ವಾಯವ್ಯ ಮಹಾರಾಷ್ಟ್ರದ ಸತ್ಪುಡಾ ಬೆಟ್ಟಗಳ ನಡುವಿನ ಫಲಾಯಿ ಗ್ರಾಮದ ಒಂದು ಹುಲ್ಲಿನ ಗುಡಿಸಲಿನೊಳಗೆ, ಎಂಟು ವರ್ಷದ ಶರ್ಮಿಳಾ ಪಾವ್ರಾ ದೊಡ್ಡ ಕತ್ತರಿಗಳು, ಬಟ್ಟೆ, ಸೂಜಿಗಳು ಮತ್ತು ದಾರದೊಂದಿಗೆ ತನ್ನ 'ಸ್ಟಡಿ ಟೇಬಲ್' ಬಳಿ ಕುಳಿತಿದ್ದಾಳೆ.
ಮೇಜಿನ ಮೇಲೆ ಹಳೆಯ ಹೊಲಿಗೆ ಯಂತ್ರವನ್ನು ಇರಿಸಲಾಗಿದೆ, ಅದರ ಮೇಲೆ ಹಿಂದಿನ ರಾತ್ರಿ ಶರ್ಮಿಳಾಳ ತಂದೆ ಮುಗಿಸದೆ ಇಟ್ಟಿದ್ದ ಬಟ್ಟೆಯಿತ್ತು. ಶರ್ಮಿಳಾ ಅದನ್ನು ಎತ್ತಿಕೊಂಡು ಹೊಲಿಯಲು ಪ್ರಾರಂಭಿಸುತ್ತಾ ತನ್ನ ಹೊಲಿಗೆ ಕೌಶಲದ ಸಹಾಯದಿಂದ ಯಂತ್ರವನ್ನು ಪೆಡಲ್ ಮಾಡಲು ಪ್ರಾರಂಭಿಸುತ್ತಾಳೆ.
ಈ ಅಂಟುರೋಗದ ಪಿಡುಗು ಆರಂಭವಾಗಿ ಲಾಕ್ ಡೌನ್ ಘೋಷಿಸಿದಾಗಿನಿಂದ ಈ ಟೇಬಲ್ ಆಕೆಯ ಕಲಿಕೆಯ ಟೇಬಲ್ ಆಗಿ ಮಾರ್ಪಟ್ಟಿದೆ. ಮಾರ್ಚ್ 2020ರ ಲಾಕ್ ಡೌನ್ ಜೊತೆ ಆಕೆಯ ವಸತಿ ಶಾಲೆಯೂ ಮುಚ್ಚಲ್ಪಟ್ಟಿತ್ತು. “ಮಾ ಮತ್ತು ಬಾಬಾ ಈ ಮಷೀನ್ ತುಳಿಯುವುದನ್ನು ನೋಡಿಯೇ ನಾನು ಕಲಿತಿದ್ದೆ,” ಎನ್ನುತ್ತಾಳಾಕೆ.
ಆದರೆ ಈ 18 ತಿಂಗಳುಗಳ ನಂತರ ಶಾಲೆಯಲ್ಲಿ ಈ ಹಿಂದೆ ತಾನು ಏನು ಕಲಿತಿದ್ದೇನೆನ್ನುವುದು ಅವಳಿಗೆ ಒಂದಿಷ್ಟೂ ನೆನಪಿಲ್ಲ.
ಫಲಾಯಿಯಲ್ಲಿ ಯಾವುದೇ ಶಾಲೆಯಿಲ್ಲ. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಆಶಯದೊಂದಿಗೆ, ಜೂನ್ 2019ರಲ್ಲಿ, ಶರ್ಮಿಳಾಳ ಪೋಷಕರು ತಮ್ಮ ಊರಿನಿಂದ ಸುಮಾರು 140 ಕಿಮೀ ದೂರದಲ್ಲಿರುವ ನಂದೂರ್ಬಾರ್ ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ಗೆ ಅವಳನ್ನು ಸೇರಿಸಿದರು. ಈ ಶಾಲೆಯು ರಾಜ್ಯದ ಸುಮಾರು 60 ಆಶ್ರಮ ಶಾಲೆಗಳಲ್ಲಿ ಒಂದಾಗಿದೆ (ಮಹಾರಾಷ್ಟ್ರದಾದ್ಯಂತ ನಡೆಯುವ ಪರಿಶಿಷ್ಟ ಪಂಗಡದ ಮಕ್ಕಳಿಗಾಗಿ ಇರುವ ವಿಶೇಷ ಶಾಲೆಗಳು) ಜಿಲ್ಲಾ ಪರಿಷತ್ತು ನಡೆಸುವ ಈ ಶಾಲೆಗಳು ಮಹಾರಾಷ್ಟ್ರ ಇಂಟರ್ನ್ಯಾಷನಲ್ ಬೋರ್ಡ್ ಆಫ್ ಎಜುಕೇಶನ್ಗೆ ಸಂಯೋಜಿತವಾಗಿದೆ. 2018ರಲ್ಲಿ ರಚನೆಯಾದ ಮಂಡಳಿಯು 'ಅಂತರರಾಷ್ಟ್ರೀಯ ಮಟ್ಟದ' ಶಿಕ್ಷಣವನ್ನು ಒದಗಿಸುವುದಾಗಿ ಹೇಳಿಕೊಂಡಿದೆ ಮತ್ತು ಶಾಲೆಯನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಮರಾಠಿಯಲ್ಲಿ ಕಲಿಸಲಾಗುತ್ತದೆ. (ಆ ಮಂಡಳಿಯನ್ನು ರದ್ದುಗೊಳಿಸಲಾಗಿದ್ದು ಈಗ ಶಾಲೆಗಳು ಈಗ ರಾಜ್ಯ ಮಂಡಳಿಯ ಅಡಿಯಲ್ಲಿ ಬರುತ್ತವೆ.)
















