"ನಮಗೆ ಈ ಕರ್ಫ್ಯೂ ಅನ್ವಯಿಸುವುದಿಲ್ಲ. ನಾವು ಒಂದು ದಿನವೂ ರಜೆ ಪಡೆಯುವಂತಿಲ್ಲ. ಜನರು ಸುರಕ್ಷಿತವಾಗಿರಬೇಕಲ್ಲವೇ – ಅದಕ್ಕಾಗಿ ನಾವು ನಗರವನ್ನು ಸ್ವಚ್ಛಗೊಳಿಸುತ್ತಲೇ ಇರಬೇಕು", ಎನ್ನುತ್ತಾರೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದಲ್ಲಿನ ಸಫಾಯಿ ಕರ್ಮಚಾರಿ ದೀಪಿಕ.
ಎಲ್ಲ ಆರೋಗ್ಯ ಕಾರ್ಯಕರ್ತರಿಗೂ ‘ಕೃತಜ್ಞತೆಯನ್ನು’ ಸೂಚಿಸುವ ಸಲುವಾಗಿ ಸಂಜೆ 5ರ ವೇಳೆಗೆ ನೆರೆದಿದ್ದ ಗುಂಪುಗಳ ಹೊರತಾಗಿ, ಮಾರ್ಚ್ 22ರ ‘ಜನತಾ ಕರ್ಫ್ಯೂ’ ದೆಸೆಯಿಂದಾಗಿ ಎಲ್ಲರೂ ಮನೆಯಲ್ಲೇ ಉಳಿದಿದ್ದರು. ಈ ಕೃತಜ್ಞತೆಯು ಸಲ್ಲಿಕೆಯಾಗಿರಬಹುದಾದ ಸಫಾಯಿ ಕರ್ಮಚಾರಿಗಳು ಮೆಟ್ರೊ ಅನ್ನು ಗುಡಿಸುತ್ತಾ, ಸ್ವಚ್ಛಗೊಳಿಸುತ್ತ ದಿನವಿಡೀ ಕೆಲಸದಲ್ಲಿ ತೊಡಗಿದ್ದರು. "ಹಿಂದಿಗಿಂತಲೂ ಈಗ ನಮ್ಮ ಸೇವೆಯ ಅಗತ್ಯ ಹೆಚ್ಚಾಗಿದೆ. ಬೀದಿಗಳನ್ನು ನಾವು ವೈರಸ್ನಿಂದ ಮುಕ್ತಗೊಳಿಸಬೇಕು", ಎನ್ನುತ್ತಾರೆ ದೀಪಿಕ.
ಎಂದಿನಂತೆಯೇ ದೀಪಿಕ ಹಾಗೂ ಇತರರು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆಯೇ ಬೀದಿಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಪರಿಸ್ಥಿತಿಯು ಎಂದಿಗಿಂತಲೂ ಮತ್ತಷ್ಟು ಬಿಗಡಾಯಿಸಿತ್ತು. ದೇಶಾದ್ಯಂತ ಜಾರಿಗೊಳಿಸಲಾದ ಲಾಕ್ಡೌನ್ ಕಾರಣದಿಂದಾಗಿ, ಅವರಲ್ಲಿನ ಅನೇಕರು ಕಸವನ್ನು ಸಾಗಿಸುವ ವಾಹನಗಳಲ್ಲಿ ಪ್ರಯಾಣಿಸಿ ಕೆಲಸದ ಸ್ಥಳವನ್ನು ತಲುಪಬೇಕಾಯ್ತು. ಕೆಲವರು ಹಲವಾರು ಕಿ.ಮೀ.ಗಳನ್ನು ಕಾಲ್ನಡಿಗೆಯಲ್ಲಿ ಸವೆಸಿ ಕೆಲಸದ ಜಾಗಕ್ಕೆ ತಲುಪಿದರು. "ಮಾರ್ಚ್ 22ರಂದು ಬಹಳ ದೂರದಲ್ಲಿ ನೆಲೆಸಿರುವ ನನ್ನ ಸಹೋದ್ಯೋಗಿಗಳು ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಕಾರಣ, ಎಂದಿಗಿಂತಲೂ ಹೆಚ್ಚಿನ ಬೀದಿಗಳನ್ನು ನಾನು ಸ್ವಚ್ಭಗೊಳಿಸಬೇಕಾಯ್ತು", ಎಂದರು ದೀಪಿಕ.
ಛಾಯಾಚಿತ್ರದಲ್ಲಿನ ಬಹುತೇಕ ಮಹಿಳೆಯರು ಚೆನ್ನೈ ಕೇಂದ್ರೀಯ ಹಾಗೂ ದಕ್ಷಿಣ ಭಾಗದಲ್ಲಿನ ಥೌಸಂಡ್ ಲೈಟ್ಸ್ ಮತ್ತು ಆಳ್ವಾರ್ಪೇಟ್ ಹಾಗೂ ಅನ್ನಾ ಸಲೈನ ಹರಹೊಂದರ ಬಡಾವಣೆಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಾರೆ. ಈ ಮಹಿಳೆಯರ ಮನೆಗಳು ಬಹುತೇಕ ಉತ್ತರ ಚೆನ್ನೈನಲ್ಲಿದ್ದು, ಅವರು ಅಲ್ಲಿನ ತಮ್ಮ ಮನೆಗಳಿಂದ ಪ್ರಯಾಣಿಸಿ ಕೆಲಸದ ಸ್ಥಳವನ್ನು ತಲುಪಬೇಕಿರುತ್ತದೆ.
"ಇವರೀಗ ವಿಚಿತ್ರ ತೆರನಾದ ಕೃತಜ್ಞತೆಯನ್ನು ಪಡೆಯುತ್ತಿದ್ದಾರೆ. ಮಾರ್ಚ್ 24ರಂದು ಲಾಕ್ಡೌನ್ ಪ್ರಕಟಣೆಯಾದಾಗಿನಿಂದಲೂ ನಾವು ರಜೆ ಪಡೆಯಲು ಸಾಧ್ಯವಾಗಿಲ್ಲವೆಂದು" ಇವರು ದೂರುತ್ತಾರೆ. ಇವರು ರಜೆಯ ಮೇಲೆ ತೆರಳುವಂತಿಲ್ಲ. ಸಿಐಟಿಯು ಜೊತೆಗೆ ಸಂಯೋಜಿತಗೊಂಡ ಚೆನ್ನೈ ಕಾರ್ಪೊರೇಷನ್ ರೆಡ್ ಫ್ಲ್ಯಾಗ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಬಿ. ಶ್ರೀನಿವಾಸುಲು; ಈಗ ಗೈರುಹಾಜರಾದಲ್ಲಿ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆಯೆಂದು ಅವರಿಗೆ ತಿಳಿಸಲಾಗಿದೆ ಎಂಬುದಾಗಿ ತಿಳಿಸಿದರು. ಸಂಚಾರಕ್ಕೆಂದು ಬಸ್ಸುಗಳನ್ನು ಒದಗಿಸಿದ್ದಾಗ್ಯೂ, ಅವುಗಳು ಸಾಕಷ್ಟಿಲ್ಲ ಹಾಗೂ ಆಗಾಗ್ಗೆ ತಡವಾಗುತ್ತಿದೆ. ಹೀಗಾಗಿ ಕೆಲಸಗಾರರು ಬಲವಂತದಿಂದ ಕಸಕ್ಕೆಂದು ನಿಯೋಜಿಸಲ್ಪಟ್ಟ ಲಾರಿಗಳನ್ನು ಬಳಸುವಂತಾಗಿದೆ. ಇಲ್ಲಿನ ಸಫಾಯಿ ಕರ್ಮಚಾರಿಗಳು ಮಾಹೆಯಾನ 9 ಸಾವಿರ ರೂ.ಗಳನ್ನು ಸಂಪಾದಿಸುತ್ತಾರಾದರೂ, ಸಹಜ ಪರಿಸ್ಥಿತಿಗಳಲ್ಲೂ, ಪ್ರತಿದಿನವೂ ಅವರು 60 ರೂ.ಗಳನ್ನು ಪ್ರಯಾಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ನಿಷೇಧಾಜ್ಞೆ ಹಾಗೂ ಲಾಕ್ಡೌನ್ ಸಮಯದಲ್ಲಿ, ಸರ್ಕಾರಿ ಬಸ್ಸುಗಳು ಅಥವ ಕಾರ್ಪೊರೇಷನ್ ವ್ಯವಸ್ಥೆಗೊಳಿಸಿದ ವಾಹನಗಳಲ್ಲಿ ಪ್ರಯಾಣಿಸಲಾಗದವರು ಕಾಲ್ನಡಿಗೆಯನ್ನೇ ನೆಚ್ಚಿದ್ದಾರೆ ಎಂದು ಸಹ ಶ್ರೀನಿವಾಸುಲು ತಿಳಿಸುತ್ತಾರೆ.



















