“ಹೈದರಾಬಾದಿಗೆ ವಲಸೆ ಹೋದವರು ಅಲ್ಲಿ ಸಿಕ್ಕ ಕೆಲಸ ಮಾಡತೊಡಗಿದೆವು. ನಮ್ಮ ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಸಲುವಾಗಿ ನಾವು ಸಾಕಷ್ಟು ಹಣ ಗಳಿಸಲು ಬಯಸಿದ್ದೆವು,” ಎಂದು ಗುಡ್ಲಾ ಮಂಗಮ್ಮ ಹೇಳುತ್ತಾರೆ. ಅವರು ಮತ್ತು ಅವರ ಪತಿ ಗುಡ್ಲಾ ಕೋಟಯ್ಯ ಅವರು 2000ರಲ್ಲಿ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ತಮ್ಮ ಗ್ರಾಮವನ್ನು ತೊರೆದು ರಾಜ್ಯ ರಾಜಧಾನಿ ಹೈದರಾಬಾದಿಗೆ ಬಂದಿದ್ದರು. ಆಗ ಮೊದಲ ಮಗು ಕಲ್ಪನಾ ಜನಿಸಿ ಸ್ವಲ್ಪ ಸಮಯಷ್ಟೇ ಆಗಿತ್ತು.

ಆದರೆ ನಗರವು ಅವರ ಪಾಲಿಗೆ ಉದಾರಿಯಾಗಿರಲಿಲ್ಲ. ಯಾವುದೇ ಕೆಲಸ ಸಿಗದ ಕಾರಣ ಕೋಟಯ್ಯ ಜಾಡಮಾಲಿಯಾಗಿ ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ಅನಿವಾರ್ಯವಾಗಿ ತೊಡಗಿಸಿಕೊಂಡರು.

ಹೈದರಾಬಾದಿನಲ್ಲಿ, ಕೋಟಯ್ಯ ಅವರ ಸಾಂಪ್ರದಾಯಿಕ ಬಟ್ಟೆ ಒಗೆಯುವ ವೃತ್ತಿಯನ್ನು ಕೇಳುವವರೇ ಇರಲಿಲ್ಲ - ಅವರು ಚಕಲಿ ಸಮುದಾಯಕ್ಕೆ ಸೇರಿದವರು (ತೆಲಂಗಾಣದಲ್ಲಿ ಇತರೇ ಹಿಂದುಳಿದ ವರ್ಗ). "ನಮ್ಮ ಪೂರ್ವಜರು ಬಟ್ಟೆಗಳನ್ನು ಒಗೆಯುತ್ತಿದ್ದರು ಮತ್ತು ಇಸ್ತ್ರಿ ಮಾಡುತ್ತಿದ್ದರು. ಆದರೆ ಈಗ ನಮಗೆ ಬಹಳ ಕಡಿಮೆ ಕೆಲಸವಿದೆ; ಪ್ರತಿಯೊಬ್ಬರೂ ತಮ್ಮದೇ ಆದ ವಾಷಿಂಗ್ ಮೆಷಿನ್ ಗಳು ಮತ್ತು ಇಸ್ತ್ರಿ ಪೆಟ್ಟಿಗೆಗಳನ್ನು ಹೊಂದಿದ್ದಾರೆ," ಮಂಗಮ್ಮ, ಅವರಿಬ್ಬರೂ ಕೆಲಸವನ್ನು ಪಡೆಯಲು ಏಕೆ ಕಷ್ಟಪಡುತ್ತಿದ್ದರು ಎಂದು ವಿವರಿಸುತ್ತಾರೆ.

ಕೋಟಯ್ಯ ಮೊದಲಿಗೆ ನಿರ್ಮಾಣ ಸ್ಥಳಗಳಲ್ಲಿ ಕೂಲಿ ಕೆಲಸಗಳಿಗಾಗಿ ಪ್ರಯತ್ನಿಸಿದರು. “ನಿರ್ಮಾಣ ಸ್ಥಳಗಳು ಯಾವಾಗಲೂ ಮನೆಯಿಂದ ದೂರವಿರುತ್ತಿದ್ದವು. ದುಡಿದ ಹಣದಲ್ಲಿ ಪ್ರಯಾಣಕ್ಕೂ ಖರ್ಚು ಮಾಡಬೇಕಿತ್ತು, ಹೀಗಾಗಿ ಅವರಿಗೆ ಜಾಡಮಾಲಿ ಕೆಲಸವೇ ಉತ್ತಮವಾಗಿ ಕಾಣುತ್ತಿತ್ತು,” ಎನ್ನುವ ಮಂಗಮ್ಮ ಪತಿ ಈ ಕೆಲಸವನ್ನೇ ಹೆಚ್ಚು ಮಾಡುತ್ತಿದ್ದರು ಎನ್ನುತ್ತಾರೆ. ಈ ಕೆಲಸದಿಂದ ಅವರಿಗೆ 250 ರೂಪಾಯಿ ಕೂಲಿ ಸಿಗುತ್ತಿತ್ತು.

ಮೇ 1, 2016ರಂದು, ಕೋಟಯ್ಯ ಬೆಳಗ್ಗೆ ಸುಮಾರು 11 ಗಂಟೆ ಸುಮಾರಿಗೆ ಹೆಂಡತಿಯ ಬಳಿ ಚರಂಡಿ ಸ್ವಚ್ಛಗೊಳಿಸಲು ಹೋಗುತ್ತಿರುವುದಾಗಿ ಹೇಳಿ ಹೋಗಿದ್ದರು. ಸ್ನಾನ ಮಾಡಿ ಒಳಗೆ ಬರಲು ಮನೆಯ ಹೊರಗೆ ಸ್ನಾನಕ್ಕಾಗಿ ಒಂದು ಬಕೆಟ್‌ ನೀರು ಇಡುವಂತೆ ಸೂಚಿಸಿದ್ದರು. “ನನ್ನ ಗಂಡ ಸಫಾಯಿ ಕಾರ್ಮಿಕನಾಗಿರಲಿಲ್ಲ [ಮುನ್ಸಿಪಲ್ ನೈರ್ಮಲ್ಯ ಕಾರ್ಮಿಕ]. ಅವರು ನಮಗೆ ಹಣದ ಅಗತ್ಯವಿದ್ದ ಕಾರಣಕ್ಕಾಗಿ ಈ ಕೆಲಸಕ್ಕೆ ಹೋಗುತ್ತಿದ್ದರು,” ಎನ್ನುತ್ತಾರೆ ಮಂಗಮ್ಮ.

PHOTO • Amrutha Kosuru
PHOTO • Amrutha Kosuru

ಎಡ : ಗುಡ್ಲು ಮಂಗಮ್ಮ ವಾಸಿಸುವ ಹೈದರಾಬಾದಿನ ಕೋಟಿ ಬೀದಿ . ಬಲ : ತನ್ನ ಸಹೋದ್ಯೋಗಿಯನ್ನು ಉಳಿಸಲು ಮ್ಯಾನ್ ಹೋ ಲ್ ಗೆ ಇಳಿದು 2016 ಮೇ 1 ರಂದು ಮೃತಪಟ್ಟ ಪತಿ ಗುಡ್ಲು ಕೋಟಯ್ಯ ಅವರ ಫೋಟೋ ಆಕೆಯ ಮನೆಯ ಗೋಡೆಯ ಮೇ ಲಿದೆ

ಆ ದಿನ ಕೋಟಯ್ಯನವರನ್ನು ಸುಲ್ತಾನ್‌ ಬಜಾರಿನಲ್ಲಿ ಕೆಲಸಕ್ಕೆ ನೇಮಿಸಲಾಗಿತ್ತು. ಅದು ಹಳೆಯ ನಗರದ ಜನನಿಬಿಡ ಪ್ರದೇಶವಾಗಿತ್ತು, ಅಲ್ಲಿ ಚರಂಡಿಗಳು ಕಟ್ಟಿಕೊಂಡು ಆಗಾಗ್ಗೆ ತುಂಬಿ ತುಳುಕುತ್ತಿದ್ದವು. ಇಂತಹ ಸಂದರ್ಭಗಳಲ್ಲಿ ಹೈದರಾಬಾದ್ ಮೆಟ್ರೋಪಾಲಿಟನ್ ನೀರು ಸರಬರಾಜು ಮತ್ತು ಒಳಚರಂಡಿ ಹೊರಗಿನ ಗುತ್ತಿಗೆದಾರರನ್ನು ಚರಂಡಿ ಸ್ವಚ್ಛಗೊಳಿಸುವ ಸಲುವಾಗಿ ನೇಮಿಸಿಕೊಳ್ಳುತ್ತದೆ. ಅವರು ಈ ಚರಂಡಿಗಳನ್ನು ಕೈಗಳ ಮೂಲಕವೇ ಸ್ವಚ್ಛಗೊಳಿಸಿ ನೀರು ಹರಿಯುವಂತೆ ಮಾಡಲು ಜನರನ್ನು ನೇಮಿಸಿಕೊಳ್ಳುತ್ತಾರೆ.

ಕೋಟಯ್ಯನ ಸಹೋದ್ಯೋಗಿ ಮತ್ತು ಸ್ನೇಹಿತ ಬೊಂಗು ವೀರ ಸ್ವಾಮಿಯು ಯಾವುದೇ ಸುರಕ್ಷತಾ ಸಲಕರಣೆಗಳಿಲ್ಲದೆ ಮ್ಯಾನ್ ಹೋಲ್ ಒಳಗೆ ಕಾಲಿಟ್ಟು ಕೆಲವೇ ನಿಮಿಷಗಳಲ್ಲಿ ಕುಸಿದುಬಿದ್ದರು. ಅವರನ್ನು ನೋಡಿ, ಅವರೊಂದಿಗೆ ಕೆಲಸ ಮಾಡುತ್ತಿದ್ದ ಕೋಟಯ್ಯ, ಪ್ರಜ್ಞಾಹೀನ ವ್ಯಕ್ತಿಯನ್ನು ರಕ್ಷಿಸಲು ಒಳಗೆ ಹಾರಿದರು. ಕೆಲವು ನಿಮಿಷಗಳ ನಂತರ, ಕೋಟಯ್ಯ ಕೂಡ ಕುಸಿದುಬಿದ್ದರು.

ಇಬ್ಬರಿಗೂ ಮಾಸ್ಕ್, ಕೈಗವಸುಗಳು ಇತ್ಯಾದಿಯಂತಹ ಯಾವುದೇ ರಕ್ಷಣಾತ್ಮಕ ಸಾಧನಗಳನ್ನು ನೀಡಿರಲಿಲ್ಲ. 1993 ಮತ್ತು 2022ರ ನಡುವೆ ಒಳಚರಂಡಿ ಮತ್ತು ಸೆಪ್ಟಿಕ್‌ ಟ್ಯಾಂಕುಗಳಿಗೆ ಸ್ವಚ್ಛಗೊಳಿಸಲು ಇಳಿದು ಸಾವನ್ನಪ್ಪಿದ 971 ಜನರು ಮರಣ ಹೊಂದಿದ್ದಾರೆ ಎಂದು  ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಏಪ್ರಿಲ್ 6, 2022ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಆ ಸಂಖ್ಯೆಗಳಲ್ಲಿ ಈ ಇಬ್ಬರು ಸ್ನೇಹಿತರ ಸಾವೂ ಕೂಡಾ ಕೇವಲ ಸಂಖ್ಯೆಯಾಗಿ ಸೇರಿಕೊಂಡಿವೆ.

ಕೆಲವು ಗಂಟೆಗಳ ನಂತರ ಅವರನ್ನು ನೋಡಿದಾಗ, “ಮ್ಯಾನ್‌ ಹೋಲ್‌ನ ಕೆಟ್ಟ ವಾಸನೆ ದೇಹದಿಂದ ಬರುತ್ತಲೇ ಇತ್ತು,” ಮಂಗಮ್ಮ ಎಂದು ನೆನಪಿಸಿಕೊಳ್ಳುತ್ತಾರೆ.

ಗುಡ್ಲಾ ಕೋಟಯ್ಯ ಅವರು ಮೇ 1, 2016ರಂದು ನಿಧನರಾದರು - ವಿಶ್ವದ ಅನೇಕ ಭಾಗಗಳಲ್ಲಿ ಆ ದಿನವನ್ನು ಮೇ ದಿನ ಎಂದು ಗುರುತಿಸಲಾಗಿದೆ - ಇದು ಕಾರ್ಮಿಕರ ಹಕ್ಕುಗಳನ್ನು ಗುರುತಿಸುವ ದಿನವಾಗಿದೆ. 1993ರಿಂದ ಕೈಯಿಂದ ಮಲ ಬಾಚುವುದನ್ನು (ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್) ನಿಷೇಧಿಸಲಾಗಿದೆ ಮತ್ತು ಮಲಹೊರುವ ಜಾಡಮಾಲಿಗಳ ನಿಯೋಜನೆ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ , 2013ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅವರಿಗೆ ಅಥವಾ ಅವರ ಪತ್ನಿಗೆ ತಿಳಿದಿರಲಿಲ್ಲ. ಈ ಕಾಯ್ದೆಯ ಉಲ್ಲಂಘನೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ದಂಡ ಅಥವಾ ಎರಡಕ್ಕೂ ಕಾರಣವಾಗಬಹುದು.

"ಇದು [ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್] ಕಾನೂನುಬಾಹಿರ ಎಂದು ನನಗೆ ತಿಳಿದಿರಲಿಲ್ಲ. ಅವರ ಮರಣದ ನಂತರವೂ, ನನ್ನ ಕುಟುಂಬಕ್ಕೆ ಪರಿಹಾರವನ್ನು ಪಡೆಯಲು ಕಾನೂನುಗಳಿವೆ ಎಂದು ನನಗೆ ತಿಳಿದಿರಲಿಲ್ಲ," ಎಂದು ಮಂಗಮ್ಮ ಹೇಳುತ್ತಾರೆ.

PHOTO • Amrutha Kosuru
PHOTO • Amrutha Kosuru

ಎಡ : ಹೈದರಾಬಾದಿನ ಕೋಟಿಯಲ್ಲಿರುವ ಮಂಗಮ್ಮನ ಮನೆಯ ಪ್ರವೇಶ ದ್ವಾರ . ಬಲ : ಕೋಟಯ್ಯನವರ ಕುಟುಂಬ : ವಂಶಿ , ಮಂಗಮ್ಮ ಮತ್ತು ಅಖಿಲಾ ತಮ್ಮ ಮನೆಯಲ್ಲಿ ( ಎಡದಿಂದ ಬಲಕ್ಕೆ )

ಕೋಟಯ್ಯ ಸತ್ತ ರೀತಿಯನ್ನು ತಿಳಿದ ನಂತರ ತನ್ನ ಸಂಬಂಧಿಕರು ತನ್ನನ್ನು ದೂರವಿಡಬಹುದೆನ್ನುವ ವಿಷಯವೂ ಅವರಿಗೆ ತಿಳಿದಿರಲಿಲ್ಲ. “ಅವರು ನಮಗೆ ಸಾಂತ್ವನ ಹೇಳಲು ಸಹ ಬಂದಿಲ್ಲವೆನ್ನುವುದು ಇನ್ನಿಲ್ಲದ ನೋವು ತರುತ್ತದೆ. ಒಳಚರಂಡಿ ಸ್ವಚ್ಛಗೊಳಿಸುವಾಗ ನನ್ನ ಪತಿ ತೀರಿಕೊಂಡರೆಂದು ತಿಳಿದಾಗಿನಿಂದ ಅವರು ನನ್ನನ್ನು ಮತ್ತು ನನ್ನ ಮಕ್ಕಳನ್ನು ಮಾತಾಡಿಸುವುದನ್ನೇ ಬಿಟ್ಟರು,” ಎನ್ನುತ್ತಾರಾಕೆ.

ತೆಲುಗಿನಲ್ಲಿ ಜಾಡಮಾಲಿ ಕೆಲಸ ಮಾಡುವವರನ್ನು ʼಪಾಕಿʼ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.  ಇದೊಂದು ನಿಂದನೆಗೆ ಬಳಸುವ ಪದವಾಗಿದ್ದು, ಬಹುಶಃ ಇದೇ ಕಾರಣಕ್ಕಾಗಿ ವೀರಸ್ವಾಮಿ ತನ್ನ ಹೆಂಡತಿಗೆ ತಾನು ಜಾಡಮಾಲಿಯಾಗಿ ದುಡಿಯುತ್ತಿರುವುದನ್ನು ತಿಳಿಸಿರಲಿಲ್ಲ. “ಅವರು ಜಾಡಮಾಲಿ ಕೆಲಸ ಮಾಡುತ್ತಿದ್ದರೆಂದು ನನಗೆ ತಿಳಿದಿರಲಿಲ್ಲ ಈ ಕುರಿತು ಅವರು ಎಂದೂ ನನ್ನ ಬಳಿ ಮಾತನಾಡಿರಲಿಲ್ಲ,” ಎನ್ನುತ್ತಾರೆ ಅವರ ಪತ್ನಿ ಬೊಂಗು ಭಾಗ್ಯಲಕ್ಷ್ಮಿ. ಅವರು ಏಳು ವರ್ಷಗಳ ಹಿಂದೆ ವೀರಸ್ವಾಮಿಯವರನ್ನು ಮದುವೆಯಾದರು. ಅವರು ತನ್ನ ಗಂಡನನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾ, “ಅವರನ್ನು ನಾನು ಎಲ್ಲದಕ್ಕೂ ಅವಲಂಬಿಸಬಹುದಾಗಿತ್ತು,” ಎನ್ನುತ್ತಾರೆ.

ಕೋಟಯ್ಯ ಕುಟುಂಬದಂತೆ ವೀರಸ್ವಾಮಿಯ ಕುಟುಂಬವೂ ಹೈದರಾಬಾದಿಗೆ ವಲಸೆ ಬಂದಿತ್ತು. 2007ರಲ್ಲಿ ಅವರು ಮತ್ತು ಭಾಗ್ಯಲಕ್ಷ್ಮಿ ಅವರು ತಮ್ಮ ಮಕ್ಕಳಾದ 15 ಮತ್ತು 11 ವರ್ಷದ ಮಾಧವ್ ಮತ್ತು ಜಗದೀಶ್ ಮತ್ತು ವೀರಾ ಸ್ವಾಮಿಯ ತಾಯಿ ರಾಜೇಶ್ವರಿ ಅವರೊಂದಿಗೆ ತೆಲಂಗಾಣದ ನಾಗರಕುರ್ನೂಲ್ ಎಂಬ ಪಟ್ಟಣದಿಂದ ಇಲ್ಲಿಗೆ ಸ್ಥಳಾಂತರಗೊಂಡಿದ್ದರು. ಈ ಕುಟುಂಬವು ಮಾದಿಗ ಸಮುದಾಯಕ್ಕೆ ಸೇರಿದ್ದು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಎಂದು ಪಟ್ಟಿ ಮಾಡಲಾಗಿದೆ. “ನಮ್ಮ ಸಮುದಾಯದವರು ಮಾಡುವ ಈ ಕೆಲಸವು ನನಗೆ ಇಷ್ಟವಿರಲಿಲ್ಲ. ನಮ್ಮ ಮದುವೆಯ ನಂತರ ಅವರು ಈ ಕೆಲಸ ನಿಲ್ಲಿಸಿದ್ದಾರೆಂದು ಭಾವಿಸಿದ್ದೆ,” ಎಂದು ಅವರು ಹೇಳುತ್ತಾರೆ.

ಮ್ಯಾನ್‌ ಹೋಲ್‌ ಒಳಗಿನ ವಿಷಕಾರಿ ಗಾಳಿಯಿಂದ ಕೋಟಯ್ಯ ಮತ್ತು ವೀರಸ್ವಾಮಿ ಉಸಿರುಗಟ್ಟಿ ಮರಣಹೊಂದಿದ ಕೆಲವು ವಾರಗಳ ನಂತರ, ಮಂಗಮ್ಮ ಮತ್ತು ಭಾಗ್ಯಲಕ್ಷ್ಮಿ ಅವರಿಗೆ ಗುತ್ತಿಗೆದಾರನು ತಲಾ 2 ಲಕ್ಷ ರೂ.ಗಳನ್ನು ನೀಡಿದನು.

ಕೆಲವು ತಿಂಗಳುಗಳ ನಂತರ, ಭಾರತದಲ್ಲಿ ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಲು ಶ್ರಮಿಸುತ್ತಿರುವ ಸಫಾಯಿ ಕರ್ಮಚಾರಿ ಆಂದೋಲನದ (ಎಸ್‌ಕೆಎ) ಸಂಘಟನೆಯ ಸದಸ್ಯರು ಮಂಗಮ್ಮ ಅವರನ್ನು ಸಂಪರ್ಕಿಸಿದರು. ಅವರ ಕುಟುಂಬವು 10 ಲಕ್ಷ ರೂ.ಗಳವರೆಗಿನ ಪರಿಹಾರ ಪ್ಯಾಕೇಜಿಗೆ ಅರ್ಹವಾಗಿದೆ ಎಂದು ಅವರು ಆಕೆಗೆ ಹೇಳಿದರು. ಸುಪ್ರೀಂ ಕೋರ್ಟ್ 2014ರಲ್ಲಿ ನೀಡಿದ ತೀರ್ಪಿನಲ್ಲಿ, 1993ರಿಂದ ಚರಂಡಿಗಳು ಅಥವಾ ಸೆಪ್ಟಿಕ್ ಟ್ಯಾಂಕುಗಳನ್ನು ಸ್ವಚ್ಛಗೊಳಿಸುವಾಗ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಪಾವತಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ಇದಲ್ಲದೆ, ಜಾಡಮಾಲಿ ಕೆಲಸಗಾರರ ಪುನರ್ವಸತಿಗಾಗಿ ಸ್ವಯಂ ಉದ್ಯೋಗ ಯೋಜನೆಯ ಮೂಲಕ, ಸರ್ಕಾರವು ನಗದು ನೆರವು, ಬಂಡವಾಳ ಸಬ್ಸಿಡಿಗಳು (15 ಲಕ್ಷ ರೂ.ಗಳವರೆಗೆ) ಮತ್ತು ಜಾಡಮಾಲಿಯಾಗಿ ಕೆಲಸ ಮಾಡುವ ಜನರಿಗೆ ಮತ್ತು ಅವರ ಅವಲಂಬಿತರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಒದಗಿಸುತ್ತದೆ.

ತೆಲಂಗಾಣ ಹೈಕೋರ್ಟಿನಲ್ಲಿ ಎಸ್‌ಕೆಎ ಅರ್ಜಿ ಸಲ್ಲಿಸಿದ ನಂತರ, ಕೋಟಯ್ಯ ಮತ್ತು ವೀರ ಸ್ವಾಮಿ ಅವರ ಕುಟುಂಬಗಳನ್ನು ಹೊರತುಪಡಿಸಿ, ಹತ್ಯೆಗೀಡಾದ ಒಂಬತ್ತು ಮ್ಯಾನ್ಯುಯಲ್ ಜಾಡಮಾಲಿ ಕೆಲಸಗಾರರ ಕುಟುಂಬಗಳು 2020ರಲ್ಲಿ ಸಂಪೂರ್ಣ ಪರಿಹಾರವನ್ನು ಪಡೆದಿವೆ. ಎಸ್‌ಕೆಎಯ ತೆಲಂಗಾಣ ವಿಭಾಗದ ಮುಖ್ಯಸ್ಥರಾದ ಕೆ. ಸರಸ್ವತಿ ಅವರು ನ್ಯಾಯಾಲಯದಲ್ಲಿ ತಮ್ಮ ಪ್ರಕರಣಗಳನ್ನು ಹೋರಾಡಲು ವಕೀಲರೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ.

PHOTO • Amrutha Kosuru
PHOTO • Amrutha Kosuru

ಎಡ: ಭಾಗ್ಯಲಕ್ಷ್ಮಿ ತನ್ನ ಅತ್ತೆ ರಾಜೇಶ್ವರಿಯೊಂದಿಗೆ. ಬಲ: ಕೋಟಯ್ಯ ಉಳಿಸಲು ಪ್ರಯತ್ನಿಸಿದ ಭಾಗ್ಯಲಕ್ಷ್ಮಿ ಅವರ ದಿವಂಗತ ಪತಿ ಬೊಂಗು ವೀರ ಸ್ವಾಮಿಯ ಫೋಟೋ

ಆದರೆ ಮಂಗಮ್ಮನಿಗೆ ಇದು ಸಂತೋಷ ತಂದಿಲ್ಲ. “ನಾನು ಮೋಸ ಹೋದಂತನ್ನಿಸುತ್ತಿದೆ,” ಎಂದು ಅವರು ಹೇಳುತ್ತಾರೆ. “ನನಗೆ ಹಣ ಸಿಗುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈಗ ಅಂತಹ ಯಾವುದೇ ಭರವಸೆಯಿಲ್ಲ.”

ಭಾಗ್ಯಲಕ್ಷ್ಮಿ ಹೇಳುತ್ತಾರೆ, "ಅನೇಕ ಕಾರ್ಯಕರ್ತರು, ವಕೀಲರು, ಮಾಧ್ಯಮ ಪ್ರತಿನಿಧಿಗಳು ನಮ್ಮ ಬಳಿಗೆ ಬಂದರು. ಸ್ವಲ್ಪ ಸಮಯದವರೆಗೆ, ನನಗೆ ಭರವಸೆ ಇತ್ತು. ಈಗ, ಆ ಹಣ ಸಿಗಬಹುದೆಂದು ನನಗೆ ಅನ್ನಿಸುತ್ತಿಲ್ಲ."

*****

ಈ ವರ್ಷದ ಅಕ್ಟೋಬರ್ ಕೊನೆಯಲ್ಲಿ, ಮಂಗಮ್ಮ ಹೈದರಾಬಾದಿನ ಕೋಟಿ ಪ್ರದೇಶದ ಹಳೆಯ ಅಪಾರ್ಟ್ಮೆಂಟ್ ಕಟ್ಟಡದ ಪಾರ್ಕಿಂಗ್ ಸ್ಥಳದ ಇಳಿಜಾರಿನ ಪ್ರವೇಶದ್ವಾರದ ಮೇಲೆ ಕಟ್ಟೆಲಾ ಪೊಯ್ಯಿ (ತಾತ್ಕಾಲಿಕ ಒಲೆಯನ್ನು) ನಿರ್ಮಿಸುತ್ತಿದ್ದರು. ಅರ್ಧ ಡಜನ್ ಇಟ್ಟಿಗೆ ಬಳಸಿ ತ್ರಿಕೋನಾಕಾರದ ಒಲೆ ನಿರ್ಮಿಸಿದರು. "ನಿನ್ನೆ ಮನೆಯಲ್ಲಿ ಗ್ಯಾಸ್‌ ಖಾಲಿಯಾಯಿತು. ನವೆಂಬರ್ ಮೊದಲ ವಾರದಲ್ಲಿ ಹೊಸ ಸಿಲಿಂಡರ್ ಬರಲಿದೆ. ಅಲ್ಲಿಯವರೆಗೆ, ಕಟ್ಟೆಲಾ ಪೊಯ್ಯಿಯಲ್ಲಿ ಅಡುಗೆ ಮಾಡುತ್ತೇವೆ," ಎಂದು ಅವರು ಹೇಳುತ್ತಾರೆ. "ನನ್ನ ಗಂಡ ತೀರಿಕೊಂಡಾಗಿನಿಂದಲೂ ನಮ್ಮ ಸ್ಥಿತಿ ಹೀಗೇ ಇದೆ."

ಕೋಟಯ್ಯ ಸತ್ತು ಆರು ವರ್ಷಗಳು ಕಳೆದಿವೆ. ಈಗ 30 ರ ಆಸುಪಾಸಿನ ಮಂಗಮ್ಮ ಹೇಳುತ್ತಾರೆ, "ನನ್ನ ಪತಿ ತೀರಿಕೊಂಡ ನಂತರ ಬಹಳ ಸಮಯದವರೆಗೆ ನಾನು ನಾನಾಗಿರಲಿಲ್ಲ. ಚಿಂತೆಯಲ್ಲಿ ಮುಳುಗಿರುತ್ತಿದ್ದೆ."

ಅವರು ಮತ್ತು ಅವರ ಇಬ್ಬರು ಸಣ್ಣ ಮಕ್ಕಳಾದ ವಂಶಿ ಮತ್ತು ಅಖಿಲಾ, ಬಹುಮಹಡಿ ಕಟ್ಟಡದ ಮಂದ ಬೆಳಕಿನ ನೆಲಮಾಳಿಗೆಯಲ್ಲಿ - ಮೆಟ್ಟಿಲುಗಳ ಪಕ್ಕದ ಸಣ್ಣ ಕೋಣೆಯಲ್ಲಿ ವಾಸಿಸುತ್ತಿದ್ದಾರೆ. 2020ರ ಕೊನೆಯಲ್ಲಿ ಅವರು ಇಲ್ಲಿಗೆ ಸ್ಥಳಾಂತರಗೊಂಡರು, ಅವರು ಅದೇ ಪ್ರದೇಶದಲ್ಲಿನ ಮನೆಯೊಂದಕ್ಕೆ ಪಾವತಿಸುತ್ತಿದ್ದ 5,000-7,000 ರೂ.ಗಳ ಬಾಡಿಗೆಯನ್ನು ಭರಿಸಲು ಸಾಧ್ಯವಾದೆ ಖಾಲಿ ಮಾಡಿದರು. ಐದು ಅಂತಸ್ತಿನ ಕಟ್ಟಡವನ್ನು ಮಂಗಮ್ಮ ಕಾವಲು ಕಾಯುತ್ತಾರೆ ಮತ್ತು ಆವರಣವನ್ನು ಸಹ ಸ್ವಚ್ಛಗೊಳಿಸುತ್ತಾರೆ. ಇದಕ್ಕಾಗಿ ಆಕೆಗೆ ತಿಂಗಳಿಗೆ 5,000 ರೂ.ಗಳನ್ನು ಪಾವತಿಸಲಾಗುತ್ತದೆ ಮತ್ತು ಕುಟುಂಬದೊಂದಿಗೆ ವಾಸಿಸಲು ಕೋಣೆಯನ್ನು ನೀಡಲಾಗಿದೆ.

"ನಮ್ಮ ಮೂವರಿಗೆ ಈ ಜಾಗ ಸಾಕಾಗುವುದಿಲ್ಲ," ಎಂದು ಅವರು ಹೇಳುತ್ತಾರೆ. ಪ್ರಕಾಶಮಾನವಾದ ಮುಂಜಾನೆಯಲ್ಲೂ ಅವರ ಕೋಣೆ ಕತ್ತಲೆಯಿಂದ ಕೂಡಿರುತ್ತದೆ. ಕೋಟಯ್ಯ ಅವರ ಫೋಟೋಗಳನ್ನು ಮಾಸಿದ ಗೋಡೆಯ ಮೇಲೆ ನೇತುಹಾಕಲಾಗಿದೆ; ಕೆಳಮಟ್ಟದ ಸೀಲಿಂಗ್‌ಗೆ ಒಂದು ಫ್ಯಾನ್‌ ಹಾಕಲಾಗಿದೆ. "ನಾನು ಇನ್ನು ಮುಂದೆ ಕಲ್ಪನಾಳನ್ನು (ಹಿರಿಯ ಮಗಳು) ಇಲ್ಲಿಗೆ ಕರೆಯುವುದಿಲ್ಲ. ಅವಳು ಎಲ್ಲಿ ಉಳಿಯುತ್ತಾಳೆ ಅಥವಾ ಕುಳಿತುಕೊಳ್ಳುತ್ತಾಳೆ?", ಎಂದು ಅವರು ಕೇಳುತ್ತಾರೆ.

PHOTO • Amrutha Kosuru
PHOTO • Amrutha Kosuru

ಎಡ: ನೆಲಮಾಳಿಗೆಯಲ್ಲಿರುವ ಮಂಗಮ್ಮನ ಮನೆಯ ಒಳಗೆ. ಬಲ: ಎಲ್ಪಿಜಿ ಸಿಲಿಂಡರಿನಲ್ಲಿ ಅನಿಲ ಖಾಲಿಯಾದ ನಂತರ ಕಟ್ಟಡದ ಪಾರ್ಕಿಂಗ್ ಪ್ರದೇಶದಲ್ಲಿ ಇಟ್ಟಿಗೆಗಳಿಂದ ಒಲೆ ತಯಾರಿಸುತ್ತಿರುವುದು

2020ರಲ್ಲಿ, ಕಲ್ಪನಾ 20 ವರ್ಷದವರಾಗಿದ್ದಾಗ, ಮಂಗಮ್ಮ ಆಕೆಗೆ ಮದುವೆ ಮಾಡಿಸಲು ನಿರ್ಧರಿಸಿದರು. ಅವರು ಗುತ್ತಿಗೆದಾರನಿಂದ ಪಡೆದ 2 ಲಕ್ಷ ರೂಪಾಯಿಗಳನ್ನು ಮದುವೆಗೆ ಖರ್ಚು ಮಾಡಿದರು. ಅಲ್ಲದೆ ಮದುವೆಗಾಗಿ ಗೋಶಾಮಹಲ್‌ನ ಖಾಸಗಿ ಲೇವಾದೇವಿಗಾರನಿಂದ ಹಣವನ್ನು ಸಾಲವಾಗಿ ಪಡೆದಿದ್ದಾರೆ. ಆ ಲೇವಾದೇವಿಗಾರನು ತಿಂಗಳಿಗೆ 3 ಪ್ರತಿಶತದಷ್ಟು ಬಡ್ಡಿಯನ್ನು ವಿಧಿಸುತ್ತಾನೆ. ಅವರು ಆ ಕ್ಷೇತ್ರದ ಶಾಸಕರ ಕಚೇರಿ ಸ್ವಚ್ಛಗೊಳಿಸಿ ಸಂಪಾದಿಸುವ ಹಣದ ಅರ್ಧದಷ್ಟು ಈ ಬಡ್ಡಿಗೆ ಹೋಗುತ್ತದೆ.

ಈ ಮದುವೆಯು ಕುಟುಂಬವನ್ನು ದಿವಾಳಿಗೊಳಿಸಿತು. "ನಾವು ಈಗ 6 ಲಕ್ಷ ರೂಪಾಯಿಗಳ ಸಾಲವನ್ನು ಹೊಂದಿದ್ದೇವೆ. [ನನ್ನ ಸಂಪಾದನೆ] ನಮ್ಮ ದೈನಂದಿನ ವೆಚ್ಚಗಳನ್ನು ಸರಿದೂಗಿಸಲು ಸಾಕಾಗುವುದಿಲ್ಲ," ಎಂದು ಅವರು ಹೇಳುತ್ತಾರೆ. ಅಪಾರ್ಟ್ಮೆಂಟ್ ಆವರಣವನ್ನು ಸ್ವಚ್ಛಗೊಳಿಸಲು ಅವರು ಪಡೆಯುವ ಹಣದ ಜೊತೆಗೆ, ಹೈದರಾಬಾದಿನ ಹಳೆಯ ನಗರದಲ್ಲಿರುವ ಗೋಶಾಮಹಲ್ ವಿಧಾನಸಭಾ ಕ್ಷೇತ್ರದ ಕಚೇರಿಯಲ್ಲಿ ಕ್ಲೀನರ್ ಆಗಿ ತಿಂಗಳಿಗೆ 13,000 ರೂ.ಗಳನ್ನು ಗಳಿಸುತ್ತಾರೆ.

17 ಮತ್ತು 16 ವರ್ಷದ ವಂಶಿ ಮತ್ತು ಅಖಿಲಾ ಹತ್ತಿರದ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಅವರ ಶಿಕ್ಷಣದ ಒಟ್ಟು ಶುಲ್ಕವು ವರ್ಷಕ್ಕೆ 60,000 ರೂ.ಗಳಾಗುತ್ತವೆ. ವಂಶಿ ಅರೆಕಾಲಿಕ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡು ಓದುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ವಾರದಲ್ಲಿ ಆರು ದಿನ, ಮಧ್ಯಾಹ್ನ 3ರಿಂದ ರಾತ್ರಿ 9ರವರೆಗೆ, ದಿನಕ್ಕೆ 150 ರೂ.ಗಳಿಗೆ ಕೆಲಸ ಮಾಡುತ್ತಾರೆ. ಈ ಸಂಪಾದನೆಯಿಂದ ಅವರ ಕಾಲೇಜು ಶುಲ್ಕಕ್ಕೆ ಸಹಾಯವಾಗುತ್ತದೆ.

ಅಖಿಲಾ ಮೆಡಿಸಿನ್ ಓದುವ ಕನಸು ಕಾಣುತ್ತಿದ್ದಾರೆ, ಆದರೆ ಆಕೆ ತಾಯಿಗೆ ಅದು ಸಾಧ್ಯವೇ ಎನ್ನವುದು ಖಚಿತವಾಗಿಲ್ಲ. "ಅವಳ ಶಿಕ್ಷಣವನ್ನು ಮುಂದುವರಿಸಲು ನನ್ನ ಬಳಿ ಸಂಪನ್ಮೂಲಗಳಿಲ್ಲ. ನನ್ನಿಂದ ಅವಳಿಗೆ ಹೊಸ ಬಟ್ಟೆಗಳನ್ನು ಸಹ ಖರೀದಿಸಲು ಸಾಧ್ಯವಾಗುತ್ತಿಲ್ಲ," ಎಂದು ಮಂಗಮ್ಮ ಬೇಸರದಿಂದ ಹೇಳುತ್ತಾರೆ.

ಭಾಗ್ಯಲಕ್ಷ್ಮಿಯವರ ಮಕ್ಕಳು ಚಿಕ್ಕವರು. ಅವರು ಓದುತ್ತಿರುವ ಖಾಸಗಿ ಶಾಲೆಯ ಶುಲ್ಕವು ವರ್ಷಕ್ಕೆ ಒಟ್ಟು 25,000 ರೂ.ಗಳವರೆಗೆ ತಲುಪುತ್ತದೆ. "ಅವರು ಒಳ್ಳೆಯ ವಿದ್ಯಾರ್ಥಿಗಳು. ಅವರ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ," ಎಂದು ಅವರ ತಾಯಿ ಉಲ್ಲಾಸದಿಂದ ಹೇಳುತ್ತಾರೆ.

PHOTO • Amrutha Kosuru
PHOTO • Amrutha Kosuru

ಎಡ: ವೀರ ಸ್ವಾಮಿಯ ಕುಟುಂಬ (ಎಡದಿಂದ): ಭಾಗ್ಯಲಕ್ಷ್ಮಿ, ಜಗದೀಶ್, ಮಾಧವ್ ಮತ್ತು ರಾಜೇಶ್ವರಿ. ಬಲ: ಹೈದರಾಬಾದಿನ ಅಪಾರ್ಟ್ಮೆಂಟ್ ಸಮುಚ್ಚಯದ ನೆಲಮಾಳಿಗೆಯಲ್ಲಿರುವ ಅವರ ಮನೆ

PHOTO • Amrutha Kosuru
PHOTO • Amrutha Kosuru

ಎಡ: ಭಾಗ್ಯಲಕ್ಷ್ಮಿ ಅವರ ಕುಟುಂಬದ ಕೆಲವು ಸಮಾಗ್ರಿಗಳು ಹೊರಗೆ ಪಾರ್ಕಿಂಗ್ ಪ್ರದೇಶದಲ್ಲಿವೆ. ಬಲ: ಪ್ಲಾಸ್ಟಿಕ್ ಪರದೆಯಿಂದ ಮುಚ್ಚಲ್ಪಟ್ಟಿರುವ ಅಡುಗೆಮನೆ

ಭಾಗ್ಯಲಕ್ಷ್ಮಿ ಕ್ಲೀನರ್ ಆಗಿಯೂ ಕೆಲಸ ಮಾಡುತ್ತಾರೆ. ವೀರ ಸ್ವಾಮಿಯ ಮರಣದ ನಂತರ ಅವರು ಈ ಕೆಲಸವನ್ನು ಕೈಗೆತ್ತಿಕೊಂಡರು. ಕೋಟಿಯಲ್ಲಿರುವ ಮತ್ತೊಂದು ಅಪಾರ್ಟ್ಮೆಂಟ್ ಸಂಕೀರ್ಣದ ನೆಲಮಾಳಿಗೆಯ ಕೋಣೆಯಲ್ಲಿ ಅವರು ತನ್ನ ಮಕ್ಕಳು ಮತ್ತು ಅತ್ತೆಯೊಂದಿಗೆ ವಾಸಿಸುತ್ತಾರೆ. ವೀರ ಸ್ವಾಮಿಯ ಭಾವಚಿತ್ರವನ್ನು ಅವರ ಮನೆಯ ವಸ್ತುಗಳಿಂದ ತುಂಬಿದ ಕೋಣೆಯ ಒಂದು ಸಣ್ಣ ಮೇಜಿನ ಮೇಲೆ ಇರಿಸಲಾಗಿದೆ, ಅವುಗಳಲ್ಲಿ ಅನೇಕವು ಇತರರು ನೀಡಿದ್ದು ಅಥವಾ ಅವರು ಬೇಡವೆಂದು ಎಸೆದಿದ್ದು.

ಮನೆಯ ಒಳಗೆ ಜಾಗ ಸಾಕಾಗದ ಕಾರಣ ಕುಟುಂಬದ ಕೆಲವು ವಸ್ತುಗಳನ್ನು ಕೋಣೆಯ ಹೊರಗೆ, ಪಾರ್ಕಿಂಗ್‌ ಜಾಗದ ಒಂದು ಮೂಲೆಯಲ್ಲಿ ಇರಿಸಲಾಗಿದೆ. ಹೊರಗೆ ಇರಿಸಲಾದ ಹೊಲಿಗೆ ಯಂತ್ರದ ಮೇಲೆ ಬಟ್ಟೆ ಮತ್ತು ಕಂಬಳಿಗಳನ್ನು ರಾಶಿ ಹಾಕಲಾಗಿದೆ. ಭಾಗ್ಯಲಕ್ಷ್ಮಿ ಹೊಲಿಗೆ ಯಂತ್ರದ ಕತೆಯನ್ನು ಹೇಳುತ್ತಾ, “ನಾನು 2014ರಲ್ಲಿ ಟೈಲರಿಂಗ್‌ ಕೋರ್ಸಿಗೆ ಸೇರಿಕೊಂಡೆ. ಹಾಗೂ ಕೆಲವು ಸಮಯದವರೆಗೆ ರವಿಕೆ ಹಾಗೂ ಬೇರೆ ಬಟ್ಟೆಗಳನ್ನು ಹೊಲಿಯುತ್ತಿದ್ದೆ.” ಒಳಗೆ ಮಲಗಲು ಎಲ್ಲರಿಗೂ ಸಾಕಷ್ಟು ಸ್ಥಳಾವಕಾಶವಿಲ್ಲದ ಕಾರಣ, ಗಂಡು  ಮಕ್ಕಳಾದ ಮಾಧವ್ ಮತ್ತು ಜಗದೀಶ್ ಕೋಣೆಯ ಒಳಗೆ ಮಲಗಿದರೆ ಭಾಗ್ಯಲಕ್ಷ್ಮಿ ಮತ್ತು ರಾಜೇಶ್ವರಿ ಹೊರಗೆ ಪ್ಲಾಸ್ಟಿಕ್ ಶೀಟುಗಳು ಮತ್ತು ಚಾಪೆಗಳ ಮೇಲೆ ಮಲಗುತ್ತಾರೆ. ಅಡುಗೆಮನೆ ಕಟ್ಟಡದ ಮತ್ತೊಂದು ಭಾಗದಲ್ಲಿದೆ. ಇದು ಪ್ಲಾಸ್ಟಿಕ್ ಶೀಟುಗಳಿಂದ ಸುತ್ತುವರೆದಿರುವ ಸಣ್ಣ ಮತ್ತು ಕಳಪೆ ಬೆಳಕಿನ ಸ್ಥಳವಾಗಿದೆ.

ಅಪಾರ್ಟ್ಮೆಂಟ್ ಸಮುಚ್ಚಯವನ್ನು ಸ್ವಚ್ಛಗೊಳಿಸುವ ಮೂಲಕ ಭಾಗ್ಯಲಕ್ಷ್ಮಿ 5,000 ರೂ. ಗಳಿಸುತ್ತಾರೆ. "ನಾನು [ಸಹ] ಅಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡುತ್ತೇನೆ, ಇದರಿಂದ ನಾನು ನನ್ನ ಮಕ್ಕಳಿಗೆ ಅವರ ಓದಿಗೆ ಸಹಾಯ ಮಾಡಬಲ್ಲೆ." ತನಗೆ 4 ಲಕ್ಷ ರೂಪಾಯಿಗಳ ಸಾಲವಿರುವುದಾಗಿ ಹೇಳುವ ಅವರು, “ಪ್ರತಿ ತಿಂಗಳು 8,000 ರೂಪಾಯಿಗಳನ್ನು ಸಾಲಕ್ಕೆ ಕಟ್ಟುತ್ತೇನೆ.” ಎನ್ನುತ್ತಾರೆ.

ಕುಟುಂಬವು ನೆಲಮಹಡಿಯಲ್ಲಿರುವ ಕಟ್ಟಡದ ವಾಣಿಜ್ಯ ವಿಭಾಗದ ಕಾರ್ಮಿಕರೊಂದಿಗೆ ಶೌಚಾಲಯವನ್ನು ಹಂಚಿಕೊಳ್ಳುತ್ತದೆ. "ನಾವು ಇದನ್ನು ಹಗಲಿನಲ್ಲಿ ಬಳಸುವುದು ವಿರಳ. ಪುರುಷರು ನಿರಂತರವಾಗಿ ಬಂದು ಹೋಗುತ್ತಿರುತ್ತಾರೆ," ಎಂದು ಅವರು ಹೇಳುತ್ತಾರೆ. ಅವರು ಶೌಚಾಲಯವನ್ನು ಸ್ವಚ್ಛಗೊಳಿಸಲು ಹೋಗುವ ದಿನಗಳಲ್ಲಿ, "ನನ್ನ ಗಂಡನನ್ನು ಕೊಂದ ಮ್ಯಾನ್ ಹೋಲ್‌ನಲ್ಲಿನ ದುರ್ವಾಸನೆಯ ಬಗ್ಗೆ ಮಾತ್ರ ನಾನು ಯೋಚಿಸಬಲ್ಲೆ," ಎಂದು ಅವರು ಹೇಳುತ್ತಾರೆ. "ಅವರು ನನಗೆ ಹೇಳಿದ್ದರೆ ಚೆನ್ನಾಗಿತ್ತು- ಆ ಕೆಲಸ ಮಾಡಲು ನಾನು ಅವರಿಗೆ ಅವಕಾಶ ಕೊಡುತ್ತಿರಲಿಲ್ಲ. ಆ ಮೂಲಕ ಅವರು ಈಗ ಜೀವಂತವಾಗಿರುತ್ತಿದ್ದರು, ಮತ್ತೆ ನಾನು ಈ ನೆಲಮಾಳಿಗೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ."

ಇದು ರಂಗ್‌ ದೇ ಅನುದಾನ ಬೆಂಬಲಿತ ವರದಿ.

ಅನುವಾದ: ಶಂಕರ. ಎನ್. ಕೆಂಚನೂರು

Amrutha Kosuru

Amrutha Kosuru is a 2022 PARI Fellow. She is a graduate of the Asian College of Journalism and lives in Visakhapatnam.

Other stories by Amrutha Kosuru
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru