ಸುಖರಾಣಿ ಸಿಂಗ್ ಅವರಿಗೆ ಕಾಡಿಗೆ ಹೋಗಿ ಮಹುವಾ ಹೂವುಗಳನ್ನು ಸಂಗ್ರಹಿಸದಿರುವ ಒಂದು ವರ್ಷವೂ ನೆನಪಿಲ್ಲ. 45 ವರ್ಷದ ಸುಖರಾಣಿ ಹೇಳುತ್ತಾರೆ, “ನಾನು ಚಿಕ್ಕವಳಿದ್ದಾಗ, ನನ್ನ ತಾಯಿಯೊಂದಿಗೆ ಕಾಡಿಗೆ ಹೋಗುತ್ತಿದ್ದೆ. ಈಗ ನಾನು ನನ್ನ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದೇನೆ." ಅವರು ಮಹುವಾವನ್ನು ಸಂಗ್ರಹಿಸಲು ಬೆಳಿಗ್ಗೆ 5 ಗಂಟೆಗೆ ಮನೆಯಿಂದ ಹೊರಡುತ್ತಾರೆ. ಮಹುವಾ ಮುಂಜಾನೆಯೇ ಮರದಿಂದ ಉದುರುಲು ಆರಂಭವಾಗುತ್ತದೆ. ಅವರು ಮಧ್ಯಾಹ್ನದವರೆಗೂ ಅಲ್ಲಿಯೇ ಇರುತ್ತಾರೆ ಮತ್ತು ಹೆಚ್ಚುತ್ತಿರುವ ಬಿಸಿಲಿನಲ್ಲೇ ಉದುರುವ ಮಹುವಾ ಹೂಗಳನ್ನು ಸಂಗ್ರಹಿಸುತ್ತಾರೆ. ಮನೆಗೆ ತಲುಪಿದ ನಂತರ, ಅವರು ಅವುಗಳನ್ನು ಬಿಸಿಲಿನಲ್ಲಿ ಒಣಗಲು ನೆಲದ ಮೇಲೆ ಹರಡುತ್ತಾರೆ.

ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಮೀಪದಲ್ಲಿ ವಾಸಿಸುವ ಸುಖರಾಣಿಯವರಂತಹ ಸಣ್ಣ ರೈತರಿಗೆ, ಮಹುವಾ ಹೂವುಗಳು ಅವರ ಖಚಿತ ಆದಾಯದ ಮೂಲವಾಗಿದೆ. ಸುಖರಾಣಿ ಮಾನ್ಪುರ ಬ್ಲಾಕ್‌ನ ಅವರ ಹಳ್ಳಿ ಪರಸಿಯಿಂದ ಸುಮಾರು 30 ಕಿಮೀ ದೂರದಲ್ಲಿರುವ ಉಮಾರಿಯಾದ ಬಜಾರಿನಲ್ಲಿ ಮಾರಾಟ ಮಾಡುವ ಮೂಲಕ ಒಂದು ಕಿಲೋಗೆ 40 ರೂ. ಗಳಿಸುತ್ತಾರೆ ಅವರು ಒಂದು ಸೀಸನ್‌ನಲ್ಲಿ 200 ಕೆಜಿಯಷ್ಟು ಮಹುವಾವನ್ನು ಸಂಗ್ರಹಿಸುತ್ತಾರೆ. ಈ ಮಹುವಾ ಋತುವು ಏಪ್ರಿಲ್ ತಿಂಗಳಲ್ಲಿ 2-3 ವಾರಗಳವರೆಗೆ ಇರುತ್ತದೆ. ಸುಖರಾಣಿ ಹೇಳುತ್ತಾರೆ, "ಮಹುವಾ ಮರವು ನಮಗೆ ಅಮೂಲ್ಯವಾದುದು." ಮಹುವಾ ಹೂವುಗಳ ಹೊರತಾಗಿ, ಅದರ ಹಣ್ಣುಗಳು ಮತ್ತು ಮರದ ತೊಗಟೆಯು ಅವುಗಳ ಪೌಷ್ಟಿಕಾಂಶ ಮತ್ತು ಔಷಧೀಯ ಗುಣಗಳಿಗಾಗಿ ಮೌಲ್ಯಯುತವಾಗಿವೆ.

ಮಹುವಾ ಹಂಗಾಮಿನ ಸಮಯದಲ್ಲಿ, ಸುಖರಾಣಿ ಮಧ್ಯಾಹ್ನ 1 ಗಂಟೆಗೆ ಮನೆಗೆ ಹಿಂದಿರುಗಿ ಅಡುಗೆ ಮಾಡುತ್ತಾರೆ, ಅದು ತನ್ನ ಪತಿ ಸೇರಿದಂತೆ ತನ್ನ ಐದು ಮಕ್ಕಳಿಗೆ ಆಹಾರವನ್ನು ನೀಡುತ್ತದೆ. ನಂತರ 3 ಗಂಟೆಯ ಸುಮಾರಿಗೆ ಅವರು ತನ್ನ ಪತಿಯೊಂದಿಗೆ ಗೋಧಿ ಬೆಳೆ ಕೊಯ್ಲು ಮಾಡುವುದು ಮತ್ತು ಸಂಗ್ರಹಿಸಲು ಹೋಗುತ್ತಾರೆ. ಗೊಂಡ ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಖರಾಣಿ ಮತ್ತು ಆಕೆಯ ಪತಿ, ಅವರ ಹೆಸರಿನಲ್ಲಿ ನಾಲ್ಕು ಬಿಘಾ ಭೂಮಿಯನ್ನು (ಸುಮಾರು ಒಂದು ಎಕರೆ) ಹೊಂದಿದ್ದು, ಅಲ್ಲಿ ಅವರು ಮಳೆನೀರಿನ ಸಹಾಯದಿಂದ ಗೋಧಿಯನ್ನು ಬೆಳೆಯುತ್ತಾರೆ. ಸಾಮಾನ್ಯವಾಗಿ ಈ ಧಾನ್ಯವು ಕುಟುಂಬದ ಬಳಕೆಗಾಗಿ ಮಾತ್ರ ಸಾಕಾಗುತ್ತದೆ.

Left: Mahua flowers ready to drop off the trees near Parasi village. Right: Sukhrani Singh near her mahua trees in the buffer zone of Bandhavgarh Tiger Reserve
PHOTO • Courtesy: Pritam Kempe
Left: Mahua flowers ready to drop off the trees near Parasi village. Right: Sukhrani Singh near her mahua trees in the buffer zone of Bandhavgarh Tiger Reserve
PHOTO • Priti David

ಎಡ: ಪರಸಿ ಗ್ರಾಮದ ಬಳಿ ಇರುವ ಮಹುವಾ ಮರ ಹೂವರಳಿಸಿರುವುದು. ಬಲ: ಬಾಂಧವಗಢ ಹುಲಿ ರಕ್ಷಿತಾರಣ್ಯದ ಬಫರ್ ವಲಯದಲ್ಲಿರುವ ತನ್ನ ಮಹುವಾ ಮರಗಳ ಬಳಿ ಸುಖರಾಣಿ ಸಿಂಗ್

ಪರಸಿ ಗ್ರಾಮದ ನಿವಾಸಿಯಾದ ಕುಂಬಾರ ಸುರ್ಜನ್ ಪ್ರಜಾಪತಿ ಕೂಡ ಕಾಡಿಗೆ ಹೋಗಿ ಮಾಹುವಾವನ್ನು ಸಂಗ್ರಹಿಸುತ್ತಾನೆ. ಕುಂಬಾರ ಜಾತಿಗೆ ಸೇರಿದ (ಉಮರಿಯಾದಲ್ಲಿ ಒಬಿಸಿ ವರ್ಗವೆಂದು ಪಟ್ಟಿ ಮಾಡಲಾಗಿದೆ) 60 ವರ್ಷದ ಸುರ್ಜನ್ ಹೇಳುತ್ತಾರೆ, “ಒಬ್ಬ ವ್ಯಾಪಾರಿ ಹಳ್ಳಿಗೆ ಬಂದು ನನ್ನಿಂದ ಮಹುವಾ ಹೂವನ್ನು ಖರೀದಿಸುತ್ತಾನೆ ಮತ್ತು ಕೆಲವೊಮ್ಮೆ ನಾನು ಅದನ್ನು ಹಾತ್‌(ಸ್ಥಳೀಯ ಮಾರುಕಟ್ಟೆ)ನಲ್ಲಿ ಮಾರಾಟ ಮಾಡುತ್ತೇನೆ. ಇದು (ಮಹುವಾ) ಅತ್ಯಂತ ಉಪಯುಕ್ತವಾದುದು. ಕೇವಲ ಮಣ್ಣಿನ ಮಡಿಕೆಗಳನ್ನು ಮಾರಿದ ಹಣದ ಸಹಾಯದಿಂದ ಜೀವನ ಸಾಗಲು ಸಾಧ್ಯವಿಲ್ಲ. ನಾನು ಮಧ್ಯಾಹ್ನ ಮನೆಗೆ ಹಿಂತಿರುಗಿ, ಕಠಿಣ ಪರಿಶ್ರಮದ ಕೆಲಸಗಳನ್ನು ಹುಡುಕುತ್ತಾ ಮತ್ತೆ ಹೊರಗೆ ಹೋಗುತ್ತೇನೆ. ಅವರ ಮನೆಯಲ್ಲಿ ಉಪ್ಪು ಅಥವಾ ಎಣ್ಣೆ ಖಾಲಿಯಾದಾಗ, ಕೊರತೆಯನ್ನು ನೀಗಿಸಲು ಅವರು ಕೆಲವು ಕಿಲೋ ಒಣ ಮಹುವಾ ಹೂಗಳನ್ನು ಮಾರುತ್ತಾರೆ.

ಉಮರಿಯಾದಲ್ಲಿ, ಸ್ಥಳೀಯ ಜನರು ಕಾಡಿನಲ್ಲಿ ಮರಗಳನ್ನು ಕಡಿಯುವ ಸಂದರ್ಭದಲ್ಲಿ ಮಹುವಾ ಮರವನ್ನು ಕಡಿಯುವುದು ಅಪರೂಪ ಎಂದು ಹೇಳುತ್ತಾರೆ. ಜಿಲ್ಲೆಯ ಬುಡಕಟ್ಟು ಸಮುದಾಯ, ಮರಗಳು ಬಹಳ ಮುಖ್ಯವಾಗಿದ್ದು, ಇವುಗಳಿರುವಂತಹ ಊರಿನಲ್ಲಿ ಯಾರೂ ಹಸಿವಿನಿಂದ ಸಾಯುವುದಿಲ್ಲ ಎಂದು ನಂಬುತ್ತಾರೆ. ಮರದ ಹಣ್ಣುಗಳು ಮತ್ತು ಹೂವುಗಳು ಆಹಾರ ಯೋಗ್ಯವಾಗಿದ್ದು, ಒಣಗಿದ ಮಹುವಾವನ್ನು ಹಿಟ್ಟಿನಂತೆ ಮಾಡಲಾಗುತ್ತದೆ ಮತ್ತು ಇದನ್ನು ಮದ್ಯ ಮಾಡಲು ಸಹ ಬಳಸಲಾಗುತ್ತದೆ.

ಮಧ್ಯಪ್ರದೇಶ, ಒರಿಸ್ಸಾ, ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶದಲ್ಲಿ ಹೇರಳವಾಗಿ ಕಂಡುಬರುವ ಮಹುವಾ ಮರ (ಮಧುಕಾ ಲಾಂಗಿಫೋಲಿಯಾ) ಈ ಪ್ರದೇಶಗಳ ಒಂದು ಪ್ರಮುಖ ಸಣ್ಣ ಅರಣ್ಯ ಉತ್ಪನ್ನವಾಗಿದೆ (MFP). ಭಾರತೀಯ ಬುಡಕಟ್ಟು ಸಹಕಾರಿ ಮಾರಾಟ ಅಭಿವೃದ್ಧಿ ಫೆಡರೇಶನ್ (TRIFED) ಪ್ರಕಾರ, ಮಧ್ಯಪ್ರದೇಶ, ಒಡಿಶಾ ಮತ್ತು ಆಂಧ್ರಪ್ರದೇಶದ ಬುಡಕಟ್ಟು ಕುಟುಂಬಗಳ 75%ಕ್ಕಿಂತಲೂ ಹೆಚ್ಚು ಜನರು ಮಹುವಾ ಹೂವುಗಳನ್ನು ಸಂಗ್ರಹಿಸಿ ವರ್ಷಕ್ಕೆ 5000 ರೂ.ಗಳ ತನಕ ಸಂಪಾದಿಸುತ್ತಾರೆ.

ಬಾಂಧವಗಢದ ಗಡಿಯಲ್ಲಿ ವಾಸಿಸುವ ಸಮುದಾಯಗಳಿಗೆ ಮಹುವಾ ಸಂಗ್ರಹಣೆಗೆ ಅರಣ್ಯದೊಳಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಮಹುವಾ ಮರಗಳಲ್ಲಿ ಏಪ್ರಿಲ್ ಆರಂಭದಲ್ಲಿ ಹೂವರಳಲು ಆರಂಭವಾಗುತ್ತದೆ

ವೀಡಿಯೊ ನೋಡಿ: 'ಈ ವರ್ಷ ಮಾಹುವಾ ಹೂವುಗಳು ಕಡಿಮೆ '

1537 ಚದರ ಕಿಲೋಮೀಟರ್‌ಗಳಷ್ಟು ವಿಸ್ತಾರದಲ್ಲಿರುವ ಬಾಂಧವ್‌ಗಢ ಹುಲಿ ರಕ್ಷಿತಾರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಸಮುದಾಯಗಳಿಗೆ ಹೋಳಿಯ ನಂತರ ಏಪ್ರಿಲ್ ಆರಂಭದಲ್ಲಿ ಮರಗಳಿಂದ ಮಹುವಾ ಹೂಗಳನ್ನು ಸಂಗ್ರಹಿಸಲೆಂದು ಅರಣ್ಯಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಹೆಚ್ಚಿನ ವಯಸ್ಕರು ಮಕ್ಕಳೊಂದಿಗೆ ಕಾಡಿಗೆ ಬರುತ್ತಾರೆ, ಅವರು ತುಲನಾತ್ಮಕವಾಗಿ ತ್ವರಿತವಾಗಿ ಮತ್ತು ಚುರುಕುತನದಿಂದ ಮಹುವಾ ಹೂ ಆರಿಸಿ ಬುಟ್ಟಿಗಳಲ್ಲಿ ಸಂಗ್ರಹಿಸುತ್ತಾರೆ.

ಕಾಡಿನಲ್ಲಿ ಪ್ರತಿಯೊಂದೆಡೆ 100-200 ಮೀಟರ್‌ಗಳವರೆಗೆ ಮರಗಳನ್ನು ಕಾಣಬಹುದು. ಹೂಬಿಡುವ ಋತುವಿನಲ್ಲಿ, ಪ್ರತಿಯೊಂದು ಮರವನ್ನು ಹಳೆಯ ಬಟ್ಟೆಗಳನ್ನು ಅದರ ಕೆಳಗಿನ ಕೊಂಬೆಗೆ ನೇತುಹಾಕುವ ಮೂಲಕ ಗುರುತಿಸಲಾಗುತ್ತದೆ. ಸುರ್ಜನ್ ವಿವರಿಸುತ್ತಾರೆ, “ಹಳ್ಳಿಯ ಪ್ರತಿಯೊಂದು ಕುಟುಂಬಕ್ಕೂ ಕೆಲವು ಮರಗಳನ್ನು ಹಂಚಲಾಗುತ್ತದೆ. ಈ ಹಂಚಿಕೆಗಳನ್ನು ತಲೆಮಾರುಗಳ ಹಿಂದೆ ಮಾಡಲಾಗಿದೆ." ಕೆಲವೊಮ್ಮೆ ಮರಗಳಿಂದ ಹೆಚ್ಚುವರಿ ಆದಾಯ ಪಡೆಯುವ ಜನರು ಅದರಲ್ಲಿ ಕೆಲವನ್ನು ಹೆಚ್ಚು ಅಗತ್ಯವಿರುವವರಿಗೆ ನೀಡುತ್ತಾರೆ ಎಂದು ಅವರು ಹೇಳುತ್ತಾರೆ.

2007ರಲ್ಲಿ ಬಾಂಧವಗಡವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು ಮತ್ತು ರಾಷ್ಟ್ರೀಯ ಉದ್ಯಾನವನವು ಪ್ರಸ್ತುತ ಕೋರ್ ಝೋನ್ ಆಗಿದ್ದು ಇಲ್ಲಿ ಯಾವುದೇ ಮಾನವ ಚಟುವಟಿಕೆ ನಿಷೇಧಿಸಲಾಗಿದೆ. ಜನರ ಪ್ರವೇಶವನ್ನು ಸೀಮಿತಗೊಳಿಸಲು ಸುತ್ತಲೂ ಬಫರ್ ವಲಯವನ್ನು ರಚಿಸಲಾಗಿದೆ. ಸುಖರಾಣಿಯವರ ಕುಟುಂಬವು ಅಂತಹ ಬುಡಕಟ್ಟು ರೈತ ಕುಟುಂಬಗಳಲ್ಲಿ ಒಂದಾಗಿದೆ, ಅವರ ಕೃಷಿ ಭೂಮಿಯು ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿತ್ತು, ನಂತರ ಅದರಲ್ಲಿ ಬಫರ್ ವಲಯವನ್ನು ರಚಿಸಲಾಯಿತು. ಕಳೆದೊಂದು ದಶಕದಿಂದ ಭೂಮಿಯನ್ನು ಬಂಜರು ಬಿಡಲಾಗಿದೆ ಎಂದು ಅವರು ಹೇಳುತ್ತಾರೆ. "ಕಾಡಿನಲ್ಲಿ ಯಾವುದೇ ಬೆಳೆ ಉಳಿದಿಲ್ಲ. ನಾವು ಕಾಡಿನಲ್ಲಿ ಬೆಳೆ ಬೆಳೆಯುವುದನ್ನು ನಿಲ್ಲಿಸಿದ್ದೇವೆ ಏಕೆಂದರೆ ಬೆಳೆಯನ್ನು ನೋಡಿಕೊಳ್ಳಲು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಕೋತಿಗಳು ಕಡಲೆ ಮತ್ತು ಬಟಾಣಿಯಂತಹ ದ್ವಿದಳ ಧಾನ್ಯಗಳನ್ನು ತಿನ್ನುತ್ತಿದ್ದವು.”

From the left: Durga Singh, Roshni Singh and Surjan Prajapati gathering mahua in the forest next to Parasi in Umaria district
PHOTO • Priti David
From the left: Durga Singh, Roshni Singh and Surjan Prajapati gathering mahua in the forest next to Parasi in Umaria district
PHOTO • Priti David
From the left: Durga Singh, Roshni Singh and Surjan Prajapati gathering mahua in the forest next to Parasi in Umaria district
PHOTO • Priti David

ಎಡದಿಂದ: ದುರ್ಗಾ ಸಿಂಗ್, ರೋಶ್ನಿ ಸಿಂಗ್ ಮತ್ತು ಸುರ್ಜನ್ ಪ್ರಜಾಪತಿ ಉಮರಿಯಾ ಜಿಲ್ಲೆಯ ಪರಸಿಯ ಪಕ್ಕದ ಕಾಡಿನಲ್ಲಿ ಮಹುವಾ ಹೂವನ್ನು ಸಂಗ್ರಹಿಸುತ್ತಾರೆ

ಬಾಂಧವಗಢ ಕೇವಲ ರಾಷ್ಟ್ರೀಯ ಉದ್ಯಾನವನವಾಗಿದ್ದಾಗ, ಬುಡಕಟ್ಟು ರೈತರು ಸುಗ್ಗಿಯ ಸಮಯದಲ್ಲಿ ಪ್ರಾಣಿಗಳ ಹೊಲಗಳನ್ನು ಪ್ರವೇಶಿಸುವುದನ್ನು ತಡೆಯಲು ಹೊಲಗಳ ಸುತ್ತ ತಾತ್ಕಾಲಿಕ ಬೇಲಿಯನ್ನು ನಿರ್ಮಿಸುತ್ತಿದ್ದರು, ಆದರೆ ಈಗ ಅದಕ್ಕೆ ಅನುಮತಿಯಿಲ್ಲ. ಈಗ ಅವರು ಮಹುವಾದಂತಹ ಸಣ್ಣ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಬಫರ್ ವಲಯದವರೆಗೆ ಮಾತ್ರ ಹೋಗುತ್ತಾರೆ. ಸುಖರಾಣಿ ಹೇಳುತ್ತಾರೆ, "ನಾವು ಬೆಳಕು ಹರಿಯುವ ಮೊದಲೇ ಮನೆಯಿಂದ ಹೊರಡುತ್ತೇವೆ, ಹಾಗಾಗಿ ನಾವೆಲ್ಲರೂ ಒಟ್ಟಿಗೆ ಹೋಗುತ್ತೇವೆ, ಏಕೆಂದರೆ ಏಕಾಂಗಿಯಾಗಿ ನಾವು ಹುಲಿಯನ್ನು ಎದುರಿಸುವುದು ಭಯ ತರಿಸುವ ವಿಷಯ." ಅವರು ಇದುವರೆಗೂ ಹುಲಿಯನ್ನು ತಾನು ಎದುರಿಸಿಲ್ಲವೆಂದು ದೃಢೀಕರಿಸಿದರೂ, ಅಂತಹದ್ದೊಂದು ದಿನ ಎದುರಾಗಬಹುದೆನ್ನುವ ಭಯ ಅವರಲ್ಲಿದೆ.

ಬೆಳಗಿನ ಜಾವ 5: 30ರ ಸುಮಾರಿಗೆ, ಸೂರ್ಯನ ಬೆಳಕು ಅರಣ್ಯವನ್ನು ತಲುಪುವ ಮೊದಲೇ, ಮಹುವಾ ಹೂ ಸಂಗ್ರಾಹಕರು ಮರದ ಕೆಳಗೆ ಒಣ ಎಲೆಗಳನ್ನು ದೂರಗೊಳಿಸುವ ಕೆಲಸದಲ್ಲಿ ತೊಡಗಿರುತ್ತಾರೆ. ಸುಖರಾಣಿಯವರ 18 ​​ವರ್ಷದ ಮಗಳು ರೋಶ್ನಿ ಸಿಂಗ್, "ಮಹುವಾ ಹೂವುಗಳು ಎಲೆಗಳಿಗಿಂತ ಹೆಚ್ಚು ತೂಕವಿರುತ್ತವೆ, ಆದ್ದರಿಂದ ನಾವು ಎಲೆಗಳನ್ನು ಗುಡಿಸಿ ತೆಗೆದಾಗ ಅವು ನೆಲದ ಮೇಲೆ ಬಿದ್ದಿರುತ್ತವೆ. ಆಗ ಅವುಗಳನ್ನು ಹೆಕ್ಕುವುದು ಸುಲಭ" ಎಂದು ವಿವರಿಸುತ್ತಾರೆ. ರೋಶ್ನಿ ತನ್ನ ಶಾಲಾ ಶಿಕ್ಷಣವನ್ನು 2020ರಲ್ಲಿ ಮುಗಿಸಿ ಕಾಲೇಜಿಗೆ ಸೇರುವ ಯೋಚನೆಯಲ್ಲಿದ್ದರು, ಆದರೆ ಕೋವಿಡ್ -19 ಹರಡುವಿಕೆಯಿಂದಾಗಿ ಅವರು ತನ್ನ ಯೋಜನೆಯನ್ನು ಮುಂದೂಡಬೇಕಾಯಿತು. 1400 ಜನಸಂಖ್ಯೆ ಹೊಂದಿರುವ ಪರಶಿಯಲ್ಲಿ, 23% ಜನಸಂಖ್ಯೆಯು ಬುಡಕಟ್ಟು ಸಮುದಾಯದವರಾಗಿದ್ದು, 2011ರ ಜನಗಣತಿಯ ಪ್ರಕಾರ, ಇಲ್ಲಿ ಸಾಕ್ಷರತೆ ಪ್ರಮಾಣವು 50%ಕ್ಕಿಂತ ಕಡಿಮೆಯಿದೆ. ಆದರೆ ತನ್ನ ಕುಟುಂಬದಲ್ಲಿ ಮೊದಲ ಬಾರಿಗೆ ಶಾಲೆಗೆ ಹೋದವರಾಗಿರುವ ರೋಶ್ನಿ ತನ್ನ ಕುಟುಂಬದಿಂದ ಕಾಲೇಜಿನ ಹೊಸ್ತಿಲನ್ನು ದಾಟಿದವರಲ್ಲಿ ಮೊದಲಿಗರಾಗುವ ಕನಸು ಕಾಣುತ್ತಿದ್ದಾರೆ.

ಮುಂಜಾನೆಯ ಕುಳಿರು ಹೂ ಆಯುವವರ ಕೈಗಳನ್ನು ಒಂದಷ್ಟು ಮರಗಟ್ಟಿಸುವುದರಿಂದಾಗಿ ಹೂವನ್ನು ಸಂಗ್ರಹಿಸುವುದು ಕಷ್ಟವಾಗುತ್ತದೆ. "ನಮ್ಮ ಕೈಗಳು ತಣ್ಣಗಾದಾಗ ಈ ಸಣ್ಣ ಕಾಡು ಹೂವುಗಳನ್ನು ಆಯುವುದು ಕಷ್ಟವಾಗುತ್ತದೆ" ಎಂದು ಸುಖರಾಣಿಯವರ ಸೋದರಿಯ ಮಗಳು 17 ವರ್ಷದ ದುರ್ಗಾ ವಿವರಿಸುತ್ತಾರೆ. "ಇಂದು ಭಾನುವಾರ, ಹಾಗಾಗಿ ನನಗೆ ಶಾಲೆಗೆ ರಜೆ ಹಾಗಾಗಿ ನನ್ನ ಚಿಕ್ಕಮ್ಮನಿಗೆ ಸಹಾಯ ಮಾಡಲು ಬಂದಿದ್ದೇನೆ" ಎಂದು ಅವರು ಹೇಳುತ್ತಾರೆ. ಪರಶಿಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಧಾಮೋಖರ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ 11ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ದುರ್ಗಾ ಇತಿಹಾಸ, ಅರ್ಥಶಾಸ್ತ್ರ, ಹಿಂದಿ ಮತ್ತು ಕಲೆಯನ್ನು ಕಲಿಯುತ್ತಿದ್ದಾರೆ. ಕಳೆದ ವರ್ಷ ಲಾಕ್‌ಡೌನ್‌ಗಳ ಮೂಲಕ ಮುಚ್ಚಲ್ಪಟ್ಟ ಆಕೆಯ ಶಾಲೆಯು ಈ ವರ್ಷ ಜನವರಿಯಲ್ಲಿ ಮತ್ತೆ ತೆರೆಯಲ್ಪಟ್ಟಿತು.


Left: Mani Singh and Sunita Bai with freshly gathered flowers. Right: Mahua flowers spread out to dry in their home in Mardari village
PHOTO • Priti David
Left: Mani Singh and Sunita Bai with freshly gathered flowers. Right: Mahua flowers spread out to dry in their home in Mardari village
PHOTO • Priti David

ಎಡ: ಮಣಿ ಸಿಂಗ್ ಮತ್ತು ಸುನೀತಾ ಬಾಯಿ ಮತ್ತು ಹೊಸದಾಗಿ ಸಂಗ್ರಹಿಸಿದ ಮಹುವಾ ಹೂವುಗಳು. ಬಲ: ಮರ್ದಾರಿ ಗ್ರಾಮದ ತಮ್ಮ ಮನೆಯ ಅಂಗಳದಲ್ಲಿ ಮಹುವಾ ಹೂವುಗಳನ್ನು ಬಿಸಿಲಿಗೆ ಒಣಗಲು ನೆಲದ ಮೇಲೆ ಹರಡಿರುವುದು

ಎತ್ತರದ ಮಹುವಾ ಮರವನ್ನು ನೋಡುತ್ತಾ, ಸುಖರಾಣಿ ತನ್ನ ತಲೆಯನ್ನು ಅಲುಗಾಡಿಸುತ್ತಾರೆ, “ಈ ವರ್ಷ ನಾವು ಸಾಮಾನ್ಯವಾಗಿ ಸಂಗ್ರಹಿಸುವ ಅರ್ಧದಷ್ಟೂ  ಇಳುವರಿಯನ್ನು ಪಡೆಯುವುದೂ ಅನುಮಾನ. "ಈ ವರ್ಷ ಹೂವುಗಳು ಉದುರುತ್ತಿಲ್ಲ" ಎಂದು ಸುರ್ಜನ್ ಹೇಳುತ್ತಾರೆ, ಅವರ ಅಂದಾಜಿನಲ್ಲಿ ಭಯ ಮತ್ತು ಅನುಮಾನದ ಮಿಶ್ರ ಭಾವವಿತ್ತು. 2020ರಲ್ಲಿ ಕಡಿಮೆ ಮಳೆಯಾಗುಗಿರುವುದು ಕಡಿಮೆ ಇಳುವರಿಗೆ ಕಾರಣ ಎಂದು ಇಬ್ಬರೂ ದೂಷಿಸಿದರು. ಆದರೆ, ಹಲವು ವರ್ಷಗಳಿಂದ ಹೂ ಸಂಗ್ರಹಿಸುತ್ತಿರುವ ಸುರ್ಜನ್, ಇದೊಂದು ದೊಡ್ಡ ಸಮಸ್ಯೆಯೆಂದು ಹೇಳದೆ, ಇದನ್ನು ಇನ್ನೊಂದು ಕೆಟ್ಟ ವರ್ಷವೆಂದು ಕರೆಯುತ್ತಾರೆ. ಅವರು ಹೇಳುತ್ತಾರೆ, "ಕೆಲವೊಮ್ಮೆ ಇಳುವರಿ ಸಾಮಾನ್ಯಕ್ಕಿಂತ ಕಡಿಮೆ, ಕೆಲವೊಮ್ಮೆ ಹೆಚ್ಚು. ಇಳುವರಿ ಯಾವಾಗಲೂ ಒಂದೇ ರೀತಿಯಿರಲು ಸಾಧ್ಯವಿಲ್ಲ."

ಪರಸಿಯಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಹುಲಿ ರಕ್ಷಿತಾರಣ್ಯದೊಳಗಿನ ಮರ್ದಾರಿ ಗ್ರಾಮದಲ್ಲಿರುವ ಮಣಿ ಸಿಂಗ್ ಅವರ ಮನೆಯ ಕಾಂಪೌಂಡ್‌ನಲ್ಲಿ ಮಹುವಾ ಹೂವುಗಳು ಬಿಸಿಲಿನಲ್ಲಿ ಒಣಗುತ್ತಿದ್ದವು. ಹಳದಿ ಹಸಿರು ಬಣ್ಣದ ಪ್ರಕಾಶಮಾನವಾದ ಹೂವುಗಳು ಬಿಸಿಲಿನಲ್ಲಿ ಒಣಗಿದ ನಂತರ ತುಕ್ಕಿನಂತಹ ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ. ಮಣಿ ಮತ್ತು ಅವರ ಪತ್ನಿ ಸುನೀತಾ ಇಬ್ಬರಿಗೂ ಐವತ್ತು ದಾಟಿದೆ. ಇಬ್ಬರೂ ಬೆಳಿಗ್ಗೆ ತಮ್ಮ ಐದು ಮರಗಳಿಂದ ಉದುರುವ ಹೂವುಗಳನ್ನು ಸಂಗ್ರಹಿಸುತ್ತಾ ಅರಣ್ಯದಲ್ಲಿ ತಮ್ಮ ಬದುಕನ್ನು ಕಳೆದಿದ್ದಾರೆ. ಅವರ ಮಕ್ಕಳು ಬೆಳೆದು ಬೇರೆಡೆ ವಾಸಿಸುತ್ತಿದ್ದಾರೆ, ಆದ್ದರಿಂದ ಅವರು ಮಾತ್ರ ಈ ಕೆಲಸಕ್ಕೆ ಹೋಗುತ್ತಾರೆ. ಅವರು ಹೇಳುತ್ತಾರೆ, "ಈ ವರ್ಷ ಸಂಗ್ರಹಿಸಲು ಅಷ್ಟು ಹೂವುಗಳಿಲ್ಲ. ನಾವು ಅವುಗಳಿಗಾಗಿ ಹುಡುಕಬೇಕು. ಕಳೆದ ವರ್ಷ ನಾವು ಸುಮಾರು 100 ಕೆಜಿಯಷ್ಟು ಮಹುವಾ ಸಂಗ್ರಹಿಸಿದ್ದೆವು, ಆದರೆ ಈ ವರ್ಷ ಅದರ ಅರ್ಧದಷ್ಟು ಸಿಗಬಹುದೆಂದೂ ಅನ್ನಿಸುತ್ತಿಲ್ಲ."

ಮಣಿ, ಮಹುವಾ ಹಿಟ್ಟನ್ನು ಒಣಹುಲ್ಲಿನೊಂದಿಗೆ ಬೆರೆಸಿ ಅದನ್ನು ತನ್ನ ಎರಡು ಎತ್ತುಗಳಿಗೆ ಮೇವಾಗಿ ಬಳಸಿ ತನ್ನ ಎಕರೆ ಭೂಮಿಯನ್ನು ಉಳುಮೆ ಮಾಡುತ್ತಾರೆ. "ಇದು ಅವುಗಳಿಗೆ ಶಕ್ತಿ ನೀಡುತ್ತದೆ" ಎಂದು ಅವರು ಹೇಳುತ್ತಾರೆ.

ಮರ್ದಾರಿ 133 ಕುಟುಂಬಗಳ ಒಂದು ಚಿಕ್ಕ ಹಳ್ಳಿ ಮತ್ತು ಬಹುತೇಕ ಪ್ರತಿಯೊಂದು ಮನೆಯಂಗಳದಲ್ಲೂ ಮಹುವಾ ಹೂವನ್ನು ಒಣಹಾಕಿರುವುದನ್ನು ನೋಡಬಹುದಿತ್ತು, ನಂತರ ಅದನ್ನು ಚೀಲಗಳಲ್ಲಿ ತುಂಬಿಸಿಡಲಾಗುತ್ತದೆ. ಚಂದಾಬಾಯಿ ಬೈಗಾ ಮತ್ತು ಆಕೆಯ ಸಂಬಂಧಿಕರು ಸೇರಿದಂತೆ ಮಕ್ಕಳ ಗುಂಪಿನೊಂದಿಗೆ ಮಧ್ಯಾಹ್ನ ತಡವಾಗಿ ಮನೆಗೆ ಮರಳಿದರು. ಪ್ರತಿಯೊಬ್ಬರ ಕೈಯಲ್ಲೂ ಮಕ್ಕಳ ನೆರವಿನಿಂದ ಸಂಗ್ರಹಿಸಿದ ಮಹುವಾ ಹೂವಿನಿಂದ ತುಂಬಿದ ಬುಟ್ಟಿಯಿತ್ತು. ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಕೈತೊಳೆದುಕೊಳ್ಳುವಂತೆ ಹೇಳಿ ಅವರು ನಮ್ಮೊಂದಿಗೆ ಮಾತಿಗೆ ಕುಳಿತರು.

Left: Chandabai Baiga (in the green saree) and her relatives returning from the forest after gathering mahua. Right: Dried flowers in Chandabai's home
PHOTO • Priti David
Left: Chandabai Baiga (in the green saree) and her relatives returning from the forest after gathering mahua. Right: Dried flowers in Chandabai's home
PHOTO • Priti David

ಎಡ: ಚಂದಾಬಾಯಿ ಬೈಗಾ (ಹಸಿರು ಸೀರೆಯಲ್ಲಿ) ಮತ್ತು ಆಕೆಯ ಸಂಬಂಧಿಕರು ಕಾಡಿನಿಂದ ಮಹುವಾ ಸಂಗ್ರಹಿ ಮನೆಗೆ ಮರಳುತ್ತಿರುವುದು. ಬಲ: ಚಂದಾಬಾಯಿಯ ಮನೆಯಂಗಳದಲ್ಲಿ ಒಣಗುತ್ತಿರುವ ಮಹುವಾ ಹೂವುಗಳು

ಚಂದಾಬಾಯಿ ಮತ್ತು ಆಕೆಯ ಪತಿ ವಿಶ್ವನಾಥ ಬೈಗಾ ನಲವತ್ತರ ಪ್ರಾಯ ದಾಟಿದವರು ಮತ್ತು ಬೈಗಾ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಅವರು ತನ್ನ 2.5 ಎಕರೆ ಭೂಮಿಯಲ್ಲಿ ಸಾಮಾನ್ಯವಾಗಿ ಭತ್ತ ಮತ್ತು ಬಟಾಣಿಯನ್ನು ಬೆಳೆಯುತ್ತಾರೆ, ಜೊತೆಗೆ ಕೆಲಸ ಲಭ್ಯವಿರುವ ಸಮಯದಲ್ಲಿ ಮನರೇಗಾ ಯೋಜನೆಯಡಿ ಕೆಲಸ ಮಾಡುತ್ತಾರೆ.

ಬೆಳಗಿನ ಕಠಿಣ ಪರಿಶ್ರಮದಿಂದ ದಣಿದ ಚಂದಾಬಾಯಿ ಹೇಳುತ್ತಾರೆ, “ಈ ಬಾರಿ ನಾವು ಹೆಚ್ಚು ಮಹುವಾ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಅಗತ್ಯಕ್ಕಿಂತ ಕಡಿಮೆ ಮಳೆಯಿಂದಾಗಿ ಈ ಬಾರಿ ಹೂವುಗಳು ಕಡಿಮೆ ಅರಳಿವೆ. ಇಳುವರಿ ಕಡಿಮೆಯಾಗುತ್ತಿರುವ ಬಗ್ಗೆ ಕಳವಳಗೊಂಡ ಅವರು, ಇದಕ್ಕಾಗಿ ಬೆಳೆಯುತ್ತಿರುವ ಜಿಂಕೆಗಳ ಸಂಖ್ಯೆಯನ್ನೂ ದೂಷಿಸುತ್ತಾರೆ. "ಅವು ಎಲ್ಲವನ್ನೂ ತಿನ್ನುತ್ತವೆ, ವಿಶೇಷವಾಗಿ ರಾತ್ರಿಯಲ್ಲಿ ಮರದಿಂದ ಉದುರಿದ ಹೂಗಳನ್ನು, ಆದ್ದರಿಂದ ನಾವು ಬೆಳಿಗ್ಗೆ ಸ್ವಲ್ಪ ಬೇಗ ಹೋಗಬೇಕು. ಇದು ನನ್ನದು ಮಾತ್ರವಲ್ಲ, ಪ್ರತಿಯೊಬ್ಬರ ಕಥೆ.

ಸುಮಾರು ಒಂದು ತಿಂಗಳ ನಂತರ, ಮೇ ತಿಂಗಳಿನಲ್ಲಿ, ಮರ್ದಾರಿ ಹಳ್ಳಿಯ ಜನರೊಡನೆ ಫೋನಿನಲ್ಲಿ ಮಾತನಾಡುತ್ತಿದ್ದಾಗ, ಚಂದಾಬಾಯಿ ತನ್ನ ಆತಂಕ ಸತ್ಯವಾಯಿತೆಂದು ದೃಢಪಡಿಸಿದರು. ಅವರು ಹೇಳುತ್ತಾರೆ, "ಈ ವರ್ಷ ಮಹುವಾ ಆರಿಸುವ ಕೆಲಸವು 15 ದಿನಗಳಲ್ಲಿ ಮುಗಿಯಿತು. ನಾವು ಈ ಬಾರಿ ಕೇವಲ ಎರಡು ಕ್ವಿಂಟಾಲ್‌ಗಳನ್ನು (200 ಕೆಜಿ) ಸಂಗ್ರಹಿಸಲು ಸಾಧ್ಯವಾಯಿತು, ಆದರೆ ಕಳೆದ ವರ್ಷ ಮೂರು ಕ್ವಿಂಟಾಲ್‌ಗಿಂತ ಹೆಚ್ಚು ಸಿಕ್ಕಿತ್ತು. ಆದರೆ ಕಡಿಮೆ ಪೂರೈಕೆಯ ಕಾರಣ ಬೆಲೆ ಏರಿರುವುದರಿಂದಾಗಿ ಅವರು ನಿರಾಳವಾಗಿದ್ದಾರೆ. ಈ ವರ್ಷ ಪ್ರತಿ ಕೆಜಿಗೆ ಮಹುವಾ ಬೆಲೆ 35-40ರಿಂದ 50 ರೂಪಾಯಿಗಳಿಗೆ ಏರಿದೆ.

ಸುಖರಾಣಿ ಮತ್ತು ಸುರ್ಜನ್ ಅವರ ಅಂದಾಜಿನ ಪ್ರಕಾರ, ಈ ಬಾರಿ ಪರಸಿ ಗ್ರಾಮದಲ್ಲೂ ಇಳುವರಿ ಕಡಿಮೆಯಿತ್ತು. ಸುರ್ಜನ್ ಇದನ್ನು ಸ್ವಲ್ಪ ತಾತ್ವಿಕ ಧ್ವನಿಯಲ್ಲಿ ಹೇಳಿದ್ದರು, "ಕೆಲವೊಮ್ಮೆ ಹೊಟ್ಟೆ ತುಂಬುವಷ್ಟು ಊಟ ದೊರೆತರೆ ಇನ್ನೂ ಕೆಲವೊಮ್ಮೆ ತುಂಡು ರೊಟ್ಟಿಗೂ ತತ್ವಾರವಾಗುತ್ತದೆ. ಅಲ್ವಾ? ಇವೆಲ್ಲವೂ ಒಂದೇ ನಾಣ್ಯದ ಎರಡು ಮುಖಗಳಂತೆ ಅಷ್ಟೇ..."

ಈ ಲೇಖನದ ತಯಾರಿಯಲ್ಲಿ ತಮ್ಮ ಅಮೂಲ್ಯ ಸಹಾಯವನ್ನು ನೀಡಿ ಸಹಕರಿಸಿದ ದಿಲೀಪ್ ಅಶೋಕ ಅವರಿಗೆ ಲೇಖಕರಿಂದ ಕೃತಜ್ಞತೆ ಸಲ್ಲುತ್ತದೆ.

ಅನುವಾದ: ಶಂಕರ ಎನ್. ಕೆಂಚನೂರು

Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru