ಮಾರ್ಚ್ 27ರಂದು ಮಧ್ಯರಾತ್ರಿ 1 ಗಂಟೆಗೆ ಹೀರಾ ಮುಕಾನೆ ಥಾಣೆ ಜಿಲ್ಲೆಯ ಶಹಾಪುರ ತಾಲೂಕಿನ ದಲ್ಖಾನ್ ಹಳ್ಳಿಯ ಹೊರವಲಯದಲ್ಲಿರುವ ಮನೆಗೆ ಆಗಮಿಸಿದರು. ಹೀರಾ ಅವರ ಮಗ ಮನೋಜ್ ಮತ್ತು ಸೊಸೆ ಶಾಲು 104 ಕಿಲೋಮೀಟರ್ ಪ್ರಯಾಣವನ್ನು ತಮ್ಮ ಕಾಲ್ನಡಿಗೆಯಲ್ಲಿ ಎಲ್ಲಿಯೂ ಸಣ್ಣ ವಿರಾಮ ಕೂಡ ತೆಗೆದುಕೊಳ್ಳದೆ ನಡೆದಿದ್ದರು. ಅವರು ಕೆಲಸಕ್ಕೆ ಹೋಗಿದ್ದ ಪಾಲ್ಘರ್ ಜಿಲ್ಲೆಯ ದಹನು ತಾಲೂಕಿನ ಗಂಜದ್ ಹಳ್ಳಿಯ ಬಳಿಯ ಇಟ್ಟಿಗೆ ಗೂಡಿನಿಂದ ವಾಪಸ್ ನಡೆದಿದ್ದರು.
“ಯಾವುದೂ ಗಾಡಿ ವ್ಯವಸ್ಥಾ ಇದ್ದಿರಲಿಲ್ರಿ, ಹಂಗಾಗಿ ನಾವು ಇಡೀ ದಿನಾನೂ ಹಂಗ ನಡಿದ್ವಿರ್ರಿ, ಯಾವಾಗ್ಲೂ ಸರ್ಕಾರಿ ಬಸ್ ಗಂಜದನಿಂದ ಶಹಾಪುರಕ್ಕ ಹೋಗುತ್ತ ರ್ರೀ" ಎಂದು 45 ವರ್ಷದ ಹೀರಾ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು. ಅವರು ಮಾರ್ಚ್ 26ರಂದು ಬೆಳಿಗ್ಗೆ 4 ಗಂಟೆಗೆ ಹೊರಟರು, ಹೀರಾ ಮತ್ತು ಶಾಲು ತಮ್ಮ ತಲೆಯ ಮೇಲೆ ಬಟ್ಟೆಯ ಮೂಟೆ ಮತ್ತು ಪಾತ್ರೆಗಳ ಚೀಲವನ್ನು ಹೊತ್ತುಕೊಂಡರು. ಮನೋಜ್ 21 ಗಂಟೆಗಳ ಪ್ರಯಾಣದಲ್ಲಿ 12 ಕಿಲೋ ಅಕ್ಕಿ ಚೀಲವನ್ನು ಮತ್ತು 8 ಕಿಲೋ ರಾಗಿ ಹಿಟ್ಟನ್ನು ಕೈಯಲ್ಲಿ ಇಟ್ಟುಕೊಂಡಿದ್ದರು. "ನಮಗ ಕಾಲು ನೋಯ್ಯುಂಗಿಲ್ಲ, ಯಾಕಂದ್ರ ನಮಗ ಸರ್ಕಾರಿ ಬಸ್ ಟೈಮಿಗೆ ಸರಿಯಾಗಿ ಬರದಿರುವುದರಿಂದ ಬಾಳ್ ದೂರದವರೆಗೆ ನಡೆದು ಅಭ್ಯಾಸ ಐತ್ರಿ. ಆದ್ರ ಏನೂ ಆದಾಯ ಇಲ್ಲದೇ ಇರೋದು ಈಗ ಬಾಳ್ ನೋವು ಆಗೇತ್ರಿ" ಎನ್ನುತ್ತಾ ಅವರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದರು.
ಹೀರಾ ಮಾರ್ಚ್ 2ರಂದು ಮನೆಯಿಂದ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡಲು 27 ವರ್ಷದ ಮನೋಜ್ 25 ವರ್ಷದ ಶಾಲು ಜೊತೆ ಹೊರಟಾಗ, ಅವರು ಈ ವರ್ಷ ಮೇ ತಿಂಗಳಲ್ಲಷ್ಟೇ ವಾಪಸ್ ಮರಳಲು ಯೋಜಿಸಿದ್ದರು. ಆದರೆ ಮಾರ್ಚ್ 24ರಂದು ಘೋಷಿಸಿದ ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದಾಗಿ ಅವರ ವೇಳಾಪಟ್ಟಿ ಕಡಿತಗೊಂಡಿತು "ನಾವು , ಮಾರ್ಚಿಯಿಂದ ಮೇ ತಿಂಗಳ ತನಕ ಕಡಿಮೆ ಅಂದ್ರು 50,000 ರೂ.ದುಡಿಬೇಕಂತ ಮಾಡಿದ್ವಿರ್ರಿ, ಆದ್ರ ನಮ್ಮ ಮಾಲಕ ಕೆಲಸ ಬಂದ್ ಮಾಡಿ, ನೀವು ವಾಪಸ್ ಮನಿಗೆ ಹೋಗ್ರಿ ಅಂತಾ ಹೇಳಿದ್ರು. ಮೂರು ವಾರ ದುಡಿದಿದ್ದಕ್ಕೆ ಅವರು ಬರಿ 8,000 ರೂ. ಕೊಟ್ಟಾರ್ರೀ” ಎಂದು ಹೀರಾ ಎಲ್ಲವನ್ನು ಕಥೆ ಮಾಡಿ ಪೋನ್ ಕರೆಯಲ್ಲಿ ವಿವರಿಸುತ್ತಿದ್ದರು.
ಹಾಗಾಗಿ ಮೂವರು ಮಾರ್ಚ್ ಅಂತ್ಯದಲ್ಲಿ ಅನಿರೀಕ್ಷಿತವಾಗಿ ದಲ್ಖಾನ್ ಗೆ ಹಿಂತಿರುಗಿದಾಗ, ಹೀರಾ ಅವರ ಪತಿ ವಿಠ್ಠಲ್ (52) ಮತ್ತು ಅವರ 15 ವರ್ಷದ ಮಗಳು ಸಂಗೀತಾ ಅವರನ್ನು ನೋಡಿ ಆಶ್ಚರ್ಯಚಕಿತರಾದರು. ಹೀರಾ ಅವರಿಗೆ ವಾಪಸ್ ಫೋನಿನಲ್ಲಿ ತಿಳಿಸಲು ಸಾಧ್ಯವಾಗಲಿಲ್ಲ. ಕುಡಗೋಲು-ಕಣ ರೋಗ (Sickle Cell Disease) ದಿಂದ ಬಳಲುತ್ತಿರುವ ಪತಿ ವಿಠ್ಠಲ್ ಅವರಿಗೆ ಯಾವುದೇ ದೈಹಿಕ ಶ್ರಮದ ಕೆಲಸ ಮಾಡಲು ಸಾಧ್ಯವಿಲ್ಲ, ಹೀಗಾಗಿ ಉಳಿದವರು ಗಂಜದಕ್ಕೆ ಹೋದಾಗ ಅವರು ಸಂಗೀತಾಳೊಂದಿಗೆ ಊರಲ್ಲೇ ಉಳಿದುಕೊಂಡಿದ್ದರು
ನಾನು ಜುಲೈ 2018ರಲ್ಲಿ ದಲ್ಖಾನಿನಲ್ಲಿ ಹೀರಾ ಅವರನ್ನು ಭೇಟಿಯಾಗಿದ್ದೆ, ಅವರು ಆ ರಾತ್ರಿ ತನ್ನ ಕುಟುಂಬಕ್ಕೆ ಭೋಜನವನ್ನು ತಯಾರಿಸಲು ಜಮೀನಿನಲ್ಲಿ ತರಕಾರಿಗಳನ್ನು ಕೀಳುತ್ತಿದ್ದರು. ಅವರು ಕಟ್ಕರಿ ಬುಡಕಟ್ಟು ಸಮುದಾಯಕ್ಕೆ ಸೇರಿದವರು, ಈ ಆದಿವಾಸಿ ಸಮುದಾಯವನ್ನು ಮಹಾರಾಷ್ಟ್ರದಲ್ಲಿ ವಿಶೇಷ ದುರ್ಬಲ ಬುಡಕಟ್ಟು ಗುಂಪಿನ ಪಟ್ಟಿಯಲ್ಲಿ ಸೇರಿಸಲಾಗಿದೆ.






