"ಅಂತಿಮವಾಗಿ ಅವಳ ಸಾವಿಗೆ ಕಾರಣವೇನೆಂದು ನನಗೆ ತಿಳಿದಿಲ್ಲ ಆದರೆ ಅವಳಿಗೆ ಸಿಗಬೇಕಿದ್ದಷ್ಟು ಆರೈಕೆ ಸಿಕ್ಕಿಲ್ಲವೆನ್ನುವುದು ನನಗೆ ತಿಳಿದಿದೆ." ಸುಬಾಶ್ ಕಬಾಡೆ ತನ್ನ ಸಹೋದರಿಯ ಸಾವಿನ ಕುರಿತು ವಿವರಿಸುತ್ತಾ ಇದನ್ನು ಹೇಳುತ್ತಾರೆ.
ಮಹಾರಾಷ್ಟ್ರದ ಬೀಡ್ ನಗರದ ಸಿವಿಲ್ ಆಸ್ಪತ್ರೆಯಲ್ಲಿ ಅವರ ಸಹೋದರಿ ಲತಾ ಸುರ್ವಾಸೆ ಸಾವನ್ನಪ್ಪಿದ ಹಿಂದಿನ ರಾತ್ರಿ, ವೈದ್ಯರು ಎರಡು ಚುಚ್ಚುಮದ್ದನ್ನು ಅವರಿಗೆ ತುರ್ತಾಗಿ ನೀಡಬೇಕಾಗಿದೆಯೆಂದು ಸೂಚಿಸಿದ್ದರು. ಆ ಕೂಡಲೇ ಸುಭಾಷ್ ಅಲ್ಲೇ ಹೊರಗಿದ್ದ ಮೆಡಿಕಲ್ ಸ್ಟೋರಿನಿಂದ ಔಷಧಿ ಖರೀದಿಸಿ ಓಡಿಬಂದಿದ್ದರು. ಆದರೆ ಆ ಹೊತ್ತಿಗಾಗಲೇ ವೈದ್ಯರು ಅಲ್ಲಿಂದ ಹೊರಟು ಹೋಗಿದ್ದರು.
“ಅವರು ಒಂದೇ ಸಮಯದಲ್ಲಿ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ನಾನು ಬರುವಷ್ಟರಲ್ಲಿ ಬೇರೆ ವಾರ್ಡ್ಗೆ ಹೋಗಿದ್ದರು” ಎಂದು 25 ವರ್ಷದ ಸುಭಾಷ್ ಹೇಳುತ್ತಾರೆ. “ನಾನು ಇಂಜೆಕ್ಷನ್ ಬಗ್ಗೆ ನರ್ಸ್ಗೆ ಹೇಳಿದಾಗ, ಅವರು ಲತಾಳ ಫೈಲ್ ಅನ್ನು ನೋಡಿದರು. ಅದರಲ್ಲಿ ಏನೂ ಬರೆದಿರಲಿಲ್ಲ. ಕೆಲವು ನಿಮಿಷಗಳ ಹಿಂದೆಯಷ್ಟೇ, ಅವರು ಇಂಜೆಕ್ಷನ್ ತರುವಂತೆ ಹೇಳಿದರು, ಹಾಗಾಗಿ ಅದು ಫೈಲ್ನಲ್ಲಿಲ್ಲ ಎಂದು ನಾನು ಅವರಿಗೆ ಹೇಳಿದೆ.”
ಆದರೆ ನರ್ಸ್ ಅವರ ಮಾತುಗಳನ್ನು ಕೇಳಲಿಲ್ಲ. ಅವರು ಭಾವಾವೇಶದಿಂದ ಇಂಜೆಕ್ಷನ್ ಕೊಡುವಂತೆ ಬೇಡಿಕೊಂಡಾಗ “ಅಲ್ಲಿದ್ದ ಉಸ್ತುವಾರಿ ವ್ಯಕ್ತಿ ಸೆಕ್ಯುರಿಟಿ ಕರೆಸುವುದಾಗಿ ಹೆದರಿಸಿದ,” ಎನ್ನುತ್ತಾರೆ ಸುಭಾಷ್. ವಾಗ್ವಾದದಲ್ಲೇ ಒಂದು ಗಂಟೆ ಕಳೆದ ನಂತರ ರೋಗಿಗೆ ಇಂಜೆಕ್ಷನ್ ನೀಡಲಾಯಿತು.
ಲತಾ ಮರುದಿನ ಬೆಳಿಗ್ಗೆ, ಮೇ 14 ರಂದು ನಿಧನರಾದರು. ಅವರು ಕೋವಿಡ್ ಸೋಂಕು ತಗುಲಿದ್ದು ದೃಢಗೊಂಡ ದಿನವಾದ ಏಪ್ರಿಲ್ 23ರಿಂದ ಆಸ್ಪತ್ರೆಯಲ್ಲಿದ್ದರು, ಬೀಡ್ ನಗರದ ವಕೀಲ ಸುಬಾಷ್ ಹೇಳುತ್ತಾರೆ, “ಅವಳು ಆಗೊಮ್ಮೆ ಈಗೊಮ್ಮೆ ಚೇತರಿಕೆಯ ಲಕ್ಷಣಗಳನ್ನು ತೋರಿಸಿದ್ದಳು." ಚುಚ್ಚುಮದ್ದನ್ನು ಸಮಯಕ್ಕೆ ನೀಡಿದ್ದರೆ, ಅವಳ ಜೀವವನ್ನು ಉಳಿಸಬಹುದಿತ್ತೆನ್ನುವುದರ ಕುರಿತು ಅವರಿಗೆ ಖಚಿತವಿಲ್ಲ. ಆದರೆ ಆಸ್ಪತ್ರೆಯಲ್ಲಿ ಹೆಚ್ಚಿನ ಸಿಬ್ಬಂದಿ ಇಲ್ಲದಿರುವುದು ಅವರಿಗೆ ಖಚಿತವಾಗಿ ತಿಳಿದಿದೆ. "ಇದು ರೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ" ಎಂದು ಅವರು ಹೇಳುತ್ತಾರೆ.
ಈ ವರ್ಷದ ಮಾರ್ಚ್ನಿಂದ, ಕೋವಿಡ್ -19ರ ಎರಡನೇ ಅಲೆಯು ವೇಗವಾಗಿ ಹರಡತೊಡಗಿದ ನಂತರ ಅದು ಗ್ರಾಮೀಣ ಭಾರತದಲ್ಲಿನ ಈಗಾಗಲೇ ತಾಳಲಾರದ ಹೊರೆ ಹೊತ್ತಿದ್ದ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿನ ಕುಂದು ಕೊರತೆಗಳನ್ನು ಎತ್ತಿ ತೋರಿಸಿದೆ. ಸಿಬ್ಬಂದಿ ಕೊರತೆಯಿರುವ ಆಸ್ಪತ್ರೆಗಳು, ಬಳಲಿ ಹೋಗಿರುವ ಆರೋಗ್ಯ ಕಾರ್ಯಕರ್ತರು ಮತ್ತು ಉತ್ತಮ ಚಿಕಿತ್ಸೆಯಿಂದ ವಂಚಿತರಾದ ರೋಗಿಗಳು ಗ್ರಾಮಾಂತರ ಪ್ರದೇಶದ ಹಲವಾರು ಲಕ್ಷ ಜನರಿಗೆ ಲಭ್ಯವಿರುವ ವೈದ್ಯಕೀಯ ಆರೈಕೆಯ ಸ್ಥಿತಿಯನ್ನು ಪ್ರತಿಫಲಿಸುತ್ತದೆ.







