2019ರಲ್ಲಿ ಪಾರುವನ್ನು ಕುರಿ ಮೇಯಿಸುವ ಕೆಲಸಕ್ಕೆ ಕಳುಹಿಸಲು ಆಕೆಯ ತಂದೆ ತೀರ್ಮಾನಿಸಿದಾಗ ಆಕೆಗೆ ಕೇವಲ ಏಳು ವರ್ಷ ವಯಸ್ಸಾಗಿತ್ತು.

ಇದಾಗಿ ಮೂರು ವರ್ಷಗಳ ನಂತರ, ಆಗಸ್ಟ್ 2022ರ ಕೊನೆಯಲ್ಲಿ, ಅವಳ ಪೋಷಕರು ಅವಳನ್ನು ತಮ್ಮ ಗುಡಿಸಲಿನ ಹೊರಗೆ ನೋಡಿದರು. ಅಲ್ಲಿ ಅವಳನ್ನು ಕಂಬಳಿ ಸುತ್ತಿ ಮಲಗಿಸಲಾಗಿತ್ತು. ಕುತ್ತಿಗೆಯ ಮೇಲೆ ಕತ್ತು ಹಿಸುಕಿದ ಗುರುತುಗಳಿದ್ದವು.

"ಅವಳು ತನ್ನ ಕೊನೆಯ ಉಸಿರು ಇರುವವರೆಗೂ ಒಂದು ಮಾತನ್ನೂ ಆಡಲಿಲ್ಲ. ಏನಾಯಿತು ಎಂದು ನಾವು ಅವಳನ್ನು ಕೇಳಲು ಪ್ರಯತ್ನಿಸಿದೆವು, ಆದರೆ ಅವಳಿಗೆ ಮಾತನಾಡಲು ಸಾಧ್ಯವಾಗಲಿಲ್ಲ," ಎಂದು ಪಾರುವಿನ ತಾಯಿ ಸವಿತಾಬಾಯಿ ಕಣ್ಣೀರು ಒರೆಸಿಕೊಳ್ಳುತ್ತಾ ಹೇಳಿದರು. "ನಮಗೆ ಯಾರೋ ಅವಳ ಮೇಲೆ ಮಾಟ ಮಾಡಿಸಿರಬಹುದೆನ್ನಿಸಿತು. ಹೀಗಾಗಿ ನಾವು ಅವಳನ್ನು ಹತ್ತಿರದ ಮೋರಾ ಬೆಟ್ಟಗಳ ಸಾಲಿನಲ್ಲಿರುವ (ಮುಂಬೈ-ನಾಸಿಕ್ ಹೆದ್ದಾರಿಯಿಂದ) ದೇವಾಲಯಕ್ಕೆ ಕರೆದೊಯ್ದೆವು. ಪುರೋಹಿತನು ಅಂಗಾರ (ಪವಿತ್ರ ಬೂದಿ) ಹಚ್ಚಿದನು. ಅವಳಿಗೆ ಪ್ರಜ್ಞೆ ಮರಳಬಹುದೆಂದು ನಾವು ಕಾಯುತ್ತಲೇ ಇದ್ದೆವು, ಆದರೆ ಆ ಸಮಯ ಬರಲಿಲ್ಲ," ಎಂದು ಸವಿತಾಬಾಯಿ ನೆನಪಿಸಿಕೊಂಡರು. ಆಕೆ ಪತ್ತೆಯಾದ ಐದು ದಿನಗಳ ನಂತರ, ಸೆಪ್ಟೆಂಬರ್ 2, 2022ರಂದು, ಪಾರು ನಾಸಿಕ್ ನಗರದ ಸಿವಿಲ್ ಆಸ್ಪತ್ರೆಯಲ್ಲಿ ತನಗಾದ ಗಾಯಗಳಿಂದ ನಿಧನ ಹೊಂದಿದಳು.

ಪಾರು ತಾನು ಮನೆಯಿಂದ ದೂರವಿದ್ದ ಮೂರು ವರ್ಷಗಳಲ್ಲಿ ಒಮ್ಮೆ ಮಾತ್ರ ಅವಳ ಕುಟುಂಬವನ್ನು ಭೇಟಿಯಾಗಿದ್ದಳು. ಒಂದೂವರೆ ವರ್ಷದ ಹಿಂದೆ ಅವಳನ್ನು ಕೆಲಸಕ್ಕೆ ಕರೆದೊಯ್ದ ಅದೇ ಮಧ್ಯವರ್ತಿ ಅವಳನ್ನು ಮನೆಗೆ ಕರೆತಂದಿದ್ದನು. "ಅವಳು ಏಳರಿಂದ ಎಂಟು ದಿನಗಳ ಕಾಲ ನಮ್ಮೊಂದಿಗೆ ಇದ್ದಳು. ಎಂಟನೇ ದಿನದ ನಂತರ, ಅವನು ಬಂದು ಅವಳನ್ನು ಮತ್ತೆ ಕರೆದೊಯ್ದನು," ಎಂದು ಪಾರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಮರುದಿನವೇ ಸವಿತಾಬಾಯಿ ಮಧ್ಯವರ್ತಿಯ ವಿರುದ್ಧ ದಾಖಲಿಸಿರುವ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

PHOTO • Mamta Pared
PHOTO • Mamta Pared

ಎಡ: ದಿವಂಗತ ಪಾರುವಿನ ಮನೆ ಈಗ ಖಾಲಿಯಾಗಿದೆ; ಅವಳ ಕುಟುಂಬವು ಕೆಲಸವನ್ನು ಹುಡುಕುತ್ತಾ ವಲಸೆ ಹೋಗಿದೆ. ಬಲ: ಹೆದ್ದಾರಿಯ ಬಳಿ ಇರುವ ಕಾತ್ಕರಿ ಸಮುದಾಯದ ಮನೆಗಳು

ನಾಸಿಕ್ ಜಿಲ್ಲೆಯ ಘೋಟಿ ಪೊಲೀಸ್ ಠಾಣೆಯಲ್ಲಿ ಆ ವ್ಯಕ್ತಿಯ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಜೀತದಾಳುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುವ ಶ್ರಮಜೀವಿ ಸಂಘಟನಾ ನಾಸಿಕ್‌ನ ಜಿಲ್ಲಾ ಅಧ್ಯಕ್ಷ ಸಂಜಯ್ ಶಿಂಧೆ ಹೇಳುವಂತೆ, "ಅವರ ಮೇಲೆ ಕೊಲೆಯ ಆರೋಪ ಹೊರಿಸಿ, ನಂತರ ಬಂಧಿಸಲಾಯಿತು ಮತ್ತು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಸೆಪ್ಟೆಂಬರ್‌ ತಿಂಗಳಿನಲ್ಲಿ, ಅಹ್ಮದ್ ನಗರದ (ಪಾರು ಕುರಿಗಳನ್ನು ಮೇಯಿಸುತ್ತಿದ್ದ ಅದೇ ಜಿಲ್ಲೆಯ) ನಾಲ್ವರು ಕುರುಬರ ವಿರುದ್ಧ ಜೀತದಾಳು ಪದ್ಧತಿ (ನಿರ್ಮೂಲನೆ) ಕಾಯ್ದೆಯಡಿ ದೂರು ದಾಖಲಾಗಿತ್ತು.

ಮುಂಬೈ-ನಾಸಿಕ್ ಹೆದ್ದಾರಿಯಿಂದ ಆಚೆಗಿರುವ ಕಾತ್ಕರಿ ಆದಿವಾಸಿಗಳ ವಾಸಸ್ಥಾನವಾದ ತಮ್ಮ ಪಾಡಕ್ಕೆ ಮಧ್ಯವರ್ತಿಗಳು ಬಂದ ದಿನವನ್ನು ಸವಿತಾಬಾಯಿ ನೆನಪಿಸಿಕೊಂಡರು. "ಅವನು ನನ್ನ ಗಂಡನಿಗೆ ಕುಡಿಸಿ, 3,000 ರೂಪಾಯಿಗಳನ್ನು ಕೊಟ್ಟು, ಪಾರುವನ್ನು ಕರೆದುಕೊಂಡು ಹೋದ," ಎಂದು ಅವರು ಹೇಳಿದರು.

“ಕೈಯಲ್ಲಿ ಪನ್ಸಿಲ್‌ ಹಿಡಿದು ಬರೆಯಬೇಕಿದ್ದ ಸಮಯದಲ್ಲಿ ಅವಳು ಬಂಜರು ನೆಲದಲ್ಲಿ ಸುಡುವ ಸೂರ್ಯನಡಿ ನಡೆಯಬೇಕಿತ್ತು. ಅವಳು ಮೂರು ವರ್ಷಗಳ ಕಾಲ ಬಾಲಕಾರ್ಮಿಕಳಾಗಿ ಜೀತದಾಳಾಗಿ ಬದುಕಿದಳು,” ಎಂದು ಸಾವಿತ್ರಿಬಾಯಿ ಹೇಳುತ್ತಾರೆ.

ಪಾರುವಿನ ಸಹೋದರ ಮೋಹನ್ ಕೂಡ ಏಳು ವರ್ಷದವನಿದ್ದಾಗ ಕುರಿ ಕಾಯಲು ಹೋಗಿದ್ದ. ಆತನನ್ನು ಕಳುಹಿಸುವಾಗಲೂ ತಂದೆ 3000 ರೂಪಾಯಿ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇಂದು ಮೋಹನನಿಗೆ 10 ವರ್ಷ. ತನ್ನ ನೇಮಿಸಿಕೊಂಡಿದ್ದ ಕುರಿಗಾಹಿಯೊಡನೆ ಕೆಲಸ ಮಾಡಿದ ಅನುಭವವನ್ನು ಅವನು ಹೇಳುತ್ತಾನೆ. “ನಾನು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಕುರಿಗಳನ್ನು ಹೊಡೆದುಕೊಂಡು ಹೋಗುತ್ತಿದ್ದೆ. 50-60 ಕುರಿಗಳು, 5-6 ಮೇಕೆಗಳು ಮತ್ತು ಇತರ ಪ್ರಾಣಿಗಳು ಇದ್ದವು,” ಎಂದು ಅವನು ಹೇಳುತ್ತಾನೆ. ವರ್ಷಕ್ಕೊಮ್ಮೆ ಮೋಹನ್‌ಗೆ ಒಂದು ಅಂಗಿ, ಒಂದು ಫುಲ್ ಪ್ಯಾಂಟ್, ಒಂದು ಜೊತೆ ಚಡ್ಡಿ, ಒಂದು ಕರವಸ್ತ್ರ ಮತ್ತು ಒಂದು ಶೂ ಸಿಗುತ್ತಿತ್ತು. ಕೆಲವೊಮ್ಮೆ ಈ ಪುಟ್ಟ ಹುಡುಗನಿಗೆ ಏನನ್ನಾದರೂ ಖರೀದಿಸಲು ಅಥವಾ ತಿನ್ನಲು 5-10 ರೂಪಾಯಿಗಳನ್ನು ನೀಡಲಾಗುತ್ತಿತ್ತು. "ನಾನು ಕೆಲಸ ಮಾಡಿದ್ದಾಗ ಶೇಟ್‌ [ಕುರಿಗಳ ಮಾಲಿಕ] ನನಗೆ ಹೊಡೆಯುತ್ತಿದ್ದ. ನಾನು ಮನೆಗೆ ಕಳುಹಿಸುವಂತೆ ಹೇಳಿದಾಗಲೆಲ್ಲ ಅಪ್ಪನಿಗೆ ಕರೆ ಮಾಡುವುದಾಗಿ ಹೇಳುತ್ತಿದ್ದ ಆದರೆ ಕರೆ ಮಾಡುತ್ತಿರಲಿಲ್ಲ.”

ತನ್ನ ತಂಗಿಯಂತೆ ಮೋಹನನೂ ಮೂರು ವರ್ಷಗಳಿಗೊಮ್ಮೆ ಮಾತ್ರ ತನ್ನ ಕುಟುಂಬವನ್ನು ಭೇಟಿಯಾಗುತ್ತಿದ್ದನು. "ಅವನ ಶೇಟ್ ಅವನನ್ನು ನಮ್ಮ ಮನೆಗೆ ಕರೆತಂದು ಮಾರನೇ ದಿನ ಕರೆದುಕೊಂಡು ಹೋದ," ಎಂದು ತಾಯಿ ಸವಿತಾಬಾಯಿ ಹೇಳಿದರು. ಮನೆಗೆ ಬಂದ ಮಗನಿಗೆ ಭಾಷೆಯೂ ಮರೆತುಹೋಗಿತ್ತು. “ಅವನು ನಮ್ಮನ್ನು ಗುರುತಿಸಿರಲಿಲ್ಲ.”

PHOTO • Mamta Pared

ಮುಂಬೈ-ನಾಸಿಕ್ ಹೆದ್ದಾರಿಯಿಂದ ದೂರದಲ್ಲಿರುವ ತಮ್ಮ ಪಾಡಾದಲ್ಲಿ ರೀಮಾಬಾಯಿ ಮತ್ತು ಅವರ ಪತಿ

PHOTO • Mamta Pared
PHOTO • Mamta Pared

ರೀಮಾಬಾಯಿಯಂತಹ ಕತ್ಕಾರಿ ಆದಿವಾಸಿಗಳು ಸಾಮಾನ್ಯವಾಗಿ ಇಟ್ಟಿಗೆ ಗೂಡುಗಳು ಮತ್ತು ನಿರ್ಮಾಣ ಸ್ಥಳಗಳಲ್ಲಿ ಕೆಲಸ ಹುಡುಕಲು ವಲಸೆ ಹೋಗುತ್ತಾರೆ

“ಮನೆಯಲ್ಲಿ ಕೆಲಸವಿಲ್ಲದಿದ್ದರೆ, ಊಟವಿಲ್ಲದಿದ್ದರೆ, ಏನು ಮಾಡುವುದು? ಹಾಗಾಗಿ ಹೀಗಾಗಿ ಕೆಲಸಕ್ಕೆ ಕಳುಹಿಸಿದೆವು,” ಎನ್ನುತ್ತಾರೆ ರೀಮಾಬಾಯಿ. ಅವರು ಈ ಕಾತ್ಕರಿ ಪಾಡದಲ್ಲಿ ವಾಸಿಸುತ್ತಾರೆ. ಅವರ ಮಕ್ಕಳಿಬ್ಬರನ್ನೂ ಕುರಿ ಮೇಯಿಸಲು ಕರೆದುಕೊಂಡು ಹೋಗಲಾಯಿತು. "ಮಕ್ಕಳು ಕೆಲಸ ಮಾಡಿಕೊಂಡು ಚೆನ್ನಾಗಿ ತಿನ್ನುತ್ತಾರೆನ್ನುವುದು ನಮ್ಮ ನಂಬಿಕೆಯಾಗಿತ್ತು."

ಒಬ್ಬ ದಲ್ಲಾಳಿ ಈ ಮಕ್ಕಳನ್ನು ರೀಮಾಬಾಯಿ ಅವರ ಮನೆಯಿಂದ ಕರೆದೊಯ್ದು ಅಹಮದ್‌ನಗರದ ಪರ್ನೇರ್ ತಾಲೂಕಿನ ಕುರಿಗಾಹಿಗಳ ಬಳಿ ಕೆಲಸಕ್ಕೆ ಕಳುಹಿಸಿದನು. ಎರಡೂ ಕಡೆ ಹಣದ ವ್ಯವಹಾರ ನಡೆಯುತ್ತದೆ. ಈ ದಲ್ಲಾಳಿ ಪೋಷಕರಿಗೆ ಹಣ ನೀಡುತ್ತಾನೆ ಮತ್ತು ಮಕ್ಕಳನ್ನು ಕೆಲಸಕ್ಕೆ ಕರೆತರಲು ಕುರಿಗಾಹಿಗಳು ದಲ್ಲಾಳಿಗೆ ಹಣ ನೀಡುತ್ತಾರೆ. ಕೆಲವೊಮ್ಮೆ ಮೇಕೆ ಅಥವಾ ಕುರಿ ಕೊಡಲು ಒಪ್ಪಿಗೆ ನೀಡಲಾಗುತ್ತದೆ.

ಮುಂದಿನ ಮೂರು ವರ್ಷಗಳ ಕಾಲ ರೀಮಾಬಾಯಿಯ ಮಕ್ಕಳು ಕೆಲಸದಲ್ಲಿದ್ದ ಜಾಗದಲ್ಲಿ. ಕುರಿ ಮೇಯಿಸುವ ಕೆಲಸವಲ್ಲದೆ ಬಾವಿಯಿಂದ ನೀರು ಸೇದುವುದು, ಬಟ್ಟೆ ಒಗೆಯುವುದು, ಕೊಟ್ಟಿಗೆಯನ್ನು ಶುಚಿಗೊಳಿಸುವುದು ಮುಂತಾದ ಕೆಲಸಗಳನ್ನೂ ಮಾಡಬೇಕಿತ್ತು. ಮೂರು ವರ್ಷಕ್ಕೊಮ್ಮೆ ಮಾತ್ರ ಮನೆಗೆ ಹೋಗಲು ಅವಕಾಶವಿತ್ತು.

ರೀಮಾಬಾಯಿಯ ಚಿಕ್ಕ ಮಗ ಏಕನಾಥನು ಬೆಳಿಗ್ಗೆ ಐದು ಗಂಟೆಗೆ ಎದ್ದೇಳದಿದ್ದರೆ, ಹೊಡೆಯುತ್ತಿದ್ದರು ಎಂದು ಹೇಳುತ್ತಾನೆ. "ಶೇಟ್ ನನ್ನ ಬೆನ್ನು ಮತ್ತು ಕಾಲುಗಳಿಗೆ ಹೊಡೆಯುತ್ತಿದ್ದ. ಕೊಳಕು ಕೊಳಕಾಗಿ ಬಯ್ಯುತ್ತಿದ್ದ. ಊಟ ನೀಡುತ್ತಿರಲಿಲ್ಲ. ಕುರಿಗಳು ಆಕಸ್ಮಿಕವಾಗಿ ಯಾರದೋ ಹೊಲಕ್ಕೆ ಪ್ರವೇಶಿಸಿದರೆ, ರೈತ ಮತ್ತು ಕುರಿಗಾಹಿ ನಮ್ಮನ್ನು ಹೊಡೆಯುತ್ತಿದ್ದರು. ತಡರಾತ್ರಿಯವರೆಗೆ ಕೆಲಸವಿರುತ್ತಿತ್ತು," ಎಂದು ಅವನು ಪರಿಯೊಂದಿಗೆ ಮಾತನಾಡುತ್ತಾ ಹೇಳುತ್ತಾನೆ. ಒಮ್ಮೆ ಅವನ ಎಡಗಾಲು ಮತ್ತು ಕೈಗೆ ನಾಯಿ ಕಚ್ಚಿತ್ತು, ಆದರೆ ಯಾವುದೇ ಔಷಧಿಯನ್ನು ನೀಡಲಿಲ್ಲ ಎಂದು ಏಕನಾಥ್ ಹೇಳುತ್ತಾನೆ. ಆಗಲೂ ಅವನು ಕುರಿಗಳ ಹಿಂದೆ ಹೋಗಬೇಕಾಗಿತ್ತು.

ರೀಮಾಬಾಯಿ ಮತ್ತು ಸವಿತಾಬಾಯಿಯವರ ಕುಟುಂಬಗಳು ಮಹಾರಾಷ್ಟ್ರದ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪಾದ ಕತ್ಕಾರಿ ಆದಿವಾಸಿ ಸಮುದಾಯಕ್ಕೆ ಸೇರಿದವು. ಅವರು ಯಾವುದೇ ಭೂಮಿಯನ್ನು ಹೊಂದಿಲ್ಲ ಮತ್ತು ಆದಾಯಕ್ಕಾಗಿ ಕೂಲಿ ಕೆಲಸವನ್ನು ಅವಲಂಬಿಸಿದ್ದಾರೆ, ಇವರು ಕೆಲಸವನ್ನು ಹುಡುಕಿಕೊಂಡು ವಲಸೆ ಹೋಗುತ್ತಾರೆ - ಸಾಮಾನ್ಯವಾಗಿ ಇಟ್ಟಿಗೆ ಗೂಡುಗಳಲ್ಲಿ ಮತ್ತು ನಿರ್ಮಾಣ ಸ್ಥಳಗಳಲ್ಲಿ ಕಂಡುಕೊಳ್ಳುತ್ತಾರೆ. ತಮ್ಮ ಕುಟುಂಬವನ್ನು ಪೋಷಿಸಲು ಸಾಕಷ್ಟು ಸಂಪಾದಿಸಲಾಗದೆ, ಅನೇಕರು ತಮ್ಮ ಮಕ್ಕಳನ್ನು ಅರೆ ಅಲೆಮಾರಿ ಧನಗಾರ್ ಸಮುದಾಯದ ಕುರುಬರ ಬಳಿಗೆ, ಕುರಿ ಮೇಯಿಸಲು ಕಳುಹಿಸುತ್ತಾರೆ.

PHOTO • Mamta Pared
PHOTO • Mamta Pared

ಎಡ: ನಾಸಿಕ್‌ನ ಸಿವಿಲ್ ಆಸ್ಪತ್ರೆಯ ಹೊರಗೆ ಪೋಷಕರು ಕಾಯುತ್ತಿರುವುದು. ಬಲ: ಜೀತದಿಂದ ರಕ್ಷಿಸಲ್ಪಟ್ಟ ಮಕ್ಕಳ ಹೇಳಿಕೆಗಳನ್ನು ದಾಖಲಿಸುತ್ತಿರುವ ಪೊಲೀಸರು

10 ವರ್ಷದ ಪಾರುವಿನ ದುರಂತ ಸಾವು ಈ ಪ್ರದೇಶದಲ್ಲಿನ ಬಾಲಕಾರ್ಮಿಕ ಪ್ರಕರಣಗಳ ಮೇಲೆ ಬೆಳಕು ಚೆಲ್ಲಿತು ಮತ್ತು 2022ರ ಸೆಪ್ಟೆಂಬರಿನಲ್ಲಿ ನಾಸಿಕ್ ಜಿಲ್ಲೆಯ ದಿಂಡೋರಿ ಬ್ಲಾಕ್‌ನ ಸಂಗಮ್ನೇರ್ ಗ್ರಾಮ ಮತ್ತು ಅಹ್ಮದನಗರ ಜಿಲ್ಲೆಯ ಪರ್ನೇರ್‌ನಿಂದ 42 ಮಕ್ಕಳನ್ನು ರಕ್ಷಿಸಲು ಕಾರಣವಾಯಿತು. ಈ ರಕ್ಷಣೆಯನ್ನು ಶ್ರಮಜೀವಿ ಸಂಘಟನಾ ನಡೆಸಿತು. ಇವರು ನಾಸಿಕ್ ಜಿಲ್ಲೆಯ ಇಗತ್ಪುರಿ ಮತ್ತು ತ್ರಯಂಬಕೇಶ್ವರ ಬ್ಲಾಕ್ ಮತ್ತು ಅಹ್ಮದನಗರ ಜಿಲ್ಲೆಯ ಅಕೋಲಾ ಬ್ಲಾಕ್‌ನ ಮಕ್ಕಳು. ಇವರನ್ನು ಒಂದಿಷ್ಟು ಹಣ ನೀಡಿ ಕುರಿಗಳನ್ನು ಮೇಯಿಸಲು ಕರೆದೊಯ್ಯಲಾಯಿತು ಎಂದು ಸಂಜಯ್ ಶಿಂಧೆ ಹೇಳಿದರು. ಅವರಲ್ಲಿ ಪಾರುವಿನ ಸಹೋದರ ಮೋಹನ್ ಮತ್ತು ನೆರೆಮನೆಯ ಏಕನಾಥ್ ಕೂಡ ಇದ್ದರು - ಅವರ ಅವರ ಪಾಡಾದ (ಕುಗ್ರಾಮ) ಮಕ್ಕಳಲ್ಲಿ ಇಬ್ಬರು.

ಘೋಟಿ ಬಳಿ ಇರುವ ಈ ಕುಗ್ರಾಮದ 26 ಕತ್ಕಾರಿ ಕುಟುಂಬಗಳು ಕಳೆದ 30 ವರ್ಷಗಳಿಂದ ಅಲ್ಲಿ ವಾಸಿಸುತ್ತಿವೆ. ಅವರ ಗುಡಿಸಲುಗಳನ್ನು ಖಾಸಗಿ ಭೂಮಿಯಲ್ಲಿ ನಿರ್ಮಿಸಲಾಗಿದೆ. ಈ ಗುಡಿಸಲುಗಳು ಹುಲ್ಲು ಅಥವಾ ಪ್ಲಾಸ್ಟಿಕ್-ಶೀಟ್ ಛಾವಣಿಗಳನ್ನು ಹೊಂದಿರುತ್ತವೆ, ಮತ್ತು ಎರಡು ಅಥವಾ ಹೆಚ್ಚು ಕುಟುಂಬಗಳು ಒಂದು ಗುಡಿಸಲನ್ನು ಹಂಚಿಕೊಳ್ಳುತ್ತವೆ. ಸವಿತಾಬಾಯಿಯ ಗುಡಿಸಲಿಗೆ ಬಾಗಿಲು ಅಥವಾ ವಿದ್ಯುತ್ ಇಲ್ಲ.

"ಸುಮಾರು 98 ಪ್ರತಿಶತದಷ್ಟು ಕತ್ಕಾರಿ ಕುಟುಂಬಗಳು ಭೂಮಿಯನ್ನು ಹೊಂದಿಲ್ಲ. ಅವರಲ್ಲಿ ಹೆಚ್ಚಿನವರು ತಮ್ಮ ಜಾತಿಯ ಪುರಾವೆಯಂತಹ ಅಗತ್ಯ ದಾಖಲೆಗಳನ್ನು ಹೊಂದಿಲ್ಲ," ಎಂದು ಮುಂಬೈ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ನೀರಜ್ ಹಟೇಕರ್ ಹೇಳುತ್ತಾರೆ. "ಉದ್ಯೋಗಾವಕಾಶಗಳು ವಿರಳವಾಗಿವೆ ಮತ್ತು ಆದ್ದರಿಂದ ಇಡೀ ಕುಟುಂಬವೇ ಇಟ್ಟಿಗೆ ಗೂಡುಗಳು, ಮೀನುಗಾರಿಕೆ, ಗುಜರಿ ವಸ್ತುಗಳನ್ನು ಸಂಗ್ರಹಿಸುವುದು ಮತ್ತು ಅಂತಹ ಇತರ ಕೆಲಸಗಳಲ್ಲಿ ಕೂಲಿ ಕೆಲಸವನ್ನು ಹುಡುಕಲು ಮನೆಯನ್ನು ತೊರೆಯುತ್ತದೆ."

PHOTO • Mamta Pared
PHOTO • Mamta Pared

ರಕ್ಷಿಸಲ್ಪಟ್ಟ ಮಕ್ಕಳೊಂದಿಗೆ ಸುನಿಲ್ ವಾಘ್ (ಕಪ್ಪು ಅಂಗಿ ಧರಿಸಿದ್ದಾರೆ) ಮತ್ತು (ಬಲಕ್ಕೆ) ಇಗತ್ಪುರಿ ತಹಶೀಲ್ದಾರ ಕಚೇರಿಯ ಹೊರಗೆ

2021ರಲ್ಲಿ, ಮಹಾರಾಷ್ಟ್ರದ ಕತ್ಕಾರಿ ಜನಸಂಖ್ಯೆಯ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಬೆಂಬಲದೊಂದಿಗೆ ಡಾ. ಹಟೇಕರ್ ಅವರು ಸಮೀಕ್ಷೆಯನ್ನು ನಡೆಸಿದರು. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಕೇವಲ 3 ಪ್ರತಿಶತದಷ್ಟು ಜನರು ಮಾತ್ರ ಜಾತಿ ಪ್ರಮಾಣಪತ್ರವನ್ನು ಹೊಂದಿದ್ದಾರೆ ಮತ್ತು ಅನೇಕರಿಗೆ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ಇಲ್ಲ ಎಂದು ತಂಡವು ಕಂಡುಕೊಂಡಿದೆ. "ಕತ್ಕಾರಿ ಸಮುದಾಯದವರು [ಸರ್ಕಾರಿ] ವಸತಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಸಮರ್ಥರಾಗಿರಬೇಕು. ಅವರು ವಾಸಿಸುವ ಪ್ರದೇಶಗಳಲ್ಲಿ ಸರ್ಕಾರವು ಉದ್ಯೋಗ ಸೃಷ್ಟಿಯ ಕೆಲಸವನ್ನು ಪ್ರಾರಂಭಿಸಬೇಕು," ಎಂದು ಹಟೇಕರ್ ಹೇಳುತ್ತಾರೆ.

*****

ಈಗ ತನ್ನ ಮಕ್ಕಳು ಮರಳಿ ಬಂದಿರುವುದರಿಂದ, ಅವರು ಶಾಲೆಗೆ ಹೋಗಬೇಕೆಂದು ರೀಮಾಬಾಯಿ ಬಯಸುತ್ತಾರೆ. "ಇಲ್ಲಿಯವರೆಗೆ ನಮ್ಮ ಬಳಿ ಪಡಿತರ ಚೀಟಿ ಇರಲಿಲ್ಲ. ನಾವು ಆ ವಿಷಯಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಈ ಹುಡುಗರು ವಿದ್ಯಾವಂತರು. ಅವರು ನಮಗೆ ಅದನ್ನು ಕೊಡಿಸಿದರು," ಎಂದು ಮಕ್ಕಳನ್ನು ರಕ್ಷಿಸಿದ ತಂಡದ ಭಾಗವಾಗಿದ್ದ ಶ್ರಮಜೀವಿ ಸಂಘಟನಾದ ಜಿಲ್ಲಾ ಕಾರ್ಯದರ್ಶಿ ಸುನಿಲ್ ವಾಘ್ ಅವರತ್ತ ಬೊಟ್ಟು ಮಾಡಿ ತೋರಿಸುತ್ತಾ ಅವರು ಹೇಳುತ್ತಾರೆ. ಕತ್ಕಾರಿ ಸಮುದಾಯಕ್ಕೆ ಸೇರಿದ ಸುನಿಲ್ ತನ್ನ ಜನರಿಗೆ ಸಹಾಯ ಮಾಡಲು ಉತ್ಸುಕರಾಗಿದ್ದಾರೆ.

"ಪಾರು ನೆನಪಿನಲ್ಲಿ ನಾನು ಆಹಾರವನ್ನು ನೀಡಬೇಕಾಗಿದೆ... ನಾನು ಅಡುಗೆ ಮಾಡಬೇಕು," ಎಂದು ಪಾರುವಿನ ಮರಣದ ಮರುದಿನ ನಾನು ಅವಳನ್ನು ಭೇಟಿಯಾದಾಗ ಸವಿತಾಬಾಯಿ ಹೇಳಿದರು. ಅವರು ತನ್ನ ಗುಡಿಸಲಿನ ಬಳಿ ಕಲ್ಲಿನಿಂದ ಮಾಡಿದ ತಾತ್ಕಾಲಿಕ ಒಲೆಯಲ್ಲಿ ಕಟ್ಟಿಗೆಯ ಬೆಂಕಿಯನ್ನು ನಿರ್ಮಿಸುತ್ತಿದ್ದರು. ಒಂದು ಪಾತ್ರೆಯಲ್ಲಿ ಎರಡು ಹಿಡಿ ಅಕ್ಕಿಯನ್ನು ಹಾಕಿದರು – ಅದರಲ್ಲಿ ತನ್ನ ಮೃತ ಮಗಳಿಗೆ ಒಂದು ತುತ್ತು ಮತ್ತು ಉಳಿದದ್ದು ಅವರ ಇತರ ಮೂವರು ಮಕ್ಕಳು ಮತ್ತು ಗಂಡನಿಗೆ. ಮನೆಯಲ್ಲಿ ಅನ್ನ ಮಾತ್ರ ಇತ್ತು. ಇತರರ ಹೊಲಗಳಲ್ಲಿ ದುಡಿಯುತ್ತಾ ದಿನಕ್ಕೆ 200 ರೂ.ಗಳನ್ನು ಸಂಪಾದಿಸುವ ತನ್ನ ಪತಿ, ಅನ್ನದೊಂದಿಗೆ ತಿನ್ನಲು ಏನನ್ನಾದರೂ ತರಬಹದು ಎನ್ನುವ ನಿರೀಕ್ಷೆಯಲ್ಲಿ ಆಕೆ ಕಾಯುತ್ತಿದ್ದರು.

ಗೌಪ್ಯತೆಯನ್ನು ರಕ್ಷಿಸುವ ಸಲುವಾಗಿ ಮಕ್ಕಳು ಮತ್ತು ಅವರ ಪೋಷಕರ ಹೆಸರುಗಳನ್ನು ಬದಲಾಯಿಸಲಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Mamta Pared

Mamta Pared (1998-2022) was a journalist and a 2018 PARI intern. She had a Master’s degree in Journalism and Mass Communication from Abasaheb Garware College, Pune. She reported on Adivasi lives, particularly of her Warli community, their livelihoods and struggles.

Other stories by Mamta Pared
Editor : S. Senthalir

S. Senthalir is Senior Editor at People's Archive of Rural India and a 2020 PARI Fellow. She reports on the intersection of gender, caste and labour. Senthalir is a 2023 fellow of the Chevening South Asia Journalism Programme at University of Westminster.

Other stories by S. Senthalir
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru