇವಲ ಚಿಂತೆಯೇ ತುಂಬಿದೆ.
ಕಳೆದ ಎರಡು ತಿಂಗಳಿಂದ ಗೋಮಾ ಅವರಿಗೆ ಕೆಲಸವಿಲ್ಲ. ಇಂತಹ ಸಮಯದಲ್ಲಿ ಸಾಮಾನ್ಯವಾಗಿ, ಅರವತ್ತರ ಹರೆಯದ ಭೂರಹಿತ ಕಾರ್ಮಿಕರಾಗಿರುವ ಇವರು ಇತರರಂತೆ ಮಹುವ ಅಥವಾ ಟೆಂಡುಗಳನ್ನು ಸಂಗ್ರಹಿಸುತ್ತಾರೆ, ಇಲ್ಲವೇ ಕಾಡಿನಲ್ಲಿ ಬಿದಿರು ಕಡಿಯುವ ಅಥವಾ ಕೃಷಿ ಕೆಲಸ ಮಾಡುತ್ತಾರೆ.
"ಈ ವರ್ಷ ಅದು ಆಗಲಿಲ್ಲ. ಯಾರು ಅಪಾಯವನ್ನು ಮೈಗೆಳೆದುಕೊಳ್ಳುತ್ತಾರೆ?” ಎಂದು ಗೋಮಾ ಹೇಳುತ್ತಾರೆ.
"ಜನರು ಮನೆಯಲ್ಲಿಯೇ ಇರುತ್ತಾರೆ," ಎಂದು ಗೋಮಾ ಹೇಳುತ್ತಾರೆ. ಹಗಲು ಬಿಸಿಲಿನ ಉರಿ ಜಾಸ್ತಿ. ನಿಮಗೆ ಹೊರಗೆ ಹೋಗಲೂ ಸಾಧ್ಯವಿಲ್ಲ. ಗಡ್ಚಿರೋಲಿ ನಾಲ್ಕು ದಶಕಗಳಿಂದ ಸಶಸ್ತ್ರ ಸಂಘರ್ಷದಲ್ಲಿ ಸಿಲುಕಿ ತೊಂದರೆಗೀಡಾಗಿದೆ ಮತ್ತು ಭದ್ರತಾ ಪಡೆಗಳು ಹಾಗೂ ಶಸ್ತ್ರಸಜ್ಜಿತ ಮಾವೋವಾದಿಗಳ ಗುಂಪಿನ ನಡುವಿನ ರಕ್ತಸಿಕ್ತ ಕಲಹದಿಂದ ನಲುಗಿರುವ ಇಂತಹ ಅನೇಕ ಹಳ್ಳಿಗಳಲ್ಲಿ ಕರ್ಫ್ಯೂ ಹಾಕಲಾಗುತ್ತದೆ. ಆದರೆ ಈ ಬಾರಿ ಬಂದಿರುವವರೇ ಬೇರೆ. ಅವರು ನಮ್ಮ ಬದುಕು ಮತ್ತು ಜೀವನೋಪಾಯಕ್ಕೆ ನೇರ ಬೆದರಿಕೆಯನ್ನುಂಟುಮಾಡಿದ್ದಾರೆ.
ಅದೊಂದು 23 ಕಾಡು ಆನೆಗಳ ಹಿಂಡು. ಇವು ಹೆಣ್ಣು ಮರಿ ಆನೆಗಳ ಜೊತೆಗೆ, ಪಲಾಸ್ಗಾಂವ್ ಸುತ್ತಮುತ್ತಲ ಪ್ರದೇಶದಲ್ಲಿ ಬೀಡುಬಿಟ್ಟಿವೆ.














