"ಒಂದು ವರ್ಷದಲ್ಲಿ ನಮ್ಮ ಅನೇಕ ಜಾನುವಾರುಗಳು ಚಿರತೆಗಳಿಗೆ ಬಲಿಯಾಗುತ್ತವೆ. ಅವು ರಾತ್ರಿಯಲ್ಲಿ ಬಂದು ಕುರಿ, ಮೇಕೆಗಳನ್ನು ಎತ್ತಿಕೊಂಡು ಹೋಗುತ್ತವೆ" ಎಂದು ಕುರಿಪಾಲಕ ಗೌರ್ ಸಿಂಗ್ ಠಾಕೂರ್ ಹೇಳುತ್ತಾರೆ. ಸ್ಥಳೀಯ ಭುಟಿಯಾ ನಾಯಿಯಾದ ಶೇರೂ ಸಹ ಅವುಗಳನ್ನು ದೂರವಿಡಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.
ಹಿಮಾಲಯದ ಗಂಗೋತ್ರಿ ಪರ್ವತಶ್ರೇಣಿಯ ಪರ್ವತದ ಮೇಲೆ ಅವರು ನಮ್ಮೊಂದಿಗೆ ಮಾತನಾಡುತ್ತಿದ್ದರು. ಅವರು ಕಾಯುತ್ತಿದ್ದ ಜಾನುವಾರುಗಳ ಹಿಂಡು ಉತ್ತರಕಾಶಿ ಜಿಲ್ಲೆಯ ಸೌರಾ ಗ್ರಾಮದ ಸುತ್ತಮುತ್ತಲಿನ ಏಳು ಕುಟುಂಬಗಳಿಗೆ ಸೇರಿದವು. ಗೌರ್ ಸಿಂಗ್ 2,000 ಮೀಟರ್ ಕೆಳಗೆ ಇರುವ ಅದೇ ಹಳ್ಳಿಗೆ ಸೇರಿದವರು. ಅವರು ವರ್ಷದಲ್ಲಿ ಒಂಬತ್ತು ತಿಂಗಳವರೆಗೆ ಜಾನುವಾರುಗಳನ್ನು ನೋಡಿಕೊಳ್ಳುವ ಒಪ್ಪಂದದಲ್ಲಿದ್ದಾರೆ. ಮಳೆ ಅಥವಾ ಹಿಮ, ಪರಿಸ್ಥಿತಿ ಯಾವುದೇ ಇರಲಿ ಅವರು ಕುರಿಗಳನ್ನು ಮೇಯಿಸುತ್ತಾ, ಒಟ್ಟುಗೂಡಿಸುತ್ತಾ ಮತ್ತು ಎಣಿಸುತ್ತಾ ಅಲ್ಲಿರಬೇಕಾಗುತ್ತದೆ.
"ಇಲ್ಲಿ ಸರಿಸುಮಾರು 400 ಕುರಿಗಳು ಮತ್ತು 100 ಮೇಕೆಗಳಿವೆ" ಎಂದು ಇನ್ನೊಬ್ಬ ಕುರಿಪಾಲಕ 48 ವರ್ಷದ ಹರ್ದೇವ್ ಸಿಂಗ್ ಠಾಕೂರ್ ಪರ್ವತದ ಮೇಲೆ ಚದುರಿದ ಹಿಂಡನ್ನು ನೋಡುತ್ತಾ ಹೇಳುತ್ತಾರೆ. "ಇನ್ನೂ ಹೆಚ್ಚು ಇರಬಹುದು," ಎಂದು ಅವರು ಮುಂದುವರೆದು ಹೇಳುತ್ತಾರೆ, ನಿಖರವಾದ ಸಂಖ್ಯೆಯ ಬಗ್ಗೆ ಸ್ವಲ್ಪ ಅನಿಶ್ಚಿತತೆಯಿತ್ತು. ಹರ್ದೇವ್ ಕಳೆದ 15 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ. "ಕೆಲವು ಕುರಿಪಾಲಕರು ಮತ್ತು ಸಹಾಯಕರು ಎರಡು ವಾರಗಳ ಕಾಲ ಬಂದು ಹಿಂದಿರುಗಿ ಹೋಗುತ್ತಾರೆ, ನನ್ನಂತಹ ಕೆಲವರು ಅಲ್ಲಿಯೇ ಇರುತ್ತಾರೆ" ಎಂದು ಅವರು ವಿವರಿಸುತ್ತಾರೆ.
ಅದು ಅಕ್ಟೋಬರ್ ತಿಂಗಳು, ಮತ್ತು ಉತ್ತರಾಖಂಡದ ಗರ್ವಾಲ್ ಹಿಮಾಲಯದ ಗಂಗೋತ್ರಿ ಶ್ರೇಣಿಯ ಹುಲ್ಲುಗಾವಲಿನ 'ಚುಲಿ ಟಾಪ್' ಎಂಬ ಹುಲ್ಲುಗಾವಲಿನ ಮೇಲೆ ಕೊರೆಯುವ ಕೊರೆಯುವ ಚಳಿ ಬೀಸುತ್ತಿತ್ತು. ನೂಕುನುಗ್ಗಲು ಮಾಡುವ ಪ್ರಾಣಿಗಳ ನಡುವೆ ಚಲಿಸುವ ಪುರುಷರು ದೇಹಕ್ಕೆ ಕಂಬಳಿಯನ್ನು ಸುತ್ತಿಕೊಂಡಿದ್ದಾರೆ. ಇದು ಉತ್ತಮ ಹುಲ್ಲುಗಾವಲು, ಕುರಿಪಾಲಕರು ಹೇಳುತ್ತಾರೆ, ಎತ್ತರದ ಹಿಮದ ದಂಡೆಯಲ್ಲಿ ಹುಟ್ಟುವ ತೆಳುವಾದ ತೊರೆಯು ಪ್ರಾಣಿಗಳಿಗೆ ಖಚಿತವಾದ ನೀರಿನ ಮೂಲವಾಗಿದೆ. ಅಲ್ಲಿಂದ ಇಳಿದು ಕಲ್ಲಿನ ಬಿರುಕಿನ ಮೂಲಕ ಹಾಯುತ್ತದೆ, ಭಾಗೀರಥಿಯ ಉಪನದಿಯಾದ ಭಿಲಂಗನ ನದಿಗೆ 2,000 ಮೀಟರಿಗಿಂತಲೂ ಹೆಚ್ಚು ಕೆಳಗೆ ಹೋಗಿ ತಲುಪುತ್ತದೆ.









