ಆಗಲೇ ಕಗ್ಗತ್ತಲಾಗಿತ್ತು, ಬೆಳಗಿನವರಗೆ ಕಾಯುವಂತೆಯೂ ಇರಲಿಲ್ಲ, ಸಮಯ ಆಗಲೇ ಮುಂಜಾನೆ ಎರಡು ಗಂಟೆಯಾಗಿತ್ತು ಮತ್ತು ಇನ್ನೂ ಮೂರು ಗಂಟೆ ಎನ್ನುವಷ್ಟರಲ್ಲಿ ಪೋಲಿಸರು ಅವರನ್ನು ತಡೆದು ನಿಲ್ಲಿಸುತ್ತಿದ್ದರು. ಕಸರುಪು ಧನರಾಜ್ ಮತ್ತು ಅವರ ಇಬ್ಬರು ಸಹೋದ್ಯೋಗಿಗಳು ಪೊಲೀಸರು ಎಚ್ಚೆತ್ತುಕೊಳ್ಳುವ ಮೊದಲು ಪಾರಾಗಿದ್ದರು. ಸ್ವಲ್ಪಸಮಯದ ಬಳಿಕ ಅವರು ನೀರಿನಲ್ಲಿದ್ದರು.

ಏಪ್ರಿಲ್ 10ರಂದು ತಾವು ತಪ್ಪಿಸಿಕೊಂಡು ಬಂದಿರುವ ಬಗ್ಗೆ ವಿವರಿಸುತ್ತಾ " ನಾನು ಆರಂಭದಲ್ಲಿ ಹೋಗಲು ತುಂಬಾ ಹೆದರುತ್ತಿದ್ದೆ. ಆದರೆ ಇದಕ್ಕಾಗಿ ನಾನು ಸ್ವಲ್ಪ ಧೈರ್ಯ ಮಾಡಬೇಕಾಯಿತು. ಬಾಡಿಗೆ ಬೇರೆ ಕಟ್ಟಬೇಕಾಗಿದ್ದರಿಂದ ನನಗೆ ಹಣದ ಅವಶ್ಯಕತೆ ಇತ್ತು"  ಎಂದು 44 ವರ್ಷದ ಧನರಾಜು ವಿವರಿಸಿದರು, ಹತಾಶಗೊಂಡಿರುವ ಎಲ್ಲ ಸಹಚರರ ಜೊತೆ ಸೇರಿ ಔಟ್ ಬೋರ್ಡ್ ಮೋಟಾರ್ ಹೊಂದಿರುವ ಸಣ್ಣ ಬೋಟ್ ಮೂಲಕ ಸಮುದ್ರಕ್ಕೆ ಇಳಿದರು. ಲಾಕ್‌ಡೌನ್‌ನಿಂದಾಗಿ ಬಂದರಿನಲ್ಲಿ ಮೀನುಗಾರಿಕೆ ಮತ್ತು ಇತರ ಚಟುವಟಿಕೆಗಳಿಗೆ ತಡೆಯೊಡ್ಡಲಾಗಿದೆ ಮತ್ತು ಪ್ರತಿದಿನ ಬೆಳಿಗ್ಗೆ 5 ಗಂಟೆಯ ಹೊತ್ತಿಗೆ, ವಿಶಾಖಪಟ್ಟಣಂನ ಮೀನುಗಾರಿಕೆ ಬಂದರಿನ ಎರಡು ಪ್ರವೇಶದ್ವಾರಗಳಲ್ಲಿ ಪೊಲೀಸರು ಆಗಮಿಸುತ್ತಾರೆ. ಇಲ್ಲಿನ ಮಾರುಕಟ್ಟೆಯಲ್ಲಿ ಈಗ ಸಾರ್ವಜನಿಕರಿಗೆ ಮತ್ತು ಮೀನುಗಾರರಿಗೆ ನಿರ್ಬಂಧ ವಿಧಿಲಾಗಿದೆ.

ಧನರಾಜು ಬೆಳಗು ಹರಿಯುವುದಕ್ಕೂ ಮೊದಲೇ 6-7 ಕೆಜಿಯಷ್ಟು ಬಂಗಾರು ಥೀಗಾ (ಒಂದು ಬಗೆಯ ಮೀನು) ತೆಗೆದುಕೊಂಡು ಬಂದರು. "ಆಗಲೇ ಇದು ಅಂತಿಮ ಕರೆಯಾಗಿತ್ತು" ನಾನು ಹಿಂದಿರುಗಿದ ಕೆಲವೇ ನಿಮಿಷಗಳ ನಂತರ ಪೊಲೀಸರು ಸಹ ಬಂದರು. ಒಂದು ವೇಳೆ ಅವರು ನನ್ನನು ಹಿಡಿದ್ದರೆ ಅವರು ಸರಿಯಾಗಿ ಬಾರಿಸುತ್ತಿದ್ದರು. ಆದರೆ ಇಂತಹ ಕಷ್ಟಕರ ಕಾಲದಲ್ಲಿ, ಬದುಕುಳಿಯಲು ಏನು ಮಾಡಬೇಕೋ ಅದನ್ನ ಮಾಡಲೇ ಬೇಕಾಗುತ್ತದೆ. ಇವತ್ತು ನನ್ನ ಬಾಡಿಗೆಯನ್ನು ಪಾವತಿಸುತ್ತೇನೆ, ನಾಳೆ ಮತ್ತೆ ಏನಾದರೂ ಬರಬಹುದು. ನನಗೆ ಕೊರೊನಾ ಸೋಂಕು ತಗಲಿಲ್ಲ, ಆದರೂ ಕೂಡ ಅದು ಆರ್ಥಿಕವಾಗಿ ನನ್ನ ಮೇಲೆ ಪರಿಣಾಮ ಬೀರುತ್ತಿದೆ" ಎಂದು ವಿವರಿಸಿದರು.

ಚೆಂಗಲ್ ರಾವ್ ಪೇಟಾದ ಡಾ.ಎನ್.ಟಿ.ಆರ್ ಬೀಚ್ ರಸ್ತೆಯ ಹಿಂಭಾಗದಲ್ಲಿರುವ ಕಿರಿದಾದ ಬೀದಿಯಲ್ಲಿ ಪೋಲೀಸರ ಕಣ್ಣು ತಪ್ಪಿಸಿ ತಮ್ಮ ತುಕ್ಕು ಹಿಡಿದ ಹಳೆಯ ರೋಮಾ ಸೈಕಲ್‌ನಲ್ಲಿ ವೈಟ್ ಬೋರ್ಡ್ ಇಟ್ಟುಕೊಂಡು ಮೀನುಗಳನ್ನು ಮಾರಾಟ ಮಾಡುತ್ತಾರೆ. " ನಾನು ಮುಖ್ಯ ರಸ್ತೆವರೆಗೆ ಸೈಕಲ್ ನ್ನು ತೆಗೆದುಕೊಂಡು ಹೋಗಬಹುದೆಂದು ಬಯಸುತ್ತೇನೆ, ಆದರೆ ನಾನು ಈಗ ಪೋಲೀಸರಿಂದಾಗಿ ಹೆದರಬೇಕಾಗಿದೆ " ಎಂದು ಧನರಾಜು  ಹೇಳುತ್ತಾರೆ. ಈಗ ಅವರು ಸಾಮಾನ್ಯವಾಗಿ ಒಂದು ಕೆಜಿ ಮೀನಿಗೆ 250 ರೂ ಗಳಿಗೆ ಮಾರುವುದರ ಬದಲಾಗಿ ಕೇವಲ 100 ರೂ ಗೆ ಮಾರುತ್ತಿದ್ದಾರೆ.

ಧನರಾಜು ಪರಿಸ್ಥಿತಿ ಸಹಜವಾಗಿದ್ದಾಗ 6-7 ಕೆಜಿ ಮೀನುಗಳನ್ನು ಮಾರಾಟ ಮಾಡಿದ್ದರೆ, ಅವರಿಗೆ 1,500 ರೂ ದಿಂದ 1,750 ರೂ ಗಳವರೆಗೆ  ಸಂಪಾದನೆ ಬರುತ್ತಿತ್ತು. ಆದರೆ ಈಗ ಅವರ ಸೈಕಲ್ಲಿನ ಮೀನು ಅಂಗಡಿ ಅಷ್ಟಾಗಿ ಗಮನ ಸೆಳೆಯುತ್ತಿಲ್ಲ. ಈಗ ಅವರು ಹಿಡಿದಿರುವ ಮೀನುಗಳನ್ನು ಮಾರಾಟ ಮಾಡಲು ಎರಡು ದಿನಗಳು ಬೇಕಾಗುತ್ತದೆ, ಅದರಿಂದ ಅವರಿಗೆ ಸರಿ ಸುಮಾರು 750 ರೂ.ಗಳ  ಆದಾಯ ಬರುತ್ತದೆ.ಈಗ ಧನರಾಜು ಕೆಲಸಗಳಿಗೆ 46 ವರ್ಷದ ಪಪ್ಪುದೇವಿ ಜೊತೆಯಾಗಿದ್ದಾರೆ. ಮೀನುಗಳನ್ನು ಕತ್ತರಿಸುವುದು ಮತ್ತು ಸ್ವಚ್ಛಗೊಳಿಸುವುದಕ್ಕಾಗಿ ಅವರು 10-20 ರೂ, ಗ್ರಾಹಕರಿಂದ ಪಡೆಯುತ್ತಾರೆ. ಈಗ ತಮ್ಮ ಹಣದ ಅಗತ್ಯತೆಯನ್ನು ಪೂರೈಸಲು ಅವರು ಅಲ್ಲಿ ಅಪಾಯಕ್ಕೆ ಒಡ್ಡಿಕೊಳ್ಳಬೇಕಾಗಿದೆ.

Left: Kasarapu Dhanaraju sold the fish secretly, on a 'stall' on his old rusted cycle. Right: Pappu Devi, who cleans and cuts the fish, says, 'I think I will survive [this period]'
PHOTO • Amrutha Kosuru
Left: Kasarapu Dhanaraju sold the fish secretly, on a 'stall' on his old rusted cycle. Right: Pappu Devi, who cleans and cuts the fish, says, 'I think I will survive [this period]'
PHOTO • Amrutha Kosuru

ಎಡಕ್ಕೆ: ಕಾಸರಪು ಧನರಾಜು ತನ್ನ ಹಳೆಯ ತುಕ್ಕು ಹಿಡಿದ ಸೈಕಲ್ ಅಂಗಡಿಯಲ್ಲಿ ಮೀನುಗಳನ್ನು ರಹಸ್ಯವಾಗಿ ಮಾರುತ್ತಾರೆ. ಬಲಕ್ಕೆ : ಮೀನುಗಳನ್ನುಸ್ವಚ್ಚಗೊಳಿಸಿ ಕತ್ತರಿಸುತ್ತಿರುವ ಪಪ್ಪು ದೇವಿ, 'ಈ ಇಂತಹ ದುರಿತ ಕಾಲದಲ್ಲಿ ನಾನು ಬದುಕುಳಿಯುವೆ ಎಂದು ಭಾವಿಸುತ್ತೇನೆ ಎನ್ನುತ್ತಾರೆ.

ಬಂದರು ಸಂಪೂರ್ಣ ಚಟುವಟಿಕೆಯಿಂದ ಕೂಡಿದ್ದಾಗ, ಪಪ್ಪುದೇವಿ ದಿನಕ್ಕೆ 200-250 ರೂಗಳನ್ನು ಸಂಪಾದಿಸುತ್ತಿದ್ದರು.ಮೀನುಗಳನ್ನು ಕತ್ತರಿಸುವುದು ಮತ್ತು ಸ್ವಚ್ಚಗೊಳಿಸುವುದು ಅವರಿಗೆ ಇದ್ದಂತಹ ಏಕೈಕ ಕೆಲಸವಾಗಿತ್ತು." ಈಗ ನಾನು ದಿನಕ್ಕೆ ಒಂದು ಹೊತ್ತು ಊಟ ಮಾತ್ರ ಮಾಡುತ್ತೇನೆ, ಜೂನ್ ತಿಂಗಳವರೆಗೆ ನಾನು ಬದುಕಬೇಕಾಗಿದೆ. ಈಗ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಲಾಕ್ ಡೌನ್ ಜೂನ್ ತಿಂಗಳು ದಾಟಬಹುದು ಎಂದು ಹೇಳುತ್ತಾರೆ. ಇದೇ ವೇಳೆ ಒಂದು ಕ್ಷಣಕ್ಕೆ ಮೌನಕ್ಕೆ ಜಾರಿದ ಅವರು "ನಾನು ಬದುಕುಳಿಯುತ್ತೇನೆ" ಎನ್ನುವ ಆಶಾವಾದವನ್ನು ವ್ಯಕ್ತಪಡಿಸುತ್ತಾರೆ. ವಿಧವೆ, ಮತ್ತು ಇಬ್ಬರು ತಾಯಿಯಾಗಿರುವ ಅವರು ಮೂಲತಃ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಮೆಂತಡಾ ತಹಸಿಲ್‌ನ ಇಪ್ಪಲವಲಸಾ ಗ್ರಾಮದವರಾಗಿದ್ದಾರೆ.

ದೇವಿ ತನ್ನ ಮಗಳನ್ನು ಮಾರ್ಚ್‌ನಲ್ಲಿ ಇಪ್ಪಲವಲಸಾಕ್ಕೆ ತನ್ನ ಹೆತ್ತವರನ್ನು ನೋಡಿಕೊಳ್ಳಲು ಕಳಿಸಿರುವುದಾಗಿ ಹೇಳುತ್ತಾರೆ. "ನಾನು ಈ ತಿಂಗಳು ಅಲ್ಲಿಗೆ ಹೋಗಬೇಕಾಗಿತ್ತು. ಆದರೆ ಈಗ ಅದು ಅಸಾಧ್ಯವೆಂದು ತೋರುತ್ತದೆ" ಎಂದು ಹೇಳುತ್ತಾರೆ.

ಏಪ್ರಿಲ್ 2, 2020 ಎನ್ನುವಷ್ಟರಲ್ಲಿ ಆಗಲೇ ಮೀನುಗಾರರಿಗೆ ಅಧಿಕೃತವಾಗಿ ಸಮುದ್ರಕ್ಕೆ ಹೋಗಲು ಅವಕಾಶವಿರಲಿಲ್ಲ. ಅಲ್ಲದೆ, ವಾರ್ಷಿಕ ಸಂತಾನೋತ್ಪತ್ತಿ ಅವಧಿ ಏಪ್ರಿಲ್ 15 ರಿಂದ ಜೂನ್ 14 ರವರೆಗೆ ಇರುವುದರಿಂದ ಇಂತಹ ಸಂದರ್ಭದಲ್ಲಿ ಮೀನುಗಾರಿಕೆಯನ್ನು ನಿಷೇದಿಸಲಾಗಿರುತ್ತದೆ.ಇದರರ್ಥ ಮೀನು ಸಂಗ್ರಹವನ್ನು ಸಂರಕ್ಷಿಸಲು ಈ ಅವಧಿಯಲ್ಲಿ ಯಾಂತ್ರಿಕೃತ ಮತ್ತು ಮೋಟಾರ್ ದೋಣಿಗಳ ಚಲನೆಯನ್ನು ನಿರ್ಬಂಧಿಸಲಾಗಿರುತ್ತದೆ. "ನಾನು ಮಾರ್ಚ್ 15 ರಂದು ಮೀನುಗಾರಿಕೆ ಕೆಲಸವನ್ನು ನಿಲ್ಲಿಸಿದೆ, ಏಕೆಂದರೆ ಸುಮಾರು ಹದಿನೈದು ದಿನಗಳವರೆಗೆ ನಾನು ಹಿಡಿದಿದ್ದ ಮೀನುಗಳನ್ನು ಅರ್ಧ ಅಥವಾ ಅರ್ಧಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದೇನೆ ಎಂದು ಅದೇ ಚೆಂಗಲ್ ರಾವ್ ಪೆಟಾ ಪ್ರದೇಶದಲ್ಲಿ ವಾಸಿಸುವ ಮೀನುಗಾರ 55 ವರ್ಷದ ವಾಸುಪಲ್ಲೆ ಅಪ್ಪರಾವ್ ಹೇಳುತ್ತಾರೆ. "ಮಾರ್ಚ್ ತಿಂಗಳಲ್ಲಿ, ನಾನು ಕೇವಲ 5,000 ರೂಗಳನ್ನು ಮಾತ್ರ ಸಂಪಾದಿಸಿದ್ದೇನೆ” ಎಂದು ಹೇಳುತ್ತಾರೆ. ಈ ಹಿಂದೆ ಅವರು ಪ್ರತಿ ತಿಂಗಳಿಗೆ 10,000-15,000.ರೂ ಗಳನ್ನು ಗಳಿಸುತ್ತಿದ್ದರು.

“ವಾರ್ಷಿಕ ನಿಷೇಧ ಪ್ರಾರಂಭವಾಗುವ ಏಪ್ರಿಲ್ ಮೊದಲ ಎರಡು ವಾರಗಳ ಮೊದಲು ಸಾಕಷ್ಟು ಖರೀದಿದಾರರು ಇದ್ದಿದ್ದರಿಂದ ನಾವು ಉತ್ತಮ ಲಾಭವನ್ನು ಗಳಿಸುತ್ತಿದ್ದೆವು. ಕಳೆದ ವರ್ಷ ನಾನು ಸಂತಾನೋತ್ಪತ್ತಿ ಋತುವಿನ ಮೊದಲು 10-15 ದಿನಗಳಲ್ಲಿ 15,000,ರೂಗಳನ್ನು ಗಳಿಸಿದ್ದೆ" ಎಂದು ಅಪ್ಪರಾವ್ ಉತ್ಸಾಹದಿಂದ ಹೇಳುತ್ತಾರೆ.

Left: The Fishing Harbour in Visakhapatnam (file photo). As of April 2, 2020, fishermen were officially not allowed to venture out to sea. Right: The police has been guarding the entrance to the jetty and fish market during the lockdown
PHOTO • Amrutha Kosuru
Left: The Fishing Harbour in Visakhapatnam (file photo). As of April 2, 2020, fishermen were officially not allowed to venture out to sea. Right: The police has been guarding the entrance to the jetty and fish market during the lockdown
PHOTO • Amrutha Kosuru

ಎಡಕ್ಕೆ: ವಿಶಾಖಪಟ್ಟಣಂನ ಮೀನುಗಾರಿಕೆ ಬಂದರು (ಸಂಗ್ರಹ ಚಿತ್ರ)  ಏಪ್ರಿಲ್ 2, 2020 ರ ಹೊತ್ತಿಗೆ, ಮೀನುಗಾರರಿಗೆ ಅಧಿಕೃತವಾಗಿ ಸಮುದ್ರಕ್ಕೆ ಹೋಗಲು ಅವಕಾಶವಿರಲಿಲ್ಲ. ಬಲಕ್ಕೆ: ಪೊಲೀಸರು ಲಾಕ್ ಡೌನ್ ಸಮಯದಲ್ಲಿ ಬಂದರು ಮತ್ತು ಮೀನು ಮಾರುಕಟ್ಟೆಯ ಪ್ರವೇಶದ್ವಾರದಲ್ಲಿ ಕಾವಲು ಕಾಯುತ್ತಿರುವುದು.

ಈ ವರ್ಷ ಮಾರ್ಚ್ ಮೊದಲ ವಾರಕ್ಕೂ ಮುಂಚೆಯೇ, ಮೀನುಗಳ ಬೆಲೆ ತೀವ್ರವಾಗಿ ಕುಸಿಯಿತು. ಸಾಮಾನ್ಯವಾಗಿ ಕೆಜಿಗೆ 1000 ರೂಪಾಯಿಗಳಂತೆ ಮಾರಾಟವಾಗುತ್ತಿದ್ದ ವಂಜಾರಾಮ್ (ಸುರಮಯಿ ಮೀನು) ಮತ್ತು ಸಂದುವೈ (ಮಾಂಜಿ ಮೀನು),  ಈಗ 400-500 ರೂ.ಗಳಿಗೆ ಮಾರಾಟವಾಗುತ್ತಿವೆ. ಅಪ್ಪರಾವ್ ಪ್ರಕಾರ, ಇದು ಕರೋನವೈರಸ್ ಭೀತಿಯಿಂದಾಗಿ ಹೀಗಾಗಿದೆ ಎನ್ನುತ್ತಾರೆ. "ಒಬ್ಬ ವ್ಯಕ್ತಿ ಈಗ ಮೀನು ಚೀನಾದ ವೈರಸ್ ನ್ನು ಹರಡುತ್ತಿದೆ, ಆದ್ದರಿಂದ ಮೀನು ಹಿಡಿಯುವುದನ್ನು ನಿಲ್ಲಿಸಬೇಕೆಂದು ನನಗೆ ನಗುತ್ತಾ ಹೇಳಿದ. "ನಾನು ವಿದ್ಯಾವಂತನಲ್ಲ, ಆದರೂ ಇದು ನಿಜವೆಂದು ನಾನು ಭಾವಿಸುವುದಿಲ್ಲ." ಎಂದು ಹೇಳಿದರು.

ಅಪ್ಪರಾವ್ ಸರ್ಕಾರ ಪ್ರತಿವ್ಯಕ್ತಿಗೆ ನಿಗದಿಪಡಿಸಿದ ಐದು ಕೆಜಿ ಅಕ್ಕಿಯನ್ನು ಉಚಿತ ರೇಷನ್ ಭಾಗವಾಗಿ ಸ್ವೀಕರಿಸಿದರೂ ತಮ್ಮ ಮುಂದಿರುವ ಕಷ್ಟಗಳ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. " ಅದು ಯಾವುದೇ ವರ್ಷವಾಗಿರಲಿ ಸಂತಾನೋತ್ಪತ್ತಿಯ ಋತು ನಿಜಕ್ಕೂ ಬಹಳ ಕಷ್ಟಕರ, ಆದರೆ ಆ ಅವಧಿಯ ಹಿಂದಿನ ವಾರಗಳಲ್ಲಿನ ಲಾಭವೊಂದೇ ಈಗ ನಮಗೆ ಆಸರೆಯಾಗಿರುವುದು.ಆದರೆ ಇದು ವಿಭಿನ್ನ ಸಮಯ. ನಮಗೆ ಯಾವುದೇ ಆದಾಯ ಮತ್ತು ಲಾಭವಿಲ್ಲ" ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡರು.

ಏಪ್ರಿಲ್ 12 ರಂದು, ರಾಜ್ಯ ಸರ್ಕಾರವು ಮೀನುಗಾರರಿಗೆ ಲಾಕ್ ಡೌನ್ ಅನ್ನು ಸಡಿಲಗೊಳಿಸಿತು, ಮೂರು ದಿನಗಳವರೆಗೆ ಸಮುದ್ರಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿತು.ಏನೇ ಆಗಲಿ ಸಂತಾನೋತ್ಪತ್ತಿ ಋತುವಿನ ನಿಷೇಧವು ಆ 72 ಗಂಟೆಗಳ ಕೊನೆಯಲ್ಲಿ ಪ್ರಾರಂಭವಾಗುತ್ತದೆ. ಅದು ಮೀನುಗಾರರಿಗೆ ಸಮಾಧಾನಕರವಾಗಿದ್ದರೂ ಕೂಡ "ಇದು ತುಂಬಾ ಕಡಿಮೆ ಸಮಯ" ಎಂದು ಅಪ್ಪರಾವ್ ಹೇಳುತ್ತಾರೆ, ಮತ್ತು ಲಾಕ್‌ಡೌನ್‌ನಿಂದಾಗಿ ಈಗ ಗ್ರಾಹಕರು ತೀರಾ ಕಡಿಮೆ ಸಂಖ್ಯೆಯಲ್ಲಿ ಇರುತ್ತಾರೆ.

ಚೆಂಗಲ್ ರಾವ್ ಪೆಟಾದಲ್ಲಿನ ಒಂದು ಕಿರಿದಾದ ಬೀದಿಯೇ ಚಿಂತಪಲ್ಲೆ ತಾತಾರಾವ್ ಅವರ ನೆಲೆ ಕೂಡ ಹೌದು, ಇದು ಅಲ್ಲಿರುವ ಅನೇಕರಿಗೆ ವಾಸಸ್ಥಾನವಾಗಿದೆ.ಈ ಪ್ರದೇಶವು ಒಂದು ರೀತಿ ಏರುಪೇರಾಗಿ ಜೋಡಿಸಿರುವ ಬೆಂಕಿ ಪೊಟ್ಟಣಗಳಂತಿದೆ.ಇವುಗಳಲ್ಲಿ ಒಂದಾದ ಕಿರಿದಾದ ಮೆಟ್ಟಿಲು ಅವರ ಮಂದ ಬೆಳಕಿನ ವಾಸಸ್ಥಾನಕ್ಕೆ ಕರೆದ್ಯೋಯ್ಯುತ್ತದೆ. 48 ವರ್ಷದ ಮೀನುಗಾರ ತಾತಾರಾವ್ ಮುಂಜಾನೆ ಎಚ್ಚರಗೊಂಡು  ಹತ್ತಿರದಲ್ಲಿರುವ ಬೀಚ್ ನೋಡುತ್ತಾರೆ. ಲಾಕ್ ಡೌನ್ ಸಮಯದಲ್ಲಿ ಅವರು ಪಪ್ಪುದೇವಿಯಂತೆ ಹೀಗೆ ಹೋಗಬಹುದು, ಅವರು ಕೂಡ ಮೂಲತಃ ವಿಜಯನಗರಂ ಜಿಲ್ಲೆಯ ಇಪ್ಪಲವಲಸಾದಿಂದ ಬಂದವರಾಗಿದ್ದಾರೆ.

Left: The three-day relaxation in the lockdown 'is too little time', says Vasupalle Apparao. Right: Trying to sell prawns amid the lockdown
PHOTO • Madhu Narava
Left: The three-day relaxation in the lockdown 'is too little time', says Vasupalle Apparao. Right: Trying to sell prawns amid the lockdown
PHOTO • Madhu Narava

ಎಡಕ್ಕೆ: ಲಾಕ್‌ಡೌನ್‌ನಲ್ಲಿ ಮೂರು ದಿನಗಳ ವಿನಾಯಿತಿ ತುಂಬಾ ಕಡಿಮೆ ಅವಧಿ' ಎಂದು ವಾಸುಪಲ್ಲೆ ಅಪ್ಪರಾವ್ ಹೇಳುತ್ತಾರೆ. ಬಲಕ್ಕೆ: ಲಾಕ್‌ಡೌನ್ ಮಧ್ಯೆ ಸೀಗಡಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು.

‘ನಾನು ಸಾಗರವನ್ನು, ಬಂದರನ್ನು, ಹಾಗೂ ಮೀನನ್ನು ಬಹಳ ನೆನಪು  ಮಾಡಿಕೊಳ್ಳುತ್ತೇನೆʼ ಅವರು ಎಂದು ಹತಾಶರಾಗಿ ಹೇಳುತ್ತಾರೆ. ಮೀನಿನ ಮೂಲಕ ಬರುವ ಆದಾಯವನ್ನೂ ಅವರು ಕಳೆದುಕೊಳ್ಳುತ್ತಾರೆ. ಕೊನೆಯ ಬಾರಿಗೆ ಅವರು ಸಮುದ್ರಕ್ಕೆ ಹೋಗಿದ್ದು ಮಾರ್ಚ್ 26, 2020ರಂದು.

"ಮೀನುಗಳನ್ನು ಮಂಜುಗಡ್ಡೆಯ ಮೇಲೆ ಸಂಗ್ರಹಿಸಿದರೂ, ಆ ವಾರದಲ್ಲಿ ಬಹಳಷ್ಟು ಮೀನುಗಳು ಹಾಗೆ ಉಳಿದವು" ಎಂದು ತಾತಾರಾವ್ ಹೇಳುತ್ತಾರೆ. ಇನ್ನೊಂದೆಡೆಗೆ ಮೀನನ್ನು ಕತ್ತರಿಸುತ್ತಾ ಅವರ ಪತ್ನಿ ಸತ್ಯಾ ‘ಇದನ್ನು ಮಾಡಿದ್ದಕ್ಕೆ ಸಂತಸವಾಗಿದೆ, ಇದರಿಂದಾಗಿ ನಾವು ಒಳ್ಳೆಯ ಮೀನುಗಳನ್ನು ತಿನ್ನುವಂತಾಯಿತುʼ ಎಂದು ಹೇಳಿದರು.

ತಾತಾರಾವ್ ಹಿಡಿದಿರುವ ಮೀನುಗಳನ್ನು ಮಾರಾಟ ಮಾಡಲು ಪತ್ನಿ ಸತ್ಯಾ(42) ನೆರವಾಗುತ್ತಾರೆ. ಲಾಕ್ ಡೌನ್ ಆದಾಗಿನಿಂದಲೂ ಮನೆ ಲವಲವಿಕೆಯಿಂದ ಇದೆ. "ಸಾಮಾನ್ಯವಾಗಿ, ನಾನು ಒಬ್ಬಳೇ ; ಈಗ ನನ್ನ ಮಗ ಮತ್ತು ನನ್ನ ಪತಿ ಮನೆಯಲ್ಲಿದ್ದಾರೆ. ನಾವು ಮಧ್ಯಾಹ್ನದ ಭೋಜನಕ್ಕೆ ಅಥವಾ ರಾತ್ರಿ ಊಟಕ್ಕೆ ಒಟ್ಟಿಗೆ ಕುಳಿತು ಹಲವು ತಿಂಗಳಾಗಿದೆ. ಹಣಕಾಸಿನ ಸಮಸ್ಯೆಗಳ ಹೊರತಾಗಿಯೂ, ನಾವು ಪರಸ್ಪರ ಜೊತೆಯಾಗಿ ಕಾಲ ಕಳೆಯುವುದನ್ನು ನಾನು ಇಷ್ಟಪಡುತ್ತೇನೆ,” ಎಂದು ಅವರು ಸಂತಸದಿಂದ ಹೇಳುತ್ತಾರೆ.

ತಾತಾರಾವ್ ಅವರ ವಿಷಯಕ್ಕೆ ಬಂದಾಗ, ಅವರು ಎರಡು ವರ್ಷಗಳ ಹಿಂದೆ ತನ್ನ ದೋಣಿ ಖರೀದಿಸಲು ತೆಗೆದುಕೊಂಡ ಸಾಲವನ್ನು ಹೇಗೆ ತೀರಿಸಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಈ ಸಾಲವೇ ತಿಮಿಂಗಿಲವಾಗುವ ಭಯದಲ್ಲಿದ್ದಾರೆ- ಮತ್ತು ಈ ವರ್ಷಾಂತ್ಯದ ವೇಳೆಗೆ ಸಾಲವನ್ನು ತೀರಿಸಲು ಪ್ರಯತ್ನಿಸುವುದಾಗಿ ಹೇಳುತ್ತಾರೆ. "ಮೂರು ದಿನಗಳ ಮೀನುಗಾರಿಕೆ [ವಿನಾಯಿತಿ ಅವಧಿ] ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ, ನಾವು ಹಿಡಿದ ಮೀನುಗಳಿಗೆ ನಾವು ಪಡೆಯುವ ಬೆಲೆ ಈಗ ತುಂಬಾ ಕಡಿಮೆಯಾಗಿದೆ" ಎಂದು ಅವರು ಹೇಳುತ್ತಾರೆ. "ಮೀನುಗಳನ್ನು ಯೋಗ್ಯ ಬೆಲೆಗೆ ಮಾರಾಟ ಮಾಡುವುದು ಈಗ ಅದನ್ನು ಹಿಡಿಯುವುದಕ್ಕಿಂತಲೂ ಹೆಚ್ಚು ಕಷ್ಟಕರವಾಗಿರುತ್ತದೆ." ಎನ್ನುತ್ತಾರೆ.

“ನನ್ನ ಮಗನ ಬಗ್ಗೆಯೂ ನಾನು ಚಿಂತೆ ಮಾಡುತ್ತೇನೆ. ಅವನು ಕಳೆದ ತಿಂಗಳು ಕೆಲಸ ಕಳೆದುಕೊಂಡ," ಎಂದು ಅವರು ಹೇಳಿದರು. 21 ವರ್ಷದ ಚಿಂತಪಲ್ಲೆ ತರುಣ್ ಅವರ ಒಪ್ಪಂದ ಫೆಬ್ರವರಿಯಲ್ಲಿ ಮುಗಿಯುವವರೆಗೂ ಖಾಸಗಿ ಕಂಪನಿಯಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದರು. "ನಾನು ಕೆಲಸವನ್ನು ಹುಡುಕುತ್ತಿದ್ದೆ, ಆದರೆ ಈಗ ಕರೋನವೈರಸ್ ..." ಎಂದು ಏದುಸಿರು ಬಿಡುತ್ತಾರೆ.

Left: Chinthapalle Thatharao, Tarun and Sathya (l-r) at their home in Chengal Rao Peta. Right: Chinthapalle Thatharao and Kurmana Apparao (l-r)
PHOTO • Amrutha Kosuru
Left: Chinthapalle Thatharao, Tarun and Sathya (l-r) at their home in Chengal Rao Peta. Right: Chinthapalle Thatharao and Kurmana Apparao (l-r)
PHOTO • Amrutha Kosuru

ಎಡಕ್ಕೆ : ಚೆಂಗಲ್ ರಾವ್ ಪೇಟಾದ ತಮ್ಮ ಮನೆಯಲ್ಲಿರುವ ಚಿಂತಪಾಲೆ ತಥಾರಾವ್, ತರುಣ್ ಮತ್ತು ಸತ್ಯ (ಎಡ-ಬಲ). ಬಲಕ್ಕೆ: ಚಿಂತಪಲ್ಲೆ ತಾತಾರಾವ್ ಮತ್ತು ವಾಸುಪಲ್ಲೆ ಅಪ್ಪರಾವ್ (ಎಡ-ಬಲ).

“ನಾವು ಕೊಳೆಗೇರಿ ನಿವಾಸಿಗಳು, ಮತ್ತು ನಮಗೆ ದೈಹಿಕ ಅಂತರ ಕಾಯ್ದುಕೊಳ್ಳುವುದು ಅಸಾಧ್ಯದ ಸಂಗತಿ. ಇಲ್ಲಿಯವರೆಗೆ ಈ ಪ್ರದೇಶದಲ್ಲಿ ಯಾರಿಗೂ ಕೂಡ ಕೊರೊನಾ ಧೃಢಪಟ್ಟಿಲ್ಲ, ಒಂದು ವೇಳೆ ಯಾರಿಗಾದರೂ ಬಂದಲ್ಲಿ ದೇವರೇ ನಮ್ಮನ್ನು ಕಾಪಾಡಬೇಕು- ಇಲ್ಲಿ ನಮ್ಮನ್ನು ರಕ್ಷಿಸುವವರು ಯಾರೂ ಇಲ್ಲ" ಎಂದು ತಥಾರಾವ್ ಹೇಳುತ್ತಾರೆ. "ಯಾವುದೇ ಮಾಸ್ಕ್ ಆಗಲಿ ಅಥವಾ ಕೈ ಸ್ಯಾನಿಟೈಸರ್ ಆಗಲಿ ನಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ." ಅವರ ಬಳಿ ಯಾವುದೇ ಸರ್ಜಿಕಲ್ ಮಾಸ್ಕ್ ಕೂಡ ಇಲ್ಲ, ಅದರ ಬದಲಾಗಿ ಕರವಸ್ತ್ರವನ್ನೇ ಅವರು ತಮ್ಮ ಮುಖದ ಸುತ್ತಲೂ ಕಟ್ಟಿಕೊಳ್ಳುತ್ತಾರೆ’ ಎಂದು ಹೇಳುತ್ತಾ ಸತ್ಯಾ, ತಮ್ಮ ಸೀರೆ ಸೆರಗಿನಿಂದ ತಮ್ಮ ಮುಖವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದರು.

"ಈಗ ಈ ಪರಿಸ್ಥಿತಿ ನಮ್ಮ ಪರವಾಗಿದೆ ಎಂದು ಅನಿಸುತ್ತಿಲ್ಲ. ಈ ಸೋಂಕು ನನ್ನ ಅಥವಾ ಕುಟುಂಬದ ಸದಸ್ಯರ ಮೇಲೆ ಪರಿಣಾಮ ಬೀರಿದರೆ, ವೈದ್ಯಕೀಯ ಚಿಕಿತ್ಸೆಗಾಗಿ ನಮ್ಮ ಬಳಿ ಹಣವಿಲ್ಲ" ಎನ್ನುತ್ತಾರೆ ತಾತಾರಾವ್. ಅವರ ಪತ್ನಿ ಸತ್ಯ, ಇದಕ್ಕೆ ಧ್ವನಿಗೂಡಿಸುತ್ತಾ "ನಮ್ಮಲ್ಲಿ ಯಾರಿಗೂ ಆರೋಗ್ಯ ವಿಮೆ ಅಥವಾ ಯಾವುದೇ ಉಳಿತಾಯ ಹಣವಿಲ್ಲ, ನಮ್ಮ ಬಳಿ ಈಗ ಇರುವುದು ಮರು ಪಾವತಿಸಬೇಕಾದ ಸಾಲ ಮತ್ತು ನಿಗ್ರಹಿಸಬೇಕಾಗಿರುವ ಹಸಿವು" ಎಂದು ಹೇಳಿದರು.

ಇತರ ಸ್ಥಳಗಳಿಂದ ಇಲ್ಲಿಗೆ ವಲಸೆ ಬಂದ ವಿಶಾಖಪಟ್ಟಣಂನ ಮೀನುಗಾರಿಕೆ ಸಮುದಾಯದಲ್ಲಿ ತಥಾರಾವ್, ಸತ್ಯ ಮತ್ತು ಪಪ್ಪುದೇವಿ ಇತರರು ಇದ್ದಾರೆ.ಈ ಹಿಂದೆ ಅವರು ಉಳಿದ ವರ್ಷಗಳಲ್ಲಿ ಆಗಾಗ ತಮ್ಮ ಹಳ್ಳಿಗಳಿಗೆ ಹೋಗುತ್ತಿದ್ದರು. ಸಾಮಾನ್ಯವಾಗಿ ಅವರು ಸಂತಾನೋತ್ಪತ್ತಿ ಅವಧಿಯ ಎರಡು ತಿಂಗಳುಗಳಲ್ಲಿ ಭೇಟಿ ನೀಡುತ್ತಿದ್ದರು. ಆದರೆ ಈಗ ಅವರಿಗೆ ಹಾಗೆ ಮಾಡಲು ಅವಕಾಶ ಕಡಿಮೆ.

"ಮೊದಲು ನಾವು ಆ ಎರಡು ತಿಂಗಳುಗಳ ಬಾಡಿಗೆಯನ್ನು ಪಾವತಿಸುತ್ತಿರಲಿಲ್ಲ, ಆದರೆ ಈಗ ನಾವು ಪಾವತಿಸಬೇಕಾಗಿದೆ" ಎಂದು ತಥಾರಾವ್ ಹೇಳುತ್ತಾರೆ. "ಸಂತಾನೋತ್ಪತ್ತಿ ವೇಳೆ ಹಳ್ಳಿಯಲ್ಲಿನ ಇತರರ ಹೊಲಗಳಲ್ಲಿ ಸಣ್ಣ ಪುಟ್ಟ ಉದ್ಯೋಗಗಳನ್ನು ಹುಡುಕುತ್ತೇವೆ, ಅದರಿಂದ ನಮಗೆ ದಿನಕ್ಕೆ 50 ರೂಪಾಯಿ ಲಭಿಸುತ್ತದೆ" ಅಲ್ಲಿನ ಕೆಲಸವು ಸಾಮಾನ್ಯವಾಗಿ ಹೊಲದಲ್ಲಿನ ಬೆಳೆ ಮತ್ತು ಕೃಷಿ ಉತ್ಪನ್ನಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸುವುದಾಗಿರುತ್ತದೆ ಎಂದು ಅವರು ವಿವರಿಸಿದರು.

“ಕೆಲವೊಮ್ಮೆ ನಾನು ಆ ಕೆಲಸದಿಂದ ಫಜೀತಿಗೆ ಒಳಗಾಗಿದ್ದೇನೆ” ಎಂದು ಅವರು ನಗೆ ಬೀರುತ್ತಾರೆ. “ಮೀನುಗಾರರಿಗೆ ಬೇರೆ ಯಾವುದೇ ಬ್ರಧುಕು ಥೆರುವು [ವ್ಯಾಪಾರ ಅಥವಾ ವೃತ್ತಿ] ಬಗ್ಗೆ ತಿಳಿದಿಲ್ಲ. ಇದೀಗ, ಮೀನು ಸಂತಾನೋತ್ಪತ್ತಿ ಅವಧಿ ಮುಗಿದ ನಂತರ ಕೊರೊನಾ ಇರುವುದಿಲ್ಲ ಎಂದು ನಾವು ಭಾವಿಸುತ್ತೇವೆ” ಎನ್ನುವ ಭರವಸೆ ಅವರದ್ದಾಗಿದೆ.

ಫೋಟೋಗಳನ್ನು ಒದಗಿಸಿದ್ದಕ್ಕಾಗಿ ವಿಶಾಖಪಟ್ಟಣದ ಪ್ರಜಾಶಕ್ತಿ ಬ್ಯೂರೋದ ಮುಖ್ಯಸ್ಥರಾದ ಮಧು ನರವಾ ಅವರಿಗೆ ಧನ್ಯವಾದಗಳು.

ಅನುವಾದ - ಎನ್ . ಮಂಜುನಾಥ್

Amrutha Kosuru

Amrutha Kosuru is a 2022 PARI Fellow. She is a graduate of the Asian College of Journalism and lives in Visakhapatnam.

Other stories by Amrutha Kosuru
Translator : N. Manjunath