ಹರಿಯಾಣದ ಸೋನಿಪತ್ ಜಿಲ್ಲೆಯ ಸಿಂಘು-ದೆಹಲಿ ಗಡಿಯಲ್ಲಿ ಪ್ರತಿಭಟನಾಕಾರ ರೈತರ ಸಾಗರವನ್ನು ನೋಡುತ್ತಿದ್ದಂತೆ ಹರ್ಜೀತ್ ಸಿಂಗ್ ಅವರ ಮುಖದಲ್ಲಿ ಚಳಿಗಾಲದ ಮಸುಕು ಬೆಳಕು ಮೂಡಿ ಮರೆಯಾಗುತ್ತದೆ.
ಹತ್ತಿರದಲ್ಲಿ, ವೃದ್ಧರು ಮತ್ತು ಯುವಕರು - ಪುರುಷರು, ಮಹಿಳೆಯರು ಮತ್ತು ಮಕ್ಕಳು - ಎಲ್ಲರೂ ವಿವಿಧ ಕೆಲಸಗಳಲ್ಲಿ ನಿರತರಾಗಿದ್ದರು. ಇಬ್ಬರು ಗಂಡಸರು ಹಾಸಿಗೆಗಳನ್ನು ಕೋಲಿನಿಂದ ಬಾರಿಸಿ ಸ್ವಚ್ಛಗೊಳಿಸಿ ರಾತ್ರಿ ಮಲಗಲು ತಯಾರಿ ಮಾಡುತ್ತಿದ್ದರು. ಕೆಲವರು ದಾರಿಹೋಕರಿಗೆ ಚಹಾ ಮತ್ತು ಬಿಸ್ಕತ್ತುಗಳನ್ನು ವಿತರಿಸುತ್ತಿದ್ದರು. ಅನೇಕರು ತಮ್ಮ ಮೆಚ್ಚಿನ ನಾಯಕರ ಭಾಷಣಗಳನ್ನು ಕೇಳಲು ಈ ಬೃಹತ್ ಸಭೆಯ ಮುಂಭಾಗಕ್ಕೆ ಹೋಗುತ್ತಿದ್ದರೆ ಇನ್ನೂ ಕೆಲವರು ಊಟಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಉಳಿದವರು ಅಲ್ಲಿ ಇಲ್ಲಿ ಸುಮ್ಮನೆ ತಿರುಗಾಡುತ್ತಿದ್ದರು.
ಈ ವರ್ಷದ ಸೆಪ್ಟೆಂಬರ್ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಪ್ರವೇಶದ್ವಾರದಲ್ಲಿ ಜಮಾಯಿಸಿದ ಸಾವಿರಾರು ರೈತರಲ್ಲಿ ಹರ್ಜೀತ್ ಕೂಡ ಒಬ್ಬರು.
ಪಂಜಾಬ್ನ ಫತೇಘಡ್ ಸಾಹಿಬ್ ಜಿಲ್ಲೆಯ ಮಜ್ರಿ ಸೋಧಿಯಾನ್ ಗ್ರಾಮದಲ್ಲಿ ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಭತ್ತ ಮತ್ತು ಗೋಧಿ ಬೆಳೆಯುತ್ತಿದ್ದೆ ಎಂದು ಅವರು ಹೇಳುತ್ತಾರೆ. 50 ವರ್ಷದ ಹರ್ಜೀತ್ ಅವಿವಾಹಿತರಾಗಿದ್ದು, ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾರೆ.
2017ರಲ್ಲಿ ಸಂಭವಿಸಿದ ಅಪಘಾತವೊಂದರಿಂದಾಗಿ ಹರ್ಜೀತ್ಗೆ ನಡೆಯಲು ಸಾಧ್ಯವಾಗಲಿಲ್ಲ. ಆದರೆ ತಮ್ಮ ರೈತ ಸಹೋದರರೊಂದಿಗೆ ಈ ಬೃಹತ್ ಪ್ರತಿಭಟನೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. "ನಾನು ನನ್ನ ಮನೆಯ ಛಾವಣಿಯ ಮೇಲೆ ಕೆಲಸ ಮಾಡುತ್ತಿದ್ದ ವೇಳೆ ಜಾರಿ ಕೆಳಗೆ ಬಿದ್ದೆ" ಎಂದು ಅವರು ಹೇಳುತ್ತಾರೆ. "ನನ್ನ ಸೊಂಟದ ಮೂಳೆ ಮುರಿದಿದೆ."





