ಕಮಲಾ ತಾನು ನಾಲ್ಕನೇ ಬಾರಿಗೆ ಗರ್ಭಿಣಿಯಾದಾಗ ಆ ಮಗುವನ್ನು ಉಳಿಸಿಕೊಳ್ಳದೆ ಗರ್ಭಪಾತ ಮಾಡಿಸಿಕೊಳ್ಳಲು ತೀರ್ಮಾನಿಸಿದರು. ಆದರೆ ಅವರು ಅದಕ್ಕಾಗಿ ಆರಿಸಿಕೊಂಡಿದ್ದು ತನ್ನ ಹಾಡಿಯಿಂದ 30 ಕಿಲೋಮೀಟರ್ ದೂರದಲ್ಲಿರುವ ಬೆನೂರ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಲ್ಲ. ಅವರು ಎಂದೂ ಅಷ್ಟು ದೂರದ ಪ್ರಯಾಣವನ್ನು ಪ್ರಯಾಣಿಸಿದವರಲ್ಲ. ಕಾಲ್ನಡಿಗೆ ದೂರದಲ್ಲಿ ನಡೆಯುವ ವಾರದ ಸಂತೆಗೆ ಹೋಗಿದ್ದು ಬಿಟ್ಟರೆ ಇನ್ನೆಲ್ಲೂ ಹೋದವರಲ್ಲ. ಅವರು ಹೇಳುವಂತೆ "ಈ ಆಸ್ಪತ್ರೆಯ ಕುರಿತು ನನಗೆ ಗೊತ್ತಿರಲಿಲ್ಲ. ನಂತರ ನನ್ನ ಗಂಡನಿಗೆ ಈ ಬಗ್ಗೆ ತಿಳಿಯಿತು."
ತನ್ನ 30 ಹರೆಯದ ಆರಂಭದಲ್ಲಿರುವ ಕಮಲಾ ಮತ್ತು ಅವರ ಪತಿ ರವಿ (ಹೆಸರುಗಳನ್ನು ಬದಲಾಯಿಸಲಾಗಿದೆ), 35, ಇಬ್ಬರೂ ಗೊಂಡ್ ಆದಿವಾಸಿ ಸಮುದಾಯಕ್ಕೆ ಸೇರಿದವರು. ಅವರು ಮೊದಲು ಹತ್ತಿರದಲ್ಲಿರುವ ಸ್ಥಳೀಯ "ಡಾಕ್ಟರ್" ಒಬ್ಬರನ್ನು ಸಂಪರ್ಕಿಸಿದರು. "ನನ್ನ ಸ್ನೇಹಿತರೊಬ್ಬರು ಅವರ ಕುರಿತು ಹೇಳಿದ್ದು" ಎಂದು ಅವರು ಹೇಳುತ್ತಾರೆ. ಕಮಲಾ ತಮ್ಮ ಮನೆಯ ಹತ್ತಿರದಲ್ಲೇ ತುಂಡು ಭೂಮಿಯಲ್ಲಿ ತರಕಾರಿ ಬೆಳೆದು ಊರಿನ ಸಂತೆಯಲ್ಲಿ (ಹಾತ್) ಮಾರುತ್ತಾರೆ. ಪತಿ ರವಿ ಸ್ಥಳೀಯ ಮಂಡಿಯೊಂದರಲ್ಲಿ ಕೆಲಸ ಮಾಡುತ್ತಾರೆ ಹಾಗೂ ತನ್ನ ಇಬ್ಬರು ಸಹೋದರರೊಂದಿಗೆ ಸೇರಿ ಮೂರು ಎಕರೆ ಹೊಲದಲ್ಲಿ ಜೋಳ ಬೆಳೆಯುತ್ತಾರೆ. ಕಮಲಾ ಆಸ್ಪತ್ರೆಯೆಂದು ಕರೆಯುವ ಸ್ಥಳವು ಹೆದ್ದಾರಿಯಲ್ಲೇ ಇದ್ದು ಗುರುತಿಸುವುದು ಸುಲಭ. ಇದು ತನ್ನನ್ನು ತಾನು ಆಸ್ಪತ್ರೆಯೆಂದು ಕರೆದುಕೊಳ್ಳುತ್ತದೆಯಾದರೂ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಯಾವುದೇ ನಾಮಫಲಕಗಳು ಕಾಣುವುದಿಲ್ಲ. ಕಾಂಪೌಂಡ್ ಗೋಡೆಯ ಉದ್ದಕ್ಕೂ ಇರುವ ಫ್ಲೆಕ್ಸ್ ಪ್ಯಾನೆಲ್ಗಳು ಕಾಂಪೌಂಡ್ ಮೇಲೆ ಸಣ್ಣಗೆ ಬರೆದಿರುವ "ವೈದ್ಯರ" ಹೆಸರನ್ನು ಮರೆಮಾಚುತ್ತವೆ.
ʼವೈದ್ಯರುʼ ಕಮಲಾ ಕೈಗೆ ಐದು ಮಾತ್ರೆಗಳನ್ನು ಇರಿಸಿ ಮೂರು ದಿನ ತೆಗೆದುಕೊಳ್ಳುವಂತೆ ಹೇಳಿ ಮುಂದಿನ ರೋಗಿಗೆ ಒಳಬರುವಂತೆ ಹೇಳಿದರು. ಅವರಿಗೆ ಮಾತ್ರೆಯ ರಿಯಾಕ್ಷನ್ ಇತ್ಯಾದಿ ಕುರಿತಾದ ಮಾಹಿತಿಗಳನ್ನು ಅಲ್ಲಿನ ವೈದ್ಯರು ನೀಡಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯಾವಾಗ ಮತ್ತು ಹೇಗೆ ಗರ್ಭಪಾತವಾಗುತ್ತದೆ ಎನ್ನುವ ಕುರಿತು ಯಾವ ಮಾಹಿತಿಯನ್ನೂ ನೀಡಲಿಲ್ಲ.
ಔಷಧ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಕಮಲಾರಿಗೆ ರಕ್ತಸ್ರಾವವಾಗಲು ಪ್ರಾರಂಭಿಸಿತು. "ನಾನು ಕೆಲವು ದಿನ ಕಾಯ್ದೆ ಆದರೆ ರಕ್ತ ಹೋಗುವುದು ನಿಲ್ಲಲಿಲ್ಲ. ಕೊನೆಗೆ ಔಷಧಿ ನೀಡಿದ ವೈದ್ಯರ ಬಳಿ ಹಿಂದಿರುಗಿದೆವು. ಅಲ್ಲಿ ಅವರು ಪಿಎಚ್ಸಿಗೆ ಹೋಗಿ ತೊಳೆಸಿಕೊಳ್ಳಲು ಹೇಳಿದರು" ಅವರು ಹೇಳುವ ತೊಳೆಸಿಕೊಳ್ಳುವುದೆಂದರೆ ಗರ್ಭಕೋಶವನ್ನು ಸ್ವಚ್ಛಗೊಳಿಸಿಕೊಳ್ಳುವುದು.
ನವಿರಾದ ಚಳಿಗಾಲದ ಬಿಸಿಲಿನಲ್ಲಿ ಬೆನೂರ್ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್ಸಿ) ಹೊರಗಿನ ಬೆಂಚ್ನಲ್ಲಿ ಕುಳಿತಿದ್ದ ಕಮಲಾ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರಗ್ನೆನ್ಸಿ (ಎಮ್ಟಿಪಿ) ಮಾಡಿಸಿಕೊಳ್ಳಲು ತನ್ನ ಸರದಿಗಾಗಿ ಕಾಯುತ್ತಿದ್ದರು. ಇದನ್ನು ನಿರ್ವಹಿಸಲು ಸುಮಾರು 30 ನಿಮಿಷಗಳ ಕಾಲ ಬೇಕಾಗುತ್ತದೆ. ಆದರೆ ಆಕೆಗೆ ಅದಕ್ಕೂ ಮೊದಲು ಮತ್ತು ನಂತರ ಮೂರರಿಂದ ನಾಲ್ಕು ಗಂಟೆಗಳ ಕಾಲ ವಿಶ್ರಾಂತಿಯ ಅವಶ್ಯಕತೆಯಿರುತ್ತದೆ. ಇದಕ್ಕಾಗಿ ಹಿಂದಿನ ದಿನ ಕಡ್ಡಾಯ ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿತ್ತು.
ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲೇ ದೊಡ್ಡದಾದ ಈ ಪಿಎಚ್ಸಿಯನ್ನು 2019ರ ಕೊನೆಯಲ್ಲಿ ನವೀಕರಿಸಲಾಗಿದೆ. ಈ ಆಸ್ಪತ್ರೆಯು ತಾಯಿ ಮತ್ತು ಮಕ್ಕಳ ಸುಂದರವಾದ ಚಿತ್ರಗಳಿರುವ ವಿಶೇಷ ಹೆರಿಗೆ ಕೊಠಡಿಗಳನ್ನು ಹೊಂದಿದೆ. ಅಲ್ಲದೆ 10 ಹಾಸಿಗೆಗಳ ವಾರ್ಡ್, ಮೂರು ಹಾಸಿಗೆಗಳ ಹೆರಿಗೆ ಕೊಠಡಿ, ಆಟೋಕ್ಲೇವ್ ಯಂತ್ರ, ಅವಧಿ ತುಂಬಿ ಹೆರಿಗಾಗಿ ಕಾಯುತ್ತಿರುವ ಮಹಿಳೆಯರಿಗಾಗಿ ವಿಶೇಷ ವಸತಿ ಸೌಲಭ್ಯ, ಗಾರ್ಡನ್ ಕಿಚನ್ ಕೂಡ ಹೊಂದಿದೆ. ಇದು ಬಸ್ತಾರ್ನ ಆದಿವಾಸಿಗಳೇ ಅಧಿಕವಾಗಿರುವ ಪ್ರದೇಶದ ಜನರ ಆರೋಗ್ಯ ಸೇವೆಯ ಭರವಸೆಯ ಪ್ರತೀಕದಂತೆ ಕಾಣುತ್ತದೆ.












