ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಎಲ್ಲಾ ಚಿತ್ರಗಳನ್ನು ಪಿ. ಸಾಯಿನಾಥ್ ಅವರು 1993 ರಿಂದ 2002 ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.

ಸ್ವಚ್ಛತೆ!

ಆಂಧ್ರಪ್ರದೇಶದ ವಿಜಯನಗರಂನಲ್ಲಿ, ಈ ವೃದ್ಧೆ ತನ್ನ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಒಂದೂ ಕಸವಿರದಂತೆ ಸ್ವಚ್ಛವಾಗಿರಿಸಿಕೊಳ್ಳುತ್ತಾರೆ. ಇದು ಮನೆಕೆಲಸ - ಮತ್ತು 'ಮಹಿಳೆಯರ ಕೆಲಸ' ಕೂಡ. ಆದರೆ ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ‘ಸ್ವಚ್ಛಗೊಳಿಸುವ’ ಕೆಲಸವನ್ನು ಹೆಚ್ಚಾಗಿ ಮಹಿಳೆಯರೇ ಮಾಡುತ್ತಾರೆ. ಮತ್ತು ಅವರು ಈ ಕೆಲಸದಲ್ಲಿ ಕಡಿಮೆ ಹಣ, ಹೆಚ್ಚು ಜನರ ಕೋಪವನ್ನು ಹೊರಬೇಕಾಗುತ್ತದೆ. ರಾಜಸ್ಥಾನದ ಜನರು ಇಂತಹ ಪರಿಸ್ಥಿತಿಗಳನ್ನು ಸ್ವಲ್ಪ ಹೆಚ್ಚು ಎದುರಿಸಬೇಕಾಗುತ್ತದೆ, ಈ ಮಹಿಳೆಯಂತೆ. ಆಕೆ ದಲಿತರು. ಈ ಮಹಿಳೆ ಕೈಯಿಂದ ಕಸ ಗುಡಿಸುತ್ತಾರೆ ಮತ್ತು ಜನರ ಮನೆಗಳಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ. ರಾಜಸ್ಥಾನದ ಸಿಕರ್‌ನಲ್ಲಿ ಸುಮಾರು 25 ಮನೆಗಳಲ್ಲಿ ಈಕೆ ಪ್ರತಿದಿನ ಈ ಕೆಲಸವನ್ನು ಮಾಡುತ್ತಾರೆ.

ಪ್ರತಿಯಾಗಿ, ಅವರು ಪ್ರತಿ ಮನೆಯಿಂದ ದಿನಕ್ಕೆ ಒಂದು ರೊಟ್ಟಿಯನ್ನು ಕೂಲಿಯಾಗಿ ಪಡೆಯುತ್ತಾರೆ. ತಿಂಗಳಿಗೊಮ್ಮೆ ಸ್ವಲ್ಪ ಮನೆಯವರು ಒಂದಿಷ್ಟು ಉದಾರಿಯಿದ್ದರೆ ಒಂದಿಷ್ಟು ರೂಪಾಯಿ ಕೊಟ್ಟರೂ ಕೊಡಬಹುದು. ಒಂದು ಮನೆಯಿಂದ ಹತ್ತು ರೂ. ಅಧಿಕಾರಿಗಳು ಅವರನ್ನು 'ಭಂಗಿ' ಎಂದು ಕರೆಯುತ್ತಾರೆ, ಆದರೆ ಅವರು ತನ್ನನ್ನು 'ಮೆಹ್ತರ್' ಎಂದು ಕರೆದುಕೊಳ್ಳುತ್ತಾರೆ. ಈ ಜಾತಿ ಗುಂಪುಗಳಿಗೆ ಸೇರಿದ ಹೆಚ್ಚಿನ ಜನರು ತಮ್ಮನ್ನು 'ಬಾಲ್ಮೀಕಿ' ಎಂದು ಕರೆದುಕೊಳ್ಳುತ್ತಾರೆ.

ಆಕೆ ಮಾನವ ಮಲವನ್ನು ತಲೆಯ ಮೇಲೆ ಹೊತ್ತಿದ್ದಾರೆ. ನಾಗರಿಕ ಸಮಾಜ ಇದನ್ನು ರಾತ್ರಿಯ ಮಣ್ಣು ಎಂದು ಕರೆಯುತ್ತದೆ. ಅವರು ಭಾರತದ ಅತ್ಯಂತ ದುರ್ಬಲ ಮತ್ತು ಶೋಷಿತ ನಾಗರಿಕರಲ್ಲಿ ಒಬ್ಬರು. ಮತ್ತು ಈ ಮಹಿಳೆಯಂತಹ ಸಾವಿರಾರು ಜನರು ರಾಜಸ್ಥಾನದ ಸಿಕಾರ್‌ ಒಂದರಲ್ಲೇ ಇದ್ದಾರೆ.

ಭಾರತದಲ್ಲಿ ಎಷ್ಟು ಮಲ ಹೊರುವವರಿದ್ದಾರೆ? ನಮಗೆ ಗೊತ್ತಿಲ್ಲ. 1971ರ ಜನಗಣತಿಯವರೆಗೂ, ಇದನ್ನು ಪ್ರತ್ಯೇಕ ಉದ್ಯೋಗ ಎಂದು ಪಟ್ಟಿ ಮಾಡಲಾಗಿಲ್ಲ. ‘ರಾತ್ರಿಯ ಮಣ್ಣನ್ನು’ಸ್ವಚ್ಛಗೊಳಿಸುವ ಕೂಲಿಕಾರ್ಮಿಕರು ಅಸ್ತಿತ್ವದಲ್ಲಿದ್ದಾರೆಂದು ಕೆಲವು ರಾಜ್ಯಗಳ ಸರಕಾರಗಳು ನಂಬಲೂ ಸಿದ್ಧವಿಲ್ಲ. ಆದರೂ, ಅಸ್ತಿತ್ವದಲ್ಲಿರುವ ಕೆಲವು ದೋಷಪೂರಿತ, ಅರ್ಧ-ಬೆಂದ ಮಾಹಿತಿಯು ಸುಮಾರು ಒಂದು ಮಿಲಿಯನ್ ದಲಿತರು ಮಲ ಹೊರುವ ಕೆಲಸ ಮಾಡುತ್ತಾರೆ ಎಂದು ಸೂಚಿಸುತ್ತದೆ. ವಾಸ್ತವಿಕ ಅಂಕಿ ಅಂಶವು ಇದಕ್ಕಿಂತ ಹೆಚ್ಚಿರಬಹುದು. ‘ರಾತ್ರಿಯ ಮಣ್ಣಿಗೆ’ಸಂಬಂಧಿಸಿದ ಕೆಲಸವನ್ನು ಹೆಚ್ಚಾಗಿ ಮಹಿಳೆಯರೇ ಮಾಡುತ್ತಾರೆ.

ವೀಡಿಯೊ ನೋಡಿ: '[ಮಲ ಹೊರುವುದು] ಜಾತಿ ವ್ಯವಸ್ಥೆ ಮತ್ತು ನಮ್ಮ ಜಾತಿ ಸಮಾಜಗಳು ಮಾನವರ ಮೇಲೆ ಎಸಗುವ ಅರ್ಥಹೀನ, ಅವಮಾನಕರ, ಘನತೆ-ಕೊಲ್ಲುವ ಹೇರಿಕೆಯಾಗಿದೆ'

ಈ ಕೆಲಸದಿಂದಾಗಿ ಅವರು ಜಾತಿ ಪದ್ಧತಿಯ ಅತ್ಯಂತ ಕೆಟ್ಟ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಅವರು ತಮ್ಮ ಜೀವನದ ಪ್ರತಿ ತಿರುವಿನಲ್ಲಿಯೂ ಅಸ್ಪೃಶ್ಯತೆ ಎದುರಿಸಬೇಕಾಗುತ್ತದೆ. ಅವರ ನೆಲೆಗಳು ಇತರರಿಗಿಂತ ಸಂಪೂರ್ಣವಾಗಿ ಭಿನ್ನವಾಗಿವೆ. ಈ ನೆಲೆಗಳಲ್ಲಿ ಹೆಚ್ಚಿನವು ಗ್ರಾಮೀಣ ಪಟ್ಟಣ ಮತ್ತು ನಗರದ ನಡುವೆ ಎಲ್ಲೋ ನೆಲೆಗೊಂಡಿವೆ. ಹಳ್ಳಿಗಳು ಯಾವ ಯೋಜನೆಯೂ ಇಲ್ಲದೆ ‘ಪಟ್ಟಣʼಗಳಾಗಿ ಮಾರ್ಪಟ್ಟಿವೆ. ಆದರೆ ಅಂತಹ ಕೆಲವು ಕಾಲೋನಿಗಳು ಮಹಾನಗರಗಳಲ್ಲಿಯೂ ಇವೆ.

1993ರಲ್ಲಿ, ಕೇಂದ್ರ ಸರ್ಕಾರವು "ಸಫಾಯಿ ಕರ್ಮಚಾರಿಗಳ ಉದ್ಯೋಗ ಮತ್ತು ಒಣ ಶೌಚಾಲಯಗಳ ನಿರ್ಮಾಣ (ನಿಷೇಧ) ಕಾಯಿದೆ" ಅನ್ನು ಅಂಗೀಕರಿಸಿತು. ಈ ಕಾನೂನು ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದೆ. ಅನೇಕ ರಾಜ್ಯಗಳು ತಮ್ಮಲ್ಲಿ ಈ ಪದ್ಧತಿ ಇಲ್ಲ ಎಂದು ಹೇಳಲಾರಂಭಿಸಿದವು, ಅಥವಾ ಆ ಕುರಿತು ಮೌನ ವಹಿಸಿವೆ. ಆದರೆ ಅವರ ಪುನರ್ವಸತಿಗಾಗಿ ಹಣ ಅಸ್ತಿತ್ವದಲ್ಲಿದೆ ಮತ್ತು ರಾಜ್ಯ ಸರ್ಕಾರಗಳಿಗೆ ಲಭ್ಯವಿದೆ. ಆದರೆ ನೀವು ಯಾವುದರ ಅಸ್ತಿತ್ವವನ್ನು ನಿರಾಕರಿಸುತ್ತೀರೋ ಅದರ ವಿರುದ್ಧ ಹೇಗೆ ಹೋರಾಡುತ್ತೀರಿ? ಕೆಲವು ರಾಜ್ಯಗಳಲ್ಲಿ ಈ ಕಾಯಿದೆ ಅಂಗೀಕಾರಕ್ಕೆ ಕ್ಯಾಬಿನೆಟ್ ಮಟ್ಟದಲ್ಲಿ ಪ್ರತಿರೋಧವೂ ಶುರುವಾಗಿತ್ತು.

ಅನೇಕ ಪುರಸಭೆಗಳಲ್ಲಿ, ಮಹಿಳಾ 'ಸಫಾಯಿ ಕರ್ಮಾಚಾರಿ'ಗಳಿಗೆ ಕಡಿಮೆ ಸಂಬಳ ನೀಡಲಾಗುತ್ತದೆ, ಅವರು ತಮ್ಮ ಅಗತ್ಯಗಳನ್ನು ಪೂರೈಸಲು ಪ್ರತ್ಯೇಕವಾಗಿ 'ರಾತ್ರಿ ಮಣ್ಣು' ಅಂದರೆ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಕೆಲಸವನ್ನು ಮಾಡುತ್ತಾರೆ. ಸಾಮಾನ್ಯವಾಗಿ ಪುರಸಭೆಗಳು ತಿಂಗಳಿಗೆ ಸರಿಯಾಗಿ ಸಂಬಳ ನೀಡುವುದಿಲ್ಲ. ಈ ರೀತಿಯ ವರ್ತನೆಯ ವಿರುದ್ಧ, ಹರಿಯಾಣದ ನೈರ್ಮಲ್ಯ ಕಾರ್ಮಿಕರು 1996ರಲ್ಲಿ ದೊಡ್ಡ ಪ್ರತಿಭಟನೆಯನ್ನು ಆಯೋಜಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ರಾಜ್ಯ ಸರ್ಕಾರವು ಸುಮಾರು 700 ಮಹಿಳಾ ಕಾರ್ಮಿಕರನ್ನು ಅಗತ್ಯ ಸೇವೆಗಳ ಸಂರಕ್ಷಣಾ ಕಾಯ್ದೆ (ಎಸ್ಮಾ) ಅಡಿಯಲ್ಲಿ ಸುಮಾರು 70 ದಿನಗಳವರೆಗೆ ವಜಾಗೊಳಿಸಿತು. ಧರಣಿ ನಿರತರ ಒಂದೇ ಬೇಡಿಕೆಯೆಂದರೆ: ನಮಗೆ ಸಕಾಲಕ್ಕೆ ಸಂಬಳ ನೀಡಬೇಕು.

ಈ ಕೆಲಸಕ್ಕೆ ಸಾಮಾಜಿಕವಾಗಿ ವ್ಯಾಪಕ ಒಪ್ಪಿಗೆ ಸಿಕ್ಕಿದೆ. ಮತ್ತು ಅದನ್ನು ಕೊನೆಗೊಳಿಸಲು ಸಾಮಾಜಿಕ ಸುಧಾರಣೆ ಅಗತ್ಯ. 1950-60ರ ದಶಕದಲ್ಲಿ ಕೇರಳ ಯಾವುದೇ ಕಾನೂನು ಇಲ್ಲದೆಯೂ ‘ರಾತ್ರಿ ಮಣ್ಣು’ಹೊರುವ ಕೆಲಸದಿಂದ ಮುಕ್ತಿ ಪಡೆಯಿತು. ಇದಕ್ಕಾಗಿ ಸಾರ್ವಜನಿಕ ಜಾಗೃತಿ ಅಗತ್ಯವಾಗಿತ್ತು ಮತ್ತು ಈಗಲೂ ಇದೆ.

PHOTO • P. Sainath
PHOTO • P. Sainath

ಅನುವಾದ: ಶಂಕರ. ಎನ್. ಕೆಂಚನೂರು

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru