ಮಹಾರಾಷ್ಟ್ರದ ಮರಾಠಾವಾಡಾ ಪ್ರದೇಶದಲ್ಲಿ ಕೆಲವು ತಿಂಗಳುಗಳ ಸೆಖೆಯ ನಂತರ ಆಗಷ್ಟೇ ಚಳಿಗಾಲ ಕಾಲಿಡುತ್ತಿತ್ತು. ದಾಮಿನಿ (ಹೆಸರು ಬದಲಾಯಿಸಲಾಗಿದೆ) ರಾತ್ರಿ ಪಾಳಿಯ ಕೆಲಸಕ್ಕೆ ತಯಾರಾಗುತ್ತ ಆ ದಿನದ ಕುಳಿರ್ಗಾಳಿಯನ್ನು ಆನಂದಿಸುತ್ತಿದ್ದರು. “ಆ ದಿನ ನಾನು ನಾನು ಪಿಎಸ್ಒ [ಪೊಲೀಸ್ ಸ್ಟೇಷನ್ ಆಫೀಸರ್] ಕರ್ತವ್ಯದಲ್ಲಿದ್ದೆ ಮತ್ತು ಶಸ್ತ್ರಾಸ್ತ್ರಗಳು ಮತ್ತು ವಾಕಿ-ಟಾಕಿಗಳನ್ನು ವಿತರಿಸುವ ಉಸ್ತುವಾರಿಯನ್ನು ನನಗೆ ವಹಿಸಲಾಗಿತ್ತು” ಎಂದು ಅವರು ಹೇಳುತ್ತಾರೆ.
ಕೆಲಸಕ್ಕೆ ಹೋದ ನಂತರ ಸ್ಟೇಷನ್ ಹೌಸ್ ಆಫೀಸರ್ ಅಲಿಯಾಸ್ ಪೊಲೀಸ್ ಇನ್ಸ್ಪೆಕ್ಟರ್ (ಎಸ್ಎಚ್ಒ / ಪಿಐ) ತನ್ನ ವಾಕಿ-ಟಾಕಿಗಾಗಿ ಚಾರ್ಜ್ ಮಾಡಿದ ಬ್ಯಾಟರಿಗಳನ್ನು ಪೊಲೀಸ್ ಠಾಣೆಯಿಂದ ನಿಲ್ದಾಣದ ಆವರಣದಲ್ಲಿರುವ ತನ್ನ ಅಧಿಕೃತ ಮನೆಗೆ ತರಲು ಹೇಳಿದರು. ಅದು ಮಧ್ಯರಾತ್ರಿಯ ನಂತರ, ಶಿಷ್ಟಾಚಾರಕ್ಕೆ ವಿರುದ್ಧವಾಗಿದ್ದರೂ ಅಂತಹ ಕೆಲಸಗಳಿಗೆ ದಾಮಿನಿಯವರನ್ನು ಮನೆಯ ಬಳಿಗೆ ಕರೆಯುವುದು ಮಾಮೂಲಿಯಾಗಿತ್ತು. “ಅಧಿಕಾರಿಗಳು ಆಗಾಗ ಉಪಕರಣಗಳನ್ನು ಮನೆಗೆ ಕೊಂಡೊಯ್ಯುವುದು ಇರುತ್ತದೆ… ನಮಗೂ ಮೇಲಧಿಕಾರಿಗಳ ಆದೇಶಗಳನ್ನು ಅನುಸರಿಸಬೇಕಾದ ಅನಿವಾರ್ಯತೆಯಿರುತ್ತದೆ” ಎಂದು ದಾಮಿನಿ ವಿವರಿಸುತ್ತಾರೆ.
ಹೀಗೆ ರಾತ್ರಿ ಸುಮಾರು 1:30ರ ಹೊತ್ತಿಗೆ ದಾಮಿನಿ ಪಿಎಸ್ಐ ಮನೆಯತ್ತ ನಡೆದರು.
ಅಲ್ಲಿ ಮೂವರು ಪುರುಷರು ಒಳಗೆ ಕುಳಿತಿದ್ದರು: ಪಿಐ, ಸಾಮಾಜಿಕ ಕಾರ್ಯಕರ್ತ ಮತ್ತು ಠಾಣೆ ಕರಮ್ಚಾರಿ (ಸಣ್ಣ ಅರೆ-ಅಧಿಕೃತ ಕಾರ್ಯಗಳಿಗಾಗಿ ಪೊಲೀಸ್ ಠಾಣೆಯಲ್ಲಿ ನೇಮಕಗೊಂಡ ನಾಗರಿಕ ಸ್ವಯಂಸೇವಕ). "ನಾನು ಅವರುಗಳನ್ನು ನಿರ್ಲಕ್ಷಿಸಿ ವಾಕಿ ಟಾಕಿಯ ಬ್ಯಾಟರಿಗಳನ್ನು ಬದಲಾಯಿಸಲು ಕೋಣೆಯ ಮೇಜಿನ ಕಡೆಗೆ ತಿರುಗಿದೆ" ಎಂದು ಅವರು ನವೆಂಬರ್ 2017ರ ಆ ರಾತ್ರಿಯನ್ನು ನೆನಪಿಸಿಕೊಂಡು ಆತಂಕದಿಂದ ಹೇಳುತ್ತಾರೆ. ತಿರುಗಿ ನೋಡುವಾಗ ಬಾಗಿಲು ಚಿಲಕ ಹಾಕಿದ ಸದ್ದು ಕೇಳಿತು. ”ನಾನು ಕೋಣೆಯಿಂದ ಹೊರಗೆ ಹೋಗಲು ಬಯಸಿದ್ದೆ. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡಿದ್ದೆ. ಆದರೆ ಇಬ್ಬರು ಗಂಡಸರು ನನ್ನ ಕೈಗಳನ್ನು ಬಿಗಿಯಾಗಿ ಹಿಡಿದು ಹಾಸಿಗೆಯ ಮೇಲೆ ಎಸೆದರು. ನಂತರ… ಒಬ್ಬೊಬ್ಬರಾಗಿ ನನ್ನ ಮೇಲೆ ಅತ್ಯಾಚಾರ ಎಸಗಿದರು.”
ಮುಂಜಾನೆ 2:30ರ ಸುಮಾರಿಗೆ, ದಾಮಿನಿ ಕಣ್ಣೀರು ತುಂಬಿಕೊಂಡು ಮನೆಯಿಂದ ಹೊರಬಂದು, ತನ್ನ ಬೈಕ್ ಹತ್ತಿ ಮನೆಗೆ ಹೊರಟರು. "ನನ್ನ ಮನಸ್ಸು ಸ್ತಬ್ಧವಾಗಿತ್ತು. ನಾನು ಯೋಚಿಸುತ್ತಲೇ ಇದ್ದೆ... ನನ್ನ ವೃತ್ತಿಜೀವನ ಮತ್ತು ಸಾಧಿಸಲು ಬಯಸಿದ್ದರ ಕುರಿತು. ಆದರೆ ಈಗ…?" ಎಂದು ಅವರು ಹೇಳುತ್ತಾರೆ.







