ಅದನ್ನು ನೋಡಲು ಒಂದಿಷ್ಟು ಅಸಹಜವಾಗಿತ್ತು - ಆದರೆ ದೆಹಲಿಯ ಜಿಟಿ ಕರ್ನಾಲ್ ಬೈಪಾಸ್ ಬಳಿ ನಮ್ಮ ಕಣ್ಣ ಮುಂದೆಯೇ ಆ ಘಟನೆ ನಡೆಯುತ್ತಿತ್ತು.

ಒಂದು ಗುಂಪು ದೆಹಲಿಯತ್ತ ನಿಗದಿತ ಮಾರ್ಗದ ಮೂಲಕ ಸಾಗುತ್ತಿದ್ದರೆ, ಇನ್ನೊಂದು ಗುಂಪು ದೆಹಲಿಯಿಂದ ಸಿಂಘುವಿಗೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿತ್ತು. ಈ ಎರಡೂ ಗುಂಪುಗಳು ಹೆದ್ದಾರಿಯಲ್ಲಿ ಪರಸ್ಪರ ಎದುರುಬದುರಾಗಿ ಹಾದು ಹೋದವು ಮತ್ತು ಈ ದೃಶ್ಯವು ವಾಸ್ತವವಾಗಿ ಗೊಂದಲಗಳಿಗೆ ಒಂದು ರೂಪಕದಂತಿತ್ತು. ದೆಹಲಿಯಿಂದ ಹಿಂದಿರುಗಿದ ಗುಂಪು ತಮ್ಮ ನಾಯಕರ ಕರೆಯನ್ನು ಅನುಸರಿಸಿ ಹಿಂದಿರುಗುತ್ತಿತ್ತು. ಅವರಲ್ಲಿ ಕೆಲವರು ದೆಹಲಿ ಪೊಲೀಸರು ನಿಗದಿಪಡಿಸಿದ ಮಾರ್ಗವನ್ನು ಬಿಟ್ಟು ಬೇರೆ ರೀತಿಯಲ್ಲಿ ದೆಹಲಿಯನ್ನು ಪ್ರವೇಶಿಸಲು ತಮ್ಮ ನಾಯಕರು ನಿರ್ಧರಿಸಿದ್ದಾರೆಂದು ಭಾವಿಸಿ ಬೆಳಿಗ್ಗೆ ಗೊಂದಲದಿಂದ ದೆಹಲಿಗೆ ಪ್ರವೇಶಿಸಿದ್ದರು.

ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ಸಂಸತ್‌ ಮೂಲಕ ಅಪ್ಪಳಿಸಿದ ಮೂರು ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ತಮ್ಮದೇ ಆದ ಗಣರಾಜ್ಯೋತ್ಸವದ ಮೆರವಣಿಗೆಯನ್ನು ಆಯೋಜಿಸಿದ್ದರು, ಅಂದು ಅವರು ದೆಹಲಿಯ ಗಡಿಗಳಾದ ಸಿಂಘು, ಟಿಕ್ರಿ, ಗಾಜಿಪುರ, ಚಿಲ್ಲಾ ಮತ್ತು ಮೇವತ್‌ನ ವಿವಿಧ ಸ್ಥಳಗಳಿಂದ ಪೆರೇಡ್‌ ಹೊರಟಿದ್ದರು. ರಾಜಸ್ಥಾನ-ಹರಿಯಾಣ ಗಡಿಯಲ್ಲಿರುವ ಶಹಜಹಾನ್ಪುರದಲ್ಲಿಯೂ ಒಂದು ಮೆರವಣಿಗೆ ನಡೆದಿತ್ತು, ಅಲ್ಲಿ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ಫ್ಲೋಟ್‌ಗಳು ಸುಮಾರು 60 ಕಿಲೋಮೀಟರ್ ದೂರದವರೆಗೆ ಪ್ರಯಾಣಿಸುತ್ತಿದ್ದವು. ಅಖಿಲ ಭಾರತ ಕಿಸಾನ್ ಸಭೆಯ ಪ್ರಕಾರ, ಇದು ಜನರೇ ಆಚರಿಸುತ್ತಿರುವ ದೇಶದ ಗಣರಾಜ್ಯೋತ್ಸವದ ಅತಿದೊಡ್ಡ ಮತ್ತು ಜನಪ್ರಿಯ ಆಚರಣೆಯಾಗಿದೆ.

ಇದೊಂದು ಬೃಹತ್, ಶಾಂತಿಯುತ, ಶಿಸ್ತುಬದ್ಧ ಮತ್ತು ಸಂಪೂರ್ಣ ಅಭೂತಪೂರ್ವ ಆಚರಣೆಯಾಗಿತ್ತು, ಸಾಮಾನ್ಯ ನಾಗರಿಕರು, ರೈತರು, ಕಾರ್ಮಿಕರು ಮತ್ತು ಅನೇಕರು ಈ ದಿನ ಗಣರಾಜ್ಯವನ್ನು ನಿಜವಾದ ಅರ್ಥದಲ್ಲಿ ವಹಿಸಿಕೊಂಡರು. ಇದೇ ರೀತಿಯ ಕಾರ್ಯಕ್ರಮಗಳು ಮತ್ತು ರ‍್ಯಾಲಿಗಳು ಇಲ್ಲಿ ಮಾತ್ರವಲ್ಲದೆ ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ನಡೆದವು.

ಆದರೆ ಈ ಎಲ್ಲದರ ನಡುವೆ, ಒಂದು ಸಣ್ಣ ಬಣವೊಂದರ ಅತಿರೇಕದ ಮತ್ತು ಆಘಾತಕಾರಿ ವರ್ತನೆಯು ಮಾಧ್ಯಮಗಳ ಗಮನವನ್ನು ಪ್ರಜಾಪ್ರಭುತ್ವದ ಅತಿದೊಡ್ಡ ಆಚರಣೆಯಿಂದ ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ದೆಹಲಿಯ ಗಡಿಯಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿರುವ 32 ಕೃಷಿ ಒಕ್ಕೂಟಗಳನ್ನು ಒಳಗೊಂಡ ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ), ದೆಹಲಿಗೆ ಪ್ರವೇಶಿಸಿದ ಗುಂಪುಗಳ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯವನ್ನು ಹಾಗೂ ನಿಗದಿತ ಮಾರ್ಗದಿಂದ ದೂರ ಸರಿದಿದ್ದನ್ನು ಬಲವಾಗಿ ಖಂಡಿಸಿದೆ. "ಇದು ಶಾಂತಿಯುತ ಮತ್ತು ಶಕ್ತಿಯುತವಾಗಿರುವ ರೈತ ಚಳವಳಿಯನ್ನು ನಾಶಮಾಡುವ ಆಳವಾದ ಪಿತೂರಿಯ ಭಾಗ" ಎಂದು ಎಸ್‌ಕೆಎಂ ಈ ಕ್ರಮವನ್ನು ಖಂಡಿಸಿತು.

Around 7:45 a.m. at the Singhu border. A group of farmers break down barricades and wagons before starting their tractors along the parade route. The breakaway groups launched their ‘rally’ earlier and breaking the barricades caused confusion amongst several who thought this was the new plan of the leadership.
PHOTO • Anustup Roy
Around 7:45 a.m. at the Singhu border. A group of farmers break down barricades and wagons before starting their tractors along the parade route. The breakaway groups launched their ‘rally’ earlier and breaking the barricades caused confusion amongst several who thought this was the new plan of the leadership.
PHOTO • Anustup Roy

ಸಿಂಘು ಗಡಿಯಲ್ಲಿ ಬೆಳಿಗ್ಗೆ 7: 45ರ ಸುಮಾರಿಗೆ. ಮೆರವಣಿಗೆ ಮಾರ್ಗದಲ್ಲಿ ತಮ್ಮ ಟ್ರಾಕ್ಟರುಗಳಲ್ಲಿ ಹೊರಡುವ ಮೊದಲು ರೈತರ ಗುಂಪು ಬ್ಯಾರಿಕೇಡ್‌ಗಳು ಮತ್ತು ವ್ಯಾಗನ್‌ಗಳನ್ನು ಹಾನಿಗೊಳಿಸಿದವು. ಈ ಬೇರ್ಪಟ್ಟ ಗುಂಪುಗಳು ತಮ್ಮ ʼರ‍್ಯಾಲಿʼಯನ್ನು ಮುಂಚಿತವಾಗಿ ಆರಂಭಿಸಿದವು ಮತ್ತು ಅವರು ಬ್ಯಾರಿಕೇಡ್‌ಗಳನ್ನು ಮುರಿದಿದ್ದು ಅಲ್ಲಿ ನೆರೆದ ಜನರಲ್ಲಿ ಇದು ತಮ್ಮ ನಾಯಕರ ಹೊಸ ಪ್ಲಾನ್‌ ಇರಬಹುದೇ ಎನ್ನುವ ಗೊಂದಲವನ್ನು  ಹುಟ್ಟುಹಾಕಿತು

"ಮುಖ್ಯ ರ‍್ಯಾಲಿ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಬೇಕಿತ್ತು" ಎಂದು ಸಂಯುಕ್ತಾ ಕಿಸಾನ್ ಮೋರ್ಚಾದ 32 ಸಂಘಟನೆಗಳಲ್ಲಿ ಒಂದಾದ, ಕೀರ್ತಿ ಕಿಸಾನ್ ಯೂನಿಯನ್‌ನ ಕರಮ್‌ಜಿತ್ ಸಿಂಗ್ ಹೇಳುತ್ತಾರೆ. "ಆದರೆ ದೀಪ್ ಸಿಧು ಮತ್ತು ಲಖಾ ಸಿಡಾನಾ [ಮತ್ತು ಇತರರ] ನೇತೃತ್ವದ ದುಷ್ಕರ್ಮಿಗಳು - ಇವರಲ್ಲಿ ಯಾರೂ 32 ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾದ ಸದಸ್ಯರಲ್ಲ - ಗೊಂದಲಗಳನ್ನು ಸೃಷ್ಟಿಸಿದರು. ಅವರು ಬೆಳಿಗ್ಗೆ 8 ಗಂಟೆಗೆ ದೆಹಲಿಯ ರಿಂಗ್ ರೋಡ್ ಕಡೆಗೆ ಚಲಿಸದಂತೆ ಹಾಕಲಾಗಿದ್ದ ಬ್ಯಾರಿಕೇಡ್ ಕಿತ್ತುಹಾಕಲು ಪ್ರಾರಂಭಿಸಿದರು ಮತ್ತು ಇತರರನ್ನು ಸಹ ತಮ್ಮೊಂದಿಗೆ ಸೇರಲು ಪ್ರೇರೇಪಿಸಿದರು. ಈ ಜನರು ಕೆಂಪು ಕೋಟೆಯನ್ನು ಪ್ರವೇಶಿಸಿ ಅಲ್ಲಿ ತಮ್ಮದೇ ಧ್ವಜವನ್ನು ಹಾರಿಸಿದರು.”

ಅದರ ನಂತರ, ದೆಹಲಿಯ ಎಲ್ಲಾ ಘಟನೆಗಳಲ್ಲಿ ತನ್ನ ಪಾತ್ರವಿದೆಯೆಂದು ದೀಪ್ ಸಿಧು ಒಪ್ಪಿಕೊಂಡಿದ್ದಾರೆ. ಅವರು ಪಂಜಾಬ್‌ನ ಗುರುದಾಸ್‌ಪುರದ ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ ಆಪ್ತರಾಗಿದ್ದರು.

"ನಾವು ಅವರನ್ನು ಬೆಂಬಲಿಸುವುದಿಲ್ಲ. ಅವರು ಮಾಡಿದ್ದು ತಪ್ಪು. 26ರಂದು ನಡೆದಂತೆ ಮತ್ತೆ ಎಂದಿಗೂ ನಡೆಯುವುದಿಲ್ಲ ಮತ್ತು ಮೊದಲಿನಂತೆ ಹೋರಾಟ ಮುಂದುವರಿಯುತ್ತದೆ. ಬ್ಯಾರಿಕೇಡ್‌ಗಳನ್ನು ಮುರಿಯುವುದು ಅಥವಾ ಕೆಂಪು ಕೋಟೆಯಲ್ಲಿ ಧ್ವಜ ಹಾರಿಸುವುದನ್ನು ನಾವು ಎಂದೂ ಬೆಂಬಲಿಸುವುದಿಲ್ಲ. ಭವಿಷ್ಯದಲ್ಲಿ ಇಂತಹ ಗಲಭೆಗಳು ಸಂಭವಿಸದಂತೆ ನಾವು ಕಾಳಜಿ ವಹಿಸುತ್ತೇವ” ಎಂದು ಕರಂಜಿತ್ ಸಿಂಗ್ ಹೇಳಿದರು.

ಈ ಬೇರ್ಪಟ್ಟ ಗುಂಪುಗಳು ತಮ್ಮ ʼರ‍್ಯಾಲಿʼಯನ್ನು ಮುಂಚಿತವಾಗಿ ಆರಂಭಿಸಿ ಬ್ಯಾರಿಕೇಡ್‌ಗಳನ್ನು ಮುರಿದಿದ್ದು ಅಲ್ಲಿ ನೆರೆದ ಜನರಲ್ಲಿ ಇದು ತಮ್ಮ ನಾಯಕರ ಹೊಸ ಪ್ಲಾನ್‌ ಇರಬಹುದೇ ಎನ್ನುವ ಗೊಂದಲವನ್ನು  ಹುಟ್ಟುಹಾಕಿತು. ಸಿಂಘುವಿನಿಂದ ದೆಹಲಿಗೆ ಹೋಗುವ ರಸ್ತೆಯನ್ನು ಮೊದಲೇ ನಿರ್ಧರಿಸಲಾಗಿದ್ದು, ಪೊಲೀಸರು ಅದನ್ನು ತೆರವುಗೊಳಿಸಿದ್ದರು. ಆದರೆ ಈ ಗುಂಪುಗಳು ದೆಹಲಿ ಪ್ರವೇಶಿಸಲು ಕೆಂಪು ಕೋಟೆಯ ದಿಕ್ಕಿನಲ್ಲಿದ್ದ  ಮತ್ತೊಂದು ಮಾರ್ಗವನ್ನು ಆರಿಸಿಕೊಂಡವು. ಅವರು ಕೋಟೆಯನ್ನು ಪ್ರವೇಶಿಸುವಾಗ, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ಭುಗಿಲೆದ್ದವು. ಈ ನಡುವೆ ಕೆಲವರು ಕೋಟೆಗೆ ಪ್ರವೇಶಿಸಿ ತಮ್ಮ ಧರ್ಮದ ಧ್ವಜವನ್ನು ಭಾರತದ ಧ್ವಜದ ಪಕ್ಕದಲ್ಲಿ ಹಾರಿಸುವಲ್ಲಿ ಯಶಸ್ವಿಯಾದರು.

PHOTO • Anustup Roy

ಸಿಂಘು ಗಡಿಯಲ್ಲಿ ಬೆಳಿಗ್ಗೆ 7: 50ರ ಸುಮಾರಿಗೆ ರೈತರ ಗುಂಪು ಬ್ಯಾರಿಕೇಡ್‌ಗಳನ್ನು ಮುರಿಯುವುದನ್ನು ಮುಂದುವರೆಸುತ್ತಿದ್ದರೆ, ಪೊಲೀಸರು ಅವರನ್ನು ನೋಡುತ್ತಾ ಪಕ್ಕದಲ್ಲಿ ನಿಂತಿದ್ದರು. ಟ್ರಾಕ್ಟರ್ ಪೆರೇಡ್‌ಗಾಗಿ ಸಿಂಘುವಿನಿಂದ ದೆಹಲಿಗೆ ಹೋಗುವ ಮಾರ್ಗವನ್ನು ಮೊದಲೇ ನಿರ್ಧರಿಸಲಾಗಿತ್ತು ಮತ್ತು ಪೊಲೀಸರು ಅದನ್ನು ಅನುಮೋದಿಸಿದ್ದರು. ಆದರೆ ಈ ಗುಂಪುಗಳು ಬೇರೆ ಮಾರ್ಗದಲ್ಲಿ ಹೊರಟವು.

ಮತ್ತು ಇದಕ್ಕೆ ವ್ಯತಿರಿಕ್ತವಾಗಿ ಮುಖ್ಯ ಮೆರವಣಿಗೆಯೆದುರು ಈ ದಂಗೆಕೋರರ ಸಂಖ್ಯೆ ತೀರಾ ಕಡಿಮೆಯಿತ್ತು. ಮುಖ್ಯ ಮೆರವಣಿಗೆಯಲ್ಲಿ ಒಂದರ ನಂತರ ಒಂದು ಟ್ರಾಕ್ಟರ್ ಹಾದು ಹೋಗುತ್ತಿದ್ದವು, ಒಂದರ ನಂತರ ಒಂದು ಜನರ ಗುಂಪು ಹೆಮ್ಮೆಯಿಂದ ತ್ರಿವರ್ಣವನ್ನು ಹಾರಿಸುತ್ತಿತ್ತು.

"ನಾವು ರೈತರು. ನಿಮಗೆ ಆಹಾರವನ್ನು ಒದಗಿಸುವ ಬೆಳೆಗಳನ್ನು ಬೆಳೆದು ಕೊಡುತ್ತೇವೆ. ಈ ಮೂರು ಕಾನೂನುಗಳನ್ನು ರದ್ದುಪಡಿಸುವುದಷ್ಟೇ ನಮ್ಮ ಗುರಿಯಾಗಿದೆ. ಕೆಂಪು ಕೋಟೆಯನ್ನು ಪ್ರವೇಶಿಸಿ ಅಲ್ಲಿ ಧ್ವಜವನ್ನು ಹಾರಿಸುವುದು ನಮ್ಮ ಗುರಿಯ ಭಾಗವಲ್ಲ. ನಿನ್ನೆ ನಡೆದ ಘಟನೆ ತಪ್ಪು" ಎಂದು ಪಂಜಾಬ್‌ನ ಮೊಗಾ ಜಿಲ್ಲೆಯ ಶೇರಾ ಶೆರಾ ಗ್ರಾಮದ ಸಲ್ಲಾ ಬಲ್ಜಿಂದರ್ ಸಿಂಗ್ ಹೇಳಿದರು.

ಆದರೆ ಆ ಘಟನೆ ಸಂಭವಿಸಿದ ಕ್ಷಣದಿಂದ ಎಲ್ಲಾ ಮಾಧ್ಯಮಗಳು ಈ ವಿಭಜಿತ ಗುಂಪು ಮತ್ತು ದೆಹಲಿಯಲ್ಲಿ ಅವರು ಹುಟ್ಟುಹಾಕಿದ ಗೊಂದಲದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದವು. ಮತ್ತು ಫಲಿತಾಂಶವಾಗಿ ಸಂಪೂರ್ಣ ಶಾಂತಿಯುತವಾಗಿ ನಡೆದ ಮುಖ್ಯ ಮೆರವಣಿಗೆಯನ್ನು ನಿರ್ಲಕ್ಷಿಸಲಾಯಿತು. ಒಟ್ಟಾಗಿ ಹೋರಾಡುತ್ತಿದ್ದ 32 ಸಂಸ್ಥೆಗಳು ನಿಗದಿತ ರೀತಿಯಲ್ಲಿ ಮೆರವಣಿಗೆ ಹೊರಟು ಅಲ್ಲಿಂದ ತಮ್ಮ ಟ್ರಾಕ್ಟರುಗಳಲ್ಲಿ ಹೊರಟರು. ಹಲವರು ಟ್ರಾಕ್ಟರುಗಳ ಪಕ್ಕದಲ್ಲಿ ನಡೆಯುತ್ತಿದ್ದರು, ಇನ್ನೂ ಕೆಲವರು ತಮ್ಮ ಬೈಕು ಮತ್ತು ಸೈಕಲ್‌ಗಳಲ್ಲಿ ಮೆರವಣಿಗೆಯೊಂದಿಗೆ ಚಲಿಸಿದರು.

ಈ ಮುಖ್ಯ ರ‍್ಯಾಲಿಯ ರೈತರು ದೆಹಲಿಯೊಳಗೆ ತಮ್ಮ ಮೆರವಣಿಗೆಯನ್ನು ವಿಸ್ತರಿಸಿದಾಗ, ಯಾವುದೇ ಘರ್ಷಣೆಗಳು ಅಥವಾ ಗಲಭೆಗಳ ಘಟನೆಗಳು ನಡೆದಿಲ್ಲ. ಅವರು ಸಾಗಿದ ದೆಹಲಿಯ ರಸ್ತೆಗಳಲ್ಲಿ ಅನೇಕ ನಿವಾಸಿಗಳು ಮನೆಯಿಂದ ಹೊರಬಂದು ಹೂವುಗಳು, ಹಣ್ಣುಗಳು ಮತ್ತು ನೀರು ನೀಡುವ ಸ್ವಾಗತಿಸಿದ್ದರು. ಅವರಲ್ಲಿ ಒಬ್ಬರಾದ ರೋಹಿಣಿಯ 50 ವರ್ಷದ ಬಬ್ಲಿ ಕೌರ್ ಗಿಲ್ ತಮ್ಮ ಟ್ರಾಕ್ಟರುಗಳಲ್ಲಿ ಹೋಗುತ್ತಿದ್ದ ರೈತರಿಗೆ ನೀರಿನ ಪ್ಯಾಕೆಟ್ ವಿತರಿಸಿದರು. "ನಾನು ಅವರಿಗಾಗಿ ಇಲ್ಲಿಗೆ ಬಂದಿದ್ದೇನೆ, ಅವರಿಲ್ಲಿ ನಮಗೆ ಬೇಕಾದ ಎಲ್ಲವನ್ನೂ ಒದಗಿಸುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ನನಗೆ ಚಹಾ ನೀಡುತ್ತಾರೆ. ನಂತರ ಉಪಾಹಾರವಾಗಿ ರೊಟ್ಟಿಗಳನ್ನು ಕೊಡುತ್ತಾರೆ. ಇವೆಲ್ಲವನ್ನೂ ರೈತರೇ ಒದಗಿಸುತ್ತಿದ್ದಾರೆ. ಈ ಹೋರಾಟ ಮತ್ತು ರೈತರ ದುಸ್ಥಿತಿಯನ್ನು ನೋಡಿ. ಸಿಂಘುವಿನಲ್ಲಿ ಮಹಿಳೆಯೊಬ್ಬರುವ 2 ತಿಂಗಳ ಮಗುವಿನೊಂದಿಗೆ ವಾಸಿಸುತ್ತಿದ್ದಾರೆ. ಅವರು ಯಾಕಾಗಿ ಇದನ್ನು ಮಾಡುತ್ತಿದ್ದಾರೆ? ಅವರ ಬಳಿ ಭೂಮಿಯೇ ಇಲ್ಲದಂತಾದರೆ ಅವರು ಬೆಳೆ ಹೇಗೆ ಬೆಳೆಯಲು ಸಾಧ್ಯ? ಮಗುವನ್ನು ಹೇಗೆ ಸಾಕುವುದು? ಸರ್ಕಾರವು ಈ ಕಾನೂನುಗಳನ್ನು ಬೇಗನೆ ರದ್ದುಪಡಿಸಬೇಕು.”

"ಇಂದು ರಜಾದಿನವಾಗಿರುವುದರಿಂದ ಮನೆಯಲ್ಲಿ ಕುಳಿತು ಕುಟುಂಬದೊಂದಿಗೆ ಸಮಯ ಕಳೆಯುವುದನ್ನು ಆನಂದಿಸಬಹುದಿತ್ತು. ಆದರೆ ರೈತರನ್ನು ಬೆಂಬಲಿಸುವ ಸಲುವಾಗಿ ಇಲ್ಲಿಗೆ ಬರಲು ನಿರ್ಧರಿಸಿದೆ" ಎಂದು ದೆಹಲಿಯ ಸದರ್ ಬಜಾರ್‌ನ 38 ವರ್ಷದ ಅಶ್ಫಾಕ್ ಖುರೇಷಿ ಹೇಳಿದರು. ಖುರೇಷಿ "ದೆಹಲಿ ನಿಮ್ಮನ್ನು ಸ್ವಾಗತಿಸುತ್ತದೆ" ಎಂದು ಸಾರುವ ಪ್ಲಕಾರ್ಡ್ ಹಿಡಿದು ರ‍್ಯಾಲಿಯನ್ನು ಸ್ವಾಗತಿಸಿದರು.

ಎಲ್ಲಾ ಟ್ರಾಕ್ಟರುಗಳು ಬಹಳ ಸುಂದರವಾಗಿದ್ದವು. ಅವುಗಳನ್ನು ವರ್ಣರಂಜಿತ ಕಾಗದಗಳು, ರಿಬ್ಬನ್ಗಳು ಮತ್ತು ಬಲೂನುಗಳಿಂದ ಅಲಂಕರಿಸಲಾಗಿತ್ತು. ಭಾರತದ ತ್ರಿವರ್ಣ ದ್ವಜ ಎಲ್ಲಕ್ಕಿಂತ ಎತ್ತರದಲ್ಲಿ ಹಾರಾಡುತ್ತಿತ್ತು. ಈ ಮೂರು ಕಾನೂನುಗಳಿಗೆ ತಲೆಬಾಗುವುದಿಲ್ಲವೆಂದು ರೈತರು ಅಭಿಮಾನ ಮತ್ತು ಏಕತೆ ಸಾರುವ ಹಾಡುಗಳನ್ನು ಹಾಡುತ್ತಿದ್ದರು. "ಸರ್ಕಾರ ನಮ್ಮ ಮಾತನ್ನು ಕೇಳಬೇಕು. ನಮಗೆ ಬೇಡವಾದ ಕಾನೂನುಗಳನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ಅವರು ಈಗಾಗಲೇ ತಮ್ಮನ್ನು ಅಂಬಾನಿ ಮತ್ತು ಅದಾನಿಗೆ ಮಾರಿಕೊಂಡಿದ್ದಾರೆ” ಎಂದು ಪಟಿಯಾಲಾದ 48 ವರ್ಷದ ಮನಿಂದರ್ ಸಿಂಗ್ ಹೇಳುತ್ತಾರೆ. ಪರೇಡ್‌ನಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್‌ಗಳ ಪಕ್ಕದಲ್ಲಿ ಸಾಗುತ್ತಿದ್ದರು. "ಆದರೆ ನಾವು ಈ ಹೋರಾಟದಲ್ಲಿ ಸೋಲುವುದಿಲ್ಲ. ನಮ್ಮ ಕೊನೆಯುಸಿರು ಇರುವವರೆಗೂ ನಾವು ಹೋರಾಡುತ್ತೇವೆ.”

PHOTO • Anustup Roy

ಬೆಳಿಗ್ಗೆ 8:40ರ ಸುಮಾರಿಗೆ, ಸಿಂಘು ಗಡಿಯಿಂದ ಸುಮಾರು 3 ಕಿ.ಮೀ ದೂರದಲ್ಲಿ, ಟ್ರಾಕ್ಟರುಗಳ ಗುಂಪು ಮೆರವಣಿಗೆ ನಡೆಸಿ, ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗಿತು. 32 ಸಂಯುಕ್ತ ಸಂಘಟನೆಗಳಿಗೆ ಸೇರಿದ ರೈತರು ಅನುಮೋದಿತ ಮಾರ್ಗದಲ್ಲಿ ಮುಂದೆ ಹೋಗುತ್ತಿದ್ದರು ಮತ್ತು ತಮ್ಮ ಟ್ರಾಕ್ಟರುಗಳನ್ನು ಗೊತ್ತುಪಡಿಸಿದ ಮಾರ್ಗದಲ್ಲಿಯೇ ಚಲಾಯಿಸುತ್ತಿದ್ದರು.

PHOTO • Anustup Roy

ಬೆಳಿಗ್ಗೆ 9 ಗಂಟೆ ಸುಮಾರಿಗೆ, ಸಿಂಘು ಗಡಿಯಿಂದ ಸರಿಸುಮಾರು 5 ಕಿಲೋಮೀಟರ್ ದೂರದಲ್ಲಿ: ಒಬ್ಬ ರೈತ ನಮ್ಮನ್ನು ನಗುತ್ತಾ ಕೈ ಬೀಸಿ ಸ್ವಾಗತಿಸಿರು, ಅವರ ಟ್ರ್ಯಾಕ್ಟರ್ ಬಣ್ಣದ ಪೇಪರ್‌ಗಳು ಮತ್ತು ರಿಬ್ಬನ್‌ಗಳಿಂದ ಅಲಂಕರಿಸಲ್ಪಟ್ಟಿತ್ತು.

PHOTO • Anustup Roy

ಬೆಳಿಗ್ಗೆ 9: 10ರ ಸುಮಾರಿಗೆ, ಸಿಂಘು ಗಡಿಯಿಂದ ಸರಿಸುಮಾರು 5 ಕಿಲೋಮೀಟರ್ ದೂರದಲ್ಲಿ: ಕೆಲವು ರೈತರು ಟ್ರಾಕ್ಟರುಗಳ ಪಕ್ಕದಲ್ಲಿ ಮೆರವಣಿಗೆ ಮಾರ್ಗದಲ್ಲಿ, ಉತ್ಸಾಹದಿಂದ ಆದರೆ ಶಾಂತಿಯುತವಾಗಿ ಸಾಗಿದರು.

PHOTO • Anustup Roy

ಬೆಳಿಗ್ಗೆ 9: 10ರ ಸುಮಾರಿಗೆ, ಸಿಂಘು ಗಡಿಯಿಂದ ಸರಿಸುಮಾರು 5 ಕಿಲೋಮೀಟರ್ ದೂರದಲ್ಲಿ: ಕೆಲವು ರೈತರು ಟ್ರಾಕ್ಟರುಗಳ ಪಕ್ಕದಲ್ಲಿ ಮೆರವಣಿಗೆ ಮಾರ್ಗದಲ್ಲಿ, ಉತ್ಸಾಹದಿಂದ ಆದರೆ ಶಾಂತಿಯುತವಾಗಿ ಸಾಗಿದರು.

PHOTO • Anustup Roy

ಬೆಳಿಗ್ಗೆ 10 ಗಂಟೆಯ ಸುಮಾರಿಗೆ, ಸಿಂಘು ಗಡಿಯಿಂದ ಸರಿಸುಮಾರು 8 ಕಿಲೋಮೀಟರ್ ದೂರದಲ್ಲಿ: ನಿಗದಿತ ಮೆರವಣಿಗೆ ಮಾರ್ಗದ ಮೂಲಕ ಟ್ರಾಕ್ಟರುಗಳಲ್ಲಿ ಚಲಿಸುವಾಗ ರೈತರ ಗುಂಪು ಡಫ್ಲಿಯನ್ನು ನುಡಿಸುತ್ತಾ ಹಾಡುತ್ತಿತ್ತು.

PHOTO • Anustup Roy

ಬೆಳಿಗ್ಗೆ 10:10ರ ಸುಮಾರಿಗೆ, ಸಿಂಘು ಗಡಿಯಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿ. ಮೆರವಣಿಗೆ ಮಾರ್ಗದಲ್ಲಿ ಟ್ರ್ಯಾಕ್ಟರ್‌ನಲ್ಲಿದ್ದ ಕೃಷಿ ಕುಟುಂಬವು, 'ರೈತರನ್ನು ಉಳಿಸಿ, ರಾಷ್ಟ್ರವನ್ನು ಉಳಿಸಿ' ಎಂದು ಹೇಳುವ ಫಲಕಗಳನ್ನು ಹಿಡಿದಿರುವುದು.

PHOTO • Anustup Roy

ದೆಹಲಿಯ ಜಿಟಿ ಕರ್ನಾಲ್ ಬೈಪಾಸ್‌ನಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಿಂಘು ಗಡಿಯಿಂದ 12-13 ಕಿ.ಮೀ ದೂರದಲ್ಲಿ.

PHOTO • Anustup Roy

ದೆಹಲಿಯ ಜಿಟಿ ಕರ್ನಾಲ್ ಬೈಪಾಸ್‌ನಲ್ಲಿ ಬೆಳಿಗ್ಗೆ 11: 10ರ ಹೊತ್ತಿನಲ್ಲಿ.

PHOTO • Anustup Roy

ಜಿಟಿ ಕರ್ನಾಲ್ ಬೈಪಾಸ್‌ ಬಳಿ, ದೆಹಲಿಯ ಸದರ್ ಬಜಾರ್‌ನ ಅಶ್ಫಾಕ್ ಖುರೇಷಿ (38) ರೈತರಿಗೆ ಬೆಂಬಲ ನೀಡಲು ರಸ್ತೆಯ ಪಕ್ಕದಲ್ಲಿ ನಿಂತು, ತನ್ನ ಸ್ನೇಹಿತನೊಂದಿಗೆ 'ದೆಹಲಿ ನಿಮ್ಮನ್ನು ಸ್ವಾಗತಿಸುತ್ತದೆ' ಎಂದು ಸಾರುವ ಬ್ಯಾನರ್ ಹಿಡಿದುಕೊಂಡು

PHOTO • Anustup Roy

ಮಧ್ಯಾಹ್ನ 12: 15ರ ಸುಮಾರಿಗೆ ದೆಹಲಿಯ ಜಿಟಿ ಕರ್ನಾಲ್ ಬೈಪಾಸಿನಲ್ಲಿ. ಟ್ರಾಕ್ಟರುಗಳು ಹಾದುಹೋಗುವಾಗ ದೆಹಲಿಯ ಮಹಿಳೆಯರ ಗುಂಪು ರಸ್ತೆಯ ಪಕ್ಕದಲ್ಲಿ ನಿಂತು ರೈತ ಪರ ಘೋಷಣೆಗಳನ್ನು ಕೂಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

PHOTO • Anustup Roy

ದೆಹಲಿಯ ಜಿ.ಟಿ. ಕರ್ನಾಲ್ ಬೈಪಾಸ್‌ ಬಳಿ ಸುಮಾರು ಮಧ್ಯಾಹ್ನದ ಹೊತ್ತು: ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪು ರೈತ ಹೋರಾಟಕ್ಕೆ ಬೆಂಬಲವಾಗಿ ಹಾಡುಗಳನ್ನು ಹಾಡುತ್ತಾ ಮತ್ತು ಘೋಷಣೆಗಳನ್ನು ಕೂಗುವ ಮೂಲಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿತು.

PHOTO • Anustup Roy

ಮಧ್ಯಾಹ್ನ 2: 15ರ ಸುಮಾರಿಗೆ, ದೆಹಲಿಯ ಜಿಟಿ ಕರ್ನಾಲ್ ಬೈಪಾಸ್‌ ಬಳಿ: ಸಣ್ಣ ಹುಡುಗನೊಬ್ಬ ಹಾದುಹೋಗುವ ರೈತರಿಗೆ ಆಹಾರವನ್ನು ನೀಡುತ್ತಿರುವುದು, ಅವನ ಹೆತ್ತವರು ಅವನೊಡನೆ ಸಂಭ್ರಮದಿಂದ ಪಕ್ಕದಲ್ಲೇ ನಿಂತಿದ್ದರು.

PHOTO • Anustup Roy

ಮಧ್ಯಾಹ್ನ 2.30ರ ಸುಮಾರಿಗೆ ದೆಹಲಿಯ ಜಿಟಿ ಕರ್ನಾಲ್ ಬೈಪಾಸ್ ಬಳಿ: ದೆಹಲಿಯ ರೋಹಿಣಿ ಪ್ರದೇಶದ ಬಬ್ಲಿ ಕೌರ್ ಗಿಲ್ (50) ಮೆರವಣಿಗೆಯಲ್ಲಿ ಭಾಗವಹಿಸುವ ರೈತರಿಗೆ ಬೆಂಬಲದ ರೂಪವಾಗಿ ನೀರು ವಿತರಿಸಿದರು.

PHOTO • Anustup Roy

ಒಂದು ದಿನದ ನಂತರ, ಜನವರಿ 27ರಂದು ಬೆಳಿಗ್ಗೆ 11 ಗಂಟೆಗೆ ಸಿಂಘು ಗಡಿಯಲ್ಲಿ, ಕೀರ್ತಿ ಕಿಸಾನ್ ಒಕ್ಕೂಟದವರಾದ 28 ವರ್ಷದ ಕರಮ್ಜಿತ್ ಸಿಂಗ್, ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಣ್ಣ ಪ್ರತ್ಯೇಕ ಬಣದ ಮೂಲಕ ರೈತ ಚಳುವಳಿಯನ್ನು ಹೇಗೆ ಹತ್ತಿಕ್ಕಲಾಯಿತು ಎಂಬುದನ್ನು ವಿವರಿಸುತ್ತಿರುವುದು. ಕಳೆದ ಎರಡು ತಿಂಗಳುಗಳಿಂದ ದೆಹಲಿಯ ಗಡಿಯಲ್ಲಿ ಹೋರಾಟಗಳನ್ನು ನಡೆಸುತ್ತಿರುವ 32 ಇತರ ಕಿಸಾನ್ ಒಕ್ಕೂಟಗಳನ್ನು ಒಳಗೊಂಡ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ದೆಹಲಿಗೆ ನುಗ್ಗಿದ ಈ ಬಣಗಳ ಹಿಂಸಾತ್ಮಕ ಮತ್ತು ವಿನಾಶಕಾರಿ ಚಟುವಟಿಕೆಗಳನ್ನು ಖಂಡಿಸಿದೆ. "ಇದು ಶಾಂತಿಯುತ ಮತ್ತು ಬಲಯುತ ರೈತ ಚಳವಳಿಯನ್ನು ನಾಶಮಾಡುವ ಆಳವಾದ ಪಿತೂರಿಯ ಭಾಗ" ಎಂದು ಎಸ್‌ಕೆಎಂ ಈ ಕ್ರಮವನ್ನು ವಿರೋಧಿಸಿತು. ಒಟ್ಟಾರೆಯಾಗಿ, ಮೆರವಣಿಗೆ ಭವ್ಯ, ಶಾಂತಿಯುತ ಮತ್ತು ಶಿಸ್ತುಬದ್ಧವಾಗಿತ್ತು - ಮತ್ತು ಮುಖ್ಯವಾಗಿ, ದೇಶದ ಸಾಮಾನ್ಯ ನಾಗರಿಕರು, ರೈತರು, ಕಾರ್ಮಿಕರು ಮತ್ತು ಅನೇಕರು ಇಂದು ತಮ್ಮ ಗಣರಾಜ್ಯವನ್ನು ಅಕ್ಷರಶಃ ವಹಿಸಿಕೊಂಡಿದ್ದಾರೆ. ಲಕ್ಷಾಂತರ ಜನರು ಸೇರಿದ್ದರು, ಸಾವಿರಾರು ಟ್ರಾಕ್ಟರುಗಳನ್ನು ಓಡಿಸಿದರು - ಮತ್ತು ಭಾರತದೆಲ್ಲೆಡೆ ಪ್ರತಿಯೊಂದು ರಾಜ್ಯಗಳಲ್ಲೂ ಇದೇ ರೀತಿಯ ಕಾರ್ಯಕ್ರಮಗಳು ನಡೆದವು.

ಅನುವಾದ - ಶಂಕರ ಎನ್. ಕೆಂಚನೂರು

Anustup Roy

Anustup Roy is a Kolkata-based software engineer. When he is not writing code, he travels across India with his camera.

Other stories by Anustup Roy
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru