“ಜನರು ಈ ವರ್ಷದಲ್ಲಿ ಗಣೇಶನ ಮೂರ್ತಿಗಳನ್ನು ಕೊಳ್ಳುವರೆಂದು ನಿಮಗನಿಸುತ್ತದೆಯೇ? ದೇವರಲ್ಲಿ ನಂಬಿಕೆಯಿಟ್ಟು, ಪ್ರತಿ ವರ್ಷವೂ ಈ ಮೂರ್ತಿಗಳನ್ನು ರೂಪಿಸುತ್ತೇವೆ. ಆತನ ದಯೆಯಿಂದ ಸ್ವಲ್ಪಮಟ್ಟಿನ ಲಾಭವನ್ನೂ ಪಡೆದಿದ್ದೇವೆ. ಆದರೆ ಈ ವರ್ಷ ದೇವರೇ ಇದ್ದಂತಿಲ್ಲ. ಕೇವಲ ಲಾಕ್ಡೌನ್ ಮತ್ತು ವೈರಸ್ಗಳೇ” ಎನ್ನುತ್ತಾರೆ, ವಿಶಾಖಪಟ್ಟಣದ ಕುಮ್ಮಾರಿ ವೀಧಿಯ (ಕುಂಬಾರರ ಬೀದಿ) ನಿವಾಸಿ, ಗೌರಿ ಶಂಕರ್.
ಆಂಧ್ರಪ್ರದೇಶದ ಈ ಜಿಲ್ಲೆಯಲ್ಲಿ, 63ರ ವಯಸ್ಸಿನ ಶಂಕರ್, 43ರ ವಯಸ್ಸಿನ ತಮ್ಮ ಮಗ ವೀರಭದ್ರ ಮತ್ತು 36ರ ಸೊಸೆ ಮಾಧವಿಯೊಂದಿಗೆ, ಪ್ರತಿ ವರ್ಷವೂ ಏಪ್ರಿಲ್ ತಿಂಗಳಿನಲ್ಲಿ ಗಣೇಶನ ಮೂರ್ತಿಗಳನ್ನು ತಮ್ಮ ಮನೆಯಲ್ಲಿ, ತಯಾರಿಸಲು ಪ್ರಾರಂಭಿಸುತ್ತಾರೆ. ಆದರೆ, ಸರ್ವವ್ಯಾಪಿ ವ್ಯಾಧಿಯಿಂದಾಗಿ, ಈ ವರ್ಷ, ಮೂರ್ತಿಗಳನ್ನು ಪ್ರಾರಂಭಿಸಲು ಅವರಿಗೆ ಸಾಧ್ಯವಾದದ್ದು, ಜೂನ್ ಮಧ್ಯ ಭಾಗದಲ್ಲಿ ಮಾತ್ರವೇ.
ಸಾಮಾನ್ಯವಾಗಿ, ವಿನಾಯಕತಯ ಚತುರ್ಥಿ ಮತ್ತು ದೀಪಾವಳಿ ಸಂಬಂಧಿತ ಆರ್ಡರುಗಳ (order) ಪೂರೈಕೆಯಿಂದ ಜುಲೈನಿಂದ ಮತ್ತು ಅಕ್ಟೋಬರ್ ಅವಧಿಯಲ್ಲಿ (ಕುಂಬಾರರ ಹಬ್ಬದ ಕಾಲ) ಪ್ರತಿ ತಿಂಗಳು 20,000 - Rs. 23,000 ರೂ.ಗಳನ್ನು ಸಂಪಾದಿಸುತ್ತೇವೆಂದು ತಿಳಿಸುವ ಅವರಿಗೆ ಈ ವರ್ಷದಲ್ಲಿ, ವಿನಾಯಕ ಚತುರ್ಥಿಗೆ ಕೇವಲ 48 ಗಂಟೆಗಳ ಸಮಯ ಉಳಿದಿದ್ದಾಗ್ಯೂ, ಒಂದಾದರೂ ದೊಡ್ಡ ಪ್ರಮಾಣದ ಆರ್ಡರು ದೊರೆತಿರಲಿಲ್ಲ.
ಕೇವಲ ೧೫ ವರ್ಷಗಳ ಹಿಂದೆ, ಕುಂಬಾರರ ಬೀದಿಯು ಈ ಜೀವನೋಪಾಯದಲ್ಲಿ ಮಗ್ನರಾಗಿದ್ದ ೩೦ ಕುಂಬಾರರ ಪರಿವಾರಗಳ ಚಟುವಟಿಕೆಯಿಂದ ಗಿಜಿಗುಡುತ್ತಿತ್ತು. ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಪ್ರಾರಂಭಗೊಂಡ ಲಾಕ್ಡೌನ್ನಿಂದಾಗಿ ಈ ಪರಿವಾರಗಳ ಪರಿಸ್ಥಿತಿಯು ಹದಗೆಟ್ಟಿದೆ.
“ಆಂಧ್ರ ಪ್ರದೇಶದ ಶ್ರೀಕಾಕುಳಂನವರಾದ ಮಾಧವಿ ಹೀಗೆನ್ನುತ್ತಾರೆ: “ಮೂರ್ತಿಗಳನ್ನು ವಿತರಿಸುವ ವ್ಯಾಪಾರಿಗಳಿಂದ ನಾವು ದೊಡ್ಡ ಪ್ರಮಾಣದ ಆರ್ಡರುಗಳನ್ನು ಪಡೆಯುತ್ತೇವೆ. ಆದರೆ, ಈ ವರ್ಷ ನಮಗೆ ಯಾವುದೇ ಆರ್ಡರುಗಳು ಸಿಗಲಿಲ್ಲ.” ಈಕೆಯ ಪತಿಯ ಪೋಷಕರು ವಿಜಿ಼ಯನಗರಂ ಜಿಲ್ಲೆಯ ಹಳ್ಳಿಯೊಂದರಿಂದ ಬಂದವರು.











