ಹೆರಿಗೆ ನೋವು ಪ್ರಾರಂಭವಾದಾಗ, 23 ವರ್ಷದ ರಾನೋ ಸಿಂಗ್, ಅವರ ಪತಿ ಮತ್ತು ಅತ್ತೆ ಪರ್ವತದ ಬದಿಯಲ್ಲಿರುವ ತಮ್ಮ ಪುಟ್ಟ ಮನೆಯಿಂದ ಅವಸರದಿಂದ ಹೊರಟರು. ಆಗ ಬೆಳಿಗ್ಗೆ ಸುಮಾರು 5 ಗಂಟೆ. ಅವರ ಮುಂದೆ 1.5 ಕಿಲೋಮೀಟರ್ ಕಡಿದಾದ ಗುಡ್ಡವಿದ್ದು, ಅದು ಅವರನ್ನು ಮುಖ್ಯ ರಸ್ತೆಗೆ ಕರೆದೊಯ್ಯುತ್ತದೆ, ಅಲ್ಲಿ ಬಾಡಿಗೆ ಕಾರೊಂದು ತಮ್ಮ ಗ್ರಾಮವಾದ ಸಿವಾಲಿಯಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ರಾಣಿಖೇತ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಕಾಯುತ್ತಿತ್ತು.

ಅವರು ಡೋಲಿ (ಪಲ್ಲಕ್ಕಿ) ವ್ಯವಸ್ಥೆ ಮಾಡಲು ಪ್ರಯತ್ನಿಸಿದ್ದರು-ಇಲ್ಲಿನ ಠಾಕೂರ್ ಸಮುದಾಯದ ಗರ್ಭಿಣಿಯರನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು, ಪರ್ವತದ ಹಾದಿಯಲ್ಲಿ ಸಾಗಿಸಲಾಗುತ್ತದೆ, ಇದನ್ನು ನಾಲ್ಕು ಮೂಲೆಗಳಿಂದ ಪುರುಷರು ಎತ್ತಿಕೊಳ್ಳುತ್ತಾರೆ. ಡೋಲಿ ಸಾಮಾನ್ಯವಾಗಿ ಆಸ್ಪತ್ರೆಗೆ ಕರೆದೊಯ್ಯುವ ವಾಹನವಿರುವಲ್ಲಿಗೆ ಕರೆದೊಯ್ಯುತ್ತದೆ. ಆದರೆ ಆ ಬೆಳಿಗ್ಗೆ ಯಾವುದೇ ಡೋಲಿ ಲಭ್ಯವಿರಲಿಲ್ಲ, ಆದ್ದರಿಂದ ಅವರು ನಡೆಯಲು ಪ್ರಾರಂಭಿಸಿದರು.

ರಾನೋ ಕಾಲ್ನಡಿಗೆಯಲ್ಲಿ ಅರ್ಧದಷ್ಟು ದಾರಿಯನ್ನು ಮಾತ್ರ ನಡೆಯಲು ಸಾಧ್ಯವಾಯಿತು. "[ನೋವಿನಿಂದಾಗಿ] ನನಗೆ ನಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಯುವ ಹೊತ್ತಿಗೆ ನಾವು ಅರ್ಧದಷ್ಟು ದೂರವನ್ನೂ ಕ್ರಮಿಸಲು ಸಾಧ್ಯವಾಗಲಿಲ್ಲ. ನಾನು ನಡೆಯುವುದನ್ನು ನಿಲ್ಲಿಸಿ ರಸ್ತೆಯಲ್ಲಿ ಕುಳಿತ ಕೂಡಲೇ, ನನ್ನ ಗಂಡನಿಗೆ ಅರ್ಥವಾಯಿತು ಮತ್ತು ಆತುರದಿಂದ ಹತ್ತಿರದ ಕುಟುಂಬದ ಬಳಿ ಓಡಿದರು. ಅವರು ನಮ್ಮ ಪರಿಚಯದವರು, ಮತ್ತು ಚಾಚಿ 10 ನಿಮಿಷಗಳಲ್ಲಿ ಸ್ವಲ್ಪ ನೀರು ಮತ್ತು ಶೀಟ್‌ನೊಂದಿಗೆ ಬಂದರು. ಮತ್ತು ನನ್ನ ಅತ್ತೆ ಮತ್ತು ಚಾಚಿಯ ಸಹಾಯದಿಂದ ನಾನು ಅಲ್ಲಿ ಮಗುವಿಗೆ ಜನ್ಮ ನೀಡಿದೆ. "(ರಾನೋ ಅವರ ಪತಿಗೆ 34 ವರ್ಷ ಮತ್ತು ಪಡಿತರ ಅಂಗಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡುವ ಮೂಲಕ ತಿಂಗಳಿಗೆ 8,000 ರೂ. ಗಳಿಸುತ್ತಾರೆ, ಇದು ಮೂರು ವಯಸ್ಕರು ಮತ್ತು ಒಂದು ಮಗುವಿನ ಕುಟುಂಬಕ್ಕೆ ಇರುವ ಏಕೈಕ ಆದಾಯವಾಗಿದೆ; ಅವರು ಹೆಸರು ಹೇಳಲು ಇಚ್ಛಿಸಲಿಲ್ಲ.)

"ನನ್ನ ಮಗ [ಜಗತ್] ಈ ಕಾಡಿನಲ್ಲಿ ಅರ್ಧದಾರಿಯಲ್ಲೇ ಜನಿಸಿದನು" ಎಂದು ಅವರು ಹೇಳುತ್ತಾರೆ. ಮರಗಳಿಂದ ಆವೃತವಾದ ಕಾಡಿನಲ್ಲಿ ಕಿರಿದಾದ ಹಾದಿಯಲ್ಲಿನ ಹೆರಿಗೆಯ ನೆನಪುಗಳು ಇನ್ನೂ ಅವರನ್ನು ಕಾಡುತ್ತಿವೆ. “ನನ್ನ ಮಗು ಆ ರೀತಿ ಜನಿಸುತ್ತದೆ ಎಂದು ನಾನು ಎಂದೂ ಭಾವಿಸಿರಲಿಲ್ಲ. ಇಂದಿಗೂ, ನೀವು ಅದರ ಬಗ್ಗೆ ಯೋಚಿಸಿದರೆ, ಮೈನವಿರೇಳುತ್ತದೆ. ಆದರೆ ದೇವರ ಅನುಗ್ರಹದಿಂದ, ನನ್ನ ಮಗು ಸುರಕ್ಷಿತವಾಗಿತ್ತು. ಮತ್ತು ಅದು ಅತ್ಯಂತ ಮುಖ್ಯವಾದ ವಿಷಯ.”

ಆ ಫೆಬ್ರವರಿ 2020ರ ಬೆಳಿಗ್ಗೆ, ಜಗತ್ ಜನಿಸಿದ ಕೂಡಲೇ, ರಾನೋ ತನ್ನ ಅತ್ತೆ, 58 ವರ್ಷದ ಪ್ರತಿಮಾ ಸಿಂಗ್ ಅವರೊಂದಿಗೆ, ಮಗುವನ್ನು ಎತ್ತಿಕೊಂಡು ತನ್ನ ಮನೆಗೆ ಹಿಂದಿರುಗಿದರು.

In February 2020, Rano Singh of Almora district gave birth on the way to the hospital, 13 kilometres from Siwali, her village in the mountains (right)
PHOTO • Jigyasa Mishra
In February 2020, Rano Singh of Almora district gave birth on the way to the hospital, 13 kilometres from Siwali, her village in the mountains (right)
PHOTO • Jigyasa Mishra

ಫೆಬ್ರವರಿ 2020ರಲ್ಲಿ, ಅಲ್ಮೋರಾ ಜಿಲ್ಲೆಯ ರಾನೋ ಸಿಂಗ್ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಮಗುವಿಗೆ ಜನ್ಮ ನೀಡಿದರು, ಸಿವಾಲಿಯಿಂದ 13 ಕಿಲೋಮೀಟರ್ ದೂರದಲ್ಲಿ, ಪರ್ವತಗಳ ಸಾಲಿನಲ್ಲಿನ ಅವರ ಊರು (ಬಲ )

ರಾನೋ ತನ್ನ ಗರ್ಭಾವಸ್ಥೆಯಲ್ಲಿ ಒಮ್ಮೆ ಮಾತ್ರ ರಾಣಿಖೇತ್‌ನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಎರಡನೆಯ ತಿಂಗಳಲ್ಲಿ, ಹಠಾತ್ ನೋವು ಕಾಣಿಸಿಕೊಂಡಿತು, ಮತ್ತು ಕಾರಣವನ್ನು ಪತ್ತೆಹಚ್ಚಲು ಸೋನೋಗ್ರಫಿ ನಡೆಸಲಾಯಿತು. ಕಳೆದ ವರ್ಷ ಫೆಬ್ರವರಿಯಲ್ಲಿ ಅವರು ಗುಡ್ಡಗಳ ಸಾಲಿನಲ್ಲಿ ಜನ್ಮ ನೀಡಿದ ಮೂರು ದಿನಗಳ ನಂತರ, ಹಳ್ಳಿಯ ಆಶಾ ಕಾರ್ಯಕರ್ತೆ ಅವರ ಮನೆಗೆ ಬಂದರು. "ಆಶಾ ದೀದಿ ಮಗುವನ್ನು ತೂಕ ಮಾಡಲು ಮತ್ತು ಇತರ ಅಗತ್ಯ ತಪಾಸಣೆಗಳನ್ನು ಮಾಡಲು ಬಂದಿದ್ದರು. ಮಗುವಿಗೆ ಆರೋಗ್ಯವಾಗಿದೆ ಎಂದು ಅವರು ನಮಗೆ ತಿಳಿಸಿದರು. ಒಂದು ವಾರದಿಂದ ನನ್ನ ರಕ್ತದೊತ್ತಡ ಹೆಚ್ಚುತ್ತಲೇ ಇತ್ತು. ಆದರೆ ಈಗ ನಾನು ತುಂಬಾ ಆರಾಮವಾಗಿದ್ದೇನೆ. ಪರ್ವತಗಳಲ್ಲಿನ ಈ ಎಲ್ಲ ವಿಷಯಗಳಿಗೆ ನಾವು ಹೊಂದಿಕೊಂಡುಬಿಟ್ಟಿದ್ದೇವೆ,” ಎಂದು ರಾನೋ ಹೇಳುತ್ತಾರೆ.

ಸಿವಾಲಿ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಒಂದು ಹಳ್ಳಿ. 68 ಮನೆಗಳು ಮತ್ತು 318 ಜನಸಂಖ್ಯೆಯನ್ನು ಹೊಂದಿರುವ ಈ ಹಳ್ಳಿಯ ಜನರು ಹೀಗೆ ರಸ್ತೆಯಲ್ಲಿ ಮಗು ಜನಿಸಿದ್ದು ಇದೇ ಮೊದಲು ಎಂದು ಹೇಳುತ್ತಾರೆ. ಆದರೆ ಉತ್ತರಾಖಂಡ ರಾಜ್ಯದಲ್ಲಿ ಕನಿಷ್ಠ 31 ಶೇಕಡಾ ಹೆರಿಗೆಗಳು ಮನೆಯಲ್ಲಿಯೇ ನಡೆಯುತ್ತವೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ( ಎನ್‌ಎಫ್‌ಎಚ್‌ಎಸ್ -4, 2015-16 ) ತಿಳಿಸಿದೆ. ಆದಾಗ್ಯೂ, ಆಸ್ಪತ್ರೆಯ (ಹೆಚ್ಚಾಗಿ ಸರ್ಕಾರಿ) ಹೆರಿಗೆಗಳ ಸಂಖ್ಯೆ ಎನ್‌ಎಫ್‌ಎಚ್‌ಎಸ್ -3 (2005-06)ರಲ್ಲಿ ಶೇ 33 ರಿಂದ ನಾಲ್ಕನೇ ಸಮೀಕ್ಷೆಯಲ್ಲಿ 69ಕ್ಕೆ ಏರಿದೆ (ಉತ್ತರಾಖಂಡದ ಒಟ್ಟು ಜನನಗಳಲ್ಲಿ ಮೂರನೇ ಎರಡರಷ್ಟು).

ಹೀಗಿದ್ದರೂ, ಕುಮಾವೂನ್‌ನ ಗುಡ್ಡಗಾಡು ಪ್ರದೇಶದ ಜನರಿಗೆ ಆಸ್ಪತ್ರೆಗೆ ಹೋಗುವುದು ಈಗಲೂ ಮಹಿಳೆ ಮತ್ತು ಅವರ ಕುಟುಂಬಕ್ಕೆ ದೊಡ್ಡ ಸವಾಲಾಗಿದೆ ಎಂದು ರಾಣಿಖೇತ್‌ನ ಸ್ತ್ರೀರೋಗ ತಜ್ಞರೊಬ್ಬರು ಹೇಳುತ್ತಾರೆ. ಸುಸಜ್ಜಿತ ರಸ್ತೆಗಳು ಹೆಚ್ಚಾಗಿ ಮನೆಯಿಂದ ದೂರವಿರುತ್ತವೆ, ಸಾರಿಗೆ ಸಾಧನಗಳು ವಿರಳ, ಮತ್ತು ಕಾರನ್ನು ಬಾಡಿಗೆಗೆ ಪಡೆಯುವುದು ದುಬಾರಿ.

ಮತ್ತು ಕಳೆದ ವರ್ಷ, ಸಾಂಕ್ರಾಮಿಕ ಪಿಡುಗಿನ ಕಾರಣದಿಂದ ಘೋಷಿಸಲಾದ ಲಾಕ್‌ಡೌನ್ ತಾಲ್ಲೂಕಿನಲ್ಲಿ ಗರ್ಭಿಣಿ ಮಹಿಳೆಯರ ದುಃಸ್ಥಿತಿಯನ್ನು‌ ಇನ್ನಷ್ಟು ಹೆಚ್ಚಿಸಿತು. ಮನೀಷಾ ಸಿಂಗ್ ರಾವತ್ ಅವರು ಆಗಸ್ಟ್ 2020ರಲ್ಲಿ ರಾನೋ ಅವರ ಗ್ರಾಮದಿಂದ 22 ಕಿ.ಮೀ ದೂರದಲ್ಲಿರುವ ಪಾಲಿ ನಾಡೋಲಿ ಗ್ರಾಮದಲ್ಲಿ ಮಗುವಿಗೆ ಜನ್ಮ ನೀಡಿದರು. ಹೆರಿಗೆಯು ಅವರ ಕುಟುಂಬದ ಪರಿಚಯಸ್ಥರಿಂದ ನಡೆಯಿತು. "ನಾನು ಆಸ್ಪತ್ರೆಗೆ ಹೋಗಲಿಲ್ಲ. ನನ್ನ ಮಗಳು ಆಗಸ್ಟ್ 14, 2020ರಂದು ಇಲ್ಲಿ ಜನಿಸಿದಳು,” ಎಂದು ಅವರು ಹೇಳುತ್ತಾ, ಪಕ್ಕದ ಕೋಣೆಯನ್ನು ತೋರಿಸುತ್ತಾರೆ. ಕೋಣೆಯಲ್ಲಿರುವ ಒಂದು ಹಾಸಿಗೆಯೊಂದು ಕಾಲು ಇಟ್ಟಿಗೆಯದಾಗಿತ್ತು. ಮನೀಶಾ ಮತ್ತು ಅವರ ಪತಿ ಧೀರಜ್ ಸಿಂಗ್ ರಾವತ್ (31) ಅವರ ಫೋಟೋ ಗೋಡೆಯ ಮೇಲೆ ನೇತಾಡುತ್ತಿತ್ತು.

ಅದು ಸೆಪ್ಟೆಂಬರ್ ತಂಗಳ ಬೆಳಗಿನ 8.30ರ ಸಮಯ. ಮನೀಷಾ ತನ್ನ ಬಲಗೈಯಲ್ಲಿ ಒಂದು ಮೇವಿನ ಹೊರೆ ಮತ್ತು ತಲೆಯ ಮೇಲೆ ಇನ್ನೊಂದನ್ನು ಹೊತ್ತು ಮನೆಗೆ ಮರಳುತ್ತಿದ್ದರು. ಕಟ್ಟುಗಳನ್ನು ಪಕ್ಕಕ್ಕೆ ಇರಿಸಿ, ಸಾಂಪ್ರದಾಯಿಕ ಕುಮೌನಿ ಮರದ ಕಿಟಕಿಯ ಮೂಲಕ ತನ್ನ ತಿಂಗಳ ಪ್ರಾಯದ ಮಗಳಾದ ರಾಣಿಯನ್ನು ಕರೆದು: “ಚೆಲಿ! ದೇಖೋ ಕೌನ್ ಅಯಾ! [ನನ್ನ ಪುಟ್ಟ ಮಗೂ! ಯಾರು ಬಂದಿದ್ದಾರೆ ನೋಡು!]” ಎಂದರು. ನೀಲಿ ಬಣ್ಣವನ್ನು ಹಚ್ಚಲಾಗಿದ್ದ, ವಿಭಜಿತ ಮಾಳಿಗೆ ಮನೆಯಾದ ಅದರಲ್ಲಿ ಮೇಲೆ ಅಟ್ಟವಿತ್ತು.

Manisha Singh Rawat gave birth to her daughter (in pram) at home, assisted by a dai or traditional birth attendant
PHOTO • Jigyasa Mishra
Manisha Singh Rawat gave birth to her daughter (in pram) at home, assisted by a dai or traditional birth attendant
PHOTO • Jigyasa Mishra

ಮನೀಷಾ ಸಿಂಗ್ ರಾವತ್ ಸೂಲಗಿತ್ತಿಯ ಸಹಾಯದಿಂದ ಮನೆಯಲ್ಲಿ ಮಗಳಿಗೆ ಜನ್ಮ ನೀಡಿದರು

ರಾಣಿ ಹುಟ್ಟಿದ ಎರಡು ವಾರಗಳ ನಂತರ, ಬೆಟ್ಟಗಳಲ್ಲಿ ಮನೀಷಾ ಅವರ ಕಠಿಣ ಪರಿಶ್ರಮ ಪ್ರಾರಂಭವಾಯಿತು. ತಾಲ್ಲೂಕಿನಲ್ಲಿ 873 ಜನಸಂಖ್ಯೆ ಹೊಂದಿರುವ ಪಾಲಿ ನಾಡೋಲಿ ಗ್ರಾಮದಿಂದ ಸುಮಾರು 1.5 ಕಿ.ಮೀ ದೂರದಲ್ಲಿ, ತಮ್ಮ ಮೂರು ಕುರಿಗಳಿಗೆ ಮೇವು ಸಂಗ್ರಹಿಸಲು ಅರ್ಧ ಘಂಟೆಯವರೆಗೆ ನಡೆಯುತ್ತಿದ್ದರು. ಪ್ರದೇಶದ ಮಹಿಳೆಯರು ನೀರು, ಉರುವಲು ಮತ್ತು ಮೇವನ್ನು ತರಲು ಪ್ರತಿದಿನ ಹಲವಾರು ಕಿಲೋಮೀಟರ್ ನಡೆದು ಹೋಗುತ್ತಾರೆ, ಹೆಚ್ಚಿನವರು ಏರು ಹಾದಿಯನ್ನು ಹತ್ತುವ ಮೂಲಕ ಹೋಗಬೇಕಿರುತ್ತದೆ. ಮನೀಷಾ ಅವರ ಎರಡು ಕೋಣೆಗಳ ಮನೆ ಮಣ್ಣು-ಸಿಮೆಂಟಿನಿಂದ ಮಾಡಲ್ಪಟ್ಟಿದೆ. ಮನೆಯ ಹೊರಗೆ ಒಂದು ಹ್ಯಾಂಡ್‌ ಪಂಪ್‌ ಇರುವುದರಿಂದಾಗಿ ಸಾಕಷ್ಟು ಸಮಯ ಉಳಿತಾಯವಾಗುತ್ತದೆ.

ರಾಣಿಯ ತೊಟ್ಟಿಲಿನ ಉಕ್ಕಿನ ಅಂಚುಗಳು ನೀಲಿ ಮರದ ಕಿಟಕಿಗಳ ಮೂಲಕ ಬರುವ ಬೆಳಗಿನ ಸೂರ್ಯನ ಬೆಳಕಿಗೆ ಚಿನ್ನದ ಬಣ್ಣಕ್ಕೆ ತಿರುಗಿದ್ದವು. "ಅಶಾ ದೀದಿ ನಮಗೆ ಬೆಳಗಿನ ಬಿಸಿಲನ್ನು ಮಗುವಿಗೆ ತೋರಿಸಬೇಕು, ಇದರಿಂದ ಅವಳು ಜೀವಸತ್ವಗಳನ್ನು ಪಡೆಯಬಹುದು ಎಂದು ಹೇಳಿದರು. ಯಾವ ವಿಟಮಿನ್ ಎಂದು ನನಗೆ ಗೊತ್ತಿಲ್ಲ. ಆಶಾ ದೀದಿ ಮೂರು ದಿನಗಳ ಹಿಂದೆ ಅವಳನ್ನು ಪರೀಕ್ಷಿಸಲು ಬಂದಾಗ, ಅವಳು ಕಡಿಮೆ ತೂಕ ಹೊಂದಿದ್ದಳು. ಅವರು ಒಂದು ವಾರ ಬಿಟ್ಟು ಬರುತ್ತಾರೆ”ಎಂದು ಮನೀಷಾ ಹೇಳುತ್ತಾರೆ. 41 ವರ್ಷದ ಆಶಾ ಕಾರ್ಯಕರ್ತೆ ಮಮತಾ ರಾವತ್ ಮಗುವಿನ ತೂಕ 3 ಕೆಜಿ ಇದೆ, ಅದು ತಿಂಗಳಿಗೆ 4.2 ಕೆಜಿ ಇರಬೇಕು ಎಂದು ಹೇಳುತ್ತಾರೆ.

ಮನಿಷಾ ಹೆರಿಗೆಗಾಗಿ ಆಸ್ಪತ್ರೆಗೆ ಏಕೆ ಹೋಗಲಿಲ್ಲ? "ನನಗೆ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಲು ಇಷ್ಟವಿರಲಿಲ್ಲ" ಎಂದು ಅವರು ಹೇಳುತ್ತಾರೆ. "ಅಲ್ಲಿ ಒಂದಷ್ಟು ಸೌಲಭ್ಯಗಳಿರುತ್ತವೆಯಂತೆ ಆದರೆ ನನ್ನ ಕುಟುಂಬ ಏನೂ ನಿರ್ಧರಿಸಿದರೂ ಸರಿಯಾಗಿರುತ್ತದೆ.”

ಮನೀಷಾ ಅವರ ಮಾವ ಪಾನ್ ಸಿಂಗ್ ರಾವತ್ ಸೊಸೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ದಾಯ್ ಅವರನ್ನು ಮನೆಗೆ ಕರೆಸಿಕೊಳ್ಳಬೇಕೆಂದು ನಿರ್ಧರಿಸಿದರು. "ಅವರು ಬಹಳಷ್ಟು ಹಣವನ್ನು [ನನ್ನ ಮಗ ಜನಿಸಿದಾಗ ನನ್ನ ಮೊದಲ ಹೆರಿಗೆಗೆ ಈಗಾಗಲೇ 15,000] ಖರ್ಚು ಮಾಡಿದ್ದಾರೆ,” ಎಂದು ಅವರು ಹೇಳುತ್ತಾರೆ. ಆಕೆಯ ಮಗ, ಎರಡು ವರ್ಷದ ರೋಹನ್, ಪಾಲಿ ನಾಡೋಲಿ ಗ್ರಾಮದಿಂದ ಸರಿಸುಮಾರು 12 ಕಿಲೋಮೀಟರ್ ದೂರದಲ್ಲಿರುವ ರಾಣಿಖೇತ್‌ನ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದನು (ಮತ್ತು ಅದಕ್ಕಾಗಿ ಆಕೆಯನ್ನು ವಾಹನ ಚಲಿಸಬಲ್ಲ ರಸ್ತೆಯವರೆಗೆ ಡೋಲಿಯಲ್ಲಿ ಸಾಗಿಸಲಾಗಿತ್ತು). "ಆಗಸ್ಟ್ 2020ರಲ್ಲಿ ಹೆಣ್ಣು ಮಗು ಜನಿಸಿದಾಗ ಕೊರೋನದ ಭಯ [ಸಾಂಕ್ರಾಮಿಕ ಪಿಡುಗು ಉತ್ತುಂಗದಲ್ಲಿತ್ತು] ಆಸ್ಪತ್ರೆಗೆ ಹೋಗುವ ಎಲ್ಲಾ ಟೀಮ್-ಜಾಮ್ [ಗೊಂದಲ] ತಪ್ಪಿಸವುದು ಕೂಡ ಆಸ್ಪತ್ರೆಗೆ ಹೋಗದಿರಲು ಒಂದು ಕಾರಣವಾಗಿದೆ" ಎಂದು ಮನೀಶಾ ಹೇಳುತ್ತಾರೆ.

'We did not want to risk going all the way to Almora [for the delivery] in the pandemic,' says Pan Singh Rawat (left), Manisha’s father-in-law; they live in a joint family of nine
PHOTO • Jigyasa Mishra
'We did not want to risk going all the way to Almora [for the delivery] in the pandemic,' says Pan Singh Rawat (left), Manisha’s father-in-law; they live in a joint family of nine
PHOTO • Jigyasa Mishra

‘ಮಹಾಮಾರಿ ಪ್ರಾರಂಭವಾದಾಗ ನಾವು ಅಲ್ಮೋರಾವನ್ನು ದಾಟುವ ಅಪಾಯವನ್ನು ಎದುರಿಸುವುದು ನಮಗೆ ಬೇಕಿರಲಿಲ್ಲ’ ಎಂದು ಒಂಬತ್ತು ಮಂದಿಯ ಕೂಡು ಕುಟುಂಬವನ್ನು ಹೊಂದಿರುವ ಮನೀಷಾ ಅವರ ಮಾವ ಪಾನ್ ಸಿಂಗ್ ರಾವತ್ (ಎಡ) ಹೇಳುತ್ತಾರೆ .

ಮನೀಷಾ ಅವರ ಇಬ್ಬರು ಮಕ್ಕಳು, ಪತಿ, ಅತ್ತೆ, ಸೋದರ ಮಾವ ಮತ್ತು ಅವರ ಮಗು ಸೇರಿದಂತೆ ಒಂಬತ್ತು ಜನರ ಕುಟುಂಬ ಒಟ್ಟಿಗೆ ವಾಸವಿದೆ. ಒಂಬತ್ತನೇ ತರಗತಿಯವರೆಗೆ ಶಿಕ್ಷಣ ಪಡೆದ ಮನೀಷಾ ತನ್ನ ಹದಿನೆಂಟನೇ ವಯಸ್ಸಿನಲ್ಲಿ ವಿವಾಹವಾದರು. ಪತಿ ಧೀರಜ್ ಸಿಂಗ್ ರಾವತ್ 12ನೇ ತರಗತಿವರೆಗೆ ಅಧ್ಯಯನ ಮಾಡಿ ಸ್ಥಳೀಯ ಟ್ರಾವೆಲ್ ಕಂಪನಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. “ಅವರು ಅಲ್ಮೋರಾದಿಂದ ನೈನಿತಾಲ್, ಭೀಮತಾಲ್, ರಾಣಿಖೇತ್ ಮತ್ತು ಇತರ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತಾರೆ. ಅವರು ತಿಂಗಳಿಗೆ ಸುಮಾರು 20,000 ರೂಗಳ ಸಂಬಳ ಪಡೆಯುತ್ತಾರೆ,” ಎಂದು ಅವರು ಹೇಳುತ್ತಾರೆ. ಲಾಕ್ಡೌನ್ ಸಮಯದಲ್ಲಿ ಯಾವುದೇ ಕೆಲಸವಿಲ್ಲದ ಕಾರಣ, ಅವರ ಕುಟುಂಬವು ಮನೀಷಾ ಅವರ ಮಾವ ಪಾನ್ ಸಿಂಗ್ ಅವರ ಉಳಿತಾಯದಿಂದ ಎಲ್ಲಾ ಖರ್ಚುಗಳನ್ನು ಭರಿಸಿತು.‌

“ಈ ಮಹಾಮಾರಿಯ ಸಮಯದಲ್ಲಿ  ನಮ್ಮ ಹಳ್ಳಿಯಿಂದ ಅಲ್ಮೋರಾ [ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಜಿಲ್ಲಾ ಕೇಂದ್ರ ಕಚೇರಿ]ಗೆ ಪ್ರಯಾಣಿಸುವ ಮೂಲಕ ನಮ್ಮ ಪ್ರಾಣವನ್ನು ಪಣಕ್ಕಿಡಲು ನಾವು ಬಯಸಲಿಲ್ಲ. ಆದ್ದರಿಂದ ಮನೆಯಲ್ಲಿಹೆರಿಗೆ ಮಾಡಿಸಲು ನಿರ್ಧರಿಸಿದೆವು ”ಎಂದು 67 ವರ್ಷದ ಪಾನ್ ಸಿಂಗ್ ಹೇಳುತ್ತಾರೆ. ಅವರು ರಾಣಿಖೇತ್‌ನಲ್ಲಿರುವ ಸರ್ಕಾರಿ ಕಚೇರಿ ಕೆಲಸದಿಂದ ನಿವೃತ್ತಿ ಹೊಂದಿದ್ದಾರೆ. "ಇದಲ್ಲದೆ, ನಾವು ಆಸ್ಪತ್ರೆಗೆ ಹೋಗಲು ಬಯಸಿದರೆ, ನಾವು ಹತ್ತಿರದ ಮಾರುಕಟ್ಟೆಯಿಂದ ಕಾರನ್ನು ಬಾಡಿಗೆಗೆ ಪಡೆಯಬೇಕಾಗಿತ್ತು, ಮತ್ತು ನಾವು ಕಾರನ್ನು ತಲುಪಲು ಎರಡು ಕಿಲೋಮೀಟರ್‌ ನಡೆಯಬೇಕಿತ್ತು ಮತ್ತು ನಂತರ 80 ಕಿಲೋಮೀಟರ್ ಪ್ರಯಾಣಿಸಬೇಕಾಗಿತ್ತು."

ಅವರು ಮನೆಯಲ್ಲಿಯೇ ಹೆರಿಗೆ ಮಾಡಿಸಲು ನಿರ್ಧರಿಸಿದಾಗ ತಾಯಿ ಮತ್ತು ಮಗುವಿನ ಜೀವನದ ಬಗ್ಗೆ ಅವರು ಕಾಳಜಿ ವಹಿಸಲಿಲ್ಲವೇ? "ಅವರ ತಾಯಿ [ಅವರ ಹೆಂಡತಿ] ಮತ್ತು ನನಗೆ ಈಗ ವಯಸ್ಸಾಗಿದೆ" ಎಂದು ಅವರು ಹೇಳುತ್ತಾರೆ. "ಆ ಸಮಯದಲ್ಲಿ ಕೊರೋನಾ ಹರಡಿತ್ತು ಮತ್ತು ನಾವು ಆಸ್ಪತ್ರೆಗೆ ಹೋದರೆ ನಮ್ಮ ಜೀವಕ್ಕೆ ಅಪಾಯವಿತ್ತು. ಮತ್ತು ಮನೆಗೆ ಬಂದ ಶುಶ್ರೂಷಕಿಯರು ನಮಗೆ ಪರಿಚಿತರಾಗಿದ್ದರು, ಆದ್ದರಿಂದ [ಕೋವಿಡ್ ಸೋಂಕಿನ] ಅಪಾಯ ಕಡಿಮೆ. ಅವರು ನಮ್ಮ ಹಳ್ಳಿಯಲ್ಲಿ ಮತ್ತು ಸುತ್ತಮುತ್ತ ಅನೇಕ ಯಶಸ್ವಿ ಹೆರಿಗೆಗಳನ್ನು ಮಾಡಿಸಿದ್ದರು,” ಎಂದು ಅವರು ಹೇಳುತ್ತಾರೆ.

ಎನ್‌ಎಫ್‌ಹೆಚ್‌ಎಸ್ -4 (2015-16) ಪ್ರಕಾರ, ಸಮೀಕ್ಷೆಯ ಹಿಂದಿನ ಐದು ವರ್ಷಗಳಲ್ಲಿ, ಉತ್ತರಾಖಂಡದಲ್ಲಿ ಒಟ್ಟು ಜನನಗಳಲ್ಲಿ ಶೇಕಡಾ 71ರಷ್ಟು ನುರಿತ ಆರೋಗ್ಯ ಸೇವೆ ಒದಗಿಸುವವರ ನೆರವಿನೊಂದಿಗೆ ನಡೆದಿದೆ - ಇದರಲ್ಲಿ ವೈದ್ಯರು, ದಾದಿಯರು, ಸಹಾಯಕ ದಾದಿಯರು ಮತ್ತು 'ಮಹಿಳಾ ಆರೋಗ್ಯ ಸಂದರ್ಶಕರು. ಮತ್ತು ಕೇವಲ 4.6ರಷ್ಟು ಮನೆ ಹೆರಿಗೆಗಳು ನುರಿತ ಆರೋಗ್ಯ ಸೇವೆ ಪೂರೈಕೆದಾರರಿಂದ ಸಹಾಯ ಮಾಡಲ್ಪಟ್ಟವು. ಮನೆ ಹೆರಿಗೆಗಳಲ್ಲಿ ಬಹುಪಾಲು - ಶೇಕಡಾ 23 - ಸಾಂಪ್ರದಾಯಿಕ ಜನನ ಪರಿಚಾರಕರ (ದಾಯ್) ಸಹಾಯದಿಂದ ನಡೆಯಿತು.

Left: Manisha proudly discusses her husband Dheeraj’s cricket accomplishments. Right: Her two-year-old son Rohan was born in a private hospital
PHOTO • Jigyasa Mishra
Left: Manisha proudly discusses her husband Dheeraj’s cricket accomplishments. Right: Her two-year-old son Rohan was born in a private hospital
PHOTO • Jigyasa Mishra

ಎಡ: ಮನೀಷಾ ತನ್ನ ಪತಿ ಧೀರಜ್ ಅವರ ಕ್ರಿಕೆಟ್ ಸಾಧನೆಗಳ ಬಗ್ಗೆ ಹೆಮ್ಮೆಯಿಂದ ಚರ್ಚಿಸುತ್ತಾರೆ. ಬಲ: ಆಕೆಯ ಎರಡು ವರ್ಷದ ಮಗ ರೋಹನ್ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ

ಪಾಲಿ ನಾಡೋಲಿ, ದೋಬಾ ಮತ್ತು ಸಿಂಗೋಲಿ ಎಂಬ ಮೂರು ಗ್ರಾಮಗಳಲ್ಲಿ ಮಮತಾ ರಾವತ್ ಏಕೈಕ ಆಶಾ ಕಾರ್ಯಕರ್ತೆ (ಮೂರು ಗ್ರಾಮಗಳ ಒಟ್ಟು ಜನಸಂಖ್ಯೆ 1237). ಹೆರಿಗೆಯ ಮೊದಲು ಮತ್ತು ನಂತರ ಹೇಗೆ ನೋಡಿಕೊಳ್ಳಬೇಕು ಎಂಬುದರ ಕುರಿತು ಅವರು ನಿರಂತರವಾಗಿ ಮನೀಷಾರ ಕುಟುಂಬದೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. "ನಾನು ಮೊದಲ ತ್ರೈಮಾಸಿಕದಲ್ಲಿ ಮನೀಷಾ ಅವರನ್ನು ಆಸ್ಪತ್ರೆಗೆ ಕರೆದೊಯ್ದೆ" ಎಂದು ಮಮತಾ ಹೇಳುತ್ತಾರೆ. ಇಬ್ಬರೂ ಮಮತಾ ಅವರ ಸ್ಕೂಟರ್‌ನಲ್ಲಿ ಪಾಲಿ ನಾಡೋಲಿಗೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು.

"ಅವಳ ಹೆರಿಗೆಗೆ ಕೇವಲ 10 ದಿನಗಳ ಮೊದಲು, ಆಗಸ್ಟ್ ಮೊದಲ ವಾರದಲ್ಲಿ ನಾನು ಅವಳೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದೆ. ಸರಿಯಾದ ಆರೈಕೆ ಮತ್ತು ಮುನ್ನೆಚ್ಚರಿಕೆಗಳೊಂದಿಗೆ ಆಸ್ಪತ್ರೆಗೆ [ಪಿಎಚ್‌ಸಿಗೆ ಮಾತೃತ್ವ ವಾರ್ಡ್ ಇದೆ] ಹೋಗಲು ಹೇಳಿದ್ದೆ. ಅವಳ ಹೆರಿಗೆಯಾಗಬೇಕಿದ್ದ ದಿನ ಕಳೆದರೂ ಅವಳ ಕುಟುಂಬದವರು ಕರೆ ಮಾಡಿರಲಿಲ್ಲ. ನಂತರ ನಾನು ವಿಚಾರಿಸಲು ಕರೆ ಮಾಡಿದೆ. ಮತ್ತು ನನಗೆ ಆಶ್ಚರ್ಯವಾಗುವಂತೆ, ಮನೀಷಾ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಳು. ಆಸ್ಪತ್ರೆಯಲ್ಲಿ ಹೆರಿಗೆ ಮಾಡಬೇಕೆಂದು ನನ್ನ ಸಲಹೆ ವ್ಯರ್ಥವಾಗಿತ್ತು, ”ಎಂದು ಮಮತಾ ಹೇಳುತ್ತಾರೆ. ತನ್ನ ಸಲಹೆಯನ್ನು ಕಡೆಗಣಿಸಿದ್ದಕ್ಕಾಗಿ ಅವರ ದನಿಯಲ್ಲಿ ಬೇಸರವಿತ್ತು.

ಏತನ್ಮಧ್ಯೆ, ಸೆಪ್ಟೆಂಬರ್ ಆ ದಿನ ಬೆಳಿಗ್ಗೆ ಮನೀಷಾ ಅವರ ಮನೆಯಲ್ಲಿ ಸೂರ್ಯನ  ಬೆಳಕು ಒಳ ಬರುತ್ತಿತ್ತು. ಅವರು ಇನ್ನೂ ನಿದ್ದೆ ಮಾಡುತ್ತಿರುವ ತನ್ನ ಎರಡು ವರ್ಷದ ಮಗನನ್ನು ಎತ್ತಿಕೊಂಡು ಅವನನ್ನು ಪಕ್ಕಕ್ಕೆ ಎಳೆದುಕೊಂಡು, “ಎದ್ದೇಳು! ನೋಡು, ನಿನ್ನ ತಂಗಿ ಆಗಲೇ ಎದ್ದಿದ್ದಾಳೆ.”

ತದನಂತರ ನಾವು ಹೆರಿಗೆಯ ವಿಷಯದಿಂದ ದೂರ ಸರಿದೆವು. ಕ್ರಿಕೆಟ್‌ನ ಬಗ್ಗೆ ತನ್ನ ಗಂಡ ಧೀರಜ್‌ರ ಉತ್ಸಾಹವನ್ನು ಅವರು ಹೆಮ್ಮೆಯಿಂದ ಚರ್ಚಿಸಿದರು. "ನಮ್ಮ ಮದುವೆಯ ಆರಂಭಿಕ ದಿನಗಳಲ್ಲಿ, ಅವರು ಪ್ರತಿದಿನ ಅಭ್ಯಾಸ ಮಾಡುತ್ತಿದ್ದರು, ಆದರೆ ಕ್ರಮೇಣ, ಇತರ ಜವಾಬ್ದಾರಿಗಳು ಹೆಚ್ಚಾದವು. ಗೋಡೆಯ ಮೇಲೆ ಆ ಎಲ್ಲಾ ಪ್ರಶಸ್ತಿಗಳು ಮತ್ತು ಶೀಲ್ಡ್‌ಗಳನ್ನು ನೀವು ನೋಡಿದ್ದೀರಾ? ಅವೆಲ್ಲವೂ ಅವರಿಗೆ ಸೇರಿದ್ದು,” ಎಂದು ಅವರು ಹೇಳುತ್ತಾರೆ, ನೀಲಿ ಗೋಡೆಯ ಸೆಲ್ಫ್‌ನ ಮೇಲೆ ಆ ತುದಿಯಿಂದ ಈ ತುದಿಯವರೆಗೆ ಪ್ರಶಸ್ತಿಗಳಿಂದ ತುಂಬಿತ್ತು.

ಪರಿ ಮತ್ತು ಕೌಂಟರ್‌ಮೀಡಿಯಾ ಟ್ರಸ್ಟ್, ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಬೆಂಬಲದೊಂದಿಗೆ, ಗ್ರಾಮೀಣ ಭಾರತದ ಹದಿಹರೆಯದವರು ಮತ್ತು ಯುವತಿಯರ ಬಗ್ಗೆ ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದೊಂದು ಈ ಪ್ರಮುಖ ಆದರೆ ಸಮಾಜದ ಅಂಚಿನಲ್ಲಿರುವ ಗುಂಪಿನ ಪರಿಸ್ಥಿತಿಯನ್ನು ಅವರದೇ ಆದ ನಿರೂಪಣೆ ಮತ್ತು ಅನುಭವದ ಮೂಲಕ ಪ್ರಸ್ತುತಪಡಿಸುವ ಪ್ರಯತ್ನವಾಗಿದೆ.

ಈ ಲೇಖನವನ್ನು ಮರುಪ್ರಕಟಿಸಲು ಬಯಸುವಿರಾ? ದಯವಿಟ್ಟು [email protected] ಗೆ ಇ-ಮೇಲ್‌ ಬರೆಯಿರಿ. ccಯನ್ನು [email protected] ಈ ವಿಳಾಸಕ್ಕೆ ಸೇರಿಸಿ

ಜಿಗ್ಯಾಸಾ ಮಿಶ್ರಾ ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.

ಅನುವಾದ: ಶಂಕರ ಎನ್. ಕೆಂಚನೂರು

Jigyasa Mishra

Jigyasa Mishra is an independent journalist based in Chitrakoot, Uttar Pradesh.

Other stories by Jigyasa Mishra
Illustration : Labani Jangi

Labani Jangi is a 2020 PARI Fellow, and a self-taught painter based in West Bengal's Nadia district. She is working towards a PhD on labour migrations at the Centre for Studies in Social Sciences, Kolkata.

Other stories by Labani Jangi
Editor and Series Editor : Sharmila Joshi

Sharmila Joshi is former Executive Editor, People's Archive of Rural India, and a writer and occasional teacher.

Other stories by Sharmila Joshi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru