ನಾಗರಾಜ್‌ ಬಂಡನ್‌ ತಮ್ಮ ಮನೆಯಿಂದ ಹೊಮ್ಮುತ್ತಿದ್ದ ರಾಗಿ ಕಳಿಯ ಪರಿಮಳವನ್ನು ನೆನಪಿಸಿಕೊಳ್ಳುತ್ತಿದ್ದರು. ಸಣ್ಣ ಹುಡುಗನಿದ್ದ ಸಮಯದಲ್ಲಿ ಅವರು ದಿನವೂ ಆ ಪರಿಮಳವನ್ನು ಎದುರುನೋಡುತ್ತಿದ್ದರು.

ಐದು ದಶಕಗಳ ಹಿಂದಿನ ರಾಗಿ ಕಳಿ (ರಾಗಿ ಮುದ್ದೆ) ಗೆ ಈಗಿನ ರಾಗಿ ಮುದ್ದೆ ಹೋಲಿಕೆಯಲ್ಲ. “ಈಗ ನಾವು ಬೆಳೆಯುವ ರಾಗಿ ಮೊದಲಿನಷ್ಟು ವಾಸನೆ ಅಥವಾ ರುಚಿಯನ್ನು ಹೊಂದಿರುವುದಿಲ್ಲ” ಮತ್ತು ಈಗೀಗ ರಾಗಿ ಕಳಿಯನ್ನು ಇಲ್ಲಿನ ಮನೆಗಳಲ್ಲಿ ದಿನವೂ ಬೇಯಿಸುವುದಿಲ್ಲ.

ನಾಗರಾಜ್ ಇರುಳ ಸಮುದಾಯದವರು (ತಮಿಳುನಾಡಿನಲ್ಲಿ ಪರಿಶಿಷ್ಟ ಪಂಗಡದಡಿಯಲ್ಲಿ ಸೇರಿಸಲಾಗಿದೆ) ಮತ್ತು ನೀಲಗಿರಿಯ ಬೊಕ್ಕಪುರಂ ಎನ್ನುವ ಕುಗ್ರಾಮದ ನಿವಾಸಿ. ಅವರು ತಮ್ಮ ಪೋಷಕರು ಬೆಳೆಯುವ ರಾಗಿ, ಚೋಳಂ (ಜೋಳ), ಕಾಂಬೂ (ಸಜ್ಜೆ) ಮತ್ತು ಸಾಮೈ (ಸಾಮೆ ಅಕ್ಕಿ) ಮುಂತಾದ ಇತರ ಸಿರಿಧಾನ್ಯಗಳನ್ನು ನೋಡುತ್ತಾ ಬೆಳೆದವರು. ಆಗ ಬೆಳೆದಿದ್ದರಲ್ಲಿ ಒಂದಷ್ಟನ್ನು ಮನೆಗೆ ಇಟ್ಟುಕೊಂಡು ಉಳಿದಿದ್ದನ್ನು ಮಾರುಕಟ್ಟೆಯಲ್ಲಿ ಮಾರಲಾಗುತ್ತಿತ್ತು.

ನಾಗರಾಜ್‌ ದೊಡ್ಡವರಾದಂತೆ ಜಮೀನು ಅವರ ವಶಕ್ಕೆ ಬಂತು. ಆದರೆ ಅವರು ಬೇಸಾಯ ಆರಂಭಿಸಿದಂತೆ ತಂದೆಯ ಕಾಲದಲ್ಲಿ ಸಿಗುತ್ತಿದ್ದ ಇಳುವರಿ ಈಗ ಸಿಗುತ್ತಿಲ್ಲವೆನ್ನುವುದು ಅವರ ಗಮನಕ್ಕೆ ಬಂತು. “ಈಗ ನಮಗೆ ತಿನ್ನಲು ಸಾಕಾಗುವಷ್ಟೇ [ರಾಗಿ] ಸಿಗುತ್ತದೆ. ಕೆಲವೊಮ್ಮೆ ಅದೂ ಸಿಗುವುದಿಲ್ಲ” ಎಂದು ಅವರು ಪರಿಗೆ ತಿಳಿಸಿದರು. ಅವರು ತಮ್ಮ ಎರಡು ಎಕರೆ ಭೂಮಿಯಲ್ಲಿ ಬೀನ್ಸ್ ಮತ್ತು ಬದನೆಕಾಯಿಯಂತಹ ತರಕಾರಿಗಳ ಜೊತೆಗೆ ರಾಗಿ ಬೆಳೆಯುವುದನ್ನು ಸಹ ಮುಂದುವರಿಸಿದ್ದಾರೆ.

ಈ ಪ್ರದೇಶದ ಇತರ ರೈತರಿಗೂ ಈ ಬದಲಾವಣೆ ಗಮನಕ್ಕೆ ಬಂದಿದೆ. ಮಾರಿ (ತನ್ನ ಮೊದಲ ಹೆಸರಿಸಿಂದಲೇ ಗುರುತಿಸಿಕೊಳ್ಳುತ್ತಾರೆ) ತಮ್ಮ ತಂದೆ 10-20 ಚೀಲಗಳಷ್ಟು ರಾಗಿ ಇಳುವರಿ ಪಡೆಯುತ್ತಿದ್ದುದಾಗಿ ಹೇಳುತ್ತಾರೆ. ಆದರೆ ಈಗ ಈ 45 ವರ್ಷದ ರೈತ ಬೆಳೆಯೊಂದಕ್ಕೆ ಕೇವಲ 2-3 ಚೀಲಗಳಷ್ಟು ರಾಗಿಯ ಇಳುವರಿ ಪಡೆಯುತ್ತಿದ್ದಾರೆ. ಇವರ ಬಳಿಯೂ ಎರಡು ಎಕರೆ ಜಮೀನಿದೆ.

ನಾಗರಾಜ್ ಮತ್ತು ಮಾರಿ ಅವರ ಅನುಭವಗಳು ನೀಲಗಿರಿಯಲ್ಲಿ ರಾಗಿ ಕೃಷಿಯು 1948-49ರಲ್ಲಿ 1,369 ಹೆಕ್ಟೇರಿನಿಂದ 1998-99ರಲ್ಲಿ 86 ಹೆಕ್ಟೇರಿಗೆ ಕುಸಿದಿದೆ ಎಂದು ಹೇಳುವ ಅಧಿಕೃತ ಅಂಕಿಅಂಶಗಳಲ್ಲಿ ಪ್ರತಿಫಲಿಸುತ್ತವೆ.

ಕಳೆದ ಜನಗಣತಿ (2011) ಪ್ರಕಾರ ಜಿಲ್ಲೆಯಲ್ಲಿ ಕೇವಲ ಒಂದು ಹೆಕ್ಟೇರ್ ಪ್ರದೇಶದಲ್ಲಷ್ಟೇ ರಾಗಿಯನ್ನು ಬೆಳೆಯಲಾಗುತ್ತಿದೆ.

PHOTO • Sanviti Iyer

ಕಳೆದ ಕೆಲವು ದಶಕಗಳಲ್ಲಿ ನೀಲಗಿರಿಯಲ್ಲಿ ರಾಗಿ ಕೃಷಿ ಕುಸಿದಿರುವು ದಾಗಿ ರೈತರಾದ ಮಾರಿ (ಎಡ) , ಸುರೇಶ್ (ಮಧ್ಯ) ಮತ್ತು ನಾಗರಾಜ್ (ಬಲ) ಹೇಳುತ್ತಾ ರೆ. ಕಳೆದ ಜನಗಣತಿ ( 2011) ಪ್ರಕಾರ ಜಿಲ್ಲೆಯಲ್ಲಿ ಕೇವಲ ಒಂದು ಹೆಕ್ಟೇರ್ ಪ್ರದೇಶ ದಲ್ಲಷ್ಟೇ ರಾಗಿಯನ್ನು ಬೆಳೆಯಲಾಗುತ್ತಿದೆ

PHOTO • Sanviti Iyer
PHOTO • Sanviti Iyer

ನಾಗರಾಜ್ ಬಂಡನ್ ಅವರ ಹೊಲ (ಎಡ) ಮತ್ತು ಮಾರಿಯವರ ಹೊಲ (ಬಲ). 'ಈಗಿನ ರಾಗಿಗೆ ಮೊದಲಿನ ವಾಸನೆ ಅಥವಾ ರುಚಿಯಿಲ್ಲ' ಎಂದು ನಾಗರಾಜ್ ಹೇಳುತ್ತಾರೆ

“ಕಳೆದ ವರ್ಷ ಒಂದಿಷ್ಟೂ ರಾಗಿ ಸಿಗಲಿಲ್ಲ” ಎನ್ನುತ್ತಾರೆ ನಾಗರಾಜ್.‌ ಅವರು 2023ರ ಜೂನ್‌ ತಿಂಗಳಿನಲ್ಲಿ ಬೀಜ ಬಿತ್ತನೆ ಮಾಡಿದ್ದರು. “ಬೀಜ ಬಿತ್ತು ಮೊದಲು ಮಳೆಯಾಯಿತು. ಆದರೆ ನಂತರ ಮಳೆ ಬಾರದ ಕಾರಣ ಬೀಜ ಒಣಗಿತು.”

ಹೊಸ ಬೀಜಗಳನ್ನು ಬಳಸುತ್ತಿರುವುದರಿಂದಾಗಿ ರಾಗಿ ಗಿಡಗಳು ನಿಧಾನವಾಗಿ ಬೆಳೆಯುತ್ತವೆ ಎಂದು ಮತ್ತೊಬ್ಬ ಇರುಳ ರೈತ ಸುರೇಶ್ ಹೇಳುತ್ತಾರೆ. "ನಾವು ಇನ್ನು ಮುಂದೆ ಕೃಷಿಯನ್ನು ಅವಲಂಬಿಸಿ ಬದುಕಲು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ, ಮತ್ತು ಅವರ ಇಬ್ಬರು ಗಂಡುಮಕ್ಕಳು ಕೃಷಿಯನ್ನು ತೊರೆದು ಕೊಯಮತ್ತೂರಿನಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ಮಳೆ ಮಾದರಿಗಳು ಈಗ ವಿಪರೀತ ಅನಿಯಮಿತವಾಗಿವೆ. “"ಈ ಮೊದಲು ಆರು ತಿಂಗಳ ಕಾಲ (ಮೇ ಅಂತ್ಯದಿಂದ ಅಕ್ಟೋಬರ್ ಆರಂಭದವರೆಗೆ) ಮಳೆಯಾಗುತ್ತಿತ್ತು. ಆದರೆ ಈಗ ಯಾವಾಗ ಮಳೆಯಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಡಿಸೆಂಬರ್‌ ತಿಂಗಳಿನಲ್ಲೂ ಮಳೆಯಾಗಬಹುದು ಈಗ” ಎನ್ನುತ್ತಾರೆ ನಾಗರಾಜ್. ಮಳೆಯ ಕೊರತೆಯಿಂದಾಗಿ ಆದಾಯ ಕೊರೆತಯಾಗುತ್ತಿದೆ ಎಂದು ಅವರು ದೂರುತ್ತಾರೆ. “ಇನ್ನು ಮುಂದೆ ಮಳೆಯನ್ನು ನಂಬಿ ಬದುಕುವುದು ಕಷ್ಟ.”

ನೀಲಗಿರಿ ಜೀವಜಾಲ ಮೀಸಲು ಪ್ರದೇಶವು ಪಶ್ಚಿಮ ಘಟ್ಟಗಳ ದಕ್ಷಿಣ ಭಾಗದಲ್ಲಿದೆ ಮತ್ತು ಯುನೆಸ್ಕೋದಿಂದ ಶ್ರೀ ಮಂತ ಜೀವವೈವಿಧ್ಯತೆಯ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಆದರೆ ಸ್ಥಳೀಯವಲ್ಲದ ಜಾತಿಯ ಸಸ್ಯಗಳ ಪರಿಚಯ, ಎತ್ತರದ ಜೌಗು ಪ್ರದೇಶಗಳನ್ನು ತೋಟಗಳಾಗಿ ಪರಿವರ್ತಿಸುವುದು ಮತ್ತು ವಸಾಹತುಶಾಹಿ ಕಾಲದ ಚಹಾ ಕೃಷಿಯು "ಈ ಪ್ರದೇಶದ ಜೀವವೈವಿಧ್ಯತೆಯನ್ನು ನಾಶಪಡಿಸಿದೆ" ಎಂದು ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ಸಮಿತಿಯ 2011ರ ಪ್ರಬಂಧವು ಹೇಳುತ್ತದೆ.

ನೀಲಗಿರಿಯ ಇತರ ನೀರಿನ ಮೂಲಗಳಾದ ಮೊಯಾರ್ ನದಿ ಇಲ್ಲಿಗೆ ತುಂಬಾ ದೂರದಲ್ಲಿದೆ. ಮತ್ತು ಅವರ ಭೂಮಿ ಮುದುಮಲೈ ಹುಲಿ ಮೀಸಲು ಪ್ರದೇಶದ ಬಫರ್ ವಲಯವಾದ ಬೊಕ್ಕಪುರಂನಲ್ಲಿರುವುದರಿಂದ - ಅರಣ್ಯ ಅಧಿಕಾರಿಗಳು ಕೊಳವೆಬಾವಿಗಳನ್ನು ತೋಡಿಸುವುದಕ್ಕೆ ಅನುಮತಿಸುವುದಿಲ್ಲ. ಬೊಕ್ಕಪುರಂನ ರೈತ ಬಿ.ಸಿದ್ದನ್, ಅರಣ್ಯ ಹಕ್ಕುಗಳ ಕಾಯ್ದೆ, 2006 ಕಾರಣ ಅನೇಕ ವಿಷಯಗಳು ಬದಲಾಗಿವೆ ಎಂದು ಹೇಳುತ್ತಾರೆ. "2006ರ ಮೊದಲು ನಾವು ಕಾಡಿನಿಂದ ನೀರನ್ನು ತೆಗೆದುಕೊಳ್ಳಬಹುದಾಗಿತ್ತು, ಆದರೆ ಈಗ ನಮಗೆ ಕಾಡಿನೊಳಗೆ ಹೋಗಲು ಸಹ ಅವಕಾಶವಿಲ್ಲ" ಎಂದು 47 ವರ್ಷದ ಅವರು ಹೇಳುತ್ತಾರೆ.

“ಈ ಬಿಸಿಲಿನಲ್ಲಿ ರಾಗಿ ಹೇಗೆ ಬೆಳೆಯುತ್ತದೆ” ಎಂದು ನಾಗರಾಜ್‌ ಕೇಳುತ್ತಾರೆ.

ಕೃಷಿಯಲ್ಲಿನ ನಷ್ಟವನ್ನು ಸರಿದೂಗಿಸಲು ಮತ್ತು ಜೀವನೋಪಾಯಕ್ಕಾಗಿ, ನಾಗರಾಜ್ ಮಸಿನಗುಡಿ ಮತ್ತು ಸುತ್ತಮುತ್ತಲಿನ ಕುಗ್ರಾಮಗಳ ಇತರರ ಹೊಲಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. "ದಿನಕ್ಕೆ 400-500 [ರೂಪಾಯಿ] ತನಕ ಸಂಪಾದಿಸಬಹುದು, ಆದರೆ ಅದು ಕೆಲಸ ಸಿಕ್ಕಾಗ ಮಾತ್ರ" ಎಂದು ಅವರು ಹೇಳುತ್ತಾರೆ. ಅವರ ಪತ್ನಿ ನಾಗಿ ಕೂಡ ದಿನಗೂಲಿ ಕಾರ್ಮಿಕರಾಗಿದ್ದು, ಜಿಲ್ಲೆಯ ಅನೇಕ ಮಹಿಳೆಯರಂತೆ ಅವರೂ ಹತ್ತಿರದ ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಆ ಮೂಲಕ ದಿನಕ್ಕೆ 300 ರೂ.ಗಳನ್ನು ಸಂಪಾದಿಸುತ್ತಾರೆ.

PHOTO • Sanviti Iyer
PHOTO • Sanviti Iyer

ಹೊಸ ಬೀಜಗಳನ್ನು (ಎಡಭಾಗದಲ್ಲಿರುವ ಅವರ ಹೊಲ) ಬಳಸುತ್ತಿರುವುದರಿಂದ ಈಗ ರಾಗಿ ಗಿಡಗಳು ನಿಧಾನವಾಗಿ ಬೆಳೆಯುತ್ತವೆ ಎಂದು ಸುರೇಶ್ ಹೇಳುತ್ತಾರೆ. ಬಿ. ಸಿದ್ದನ್ (ಬಲ) ಹೇಳುತ್ತಾರೆ: '2006 ಕ್ಕಿಂತ ಮೊದಲು ನಾವು ಕಾಡಿನಿಂದ ನೀರನ್ನು ತೆಗೆದುಕೊಳ್ಳಬಹುದಾಗಿತ್ತು ಆದರೆ ಈಗ ನಮಗೆ ಕಾಡಿನೊಳಗೆ ಹೋಗಲು ಸಹ ಅವಕಾಶವಿಲ್ಲ '

*****

ಆನೆಗಳಿಗೂ ನಮ್ಮಂತೆಯೇ ರಾಗಿಯೆಂದರೆ ಇಷ್ಟ ಎಂದು ತಮಾಷೆ ಮಾಡುತ್ತಾರೆ. “ರಾಗಿಯ ಪರಿಮಳ ಅವುಗಳನ್ನು [ಆನೆಗಳನ್ನು] ನಮ್ಮ ಹೊಲಗಳತ್ತ ಸೆಳೆಯುತ್ತದೆ” ಎನ್ನುತ್ತಾರೆ ಸುರೇಶ್.‌ ಬೊಕ್ಕಾಪುರಂ ಕುಗ್ರಾಮವು ಸಿಗೂರ್ ಆನೆ ಕಾರಿಡಾರ್ ಅಡಿಯಲ್ಲಿ ಬರುತ್ತದೆ - ಇದು ಪಶ್ಚಿಮ ಮತ್ತು ಪೂರ್ವ ಘಟ್ಟಗಳ ನಡುವೆ ಆನೆಗಳ ಚಲನೆಯನ್ನು ಪರಸ್ಪರ ಸಂಪರ್ಕಿಸುತ್ತದೆ.

ನಾವು ಸಣ್ಣವರಿದ್ದ ಸಮಯದಲ್ಲಿ ಆನೆಗಳ ಬರುತ್ತಿದ್ದದ್ದು ನೆನಪಿಲ್ಲ ಎಂದು ಅವರು ಹೇಳುತ್ತಾರೆ. ಆದರೆ “ನಾವು ಆನೆಗಳನ್ನು ದೂಷಿಸುವುದಿಲ್ಲ. ಮಳೆಯಿಲ್ಲದೆ ಕಾಡುಗಳು ಒಣುತ್ತಿವೆ. ಅವುಗಳಾದರೂ ಏನನ್ನು ತಿನ್ನುತ್ತವೆ? ಅವು ಅನಿವಾರ್ಯವಾಗಿ ಕಾಡಿನಿಂದ ಹೊರಗೆ ಬರಬೇಕಾಗುತ್ತದೆ” ಎಂದು ಸುರೇಶ್‌ ಹೇಳುತ್ತಾರೆ. ಗ್ಲೋಬಲ್ ಫಾರೆಸ್ಟ್ ವಾಚ್ ಪ್ರಕಾರ, ನೀಲಗಿರಿ ಜಿಲ್ಲೆಯು 2002ರಿಂದ 2022 ರ ನಡುವೆ 511 ಹೆಕ್ಟೇರ್ ಅರಣ್ಯ ಭೂಮಿಯನ್ನು ಕಳೆದುಕೊಂಡಿದೆ.

ರಂಗಯ್ಯನವರ ಹೊಲವು ಬೊಕ್ಕಾಪುರಂನಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಮೇಲ್‌ಭೂತನಾಥಂ ಎಂಬ ಕುಗ್ರಾಮದಲ್ಲಿದೆ, ಅವರು ಸಹ ಸುರೇಶ್ ಅವರ ಮಾತನ್ನು ಒಪ್ಪುತ್ತಾರೆ. ಐವತ್ತರ ಪ್ರಾಯದ ಅವರು ಒಂದು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಾರೆ. ಆದರೆ ಆ ಭೂಮಿಗೆ ಅವರ ಬಳಿ ಪಟ್ಟಾ ಇಲ್ಲ. "ನನ್ನ ಕುಟುಂಬವು 1947ಕ್ಕಿಂತ ಮುಂಚೆಯೇ ಈ ಭೂಮಿಯಲ್ಲಿ ಕೃಷಿ ಮಾಡಿತ್ತು" ಎಂದು ಅವರು ಹೇಳುತ್ತಾರೆ. ಸೋಲಿಗ ಆದಿವಾಸಿಯಾದ ರಂಗಯ್ಯನವರು ತಮ್ಮ ಜಮೀನಿನ ಬಳಿಯಿರುವ ಸೋಲಿಗ ದೇವಾಲಯವನ್ನು ಸಹ ನಿರ್ವಹಿಸುತ್ತಾರೆ.

ಆನೆಗಳ ಕಾರಣದಿಂದಾಗಿ ರಂಗಯ್ಯ ಕೆಲವು ವರ್ಷಗಳಿಂದ ರಾಗಿ ಮತ್ತು ಇತರ ಸಿರಿಧಾನ್ಯಗಳನ್ನು ಬೆಳೆಯುವುದನ್ನು ನಿಲ್ಲಿಸಿದ್ದರು. "ಅವು [ಆನೆಗಳು] ಬಂದು ಇರುವುದೆಲ್ಲವನ್ನೂ ತಿನ್ನುತ್ತಿದ್ದವು" ಎಂದು ಅವರು ಹೇಳುತ್ತಾರೆ, "ಆನೆ ಒಮ್ಮೆ ಜಮೀನಿಗೆ ಬಂದು ರಾಗಿಯ ರುಚಿ ನೋಡಿದರೆ, ಅದು ಮತ್ತೆ ಮತ್ತೆ ಬರುತ್ತಲೇ ಇರುತ್ತದೆ." ಇದರಿಂದಾಗಿ ಅನೇಕ ರೈತರು ರಾಗಿ ಮತ್ತು ಇತರ ಸಿರಿಧಾನ್ಯಗಳನ್ನು ಬೆಳೆಯುವುದನ್ನು ನಿಲ್ಲಿಸಿದ್ದಾರೆ ಎಂದು ಅವರು ಹೇಳುತ್ತಾರೆ. ನಂತರ ರಂಗಯ್ಯ ರಾಗಿಯ ಬದಲಿಗೆ ಎಲೆಕೋಸು ಮತ್ತು ಬೀನ್ಸ್ ನಂತಹ ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದರು.

ರೈತರು ರಾತ್ರಿಯಿಡೀ ಜಾಗರೂಕರಾಗಿರಬೇಕು. ಅಪ್ಪಿತಪ್ಪಿ ನಿದ್ರೆಗೆ ಜಾರಿದರೆ ಆನೆಗಳಿಂದ ಹಾನಿಗೊಳಗಾಗುವ ಅಪಾಯವಿದೆ ಎಂದು ಅವರು ಹೇಳುತ್ತಾರೆ. "ಆನೆಗಳಿಗೆ ಹೆದರಿ ರೈತರು ರಾಗಿಯನ್ನು ಬಿತ್ತನೆ ಮಾಡುವುದಿಲ್ಲ."

ಇಲ್ಲಿನ ರೈತರು ರಾಗಿಯಂತಹ ಏಕದಳ ಧಾನ್ಯಗಳನ್ನು ಎಂದೂ ಕಾಸು ಕೊಟ್ಟು ಖರೀದಿಸಿದವರಲ್ಲ. ಹೀಗಾಗಿ ರಾಗಿ ಬೆಳೆಯುವುದನ್ನು ನಿಲ್ಲಿಸಿದ ಅವರು ಅದನ್ನು ತಿನ್ನುವುದನ್ನೂ ನಿಲ್ಲಿಸಿದರು.

PHOTO • Sanviti Iyer
PHOTO • Sanviti Iyer

ಸೋಲಿಗ ಸಮುದಾಯಕ್ಕೆ ಸೇರಿದ ರಂಗಯ್ಯ ಮೇ ಲ್‌ಭೂತ ನಾಥಂ ಎನ್ನುವ ಕುಗ್ರಾಮ ಕ್ಕೆ ಸೇರಿದ ರೈತ. ಆನೆಗಳು ಮತ್ತು ಇತರ ಪ್ರಾಣಿಗಳಿಂದ ರಕ್ಷಣೆಗಾಗಿ ಸ್ಥಳೀಯ ಸರ್ಕಾರೇತರ ಸಂಘಟನೆಯೊಂದು ಅವರಿಗೆ ಮತ್ತು ಅಲ್ಲಿನ ಇತರ ರೈತರ ಹೊಲಗಳಿಗೆ ಸೌರ ಬೇಲಿ ನ್ನು ಒದಗಿಸಿ ದೆ. ಅದರ ನಂತರ ಅವರು ಇತ್ತೀಚೆಗೆ ರಾಗಿ ಬೆಳೆಯಲು ಪ್ರಾರಂಭಿಸಿದರು. "ಅ ವು (ಆನೆಗಳು) ಬಂದು ಎಲ್ಲವನ್ನೂ ತಿನ್ನುತ್ತಿದ್ದ ವು " ಎಂದು ಅವರು ಹೇಳುತ್ತಾರೆ

PHOTO • Sanviti Iyer
PHOTO • Sanviti Iyer

ರಂಗಯ್ಯ ತನ್ನ ಜಮೀನಿನ ಬಳಿ ಯಿರುವ ಸೋಲಿಗ ದೇವಾಲಯವನ್ನು (ಎಡಕ್ಕೆ) ಸಹ ನೋಡಿಕೊಳ್ಳುತ್ತಾರೆ . ಆನಕಟ್ಟಿ ಗ್ರಾಮದ ಲಲಿತಾ ಮೂ ಕಾಸಾಮಿ (ಬಲ) ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದರ ಆರೋಗ್ಯ ಕ್ಷೇತ್ರ ಸಂಯೋಜಕ ರು . 'ಸಿರಿಧಾನ್ಯಗಳ ಕೃಷಿ ಕಡಿಮೆಯಾದ ನಂತರ , ನಾವು ಪಡಿತರ ಅಂಗಡಿಗಳಿಂದ ಆಹಾರವನ್ನು ಖರೀದಿಸಬೇಕಾಯಿತು - ಇದು ನಮಗೆ ಅಭ್ಯಾಸ ವಿ ರಲಿಲ್ಲ' ಎಂದು ಅವರು ಹೇಳುತ್ತಾರೆ

ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದು ಅವರಿಗೆ ಮತ್ತು ಅಲ್ಲಿನ ಇತರ ರೈತರಿಗೆ ತಮ್ಮ ಹೊಲಗಳಲ್ಲಿನ ಬೆಳೆಗಳನ್ನು ಆನೆ ಮತ್ತು ಇತರ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಸೋಲಾರ್‌ ಬೇಲಿ ಸೌಲಭ್ಯವನ್ನು ಒದಗಿಸಿತು. ಇದರ ನಂತರ. ರಂಗಯ್ಯ ತನ್ನ ಜಮೀನಿನ ಒಂದು ಭಾಗದಲ್ಲಿ ಮತ್ತೆ ರಾಗಿಯನ್ನು ಬೆಳೆಯಲು ಪ್ರಾರಂಭಿಸಿದರು. ಜೊತೆಗೆ ಮತ್ತೊಂದೆಡೆ ಅವರು ತರಕಾರಿ ಬೆಳೆಯುವುದನ್ನೂ ಮುಂದುವರೆಸಿದರು.

ಸಿರಿಧಾನ್ಯಗಳ ಕೃಷಿ ಕ್ಷೀಣಿಸುತ್ತಿರುವುದರಿಂದಾಗಿ ಆಹಾರ ಪದ್ಧತಿಯೂ ಬದಲಾಗುತ್ತಿದೆ. "ಸಿರಿಧಾನ್ಯಗಳ ಕೃಷಿ ಕಡಿಮೆಯಾದ ನಂತರ, ನಾವು ಪಡಿತರ ಅಂಗಡಿಗಳಿಂದ ಆಹಾರವನ್ನು ಖರೀದಿಸಬೇಕಾಯಿತು - ಇದು ನಮಗೆ ಅಭ್ಯಾಸವಿರಲಿಲ್ಲ" ಎಂದು ಊರಿನ ನಿವಾಸಿ ಮತ್ತು ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದರ ಆರೋಗ್ಯ ಕ್ಷೇತ್ರ ಸಂಯೋಜಕಿ ಲಲಿತಾ ಮೂಕಾಸಾಮಿ ಹೇಳುತ್ತಾರೆ. ಪಡಿತರ ಅಂಗಡಿಗಳು ಹೆಚ್ಚಾಗಿ ಅಕ್ಕಿ ಮತ್ತು ಗೋಧಿಯನ್ನು ಮಾರಾಟ ಮಾಡುತ್ತವೆ ಎಂದು ಅವರು ಹೇಳುತ್ತಾರೆ.

"ನಾನು ಚಿಕ್ಕವಳಿದ್ದಾಗ, ನಾವು ದಿನಕ್ಕೆ ಮೂರು ಬಾರಿ ರಾಗಿ ಕಳಿ ತಿನ್ನುತ್ತಿದ್ದೆವು, ಆದರೆ ಈಗ ಅದನ್ನು ತಿನ್ನುತ್ತಿಲ್ಲ. ನಮ್ಮಲ್ಲಿ ಅರ್ಸಿ ಸಾಪಾಟ್ (ಅಕ್ಕಿ ಆಧಾರಿತ ಆಹಾರ) ಮಾತ್ರವೇ ಇದೆ, ಅದನ್ನು ತಯಾರಿಸುವುದು ಸಹ ಸುಲಭ" ಎಂದು ಲಲಿತಾ ಹೇಳುತ್ತಾರೆ. ಸ್ವತಃ ಇರುಳ ಆದಿವಾಸಿ ಸಮುದಾಯಕ್ಕೆ ಸೇರಿದ ಅವರು ಆನೈಕಟ್ಟಿ ಗ್ರಾಮದವರಾಗಿದ್ದು, ಕಳೆದ 19 ವರ್ಷಗಳಿಂದ ಸಮುದಾಯದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಬದಲಾಗುತ್ತಿರುವ ಆಹಾರ ಪದ್ಧತಿಯಿಂದಾಗಿ ಆರೋಗ್ಯ ಸಮಸ್ಯೆಗಳ ಹೆಚ್ಚಳವಾಗಬಹುದು ಎಂದು ಅವರು ಹೇಳುತ್ತಾರೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲ್ಲೆಟ್ಸ್ ರಿಸರ್ಚ್ (ಐಐಎಂಆರ್) ತನ್ನ ವರದಿಯಲ್ಲಿ , "ತಿಳಿದಿರುವ ಕೆಲವು ಪೋಷಕಾಂಶಗಳು, ಜೀವಸತ್ವಗಳು, ಖನಿಜಗಳು, ಅಗತ್ಯ ಕೊಬ್ಬಿನಾಮ್ಲಗಳು ಪೌಷ್ಠಿಕಾಂಶದ ಕೊರತೆಯ ಕಾರಣದಿಂದ ಬರುವ ರೋಗಗಳನ್ನು ತಡೆಗಟ್ಟುವ ಕಾರ್ಯಗಳ ಜೊತೆಗೆ ಕ್ಷೀಣಿಸುವ ರೋಗಗಳನ್ನು ತಡೆಗಟ್ಟುವ ದೃಷ್ಟಿಯಿಂದ ಪ್ರಯೋಜನಗಳನ್ನು ಹೊಂದಿವೆ" ಎಂದು ಹೇಳಿದೆ. ತೆಲಂಗಾಣ ಮೂಲದ ಸಂಸ್ಥೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಭಾಗವಾಗಿದೆ.

"ರಾಗಿ ಮತ್ತು ತೇನೈ ಪ್ರಧಾನ ಬೆಳೆಯಾಗಿತ್ತು. ನಾವು ಅವುಗಳನ್ನು ಸಾಸಿವೆ ಎಲೆಗಳು ಮತ್ತು ಕಾಟ್ ಕೀರೈ [ಕಾಡು ಸೊಪ್ಪು] ಜೊತೆಗೆ ತಿನ್ನುತ್ತಿದ್ದೆವು" ಎಂದು ರಂಗಯ್ಯ ಹೇಳುತ್ತಾರೆ. ಅವರಿಗೆ ಕೊನೆಯ ಬಾರಿಗೆ ಇದನ್ನು ತಿಂದದ್ದು ಯಾವಾಗೆನ್ನುವುದು ನೆನಪಿಲ್ಲ: "ನಾವು ಈಗ ಕಾಡಿಗೆ ಹೋಗುವುದಿಲ್ಲ."

ಕೀಸ್ಟೋನ್ ಫೌಂಡೇಶನ್ ನ ಶ್ರೀರಾಮ್ ಪರಮಶಿವನ್ ಅವರಿಗೆ ಈ ಲೇಖನವನ್ನು ವರದಿ ಮಾಡುವಲ್ಲಿ ಒದಗಿಸಿದ ಸಹಾಯಕ್ಕಾಗಿ ಕೃತಜ್ಞತೆಗಳನ್ನು ತಿಳಿಸಲು ಬಯಸುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Sanviti Iyer

Sanviti Iyer is Assistant Editor at the People's Archive of Rural India. She also works with students to help them document and report issues on rural India.

Other stories by Sanviti Iyer
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru