ಆಗಲೇ ಕಗ್ಗತ್ತಲಾಗಿತ್ತು, ಬೆಳಗಿನವರಗೆ ಕಾಯುವಂತೆಯೂ ಇರಲಿಲ್ಲ, ಸಮಯ ಆಗಲೇ ಮುಂಜಾನೆ ಎರಡು ಗಂಟೆಯಾಗಿತ್ತು ಮತ್ತು ಇನ್ನೂ ಮೂರು ಗಂಟೆ ಎನ್ನುವಷ್ಟರಲ್ಲಿ ಪೋಲಿಸರು ಅವರನ್ನು ತಡೆದು ನಿಲ್ಲಿಸುತ್ತಿದ್ದರು. ಕಸರುಪು ಧನರಾಜ್ ಮತ್ತು ಅವರ ಇಬ್ಬರು ಸಹೋದ್ಯೋಗಿಗಳು ಪೊಲೀಸರು ಎಚ್ಚೆತ್ತುಕೊಳ್ಳುವ ಮೊದಲು ಪಾರಾಗಿದ್ದರು. ಸ್ವಲ್ಪಸಮಯದ ಬಳಿಕ ಅವರು ನೀರಿನಲ್ಲಿದ್ದರು.
ಏಪ್ರಿಲ್ 10ರಂದು ತಾವು ತಪ್ಪಿಸಿಕೊಂಡು ಬಂದಿರುವ ಬಗ್ಗೆ ವಿವರಿಸುತ್ತಾ " ನಾನು ಆರಂಭದಲ್ಲಿ ಹೋಗಲು ತುಂಬಾ ಹೆದರುತ್ತಿದ್ದೆ. ಆದರೆ ಇದಕ್ಕಾಗಿ ನಾನು ಸ್ವಲ್ಪ ಧೈರ್ಯ ಮಾಡಬೇಕಾಯಿತು. ಬಾಡಿಗೆ ಬೇರೆ ಕಟ್ಟಬೇಕಾಗಿದ್ದರಿಂದ ನನಗೆ ಹಣದ ಅವಶ್ಯಕತೆ ಇತ್ತು" ಎಂದು 44 ವರ್ಷದ ಧನರಾಜು ವಿವರಿಸಿದರು, ಹತಾಶಗೊಂಡಿರುವ ಎಲ್ಲ ಸಹಚರರ ಜೊತೆ ಸೇರಿ ಔಟ್ ಬೋರ್ಡ್ ಮೋಟಾರ್ ಹೊಂದಿರುವ ಸಣ್ಣ ಬೋಟ್ ಮೂಲಕ ಸಮುದ್ರಕ್ಕೆ ಇಳಿದರು. ಲಾಕ್ಡೌನ್ನಿಂದಾಗಿ ಬಂದರಿನಲ್ಲಿ ಮೀನುಗಾರಿಕೆ ಮತ್ತು ಇತರ ಚಟುವಟಿಕೆಗಳಿಗೆ ತಡೆಯೊಡ್ಡಲಾಗಿದೆ ಮತ್ತು ಪ್ರತಿದಿನ ಬೆಳಿಗ್ಗೆ 5 ಗಂಟೆಯ ಹೊತ್ತಿಗೆ, ವಿಶಾಖಪಟ್ಟಣಂನ ಮೀನುಗಾರಿಕೆ ಬಂದರಿನ ಎರಡು ಪ್ರವೇಶದ್ವಾರಗಳಲ್ಲಿ ಪೊಲೀಸರು ಆಗಮಿಸುತ್ತಾರೆ. ಇಲ್ಲಿನ ಮಾರುಕಟ್ಟೆಯಲ್ಲಿ ಈಗ ಸಾರ್ವಜನಿಕರಿಗೆ ಮತ್ತು ಮೀನುಗಾರರಿಗೆ ನಿರ್ಬಂಧ ವಿಧಿಲಾಗಿದೆ.
ಧನರಾಜು ಬೆಳಗು ಹರಿಯುವುದಕ್ಕೂ ಮೊದಲೇ 6-7 ಕೆಜಿಯಷ್ಟು ಬಂಗಾರು ಥೀಗಾ (ಒಂದು ಬಗೆಯ ಮೀನು) ತೆಗೆದುಕೊಂಡು ಬಂದರು. "ಆಗಲೇ ಇದು ಅಂತಿಮ ಕರೆಯಾಗಿತ್ತು" ನಾನು ಹಿಂದಿರುಗಿದ ಕೆಲವೇ ನಿಮಿಷಗಳ ನಂತರ ಪೊಲೀಸರು ಸಹ ಬಂದರು. ಒಂದು ವೇಳೆ ಅವರು ನನ್ನನು ಹಿಡಿದ್ದರೆ ಅವರು ಸರಿಯಾಗಿ ಬಾರಿಸುತ್ತಿದ್ದರು. ಆದರೆ ಇಂತಹ ಕಷ್ಟಕರ ಕಾಲದಲ್ಲಿ, ಬದುಕುಳಿಯಲು ಏನು ಮಾಡಬೇಕೋ ಅದನ್ನ ಮಾಡಲೇ ಬೇಕಾಗುತ್ತದೆ. ಇವತ್ತು ನನ್ನ ಬಾಡಿಗೆಯನ್ನು ಪಾವತಿಸುತ್ತೇನೆ, ನಾಳೆ ಮತ್ತೆ ಏನಾದರೂ ಬರಬಹುದು. ನನಗೆ ಕೊರೊನಾ ಸೋಂಕು ತಗಲಿಲ್ಲ, ಆದರೂ ಕೂಡ ಅದು ಆರ್ಥಿಕವಾಗಿ ನನ್ನ ಮೇಲೆ ಪರಿಣಾಮ ಬೀರುತ್ತಿದೆ" ಎಂದು ವಿವರಿಸಿದರು.
ಚೆಂಗಲ್ ರಾವ್ ಪೇಟಾದ ಡಾ.ಎನ್.ಟಿ.ಆರ್ ಬೀಚ್ ರಸ್ತೆಯ ಹಿಂಭಾಗದಲ್ಲಿರುವ ಕಿರಿದಾದ ಬೀದಿಯಲ್ಲಿ ಪೋಲೀಸರ ಕಣ್ಣು ತಪ್ಪಿಸಿ ತಮ್ಮ ತುಕ್ಕು ಹಿಡಿದ ಹಳೆಯ ರೋಮಾ ಸೈಕಲ್ನಲ್ಲಿ ವೈಟ್ ಬೋರ್ಡ್ ಇಟ್ಟುಕೊಂಡು ಮೀನುಗಳನ್ನು ಮಾರಾಟ ಮಾಡುತ್ತಾರೆ. " ನಾನು ಮುಖ್ಯ ರಸ್ತೆವರೆಗೆ ಸೈಕಲ್ ನ್ನು ತೆಗೆದುಕೊಂಡು ಹೋಗಬಹುದೆಂದು ಬಯಸುತ್ತೇನೆ, ಆದರೆ ನಾನು ಈಗ ಪೋಲೀಸರಿಂದಾಗಿ ಹೆದರಬೇಕಾಗಿದೆ " ಎಂದು ಧನರಾಜು ಹೇಳುತ್ತಾರೆ. ಈಗ ಅವರು ಸಾಮಾನ್ಯವಾಗಿ ಒಂದು ಕೆಜಿ ಮೀನಿಗೆ 250 ರೂ ಗಳಿಗೆ ಮಾರುವುದರ ಬದಲಾಗಿ ಕೇವಲ 100 ರೂ ಗೆ ಮಾರುತ್ತಿದ್ದಾರೆ.
ಧನರಾಜು ಪರಿಸ್ಥಿತಿ ಸಹಜವಾಗಿದ್ದಾಗ 6-7 ಕೆಜಿ ಮೀನುಗಳನ್ನು ಮಾರಾಟ ಮಾಡಿದ್ದರೆ, ಅವರಿಗೆ 1,500 ರೂ ದಿಂದ 1,750 ರೂ ಗಳವರೆಗೆ ಸಂಪಾದನೆ ಬರುತ್ತಿತ್ತು. ಆದರೆ ಈಗ ಅವರ ಸೈಕಲ್ಲಿನ ಮೀನು ಅಂಗಡಿ ಅಷ್ಟಾಗಿ ಗಮನ ಸೆಳೆಯುತ್ತಿಲ್ಲ. ಈಗ ಅವರು ಹಿಡಿದಿರುವ ಮೀನುಗಳನ್ನು ಮಾರಾಟ ಮಾಡಲು ಎರಡು ದಿನಗಳು ಬೇಕಾಗುತ್ತದೆ, ಅದರಿಂದ ಅವರಿಗೆ ಸರಿ ಸುಮಾರು 750 ರೂ.ಗಳ ಆದಾಯ ಬರುತ್ತದೆ.ಈಗ ಧನರಾಜು ಕೆಲಸಗಳಿಗೆ 46 ವರ್ಷದ ಪಪ್ಪುದೇವಿ ಜೊತೆಯಾಗಿದ್ದಾರೆ. ಮೀನುಗಳನ್ನು ಕತ್ತರಿಸುವುದು ಮತ್ತು ಸ್ವಚ್ಛಗೊಳಿಸುವುದಕ್ಕಾಗಿ ಅವರು 10-20 ರೂ, ಗ್ರಾಹಕರಿಂದ ಪಡೆಯುತ್ತಾರೆ. ಈಗ ತಮ್ಮ ಹಣದ ಅಗತ್ಯತೆಯನ್ನು ಪೂರೈಸಲು ಅವರು ಅಲ್ಲಿ ಅಪಾಯಕ್ಕೆ ಒಡ್ಡಿಕೊಳ್ಳಬೇಕಾಗಿದೆ.










